ದಾಸ ಸಾಹಿತ್ಯದ ಉಳಿವಿಗೆ ಶ್ರಮಿಸಿದ ಗೊರೆಬಾಳ ಹನುಮಂತ ರಾಯರು

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಜನಿಸಿದ ಹನುಮಂತರಾಯರು ವೃತ್ತಿಯಲ್ಲಿ ವಕೀಲರಾದರೂ ಪ್ರವ್ರೃತ್ತಿಯಿಂದ ದಾಸಸಾಹಿತ್ಯ ಅಧ್ಯಯನ ಕಾರರಾಗಿದ್ದರು.
 ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಶ್ರೀಪಾದರಾಜರಿಂದ ಮೊದಲ್ಗೊಂಡು ಅನೇಕ ದಾಸರ ಹಸ್ತಪ್ರತಿಗಳನ್ನು,ತಾಳೆಗರಿಗಳನ್ನು ಸಂಗ್ರಹಿಸಿದರು. ಜನರಿಂದ ಕೇಳಿ ತಿಳಿದು ತಾವೇ ಸ್ವತಹ ಟಿಪ್ಪಣಿ ಮಾಡಿಕೊಂಡು ಕೈಬರಹದ ಪ್ರತಿಯಲ್ಲಿ ಬರೆದುಕೊಂಡು ಅಮೂಲ್ಯ ದಾಸಸಾಹಿತ್ಯದ ಸಂಪತ್ತನ್ನು ಸಂಪಾದಿಸಿದರು. 
ಮೂಲತಃ ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಸುಸಂಪನ್ನ ಕುಟುಂಬದ ಹಿನ್ನೆಲೆಯುಳ್ಳ ಹನುಮಂತರಾಯರು ದಾಸ ಸಾಹಿತ್ಯದ ಸಂಗ್ರಹಕ್ಕಾಗಿ ಹಸ್ತಪ್ರತಿಗಳ ಸಂಪಾದನೆಗಾಗಿ ತಮ್ಮ ಹೊಲ ಮನೆಗಳನ್ನು ಮಾರಿ ಕತ್ತಲ ಮೂಲೆಯಲ್ಲಿ ಅಡಗಿ ಕುಳಿತಿದ್ದ ದಾಸ ಸಾಹಿತ್ಯವನ್ನು ಬೆಳಕಿಗೆ ತಂದರು. 
ವಿಜಯ ದಾಸರು ರಚಿಸಿದ ಸುಳಾದಿಗಳ ಮೂಲ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರಕಟಣೆ ಮಾಡುವುದರ ಜೊತೆಗೆ 79 ಪುಸ್ತಕಗಳನ್ನು ತಾವೇ ಸ್ವತಹ ಪ್ರಕಟಿಸಿ ಪುಸ್ತಕ ಪ್ರಕಾಶಕರಾದರು. ಇದರೊಂದಿಗೆ 'ದ್ವೈಮಾಸಿಕ' ಎಂಬ ಆಧ್ಯಾತ್ಮದ ಪತ್ರಿಕೆಯನ್ನು ಹೊರತಂದರು. ದಾಸ ಸಾಹಿತ್ಯ ಸಂಗ್ರಹ ಸಂಪಾದನೆ ಪ್ರಕಾಶನದ ಜೊತೆಗೇ, ತಾವೇ ಖುದ್ದು ನಾಡಿನೆಲ್ಲೆಡೆ ಏರ್ಪಡಿಸಲಾಗುತ್ತಿದ್ದ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯದಲ್ಲಿ ತೊಡಗಿ ಜನರಲ್ಲಿ ಧಾರ್ಮಿಕ ಆಸಕ್ತಿ ಹಾಗೂ ದಾಸಸಾಹಿತ್ಯದ ಆಸಕ್ತಿ ಬೆಳೆಯಲು  ಕಾರಣ ರಾದರು. 
ಹನುಮಂತ ರಾಯರು ದಾಸ ಸಾಹಿತ್ಯ ಸಂಗ್ರಹ, ಸಂಪಾದನೆ, ಪ್ರಚಾರದಲ್ಲಿ ತೊಡಗಿದ್ದರು ಕೂಡ ತಾವು ಸಹ ಸ್ವತಃ ಹರಿ ದಾಸರಾಗುವುದನ್ನು ಮರೆಯಲಿಲ್ಲ. ಗುರು ಜಗನ್ನಾಥರಿಂದ 'ಸುಂದರ ವಿಠಲ' ಎಂಬ ಅಂಕಿತವನ್ನು ಪಡೆದುಕೊಂಡು ಕೀರ್ತನೆ, ಸುಳಾದಿ, ಉಗಾ ಭೋಗ ಸ್ತೋತ್ರಗಳ ಜೊತೆಗೆ ವೆಂಕಟೇಶ ಮಹಾತ್ಮೆ ಹಾಗೂ ಸತ್ಯ ನಾರಾಯಣ ಕಥೆಯನ್ನು ಸುಳಾದಿ ರೂಪದಲ್ಲಿ ರಚಿಸಿ, ಹರಿಕಥಾಮೃತಸಾರ ಹಾಗೂ ಸುಮಧ್ವವಿಜಯಕ್ಕೆ ಭಾವಾರ್ಥಗಳನ್ನು ಬರೆದಿದ್ದಾರೆ. 
ಹನುಮಂತರಾಯರು ತಾವೊಬ್ಬರೇ ಏಕವ್ಯಕ್ತಿಯಾಗಿ ದಾಸ ಸಾಹಿತ್ಯದ ಅನೇಕ ಕಾರ್ಯಗಳನ್ನು ಮಾಡಿದ್ದರೂ ಸಹ ದಾಸ ಸಾಹಿತ್ಯದ ಬೆಳವಣಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದು ಆಶಿಸಿ 1944 ರಲ್ಲಿ' ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಳಿ' ಎಂಬ ಸಂಸ್ಥೆಯನ್ನು ಲಿಂಗ ಸುಗೂರಿನಲ್ಲಿ ಪ್ರಾರಂಭಿಸಿದರು. 
ದಾಸ ಸಾಹಿತ್ಯ ಸಂರಕ್ಷಕ' ಎಂಬ ಬಿರುದನ್ನು ಪಡೆದ ಹನುಮಂತರಾಯರು ಸಂಗ್ರಹಿಸಿದ ಇನ್ನೂ ಅದೆಷ್ಟೋ ಹಸ್ತಪ್ರತಿಗಳು, ತಾಳೆ ಗರಿಗಳು, ಮೂಲ ಕೈಬರಹದ ಪ್ರತಿಗಳು ರಾಶಿರಾಶಿಯಾಗಿ ಬಟ್ಟೆಗಳ ಗಂಟಿನಲ್ಲಿ ಅಡಗಿ ಕುಳಿತುಕೊಂಡಿವೆ . ಅವುಗಳನ್ನು ತೆಗೆದು ಸಂಸ್ಕರಿಸಿ ಸಂಪಾದಿಸಿ ಹನುಮಂತರಾಯ ಅವರ  ಆಶಯದಂತೆ ದಾಸ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಪಡಬೇಕಾಗಿದೆ. 

(ಸಂಗ್ರಹ): ದೇಸಾಯಿ ಸುಧೀಂದ್ರ 

Related Articles

ಪ್ರತಿಕ್ರಿಯೆ ನೀಡಿ

Latest Articles