ದೇವರ ಐತಿಹ್ಯಕ್ಕೆ ಸಾಕ್ಷಿಯಂತಿವೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಮೀಪದಲ್ಲಿರುವ ಈ ಮತ್ಸ್ಯಧಾಮ

ಸುತ್ತಲೂ ಹಸಿರಿನಿಂದ ಕಂಗೊಳಿಸುವ ಕಂಗಿನ ತೋಟ. ಅಲ್ಲೆ ಪಕ್ಕದಲ್ಲಿ ಪ್ರಶಾಂತವಾಗಿ ಹರಿಯುವ ನದಿ. ನದಿ ನೀರಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆ ಆಣೆಕಟ್ಟು ಮೇಲೆ ನಿಂತು ನೋಡಿದರೆ ಬಂಡೆಕಲ್ಲಿನಿಂದ ಸುತ್ತುವರಿದ ನೀರಿನಲ್ಲಿ ಸಾವಿರಾರು ದೇವರ ಮೀನುಗಳಿದ್ದು, ಈ ಕ್ಷೇತ್ರದ ಮಹಿಮೆಗೆ ಸಾಕ್ಷಿಯಂತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿಗೆ ಒಳಪಟ್ಟಿರುವ ಏನೆಕಲ್ಲು ಗ್ರಾಮದಲ್ಲಿ ಬಚ್ಚನಾಯಕ ದೈವಸ್ಥಾನ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸನಿಹದಲ್ಲೇ ಹರಿಯುವ ಕಲ್ಲಾಜೆ ಹೊಳೆಯಲ್ಲಿರುವ ಅಪರೂಪದ ಮತ್ಸ್ಯಧಾಮ ನೋಡುಗರ ಕಣ್ಸೆಳೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ 8ಕಿ.ಮೀ ದೂರದಲ್ಲಿರುವ ಏನೆಕಲ್‌ನಿಂದ ಒಂದೂವರೆ ಕಿ.ಮೀ ದೂರ ಸಾಗಿದರೆ `ಕಾಪುಕಯ’ಸಿಗುತ್ತದೆ.

ದೇವರ ಮೀನುಗಳೆಂದೇ ಕರೆಸಿಕೊಂಡಿರುವ ಮಹಾಶೀರ್ ಜಾತಿಯ ಸಾವಿರಾರು ಮೀನುಗಳನ್ನು ಕಾಪುಕಯದಲ್ಲಿ ವೀಕ್ಷಿಸಿಬಹುದು.
ಹಲವು ವರ್ಷಗಳಿಂದ ಸಾವಿರಾರು ಮೀನುಗಳು ಒಂದೆಡೆ ನೆಲೆಯಾಗಿರುವುದರಿಂದ ಅವುಗಳನ್ನು ದೇವರ ಮೀನುಗಳೆಂದೇ ಅಲ್ಲಿನ ಜನರು ನಂಬಿಕೊ0ಡು ಬಂದಿದ್ದಾರೆ. ದೇವರ ಮೀನುಗಳೆಂದು ಪರಿಗಣಿಸಿರುವುದರಿಂದ ಇಲ್ಲಿನ ಮೀನುಗಳು ಸುರಕ್ಷಿತವಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಹರಿದರೂ ಇಲ್ಲಿನ ಮೀನುಗಳು ವಲಸೆ ಹೋಗುವುದಿಲ್ಲ.
ಕಾಪುಕಯ ಎಂದು ಕರೆಯಲ್ಪಡುವ ಈ ಮತ್ಸ್ಯಧಾಮ ಪ್ರಕೃತ್ತಿದತ್ತವಾದದ್ದು. ಈ ಮೀನು ಗುಂಡಿಯ ಸುತ್ತ ಹೆಬ್ಬಂಡೆಗಳು ಇವೆ. ನೀರಿಗೆ ಅಕ್ಕಿ ಎಸೆದಾಗ ಅದನ್ನು ತಿನ್ನಲು ಮೀನು ಎತ್ತರೆತ್ತರಕ್ಕೆ ನೆಗೆಯುತ್ತವೆ. ಸಣ್ಣ ಮೀನುಗಳಿಂದ ಹಿಡಿದು 100 ಕೆಜಿ ತೂಗುವ ಮೀನುಗಳು ಇಲ್ಲಿ ನೋಡಬಹುದು. ಗ್ರಾಮ ಪಂಚಾಯಿತಿ ವತಿಯಿಂದ ಕಿಂಡಿ ಅಣೆಕಟ್ಟು ಕಟ್ಟಿರುವುದರಿಂದ ಮೀನುಗಳಿಗೆ ಜೀವದಾನ ನೀಡಿದಂತಾಗಿದೆ.

ಪ್ರಕೃತಿ ಮಡಿಲಿನಲ್ಲಿ ಜುಳು ಜುಳು ನಾದದೊಂದಿಗೆ ಹರಿಯುವ ಕಲ್ಲಾಜೆ ಹೊಳೆ, ಸುತ್ತಲೂ ಹಸಿರು ಕಾನನ, ೮ ಕಿಮೀ. ದೂರದಲ್ಲಿರುವ ಕುಕ್ಕೇ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇರುವುದರಿಂದ ಏನೆಕಲ್ಲಿನ ಅಪರೂಪದ ಮತ್ಸ್ಯಧಾಮ ಪ್ರವಾಸೀ ತಾಣ ಎನಿಸಿದೆ.

ಇದು ಇಲ್ಲಿನ ವಿಶಿಷ್ಟ ಪದ್ಧತಿ: ಈ ಮೀನುಗುಂಡಿಯ ಬಗ್ಗೆ ಅಪಾರ ಭಕ್ತಿ ಹೊಂದಿರುವ ಇಲ್ಲಿನ ಜನತೆ ತಮ್ಮ ಮನೆಯಲ್ಲಿ ಸಾಕಿದ ಗೋವು ಕರುವಿಗೆ ಜನ್ಮ ನೀಡಿದ 11 ಅಥವಾ 16 ದಿನದ ಬಳಿಕ ಕರೆದ ಹಾಲನ್ನು ಕಾಪುಕಯ ಮೀನಿನ ಗುಂಡಿಗೆ ಅರ್ಪಿಸಿ ನಂತರ ಬಳಕೆ ಮಾಡುವ ಪದ್ಧತಿ ಈಗಲೂ ಇದೆ.

ಹತ್ತಿರದಲ್ಲಿ…
ನದಿಯ ತಟದಲ್ಲಿ ಶ್ರೀ ಶಂಖಪಾಲ ಸ್ವಾಮಿ ದೇವಸ್ಥಾನ ಮತ್ತು ಬಚ್ಚನಾಯಕ ದೈವಸ್ಥಾನವಿದೆ.

ಬಚ್ಚನಾಯಕ ದೈವದ ಐತಿಹ್ಯ

ಇಲ್ಲಿನ ಪ್ರಮುಖ ದೈವ ಬಚ್ಚನಾಯಕ. ಈ ದೈವ ಕಾರಣಿಕ ದೈವವಾಗಿ ನೆಲೆ ನಿಂತಿದೆ. ಬಚ್ಚನಾಯಕ ದೈವದ ಬಗ್ಗೆ ಒಂದು ರೋಚಕ ಕಥೆಯಿದೆ. ಏನೆಕಲ್ಲು ಸಮೀಪದ ಪಂಜದಲ್ಲಿ ಬಲ್ಲಾಳರ ಆಳ್ವಿಕೆಯಿತ್ತು. ಏನೆಕಲ್ಲಿನ 5 ಹಳ್ಳಿಗಳು ಬಲ್ಲಾಳರ ಆಳ್ವಿಕೆಗೆ ಒಳಪಟ್ಟಿತ್ತು. ಏನೆಕಲ್ಲಿನ ಬಲ್ಲಾಳನೂ ಕಪ್ಪಕಾಣಿಕೆ ಕೊಡುತ್ತಾ ಬಂದಿದ್ದನು. ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಕಪ್ಪ ಕಾಣಿಕೆ ಕೊಡುವುದನ್ನು ನಿಲ್ಲಿಸುತ್ತಾನೆ. ಇದರಿಂದ ಸಿಟ್ಟಿಗೆದ್ದು ಪಂಜದ ಬಲ್ಲಾಳ ಗಟ್ಟದ ಮೇಲಿನಿಂದ ದಂಡು ತರಿಸಿ ಯುದ್ಧವನ್ನು ಸಾರುತ್ತಾನೆ.
ಬಿಸಿಲೆ ಐಗೂರು ಸೀಮೆಯ ಕಾಗೆನೂರು ಕೋಟೆಯನ್ನು ದಂಡಿನ ದಳವಾಯಿ ಮಲ್ಲನ ಗೌಡ ಆಳುತ್ತಿದ್ದನು. ಅವನಿಗೆ ಈಗಿನ ಕಡಬದ ಅರಸನೊಂದಿಗೆ ಸಂಪರ್ಕವಿತ್ತ0ತೆ. ದಳವಾಯಿ ಮಲ್ಲನ ಗೌಡನ ಮೂವರು ಮಕ್ಕಳಲ್ಲಿ ಬಚ್ಚನಾಯಕ ಶಿರಾಡಿ ಘಾಟ್ ಹತ್ತಿರದ ಗುಂಡ್ಯ ತೋಟದಲ್ಲಿಯ ಶ್ರೀ ಲಕ್ಷಿö್ಮÃನಾರಾಯಣ ಸ್ವಾಮಿ ದೇವರ ಉತ್ಸವಕ್ಕೆ ಕಡಬದ ಅರಸನೊಂದಿಗೆ ಬಂದಿದ್ದ. ಅವನ ಸೌಂದರ್ಯಕ್ಕೆ ಮರುಳಾದ ರಾಜ ವೇಶ್ಯೆಯೊಬ್ಬಳು ತನ್ನ ಕೆಟ್ಟ ಪ್ರವೃತ್ತಿಯಿಂದ ಒಲಿಸಿಕೊಳ್ಳನು ಪ್ರಯತ್ನಿಸುತ್ತಾಳೆ. ಅವಳ ದುರ್ನಡತೆಯನ್ನು ಗಮನಿಸಿದ ಬಚ್ಚನಾಯಕ ಅವಳ ತಲೆ ಕಡಿಯುತ್ತಾನೆ.
ಪಂಜ ಮತ್ತು ಕಡಬದ ಅರಸ ಮತ್ತು ಬಚ್ಚನಾಯಕನ ಸೇರಿ ಯೇನೆಕಲ್ಲು ಗ್ರಾಮವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಐಗೂರಿನಲ್ಲಿ ಕೋಟೆ ರಕ್ಷಕನಾಗಿದ್ದ ಬಚ್ಚನಾಯಕ ತುಳುನಾಡಿಗೆ ಹೋಗುವ ವಿಚಾರ ತಿಳಿಸಿದಾಗ ಅವನ ತಂದೆ ನೀನು ಹೋಗಬಾರದು ಎಂದು ತಿಳಿಸುತ್ತಾನೆ. ಆಗ ಬಚ್ಚನಾಯಕ, ನಾನು ಕಡಬದ ಅರಸರಿಗೆ ಮಾತು ಕೊಟ್ಟಿದ್ದು, ಹೋಗಿಯೇ ಹೋಗುತ್ತೇನೆ ಎಂದು ಪಣ ತೊಡುತ್ತಾನೆ. ಬಚ್ಚನಾಯಕನ ತಂಗಿ ತುಂಬು ಗರ್ಭಿಣಿಯಾಗಿದ್ದು ತವರು ಮನೆಗೆ ಬಂದಿರುತ್ತಾಳೆ. ಯುದ್ಧಕ್ಕೆ ಹೊರಟ ಅಣ್ಣನ್ನು ತಡೆಯುತ್ತಾಳೆ. ಸಿಟ್ಟಿಗೆದ್ದ ತಂಗಿಯನ್ನು ತುಳಿಯುತ್ತಾಳೆ. ತಂಗಿಗೆ ಗರ್ಭಪಾತವಾಗುತ್ತದೆ.
ಮನೆಯಲ್ಲಾದ ರಾದ್ಧಾಂತವನ್ನು ಲೆಕ್ಕಿಸದೇ ರಾಜ ಉಡುಗೆ, ಶಸ್ತಾçಸ್ತç ಹಿಡಿದುಕೊಂಡು ಕೊಂಬಾರು ಬೀಡಿಗೆ ಬಂದು ಸೇರುತ್ತಾನೆ. ಪಂಜ-ಕಡಬದ ಅರಸರೊಂದಿಗೆ ಸೇರಿ ಯೇನೆಕಲ್ಲಿಗೆ ಮುತ್ತಿಗೆ ಹಾಕುತ್ತಾನೆ. ಏನೆಕಲ್ಲು ಮುನ್ನೂರೊಕ್ಲು ಆಡಳಿತದಲ್ಲಿ ಬಾನಡ್ಕ ಕೆಳಗೆ ಮನೆ ಸುಬ್ಬ ಗೌಡನು ಊರ ಗೌಡನಾಗಿರುತ್ತಾನೆ. ಸುಬ್ಬಗೌಡ ತನ್ನ ಮನೆಯ ಸುತ್ತಲೂ ಶತ್ರುಗಳನ್ನು ಎದುರಿಸಲು ಕಾವಲು ಏರ್ಪಡಿಸಿರುತ್ತಾನೆ. ಗೂಢಾಚಾರರು ತಿಳಿಸಿದ ಮಾಹಿತಿಯಂತೆ ಸುಬ್ಬಗೌಡನನ್ನು ಸಾಯಿಸಲು ಬಚ್ಚನಾಯಕ ಕುದುರೆಯೇರಿ ನೇರವಾಗಿ ಸುಬ್ಬಗೌಡನ ಮನೆಗೆ ಬರುತ್ತಾನೆ. ಸುಬ್ಬುಗೌಡನನ್ನು ಬಚ್ಚನಾಯಕ ಕರೆದಾಗ ಗೌಡನಿಗೆ ಶತ್ರುವೆಂದು ಅರಿವಾಗಿ ಕಾವಲು ಪಡೆಗೆ ಸೂಚಿಸುತ್ತಾನೆ. ಕಾವಲು ಪಡೆ ಬಚ್ಚನಾಯಕನನ್ನು ಓಡಿಸಿಕೊಂಡು ಹೋಗುತ್ತಾರೆ. ಆಗ ಬಡಗು ದಿಕ್ಕಿನ ಉಳಿಕಟ್ಟೆಯ ಕಾವಲುಗಾರನಿಂದ ಬಚ್ಚನಾಯಕ ಬಲಿಯಾಗುತ್ತಾನೆ.

ಸಹೋದರನನ್ನು ಕೊಂದ ವಿಷಯ ತಿಳಿದ ಬಚ್ಚನಾಯಕನ ತಮ್ಮ ಕೋಟಿ ನಾಯಕ ಯುದ್ಧಕ್ಕೆ ಹೊರಡುತ್ತಾನೆ. ಮಾಗಣೆ ಗೌಡರಿಗೂ ಗಟ್ಟದ ದಂಡಾಳುಗಳಿಗೆ ಯುದ್ಧವಾಗಿ ಕೋಟಿ ನಾಯಕನೂ ಸಾಯುತ್ತಾನೆ. ಬಚ್ಚನಾಯಕ ಮತ್ತು ಕೋಟಿ ನಾಯಕನ ಆತ್ಮ ಶಕ್ತಿಯಿಂದ ಸುಬ್ಬಗೌಡರ ಕುಟುಂಬ (ಮಾಗಣೆ ಗೌಡರ) ಕೊನೆಯಾಗುತ್ತದೆ. ಬಚ್ಚನಾಯಕ ಮತ್ತು ಕೋಟಿನಾಯಕನ ಅತಿಶಯ ಶಕ್ತಿಯಿಂದಲೇ ಕುಟುಂಬ ಬಲಿಯಾಯಿತು ಎಂದರಿತ ಊರಿನ ಜನ ಅವರಿಬ್ಬರ ಆತ್ಮಗಳನ್ನು ದೈವಕ್ಕೇರಿಸಿ ನೇಮ ನಡಾವಳಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಹೋಗೋದು ಹೇಗೆ?
ಕುಕ್ಕೇ ಶ್ರೀ ಸುಬ್ರಹ್ಮಣ್ಯಕ್ಕೆ ದೇವಸ್ಥಾನಕ್ಕೆ ಬಂದು ಅಲ್ಲಿಂದ ಬೆಳ್ಳಾರೆ-ಪುತ್ತೂರು ಮಾರ್ಗವಾಗಿ ಬಸ್ ಮೂಲಕ 15 ನಿಮಿಷ ಪ್ರಯಾಣ ಬೆಳೆಸಬೇಕು. ಸ್ವಂತ ವಾಹನದ ಮೂಲಕವೂ ಹೋಗಬಹುದು. ಏನೆಕಲ್‌ನಲ್ಲಿ ಇಳಿದುಕೊಂಡು ಅಲ್ಲಿಂದ ಅರ್ಧ ಕಿಮೀ ದೂರ ಒಳಮಾರ್ಗದಲ್ಲಿ ಪಯಣಿಸಿದರೆ ಪ್ರಶಾಂತವಾಗಿ ಹರಿಯುವ ಕಲ್ಲಾಜೆ ಹೊಳೆಯ ಕಿಂಡಿ ಅಣೆಕಟ್ಟು ಕಾಣಿಸುತ್ತದೆ. ಅಲ್ಲಿಗೆ ಬಂದರೆ ಬಂಡೆಕಲ್ಲುಗಳ ಮಧ್ಯೆ ಇರುವ ದೇವರ ಮೀನುಗಳ ಗುಂಡಿ ಕಾಣಿಸುತ್ತದೆ.

ಶ್ರೀ ಶಂಖಪಾಲ ಸ್ವಾಮಿ ದೇವಸ್ಥಾನ
ಬಚ್ಚನಾಯಕ ದೈವ

Related Articles

ಪ್ರತಿಕ್ರಿಯೆ ನೀಡಿ

Latest Articles