ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ‌ಗಾಯನ ಸೇವೆ

ಬೆಂಗಳೂರು: ನಗರದ ಬಳೇಪೇಟೆ ಬಡಾವಣೆಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿ ವತಿಯಿಂದ ಏರ್ಪಡಿಸಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಇಂದು ಬೆಳಗ್ಗೆ (8-1-2021 ಶುಕ್ರವಾರ) ಜರುಗಿದ ಕಾರ್ಯಕ್ರಮದಲ್ಲಿ ಜಹಗೀರ್ದಾರ್ ಸಹೋದರಿಯರಾದ ಕು. ದ್ಯುತಿ ಮತ್ತು ಕು. ಸ್ನಿಗ್ಧಅವರು ಗಾಯನ ಸೇವೆ ಸಲ್ಲಿಸಿದರು.

“ಗಜವದನ ಬೇಡುವೆ” ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ವೆಂಕಟವಿಠಲದಾಸರ “ಬೃಂದಾವನ ನೋಡಿರೋ”, ವಿಜಯದಾಸರ “ಕೈಲಾಸವಾಸ ಗೌರೀಶ ಈಶ”, ಕೃತಿಗಳನ್ನು ಹಾಡಿ, ಮುಂದೆ ಪುರಂದರದಾಸರ ರಚನೆಗಳಾದ “ಘಟಿಕಾಚಲದಿ ನಿಂತ ಶ್ರೀ ಹನುಮಂತ”, “ಭಾಗ್ಯದ ಲಕ್ಷ್ಮಿ ಬಾರಮ್ಮ”, “ಕಂಡೆನಾ ಉಡುಪಿಯ ಕೃಷ್ಣನ”, “ಏನು ಮಾಡಿದರೇನು”, “ತಂಬೂರಿ ಮೀಟಿದವ” ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ವಿದ್ವಾನ್ ಶ್ರೀ ನಾಗೇಶ್ ಅವರು ಹಾರ್ಮೋನಿಯಂನಲ್ಲಿ, ವಿದ್ವಾನ್ ಶ್ರೀ ಎಂ.ಜಿ. ಗೋಪಾಲಕೃಷ್ಣ ಅವರು ಮೃದಂಗದಲ್ಲಿ ಸಾಥ್ ನೀಡಿದರು.

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles