ದೇವಸ್ಥಾನಕ್ಕೆ ಯಾಕೆ ಹೋಗಬೇಕು ಅನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ…

ದೇಗುಲದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕ್ರಿಯೆಯ ಹಿಂದಿದೆ ವೈಜ್ಞಾನಿಕ ಕಾರಣಗಳು. ಶಕ್ತಿಯ ಕೇಂದ್ರಗಳು ಎನ್ನಿಸಿಕೊಂಡಿರುವ ದೇವಸ್ಥಾನಗಳಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನವಿರುತ್ತದೆ. ಅದರಿಂದ ಮನುಷ್ಯನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರ ಹಾಗೂ ಪುರಾಣದ ಪ್ರಕಾರ ದೇವಾಲಯಗಳು ದೇವರ ಪವಿತ್ರ ಸ್ಥಾನವೇ ಆಗಿದೆ. ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯನ ದೇಹಕ್ಕೆ ಹೋಲಿಸಲಾಗುತ್ತದೆ. ‘ಅಗ್ನಿ ಪುರಾಣದ ಪ್ರಕಾರ’ “ಶಿಖರಂ ಶಿರ ಇತ್ಯಾಹುರಿಗರ್ಭಗೆಹಂ ಗಳಸ್ತಥಾ ಮಂಡಪಂ ಕುಕ್ಷಿರಿತ್ಯಾಹುಹ್ ಪ್ರಕಾರಂ ಜನುಜಂಘಾಕಂ ಗೋಪುರಮ್ ಪಾದ ಇತ್ಯಾಹುರ್ಧ್ವಜೋ ಜೀವನಮುಚ್ಯತೇ’. ಅಂದರೆ ಶಿಖರ ತಲೆ ಭಾಗ, ಗರ್ಭಗುಡಿ ಕುತ್ತಿಗೆ, ಮಂಟಪ ಸೊಂಟದ ಭಾಗ, ಗೋಪುರ ಕಾಲುಗಳು ಮತ್ತು ಧ್ವಜ ದೇವಾಲಯದ ಜೀವ ಇದನ್ನು ಕೆಳಮುಖವಾಗಿ ಹೇಳುತ್ತಾರೆ .

ಅದೇ ಮೇಲ್ಮುಖವಾಗಿ ಹೇಳಬೇಕೆಂದರೆ ಕಳಸ – ತಲೆ, ಶಿಖರ – ಮೇಲ್ಭಾಗ, ಗೋಡೆ – ದೇಹ, ಕಂಬದ ಪೀಠ – ಕಾಲುಗಳು, ಮೆಟ್ಟಿಲುಗಳು – ಪಾದ.

ದೇವಾಲಯದ ಪ್ರವೇಶಕ್ಕೆ ಮೊದಲು ಮೆಟ್ಟಿಲುಗಳನ್ನು ಸ್ಪರ್ಶ ಮಾಡಿ ನಮಸ್ಕರಿಸಿ ಹೋಗುವುದು ಏಕೆ ?

ನಮಗಿಂತ ದೊಡ್ಡವರ ಪಾದಗಳನ್ನು ನಮಸ್ಕರಿಸಿ ಹೋಗುವುದರಿಂದ ಶ್ರೇಯಸ್ಸು ದೊರೆಯುತ್ತದೆ ಎಂದು ನಂಬಲಾಗಿದೆ . ನನ್ನ ಅಹಂ ಅನ್ನು ದೇವಾಲಯದ ಹೊರಗಡೆ ಬಿಟ್ಟು ಒಳಗೆ ಬರುತ್ತೇನೆ ಎಂಬ ಸಂಕೇತವು ಆಗಿದೆ. ನಾನು ನಿನ್ನ ಮೆಟ್ಟಿಲುಗಳನ್ನು (ಪಾದಗಳನ್ನು) ನಮಸ್ಕರಿಸುತ್ತೇನೆ, ನನ್ನ ಪಾಪಗಳನ್ನು ಪರಿಹರಿಸು ಎಂಬುದು ಇದರ ಅರ್ಥ.

ಕೆಲವು ದೇವಾಲಯಗಳ ಮುಂದೆ ಆಮೆಗಳ ಪ್ರತಿಕೃತಿಗಳನ್ನು ಕೆತ್ತಲಾಗಿರುತ್ತದೆ. ಇದರ ಅರ್ಥ ಆಮೆಯು ಗಾತ್ರದಲ್ಲಿ ಎಷ್ಟೇ ದೊಡ್ಡದಿದ್ದರೂ ತನ್ನ ಕಾಲುಗಳನ್ನು ಒಳಗೆ ಬಚ್ಚಿಟ್ಟುಕೊಂಡಿರುತ್ತದೆ. ಮನುಷ್ಯನು ಸಹ ಅಹಂಕಾರವನ್ನು ಬಿಟ್ಟು ಬದುಕಬೇಕು ಎಂಬುದಾಗಿದೆ.

ವೈಜ್ಞಾನಿಕ ಕಾರಣ : ವಿವಿಧ ಗಾತ್ರದ, ಆಕಾರದ ಮತ್ತು ವಿವಿಧ ಸ್ಥಳಗಳಲ್ಲಿ ಭಾರತದಾದ್ಯಂತ ಸಾವಿರಾರು ದೇವಾಲಯಗಳಿವೆ. ಆದರೆ ಎಲ್ಲವನ್ನೂ ವೈದಿಕ ಮಾರ್ಗವಾಗಿ ನಿರ್ಮಿಸಲಾಗಿಲ್ಲ. ಸಾಮಾನ್ಯವಾಗಿ, ಭೂಮಿಯ ಆಯಸ್ಕಾಂತೀಯ ತರಂಗ ಮಾರ್ಗವು ದಟ್ಟವಾಗಿ ಹಾದುಹೋಗುವ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಬೇಕು ಎಂಬುದು ಪ್ರತೀತಿ. ಪಟ್ಟಣ / ಗ್ರಾಮ ಅಥವಾ ನಗರ ಹೊರವಲಯದಲ್ಲಿ ಅಥವಾ ವಾಸಸ್ಥಳದ ಮಧ್ಯದಲ್ಲಿ ಅಥವಾ ಬೆಟ್ಟದ ಮೇಲೆ ಹಿಂದಿನ ಕಾಲದಲ್ಲಿ ಕಟ್ಟಲಾಗುತ್ತಿತ್ತು.

ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಭೂತ ಕಾರಣವನ್ನು ಇಲ್ಲಿ ಚರ್ಚಿಸಲಾಗಿದೆ.

ಗರ್ಭಗೃಹ: ದೇವಾಲಯಗಳು ಆಯಕಟ್ಟಿನ ಸ್ಥಳದಲ್ಲಿ ಉತ್ತರ / ದಕ್ಷಿಣ ಧ್ರುವದ ಒತ್ತಡದ ಕಾಂತೀಯ ಮತ್ತು ವಿದ್ಯುತ್ ತರಂಗ (magnetic and Electrical waves) ವಿತರಣೆಗಳಿಂದ ಕೂಡಿರುವ ಸ್ಥಳವಾಗಿದೆ. ಮುಖ್ಯ ವಿಗ್ರಹವನ್ನು ದೇವಾಲಯದ ಮುಖ್ಯ ಕೇಂದ್ರದಲ್ಲಿ ಇರಿಸಲಾಗುತ್ತದೆ ಇದನ್ನು ಗರ್ಭಗೃಹ ಅಥವಾ ಮೂಲಾಸ್ಥಾನ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ವಿಗ್ರಹವನ್ನು ಇರಿಸಿದ ನಂತರ ದೇವಸ್ಥಾನದ ರಚನೆಯನ್ನು ನಿರ್ಮಿಸಲಾಗುತ್ತದೆ. ಈ ಗರ್ಭಗೃಹ ಅಥವಾ ಮೂಲಾಸ್ಥಾನ ದಲ್ಲಿ ಭೂಮಿಯ ಅಯಸ್ಕಾಂತೀಯ ತರಂಗಗಳು ಗರಿಷ್ಠ ಮಟ್ಟದಲ್ಲಿ ಕಂಡುಬರುತ್ತವೆ.

ಪ್ರದಕ್ಷಿಣಾ: ದೇವಸ್ಥಾನದ ಸುತ್ತಮುತ್ತ ತಾಮ್ರದ ಎಳೆಗಳಿಂದ ಸುತ್ತಿರುತ್ತಾರೆ, ಈ ತಾಮ್ರದ ತಟ್ಟೆಯು ಭೂಮಿಯ ಕಾಂತದ ಅಲೆಗಳನ್ನು ಹೀರಿಕೊಳ್ಳುತ್ತದೆ ಮತ್ತು ಸುತ್ತಮುತ್ತಲಿನ ಕಡೆಗೆ ಹೊರಹೊಮ್ಮುತ್ತದೆ. ಹೀಗಾಗಿ ವ್ಯಕ್ತಿಯು ನಿಯಮಿತವಾಗಿ ದೇವಸ್ಥಾನವನ್ನು ಭೇಟಿ ಮಾಡುತ್ತಾ ಪ್ರದಕ್ಷಿಣಾ ಮಾಡಿದರೆ ಈ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

ತೀರ್ಥ: ತೀರ್ಥವು ಏಲಕ್ಕಿ,ಕರ್ಪೂರ(ಬೆಂಜೊಯಿನ್), ಜಾಫ್ರಾನ್ / ಕೇಸರಿ, ತುಳಸಿ (ಹೋಲಿ ಬೆಸಿಲ್), ಲವಂಗ ಇವುಗಳ ಸಮಾಗಮವಾಗಿದೆ. ತೀರ್ಥದ ನೀರು ಮುಖ್ಯವಾಗಿ ಮ್ಯಾಗ್ನೆಟೋ -ಚಿಕಿತ್ಸೆಯ ಮೂಲವಾಗಿದೆ ಜೊತೆಗೆ, ಲವಂಗವು ಹಲ್ಲಿನ ಕೊಳೆತದಿಂದ ರಕ್ಷಿಸುತ್ತದೆ. ಕೇಸರಿ ಮತ್ತು ತುಳಸಿ ಎಲೆಗಳು ಸಾಮಾನ್ಯ ಶೀತ ಮತ್ತು ಕೆಮ್ಮುಗೆ ಪರಿಹಾರ. ಏಲಕ್ಕಿ ಮತ್ತು ಪಚ್ಚ ಕರ್ಪೂರ (ಬೆಂಜೊಯಿನ್) ಬಾಯಿಯ ಕಾಯಿಲೆಗಳನ್ನು ರಕ್ಷಿಸುತ್ತದೆ.

ದೀಪ ಹಚ್ಚುವುದು:

ದೀಪ ಹಚ್ಚುವುದರಿಂದ ಸಕಾರಾತ್ಮಕ ತರಂಗಗಳನ್ನು ಹರಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದಿನನಿತ್ಯ ನಾವು ದೀಪಗಳನ್ನು ತುಪ್ಪ ಅಥವಾ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಟಿಯನ್ನುಮಂದವಾಗಿಸುತ್ತದೆ. (ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಶ್ರೇಷ್ಠವೆಂದಿದ್ದಾರೆ). ಅಂತೆಯೇ ನಂದಾದೀಪವನ್ನು ಹಚ್ಚುವುದೇಕೆಂದರೆ, ಹಿಂದಿನಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚುಕಲ್ಲುಗಳ ಸಂಘರ್ಷಣೆಯಿಂದ ಅಥವ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟುಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿಕೊಂಡಿರಬೇಕು.

ಕುಂಕುಮ ಹಾಗೂ ಅರಶಿನ: ಕುಂಕುಮ ನಮ್ಮ ಮೂರನೇ ಕಣ್ಣಿನ ಭಾಗಕ್ಕೆ ಇಡುತ್ತೇವೆ ಇದರಿಂದ ನಮ್ಮ ಸುಪ್ತ ಮನಸು ಜಾಗೃತಿಯಾಗುತ್ತದೆ ಅಲ್ಲದೆ ಜ್ಞಾಪಕ ಶಕ್ತಿ ಕೂಡ ವೃದ್ಧಿಯಾಗುತ್ತದೆ. ಅರಿಶಿನ ಹಚ್ಚಿದರೆ ಆಂಟಿಬಯೋಟಿಕ್ ರೀತಿ ವರ್ತಿಸುತ್ತದೆ. ಮುಖದ ಮೇಲೆ ಕೂದಲು ಬೆಳೆಯದಂತೆ , ಯಾವುದೇ ಸೋಂಕು ಬಾರದಂತೆ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದಲೇ ಅರಿಶಿನ ಸ್ನಾನ ಮಾಡಿಸಲಾಗುತ್ತದೆ.

ಘಂಟೆ: ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಘಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ. ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿ ಭಾವ ಮೂಡುತ್ತದೆ. ಜೊತೆಗೆ ಆರತಿ ವೇಳೆ ನಿರಂತರವಾಗಿ ಘಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತದೆ ಎಂಬ ಕಾರಣಕ್ಕೆ ಘಂಟೆ ಮೊಳಗಿಸಲಾಗುತ್ತದೆ ಎನ್ನಲಾಗಿದೆ. ಆನಾದಿ ಕಾಲದಿಂದಲೂ ದೇವಾಲಯಗಳಲ್ಲಿ ಘಂಟಾನಾದ ಮೊಳಗುತ್ತಿದ್ದು. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.

ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles