ಭರವಸೆಯ ಬಾಲ ಪ್ರತಿಭೆ ಶ್ರೀಚರಿತಾ


ರಂಗಮಂಚ ಪ್ರವೇಶ 18ರಂದು

  • ಶ್ವೇತಾ ವೆಂಕಟೇಶ್ ಶಿಷ್ಯೆ
  • ಬೆಂಗಳೂರಿನ ಚೌಡಯ್ಯ ಭವನದಲ್ಲಿ ಕಾರ್ಯಕ್ರಮ

ಬೆಂಗಳೂರು: ನಗರದ ಪ್ರಖ್ಯಾತ ನೃತ್ಯ ಸಂಸ್ಥೆ ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ, ಹೆಸರಾಂತ ನೃತ್ಯ ದಂಪತಿ- ಚೇತನಾ- ಚಂದ್ರಪ್ರಭಾ ರ ಪುತ್ರಿ ಶ್ರೀಚರಿತಾ ಗಂಗಟ್ಕರ್ ‘ ಕಥಕ್ ರಂಗ್‌ಮಂಚ್ ಪ್ರವೇಶ’ ಕ್ಕೆ ವೇದಿಕೆ ಸನ್ನದ್ಧವಾಗಿದೆ.
ಜೂ. 18ರ ಸಂಜೆ 6ಕ್ಕೆ ಮಲ್ಲೇಶ್ವರ ಬಡಾವಣೆಯ ಚೌಡಯ್ಯ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಿದುಷಿ ದುರ್ಗಾ ಆರ್ಯ, ವಿದುಷಿ ಶುಭಾ ಧನಂಜಯ, ರಾಮಕಥಾ ಖ್ಯಾತಿಯ ವಿದ್ವಾನ್ ಸತ್ಯನಾರಾಯಣ ರಾಜು, ವಿದುಷಿ ಸುಪರ್ಣಾ ವೆಂಕಟೇಶ ಮತ್ತು ಸಾಯಿ ವೆಂಕಟೇಶ ಸಾಕ್ಷಿಯಾಗಲಿದ್ದಾರೆ.

ಚಂದ್ರಪ್ರಭಾ- ಚೇತನ್‌ರ ಹೆಮ್ಮೆಯ ಪುತ್ರಿ
ರಾಜಧಾನಿಯ ಅಗ್ರಮಾನ್ಯ ನೃತ್ಯ ದಂಪತಿಗಳಲ್ಲಿ ಕೂಚುಪುಡಿ- ಭರತನಾಟ್ಯ ಸಮನ್ವಯಮಾಡಿಕೊಂಡು ಔನ್ನತ್ಯ ಸಾಧಿಸಿರುವ ಜೋಡಿ ಚಂದ್ರಪ್ರಭಾ- ಚೇತನ್‌ರ ಹೆಮ್ಮೆಯ ಪುತ್ರಿಯೇ ಶ್ರೀಚರಿತಾ. ಈಕೆ ವಿದ್ಯಾಂಜಲಿ ಅಕಾಡೆಮಿಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಎಳವೆಯಲ್ಲೇ ಕಲಾಸಕ್ತಿ ಮೈಗೂಡಿಸಿಕೊಂಡಿದ್ದು, ಭರತನಾಟ್ಯ- ಕಥಕ್‌ನ ಪಾಠಾಂತರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ತನ್ನ ಕ್ರಿಯಾಶೀಲತೆ ಹೊಮ್ಮಿಸುತ್ತಿರುವುದು ಗಮನಾರ್ಹವಾಗಿದೆ. ಈಗಾಗಲೇ ತಂದೆ- ತಾಯಿ ಬಳಿಯೇ ಭರತನಾಟ್ಯ ಕಲಿತು 2 ವರ್ಷದ ಹಿಂದೆಯೇ ರಂಗ ಪ್ರವೇಶ ಮಾಡಿರುವ ಈಕೆ, ಕಥಕ್ ಬಗ್ಗೆ ಅಪಾರ ಆಸಕ್ತಿ ತೋರಿದ ಫಲವಾಗಿ ಗುರು ಶ್ವೇತಾರ ಪ್ರೀತಿಯ ಶಿಷ್ಯೆಯಾಗಿದ್ದಾಳೆ. ಕಥಕ್ ರಂಗ್‌ಮಂಚ್ ಪ್ರವೇಶಕ್ಕೆ ಸನ್ನದ್ಧಳಾಗಿರುವುದು ವಿಶೇಷಲ್ಲಿ ವಿಶೇಷ.
ಬಹುಮುಖೀ ಕಲಾಸಕ್ತಿ: ಶ್ರೀಚರಿತಾ ಕರ್ನಾಟಕ ಶಾಸ್ತ್ರೀಯ ಸಂಗೀತ, ಕಥಕ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾಳೆ. ಶಾಲಾ ವ್ಯಾಸಂಗದಲ್ಲೂ ಮೊದಲ ಸ್ಥಾನದಲ್ಲೇ ಇದ್ದು, ಥ್ರೋ ಬಾಲ್, ಹ್ಯಾಂಡ್ ಬಾಲ್, ಪೆನ್ಸಿಲ್ ಸ್ಕೆಚ್ ಡ್ರಾಯಿಂಗ್‌ನಲ್ಲೂ ವಿಶೇಷ ಪ್ರೌಢಿಮೆ ತೋರಿ ಅನೇಕ ಬಹುಮಾನ ಪಡೆದಿರುವುದು ಬಹುಮುಖೀ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles