ಅತ್ತಾರೆ ಅತ್ತು ಬಿಡು ದುಃಖ ಮರೆಯಲಿ

ಬದುಕಿನಲ್ಲಿ ತೀರಾ ಆತ್ಮೀಯರಾದವರು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ, ಸಿಕ್ಕಿದ ಪ್ರೀತಿ ಕೈತಪ್ಪಿ ಹೋದಾಗ, ಇಟ್ಟುಕೊಂಡ ಕನಸುಗಳನ್ನು, ಬದುಕಿನ ನಿರೀಕ್ಷೆಯನ್ನು ಸಾಸಲಾಗದೇ ಹೋದಾಗ ತೀರಾ ನಿರಾಶರಾಗುವುದು, ಜಿಗುಪ್ಸೆಗೊಳಗಾಗುವುದು ಸಾಮಾನ್ಯ. ಅದೇ ನೋವಿನಿಂದ ಹೊರಬರಲಾಗದೆ ತತ್ತರಿಸುವ ಅದೆಷ್ಟೋ ಮಂದಿ ಸಹಜ ಜೀವನವನ್ನು ಕಳೆದುಕೊಳ್ಳುತ್ತಾರೆ. ಅಂದರೆ ಖಿನ್ನತೆಗೆ ಒಳಗಾಗುತ್ತಾರೆ. ಹಾಗಾಗದಿರಲು ದುಃಖವನ್ನು ಹೊರಹಾಕುವುದು ಬಹಳ ಅಗತ್ಯ.
ಅದರಲ್ಲೂ ಆತ್ಮೀಯರ ಸಾವಿನ ನೋವನ್ನು ಅಷ್ಟು ಬೇಗ ಅರಗಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಜೀವನದಲ್ಲಿ ಇಷ್ಟ ಪಟ್ಟವರ ಕಳೆದು ಹೋದಾಗ ನೆನಪು ಕಾಡುವುದು ಸಹಜ. ಇದು ಒಂದು ರೀತಿಯ ಭಾವನಾತ್ಮಕ ವೇದನೆ. ಅಷ್ಟೇ ಅಲ್ಲದೆ ಅನಾರೋಗ್ಯ, ಉದ್ಯೋಗ ಕಳೆದುಕೊಳ್ಳುವುದು, ಆರ್ಥಿಕ ಸೋಲು, ಪ್ರೀತಿಗೆ ಪಾತ್ರವಾಗಿದ್ದ ಪ್ರಾಣಿಯ ಸಾವು, ಗೆಳೆತನವನ್ನು ಕಳೆದುಕೊಳ್ಳುವುದು ಇವೆಲ್ಲವೂ ಜೀವನದಲ್ಲಿ ಆಗಾಗ ಬೇಸರ ಉಂಟು ಮಾಡುತ್ತಿರುತ್ತದೆ. ಯಾಕೆಂದರೆ ಪ್ರೀತಿ ಅನ್ನೋದು ಕೇವಲ ಪದವಲ್ಲ, ಅದು ಭಾವನೆ.
ಬೇಸರಕ್ಕೆ ಹಲವು ಕಾರಣಗಳಿರಬಹುದು. ಒಬ್ಬರ ನೋವಿಗಿಂತ ಇನೊಬ್ಬರದು ಭಿನ್ನ. ಕೆಲವರು ನೋವನ್ನು ಹೇಳಿಕೊಳ್ಳುತ್ತಾರೆ, ಇನ್ನು ಕೆಲವರು ಅನುಭವಿಸುತ್ತಿರುತ್ತಾರೆ. ಅದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಯಾವ ಸಂದರ್ಭ ಯರ‍್ಯಾರನ್ನು ಯಾವುದು ಬೇಸರ ಮೂಡಿಸುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ.

ದುಃಖಕ್ಕೊಳಗಾದವರಲ್ಲಿ ಕೆಲವರು ಒಂದು ವಾರದಲ್ಲಿ ನೋವಿನಿಂದ ಹೊರಬಂದರೆ ಇನ್ನು ಕೆಲವರು ತಿಂಗಳುಗಟ್ಟಲೆ ಆ ನೋವಿನಲ್ಲಿಯೇ ನರಳುತ್ತಿರುತ್ತಾರೆ. ಆದರೆ ಎಲ್ಲವೂ ಪ್ರಕೃತಿ ನಿಯಮ. ಬದಲಾವಣೆಯೊಂದೇ ಶಾಶ್ವತ. ಇಂತಹ ನಿಯಮಗಳನ್ನು ಜೀವನದಲ್ಲಿ ಒಪ್ಪಿಕೊಳ್ಳಲೇಬೇಕು.

  • ನೋವನ್ನು ಮರೆಯವುದಕ್ಕಾಗಿ ಬೇಸರದ ಕಾರಣವನ್ನು ಕಡೆಗಣಿಸುತ್ತಾ ಬನ್ನಿ. ಅನುಭವಿಸಿದ ನೋವನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಿ. ಖಂಡಿತಾ ನೋವಿನ ಭಾರ ಇಳಿದು ಬಿಡುತ್ತದೆ.
  • ಒಮ್ಮೆ ಅತ್ತು ಬಿಡಿ. ಇದರಿಂದ ಮನಸ್ಸು ಹಗುರಾಗುತ್ತದೆ. ಬೇಸರವನ್ನು ಕಳೆಯುವುದಕ್ಕೆ ಇಷ್ಟೇ ಸಮಯ ಬೇಕೆಂದೇನೂ ಇಲ್ಲ. ಅವರವರ ಸಾಮರ್ಥ್ಯವನ್ನವಲಂಬಿಸಿರುತ್ತದೆ. ಕಣ್ಣೀರು ಹಾಕುವುದರ ಮೂಲಕ ಬೇಸರವನ್ನು ಹೊರಹಾಕಬಹುದು. ನೀವೇ ಗಮನಿಸಿರಬಹುದು ‘ಅತ್ತು ಮನಸ್ಸು ಹಗುರ ಮಾಡಿಕೊಳ್ಳಿ' ಎಂದು ಹೇಳುವವರಿದ್ದಾರೆ. ಅರ್ಥಾತ್ ಅಳುವುದರಿಂದ ದುಃಖದ ಭಾರವೆಲ್ಲಾ ಹಗುರಾಗುತ್ತದೆ. ದ.ರಾ. ಬೇಂದ್ರೆಯವರು ತನ್ನ ಮಗನನ್ನು ಕಳೆದುಕೊಂಡಾಗ, ದುಃಖದಲ್ಲಿದ್ದ ಪತ್ನಿಗೆ ಹೀಗೆ ಹೇಳುತ್ತಾರೆ, ‘ಅತ್ತು ಬಿಡು ಹೊನಲು ಬರಲಿ, ನಕ್ಕ್ಯಾಕ ಮರೆಸುತೀ ದುಃಖ’ ಎಂದು. ನಿಜಕ್ಕೂ ಹೌದು. ದುಃಖವನ್ನು ಹಿಡಿದಿಟ್ಟುಕೊಂಡಷ್ಟೂ ಮನಸ್ಸು ಭಾರ ಭಾರ.
  • ದುಃಖಕ್ಕೆ ಒಳಗಾದವರಿಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ. ಕೆಲವರು ತಮ್ಮ ಧಾರ್ಮಿಕತೆ (ಆಧ್ಯಾತ್ಮ)ಯನ್ನೇ ಪ್ರಶ್ನಿಸುತ್ತಾರೆ `ಓ ದೇವರೇ ಹೀಗೇಕೆ ಮಾಡಿದೆ?’ ಎಂದು. ಖಂಡಿತಾ ಅವನಲ್ಲ. ಅದಕ್ಕೆ ನಾವೇ ಕಾರಣಕರ್ತರು.
  • ಕಾರಣವಿಲ್ಲದೆ ಏನನ್ನಾದರೂ ಕಳೆದುಕೊಂಡುದಾದರೆ ಸಿಟ್ಟು ಬರುವುದು ಸಹಜ. ಕಳೆದುಕೊಂಡುದುದಕ್ಕೆ ಬೇರೆಯವರ ಮೇಲೆ ಸಿಟ್ಟು ವ್ಯಕ್ತಪಡಿಸದಿರಿ. ನೋವನ್ನು ಅನುಭವಿಸಿ.
  • ನೋವು ಜೀವನದ ಬಗ್ಗೆ ಹತಾಶೆ ಮೂಡುವುದು ಸಹಜ. ಹಾಗಂತ ಇಡೀ ಪ್ರಪಂಚವೇನೂ ಬಿದ್ದು ಹೋಗುವುದಿಲ್ಲ. ನೋವು, ಅಪಮಾನ, ನಿಂದನೆಗಳಿಗೆ ಕೆಲವೊಮ್ಮೆ ನಾವೇ ಕಾರಣ ಆಗಿರುತ್ತೇವೆ. ನಮ್ಮ ವರ್ತನೆಗಳೇ ಕಾರಣ ಆಗಿರುತ್ತವೆ.
  • ದಿನಕಳೆದಂತೆ ನಮ್ಮಲ್ಲಿ ಬದಲಾವಣೆ ಕಂಡು ಬರುವುದು ಸಹಜ. ಆದರೆ ಆ ಕ್ಷಣದಲ್ಲಿ, ನೋವಿನ ಸಂದರ್ಭದಲ್ಲಿ ನಮ್ಮ ಬಗ್ಗೆ ನಾವೇ ಕಾಳಜಿ ವಹಿಸಿಕೊಳ್ಳಬೇಕು. ಕ್ರಮೇಣ ನಮ್ಮಲ್ಲೊಂದು ಸಕಾರಾತ್ಮಕ ಬದಲಾವಣೆಯನ್ನು ನಾವೇ ಕಂಡುಕೊಳ್ಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles