ಹನೂರು: ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಈ ಬಾರಿ ಮಹಾಶಿವರಾತ್ರಿ ಜಾತ್ರೋತ್ಸವ ಮಾರ್ಚ್ 10 ರಿಂದ 14 ರವರೆಗೆ ಸರಳವಾಗಿ ನಡೆಯಲಿದೆ.
ರಥೋತ್ಸವ ಸೇರಿದಂತೆ ಜಾತ್ರಾ ಸಮಯದಲ್ಲಿ ನಡೆಯುವ ಎಲ್ಲಾ ಉತ್ಸವ, ಧಾರ್ಮಿಕ ಕಾರ್ಯಗಳು ಎಂದಿನ0ತೆ ನಡೆಯಲಿವೆ. ಬೆಟ್ಟದ ಸ್ಥಳೀಯರಿಗೆ ಮಾತ್ರ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಾತ್ರೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಬೇರೆ ಊರುಗಳಿಂದ ಹಾಗೂ ಹೊರಗಿನ ಭಕ್ತರಿಗೆ ಜಾತ್ರಾ ಸಂದರ್ಭದಲ್ಲಿ ದೇವಾಲಯಕ್ಕೆ ಪ್ರವೇಶ ನಿಷೇಧೀಸಲಾಗಿದ್ದು, ಕಾರ್ಯನಿಮಿತ್ತ ಬರುವ ಅಧಿಕಾರಿಗಳು ಹಾಗೂ ಅತಿ ಗಣ್ಯರಿಗೆ ಪ್ರವೇಶಕ್ಕೆ ಅವಕಾಶವಿದೆ. ಸ್ಥಳೀಯರಿಗೆ ಅವಕಾಶ ಕಲ್ಪಿಸಿರುವುದರಿಂದ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಇದೇ 8 ರವರೆಗೆ ಯಾವುದೇ ನಿರ್ಬಂಧವಿಲ್ಲ. ಜಾತ್ರೆಯ ಸಮಯದಲ್ಲಿ ಐದು ದಿನ ನಿರ್ಬಂಧವಿರುವುದರಿಂದ ಮಾರ್ಚ್ 9ರ ರಾತ್ರಿ ತಂಗುವ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಮಾರ್ಚ್ 15 ರಿಂದ ಎಂದಿನಂತೆ ದೇಗುಲ ದರ್ಶನಕ್ಕೆ ಅವಕಾಶವಿದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಇದೇ ಸಂದರ್ಭ ತಿಳಿಸಿದರು.
























