ಅಶ್ವತ್ಥ ವೃಕ್ಷವನ್ನು ಶನಿವಾರದಂದು ಮಾತ್ರ ಮುಟ್ಟಿಪೂಜೆ ಮಾಡಬೇಕು. ಬೇರೆ ದಿನಗಳಲ್ಲಿ ಮುಟ್ಟಬಾರದು ಏಕೆ ?


ಅಶ್ವತ್ಥ ವೃಕ್ಷ ಎಷ್ಟು ಶ್ರೇಷ್ಠ ಅಂದರೆ ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನು” ಎಂದು. ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವ ಈ ವೃಕ್ಷವು ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಟ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ.

ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ. ಸಾಡೇ ಸಾಥ್ ಶನಿ ದೋಷವನ್ನು ಕೂಡ ಅಶ್ವತ್ಥ ಮರ ದೂರ ಮಾಡುತ್ತದೆ.

ಪದ್ಮಪುರಾಣದ ನೂರಾ ಹದಿನೆಂಟನೇಯ ಅಧ್ಯಾಯದಲ್ಲಿ ಸೂತರಿಗೆ ಋಷಿಗಳು ಪ್ರಶ್ನಿಸುತ್ತಿದ್ದಾರೆ, ಆಗ ಶ್ರೀಕೃಷ್ಣ ಸತ್ಯಭಾಮೆಗೆ ಹೇಳಿದ ಉತ್ತರವನ್ನು ಋಷಿಗಳಿಗೆ ಸೂತರು ಹೀಗೆ ಹೇಳುತ್ತಾರೆ-
“ಅಸ್ಪೃಶ್ಯತ್ವಂ ಕಥಂ ಯಾತಃ ಸೂತ ಭೋಧಿತರುಸ್ತ್ವಯಂ lಸ್ಪೃಶ್ಯ ತ್ವಂ ಚ ಕಥಂ ಪ್ರಾಪ್ತಃ ತದಾಯಂ ಶನಿವಾಸರೇ llಏತದ್ವಿಸ್ತರತಸ್ಸರ್ವಂ ವಕ್ತುಮರ್ಹಸಿ ನೋ ಭಗವಾನ್.
ಎಲೈ ಸೂತನೇ ಶನಿವಾರ ಹೊರತು ಮಿಕ್ಕ ದಿನಗಳಲ್ಲಿ ಏಕೆ ಅರಳಿ ಮರವನ್ನು ಮುಟ್ಟಬಾರದು ವಿಸ್ತಾರವಾಗಿ ಹೇಳು.

ಆಗ ಸೂತ ಮಹರ್ಷಿಗಳು ಹೇಳುತ್ತಾರೆ- ಸಮುದ್ರ ಮಥನದಿಂದ ನಾನಾ ವಸ್ತುಗಳು ಬಂದವು ಅದರಲ್ಲಿ ಮೊದಲು ಬಂದವಳು ಅಲಕ್ಷ್ಮೀ ಅಂದರೆ ದಾರಿದ್ರ್ಯ ಲಕ್ಷ್ಮೀ ನಂತರ ಬಂದವಳು ಮಹಾಲಕ್ಷ್ಮೀ . ದೇವತೆಗಳು ಹೊಂದಿದ ರತ್ನಗಳಲ್ಲಿ ಮಹಾಲಕ್ಷ್ಮಿಯನ್ನೂ , ಕೌಸ್ತುಭವನ್ನೂ , ಆ ದೇವತೆಗಳು ವಿಷ್ಣುವಿಗೆ ಕೊಟ್ಟರು. ವಿಷ್ಣುವು ಲಕ್ಷ್ಮಿಯನ್ನು ಹೆಂಡತಿಯನ್ನಾಗಿ ಒಪ್ಪಿಕೊಂಡಾಗ ಆಕೆಯು ವಿಷ್ಣುವಿಗೆ ಇಂತೆಂದು ವಿಜ್ಞಾಪಿಸಿಕೊಂಡಳು- “ಎಲೆ ಮಧುಸೂದನನೇ ನನಗಿಂತ ಮೊದಲು ಹುಟ್ಟಿದ ಈ ಅಲಕ್ಷ್ಮೀಗೆ ಮೊದಲು ವಿವಾಹ ರೂಪವಾದ ಸಂಸ್ಕಾರವಾಗದೆ ನನ್ನನ್ನು ಹೇಗೆ ಮದುವೆಯಾಗುತ್ತೀಯಾ ? ಈಕೆಗೆ ಮೊದಲು ಮದುವೆ ಮಾಡಿ ಅನಂತರ ನನ್ನನ್ನು ಮದುವೆಯಾಗಿ ಕರೆದುಕೊಂಡು ಹೋಗು’ ಎಂದು.

ಆಗ ವಿಷ್ಣುವು ಆಕೆಯ ಈ ಮಾತನ್ನು ಕೇಳಿ ಧೀರ್ಘವಾಗಿ ತಪಸ್ಸು ಮಾಡಿದ. ನಂತರ ಉದ್ಧಾಲಕನೆಂಬ ಋಷಿಗೆ ಲಕ್ಷ್ಮಿಯ ಮಾತಿನಂತೆ ಅಲಕ್ಷ್ಮೀ ಯನ್ನು ಕೊಟ್ಟು ಮದುವೆ ಮಾಡಿದ. ವಿಕಾರ ರೂಪವುಳ್ಳ ಅಲಕ್ಷ್ಮೀಯನ್ನು ಉದ್ದಾಲಕನು ವಿಷ್ಣುವಿನ ಮಾತನ್ನು ಮೀರಲಾರದೆ ಒಪ್ಪಿ ಮದುವೆ ಮಾಡಿಕೊಂಡ. ಅನಂತರ ಅಲಕ್ಷ್ಮೀಯನ್ನು ಉದ್ಧಾಲಕನು ತನ್ನ ಆಶ್ರಮಕ್ಕೆ ಕರೆದುಕೊಂಡು ಬಂದ. ಹೋಮದ ಧೂಮ ಉಳ್ಳ, ಸುವಾಸನೆಯಾದ, ವೇದಘೋಷಗಳಿಂದ ಕೂಡಿರುವ ಆ ಆಶ್ರಮವನ್ನು ದೂರದಿಂದಲೇ ನೋಡಿ ಆಕೆಯು ದುಃಖಗೊಂಡು ಇಂತೆಂದಳು- ನಾನು ನಿನ್ನ ಆಶ್ರಮಕ್ಕೆ ಬರಲಾರೆ ಕಾರಣ ವೇದ ಧ್ವನಿಯಿಂದ ಕೂಡಿದ, ಪೂಜಾ ಪಾಠ ನಡೆಯುವ ಸ್ಥಳ ಶಾಂತವಾಗಿರುವ ಈ ಸ್ಥಳವು ನನ್ನ ವಾಸಕ್ಕೆ ಯೋಗ್ಯವಲ್ಲ ಎಂದು ಹೇಳಿದಾಗ ಉದ್ಧಾಲಕ ನಿನ್ನ ವಾಸ ಸ್ಥಳ ಯಾವುದು ಅಂತ ಕೇಳುತ್ತಾನೆ. ಆಗ ಆ ದಾರಿದ್ರ್ಯ ಲಕ್ಷ್ಮೀ ಹೇಳುತ್ತಾಳೆ – ಒಬ್ಬೊಬ್ಬರಿಗೆ ಸ್ನೇಹದಿಂದ ದಂಪತಿಗಳಿರುವಲ್ಲಿಯೂ, ಪೂಜೆ ಪುನಸ್ಕಾರ ನಡೆಯುವಲ್ಲಿ, ಹಿರಿಯರಿಗೆ ಗೌರವಾದರ ನಡೆಯುವಲ್ಲಿ, ಅತಿಥಿಸತ್ಕಾರ ನಡೆಯುವಲ್ಲಿ ನೀತಿವಂತರ ಮನೆಯಲ್ಲಿ ನನ್ನ ವಾಸ ಇರುವುದಿಲ್ಲ. ಎಲ್ಲಿ ಪ್ರತಿದಿನ ಯಾವ ಮನೆಯಲ್ಲಿ ಜಗಳ ನಡೆಯುವುದು, ಅತಿಥಿಗಳು ನಿರಾಶರಾಗಿ ಎಲ್ಲಿಂದ ಹೊರಹೋಗುತ್ತಾರೆ, ಜೂಜು ನಡೆಯುವಲ್ಲಿ ಪರರ ಹಣವನ್ನು ಕದಿಯುವಲ್ಲಿ, ಕಸಕಡ್ಡಿಗಳಿಂದ ತುಂಬಿದ ಮನೆಯಲ್ಲಿ, ಪೂಜೆ ಪುನಸ್ಕಾರ ನಡೆಯದ ಸ್ಥಳದಲ್ಲಿ, ಗೋವಧೆ, ಮದ್ಯಪಾನ ತುಂಬಿರುವಲ್ಲಿ ನಾನು ವಾಸಿಸುತ್ತೇನೆ ಅಂದಾಗ, ಉದ್ದಾಲಕನು ಹೇಳಿದ ಎಲೈ ಅಲಕ್ಷ್ಮೀಯೇ ನೀನು ಅರಳಿ ಮರದ ಬುಡದಲ್ಲೇ ಕ್ಷಣ ಕಾಲವಿರು. ನಿನ್ನ ವಾಸಕ್ಕೆ ಸರಿಯಾದ ಮನೆಯನ್ನು ನೋಡಿಕೊಂಡು ಬರುತ್ತೇನೆ ಹೀಗೆಂದು ಹೇಳಿ ಆಕೆಯನ್ನು ಅಲ್ಲಿ ಉದ್ದಾಲಕನು ಕುಳಿತುಕೊಳ್ಳಲು ಹೇಳಿ ಹೊರಟುಹೋದನು ಬಹಳಹೊತ್ತು ನೋಡಿದರು ಉದ್ದಾಲಕನ ಬಾರದಿರಲು ಗಂಡನು ತನ್ನನ್ನು ಬಿಟ್ಟುದರಿಂದ ಆಕೆಯೂ ಬಹುವಾಗಿ ಅತ್ತಳು. ವೈಕುಂಠದಲ್ಲಿರುವ ಲಕ್ಷ್ಮಿಯು ಈ ಅಲಕ್ಷ್ಮಿ ಅಳುವಿನ ಧ್ವನಿಯನ್ನು ಕೇಳಿ ತಾನೂ ಖಿನ್ನಳಾಗಿ ವಿಷ್ಣುವಿಗೆ ಇಂತೆಂದಳು. ಸ್ವಾಮಿ ನನ್ನ ಅಕ್ಕನ ಗಂಡನು ಬಿಟ್ಟು ಬಿಟ್ಟಿದ್ದರಿಂದ ದುಃಖ ಗೊಂಡಿದ್ದಾಳೆ. ಆಕೆಯನ್ನು ಸಮಾಧಾನಪಡಿಸು, ಆ ಮಾತಿನಿಂದ ವಿಷ್ಣು ವು ಲಕ್ಷ್ಮೀ ಒಡಗೂಡಿ ಅಲ್ಲಿಗೆ ಬಂದು ಆಕೆಯನ್ನು ಸಮಾಧಾನಪಡಿಸುತ್ತ ಹೀಗೆ ಹೇಳಿದನು- “ಎಲೈ ಅಲಕ್ಷ್ಮಿಯೇ ನೀನು ಯಾವಾಗಲೂ ಅರಳಿ ಮರವನ್ನು ಆಶ್ರಯಿಸಿಕೊಂಡಿರು. ಅರಳಿ ಮರವು ನನ್ನ ಅಂಶದಿಂದ ಹುಟ್ಟಿದ್ದು. ಆದರೆ ಶನಿವಾರದ ದಿವಸ ಮಾತ್ರ ಅಲ್ಲಿ ನಿನ್ನ ವಾಸ ಬೇಡ. ಕಾರಣ ಶನಿವಾರ ದಿವಸ ಲಕ್ಷ್ಮಿಯು ಶನಿವಾರ ದಿವಸ ಇಲ್ಲಿಗೆ ಬರುತ್ತಾಳೆ. ಆದ್ದರಿಂದ ಅರಳಿ ಮರವು ಶನಿವಾರದಲ್ಲಿ ಪೂಜ್ಯವಾದುದು. 

ಪ್ರತಿದಿನ ಅರಳಿ ಮರವನ್ನು ಮುಟ್ಟಿ ಪೂಜೆ ಮಾಡುವವರು ಅವರಲ್ಲಿ ಈ ಕನಿಷ್ಠ ಲಕ್ಷ್ಮೀ ಸ್ಥಿರವಾಗಿ ಇರುವಳು ಎಂದು ವರ ಕೊಟ್ಟು ವೈಕುಂಠಕ್ಕೆ ಹೊರಟು ಹೋದನು.ಆ ದ್ದರಿಂದ ಅರಳಿ ಮರವನ್ನು ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮುಟ್ಟಿ ಪೂಜೆ ಮಾಡಬಾರದು ಪ್ರದಕ್ಷಿಣೆ ದೂರದಿಂದಲೇ ನಮಸ್ಕಾರ ಮಾಡಬೇಕು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು

Related Articles

ಪ್ರತಿಕ್ರಿಯೆ ನೀಡಿ

Latest Articles