ಆತ್ಮವಿಮರ್ಶೆಯ ಅಭ್ಯಾಸ ಯಾಕೆ ಬೇಕು?

ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಂಬಲ ನಮಗಿದ್ದರೆ, ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದಿದ್ದರೆ ಸಿಂಹಾವಲೋಕನದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂಬುದು ಅನುಭವಿಗಳ ಆದೇಶ.

*ಸ್ವಾಮಿ ಜಗದಾತ್ಮಾನಂದ

(ಅವರ ಬದುಕಲು ಕಲಿಯಿರಿ ಪುಸ್ತಕದ ಆಯ್ದ ಭಾಗ)

ಸ್ವಾಮಿ ಜಗದಾತ್ಮಾನಂದ

ಅರಣ್ಯದಲ್ಲಿ ಸಂಚರಿಸುವ ಸಿಂಹ ಒಮ್ಮೊಮ್ಮೆ ತನ್ನ ಮುಖ ತಿರುಗಿಸಿ ನಡೆದು ಬಂದ ದಾರಿಯನ್ನು ಅವಲೋಕಿಸುತ್ತದೆ ಎನ್ನುತ್ತಾರೆ. ಇದನ್ನು ಸಿಂಹಾವಲೋಕನ ಎನ್ನುತ್ತಾರಷ್ಟೇ. ದಿನದ ಚಟುವಟಿಕೆಗಳನ್ನು ಸಿಂಹಾವಲೋಕನ ಕ್ರಮದಿಂದ ಪರಿಶೀಲಿಸಬೇಕು. ಮನವ ಶೋಧಿಸಬೇಕು ನಿಚ್ಚ, ಅನುದಿನ ಮಾಡುವ ಪಾಪಪುಣ್ಯದ ವೆಚ್ಚ' ಎನ್ನುವ ದಾಸವಾಣಿಯಲ್ಲೂ ಆ ಅಭ್ಯಾಸದ ಅವಶ್ಯಕತೆ ಸೂಚಿತವಾಗಿದೆ. ದಿನದ ಕೊನೆಯ ಭಾಗದಲ್ಲಿ ನಿದ್ರಿಸುವ ಮೊದಲು ನನ್ನ ಪಾಲಿಗೆ ಬಂದ ಆಯಸ್ಸಿನಲ್ಲಿ ಈ ಒಂದು ದಿನವನ್ನು ಹೇಗೆ ಕಳೆದೆ ? ನನಗೆ ಸಿಕ್ಕಿದ ಅವಕಾಶವನ್ನು ಹೇಗೆ ಉಪಯೋಗಿಸಿಕೊಂಡೆ ? ಎಲ್ಲಿ ತಪ್ಪುಗಳಾದವು? ಕಾರಣಗಳೇನು? ನಾಳಿನ ಅಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬಹುದು? ಈ ಹೊತ್ತು ಮಾಡಬೇಕಾಗಿದ್ದ ಕೆಲಸಗಳನ್ನು ಹೊರಗಿನ ಒತ್ತಾಯ, ಒತ್ತಡಗಳಿಂದ ಗೊಣಗುತ್ತ ಮಾಡಿದೆನೇ? ಸ್ವಂತ ಯೋಚನೆ ಯೋಜನೆಗಳನ್ನನುಸರಿಸುತ್ತಾ ಉತ್ಸಾಹದಿಂದ ಮಾಡಿದೆನೇ? ಇನ್ನೂ ಚೆನ್ನಾಗಿ ಮಾಡಬಹುದಿತ್ತೇ? ಸ್ನೇಹಿತರೊಡನೆ, ಬಂಧು ಬಾಂಧವರೊಡನೆ ಮತ್ತು ನೆರೆಹೊರೆಯವರೊಂದಿಗೆ ಹೇಗೆ ವರ್ತಿಸಿದೆ?- ಇವೇ ಮೊದಲಾದ ಪ್ರಶ್ನೆಗಳನ್ನು ಕೇಳುತ್ತಾ ಪರದೆಯ ಮೇಲಣ ಚಿತ್ರವನ್ನು ವೀಕ್ಷಿಸುವಂತೆ ನಿರ್ಲಿಪ್ತರಾಗಿ ನಡೆದ ಘಟನೆಗಳನ್ನು ನೋಡಿ ತಿದ್ದುಪಡಿ ಮಾಡಿಕೊಳ್ಳಬಹುದು.

ಕನ್ನಡಿಯಲ್ಲಿ ನಮ್ಮ ಮುಖವನ್ನು ಕಂಡು ಸರಿಪಡಿಸಿಕೊಳ್ಳುವಂತೆ ಈ ಆತ್ಮವಿಮರ್ಶೆಯ ವಿಧಾನದಿಂದ ನಮಗೂ ಇತರರಿಗೂ ಸಹ್ಯವಲ್ಲದ ಗುಣಗಳನ್ನು ಬಿಟ್ಟು ಬಿಡಲು ಸಾಧ್ಯ. ಉತ್ತಮ ಗುಣಗಳನ್ನು ಅರ್ಜಿಸಲು ಸಾಧ್ಯ ಎಂಬುದನ್ನು ಬೆಂಜಮಿನ್ ಫ್ರಾಂಕ್ಲಿನ್ ಸ್ವಾನುಭವದಿಂದ ಸಾರಿದ್ದಾನೆ.


ಆಭ್ಯಾಸ ನಿರ್ಮಾಣದಲ್ಲಿ ಮೊದಲು ಜಗಲಿ ಹಾರಿ ಆಮೇಲೆ ಗಗನ ಹಾರಲು ಯತ್ನಿಸಬೇಕು. ಪ್ರಥಮದಲ್ಲೇ ಹೊರಲಾರದ ಹೊರೆಯನ್ನು ಹೊತ್ತವನ ಪಾಡಾದರೆ ಮುಂದಿನ ಪ್ರಯತ್ನದಲ್ಲಿ ಉತ್ಸಾಹಹೀನನಾಗುವ ಸಂಭವವಿದೆ. ಪ್ರಥಮ ಯತ್ನದಲ್ಲಿ ಉಂಟಾದ ಯಶಸ್ಸು ಮುಂದಿನ ಪ್ರಯತ್ನದ ಪ್ರೇರಕಶಕ್ತಿಯಾಗುತ್ತದೆ. ಆದುದರಿಂದ ಮೊದ ಮೊದಲು ಸುಲಭವಾದ, ಅಲ್ಪ ಸಮಯ ಬೇಕಾಗುವ ಸ್ವಲ್ಪ ಶ್ರಮದಿಂದ ಸಾಧ್ಯವಾಗುವ ಅಭ್ಯಾಸಗಳನ್ನು ನಿಷ್ಠೆಯಿಂದ ಮಾಡಬೇಕು.


ಯಾರ ಬದುಕಿನಲ್ಲಿ ಯಾವ ನಿರ್ದಿಷ್ಟ ಅಭ್ಯಾಸಗಳು ಇಲ್ಲದೆ ಎಲ್ಲವೂ ಅನಿಶ್ಚಿತ ಅಸ್ತವ್ಯಸ್ತವೋ ಬೆಳಗ್ಗೆ ಹಾಸಿಗೆ ಬಿಟ್ಟೇಳುವುದು, ರಾತ್ರಿ ವಿಶ್ರಾಂತಿ ಪಡೆಯುವುದು, ಆಹಾರ ಸೇವನೆ, ಒಂದು ಸಿಗರೇಟು ಹೊತ್ತಿಸುವುದು, ಒಂದು ಲೋಟ ನೀರು ಕುಡಿಯುವುದೇ ಮೊದಲಾದ ಅತಿ ಸಣ್ಣ ಪುಟ್ಟ ಕೆಲಸಗಳನ್ನು ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ನಡೆಸಿ ಮಾಡಬೇಕಾಗುವುದೋ ಅವನಂಥ ದುಃಖಿ ಮತ್ತೊಬ್ಬನಿಲ್ಲ.

ಅವನ ಅರ್ಧ ಸಮಯ ಏನು ಮಾಡಬಹುದೆಂದು ನಿರ್ಣಯಿಸುವುದರಲ್ಲಿ, ಇಲ್ಲವಾದರೆ ಸುಮ್ಮನೆ ಕಾಲಹರಣವಾಯಿತೆಂದು ಪರಿತಪಿಸುವುದರಲ್ಲಿ ವ್ಯಯವಾಗುತ್ತದೆ. ಅವನ ಜಾಗೃತ ಪ್ರಜ್ಞೆಯಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳ ಬಗೆಗೆ ಮಾಡಬೇಕೇ ಬೇಡವೇ? ಎಂಬ0ಥ ಸಂದೇಹಗಳೇ ಬರಬಾರದು. ಅವನಿಗರಿವಿಲ್ಲದೆಯೇ ಹುಟ್ಟುಗುಣಗಳ ಪ್ರಕ್ರಿಯೆಗಳಂತೆ ದಿನದ ಕರ್ತವ್ಯಗಳನ್ನು ಸಹಜವಾಗಿ ಒದ್ದಾಟವಿಲ್ಲದೆ ಮಾಡುವಂತಾಗಬೇಕು. ಹೀಗೆ ದಿನದ ಕರ್ತವ್ಯ ನಿರ್ವಹಣೆ ಸಹಜ ಗುಣವಾಗದವರು ಇಂದಿ0ದೇ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಲಿ’ ಎಂದು ಮನೋ ವಿಜ್ಞಾನಿ ಕರೆಕೊಡುತ್ತಾನೆ.

Related Articles

ಪ್ರತಿಕ್ರಿಯೆ ನೀಡಿ

Latest Articles