ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ. ನಮ್ಮ ಸಂಪ್ರದಾಯ, ಸಂಸ್ಕೃತಿಗೆ ಅನುಗುಣವಾಗಿ, ತಿಳಿದಿರುವ ರೀತಿಯಲ್ಲಿ ನಿತ್ಯದ ಪೂಜಾ ಕ್ರಮಗಳನ್ನು ಅನುಸರಿಸುತ್ತೇವೆ. ಇನ್ನೂ ಹಲವಾರು ವಿಷಗಳು ಗೊತ್ತಿರುವುದಿಲ್ಲ. ಅಂತಹ ಸಣ್ಣ ಪುಟ್ಟ ವಿಚಾರಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸುವುದರ ಮೂಲಕ ದೈವೀ ಕೃಪೆಗೆ ಹೇಗೆ ಪಾತ್ರರಾಗಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.
ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ, ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ.
ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ ನೈವೇದ್ಯದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ. (ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು) ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹವನ್ನು ಅರಿಸಿನದ ನೀರಿನಿಂದ ಶುದ್ಧ ಮಾಡಿ. ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ. ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು.
ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ, ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ. ದೇವರ ಪೂಜೆ ಮಾಡೋವಾಗ ಆಕಳಿಕೆ, ಕೋಪ, ಇವೆಲ್ಲದರಿಂದ ದೂರ ಇರಿ. ಅನಗತ್ಯ ಚಟುವಟಿಕೆಗಳು ಬೇಡ. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ.
ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು. ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು. ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮಇತ್ಯಾದಿ ಯಾವುದಾದರೂ ಧರಿಸದೇ ಪೂಜೆ ಮಾಡಬಾರದು. ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು. ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಿ.
ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ. ನೈವೇದ್ಯ ಮಾಡೋವಾಗ ತುಳಸೀಪತ್ರೆಯನ್ನು ಬಳಸಬೇಕು. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ.
ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ.
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು ಮನೆ ದೇವರೇ. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ ಮಹಾಲಕ್ಷ್ಮೀ ಸಾನ್ನಿಧ್ಯ ಇರುತ್ತದೆ. ಶ್ರೀ ಚಕ್ರ , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ … ಇತ್ಯಾದಿ ಈ ದೇವರುಗಳೆಲ್ಲಾ ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ.
























