ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗದು: ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಮಾನವನ ಬದುಕು ಅನೇಕ ಒತ್ತಡಗಳಿಂದ ಕೂಡಿದೆ. ಸಮಸ್ಯೆ ಸವಾಲುಗಳ ಮಧ್ಯ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಆತ್ಮಬಲ ಮತ್ತು ಮನೋಬಲ ಸಂವರ್ಧಿಗೆ ಧ್ಯಾನ, ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಗಳು ಅವಶ್ಯಕವಾಗಿ ಬೇಕಾಗಿವೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ರಂಭಾಪುರಿ ಪೀಠದಲ್ಲಿ 30ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಫೆಬ್ರುವರಿ 10ರಂದು ಹಮ್ಮಿಕೊಂಡ 5 ದಿನಗಳ ಶತರುದ್ರ ಯಾಗ ಮಹಾಪೂಜೆಯ ಪ್ರಾರಂಭೋತ್ಸವ ನೆರವೇರಿಸಿ ಆಶೀರ್ವಚನ ನೀಡಿದರು.

ಶಾಂತಿ ಮತ್ತು ಕೀರ್ತಿ ಎಲ್ಲರೂ ಬಯಸುವುದು ಸಹಜ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ವಿಚಾರ ವಿಮರ್ಶೆಗಳು ನಮ್ಮ ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನ: ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗದು. ಆಹಾರ ನೀರು ದೈಹಿಕ ವಿಕಾಸಗೊಳಿಸಿದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿ ಪಥದತ್ತ ಸಾಗಿಸುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನೀತಿ ಸಂಹಿತೆ ಇಲ್ಲದ ಕಾರಣ ದಿಕ್ಕು ದಾರಿ ತಪ್ಪಿ ಮನುಷ್ಯ ಬದುಕುತ್ತಿರುವುದರಿಂದ ಜೀವನ ಅಶಾಂತಿಗೆ ಕಾರಣವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಜೀವನ ವ್ಯವಸ್ಥೆಗೆ ಆದರ್ಶವಾದ ದಾರಿ ತೋರಿಸಿದ್ದಾರೆ ಎಂದರು.
ಶತರುದ್ರ ಯಾಗದ ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿ0ಗ ಶಿವಾಚಾರ್ಯ ಸ್ವಾಮಿಗಳು ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬೆಳೆಯುವ ಜನಾಂಗದಲ್ಲಿ ದೇವರಲ್ಲಿ ಶೃದ್ಧೆ ಆಚರಣೆಯಲ್ಲಿ ನಂಬಿಗೆ ಮಾಡುವ ಕೆಲಸದಲ್ಲಿ ತನ್ಮಯತೆ ಬೆಳೆದು ಬಂದರೆ ಬಾಳು ಉಜ್ವಲಗೊಳ್ಳುವುದೆಂದರು.

ಸಿಂಧನೂರು, ಕೆಂಭಾವಿ, ಸಂಗೊಳ್ಳಿ, ಮಸ್ಕಿ, ದೊಡ್ಡಸಗರ ಹಿರೇಮಠ, ದೊಡ್ಡಸಗರ ನಾಗಠಾಣ ಹಿರೇಮಠ, ಚಿಮ್ಮಲಗಿ ಮತ್ತು ಸಾತನೂರು ಶ್ರೀಗಳು ಪಾಲ್ಗೊಂಡಿದ್ದರು. ಪೂಜಾ ಸೇವಾಕರ್ತರಾಗಿ ಚಿಕ್ಕಮಗಳೂರಿನ ಸಿ.ವಿ.ಮಲ್ಲಿಕಾರ್ಜುನ, ಗದಗಿನ ರಾಜು ಮಲ್ಲಾಡದ, ಸೋಮಣ್ಣ ಮಲ್ಲಾಡದ, ಬೆಂಗಳೂರಿನ ಗಣೇಶ ಕುಮಾರ್, ಜೆಮ್ ಶಿವು, ದಾವಣಗೆರೆಯ ಬಸವರಾಜ-ಭಾರತಿ ಹಾಗೂ ಶಿವಮೊಗ್ಗದ ಶಾಂತಾ ಆನಂದ ಪಾಲ್ಗೊಂಡಿದ್ದರು.

ಶತರುದ್ರ ಯಾಗ ಪೂಜೆ

ಬೆಂಗಳೂರಿನ ವೇದ ವಿದ್ವಾಂಸ ಚನ್ನಬಸವಾರಾಧ್ಯರು, ಶಿವಶಂಕರ ಶಾಸ್ತ್ರೀ, ಹೊನ್ನಪ್ಪಾಜಿ ಶಾಸ್ತ್ರೀ, ಚಿಕ್ಕಮಗಳೂರಿನ ವಿರೂಪಾಕ್ಷ ಶಾಸ್ತ್ರೀ, ಹಾಸನದ ದೇವರಾಜ ಶಾಸ್ತ್ರೀ, ರಂಭಾಪುರಿ ಪೀಠದ ದಾರುಕಾಚಾರ್ಯ ಶಾಸ್ತ್ರೀ, ಶಿವಪ್ರಕಾಶ ಶಾಸ್ತ್ರೀ ಶತರುದ್ರ ಯಾಗ ಪೂಜೆಯನ್ನು ಪ್ರಾರಂಭಿಸಿದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles