ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಾಪಿಸಲ್ಪಟ್ಟ ಹನುಮನ ಮಂದಿರವಿದು

*ವೈ.ಬಿ.ಕಡಕೋಳ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ ನವಿಲುತೀರ್ಥ. ಇದು ಸವದತ್ತಿಯಿಂದ 11 ಕಿ.ಮೀ, ಮುನವಳ್ಳಿಯಿಂದ 5 ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ ಮುಂದೆ ಮುನವಳ್ಳಿಯತ್ತ ಬರತೊಡಗಿದರೆ ಬೃಹತ್ ಮರದ ಪಕ್ಕಕ್ಕೆ ಹನುಮಾನ ಮಂದಿರವಿದೆ.ಇದು 1967 ರಲ್ಲಿ ನಿರ್ಮಿಸಿದ್ದು, ಶನಿವಾರ ಬಂದರೆ ಸಾಕು ಇಲ್ಲಿ ಪೂಜೆಯ ಮೂಲಕ ಆಂಜನೇಯ ತನ್ನ ಭಕ್ತರಿಗೆ ದರ್ಶನವನ್ನೀಯುವನು. ಈ ಮಾರ್ಗದಲ್ಲಿ ಪ್ರತಿನಿತ್ಯ ಚಲಿಸುವಾಗ ತಮ್ಮ ವಾಹನ ನಿಲ್ಲಿಸಿ ಹೋಗಿ ನಮಸ್ಕರಿಸಿ ಮುಂದೆ ಹೊರಡುವುದು ಸಾಮಾನ್ಯ.
ಕಿಷ್ಕಿಂದಾ ಕಾಂಡದಿ0ದ ಹಿಡಿದು ಬಹುಕಾಲ ದೂರವಿದ್ದ ಸೀತಾರಾಮರನ್ನು ಒಂದು ಮಾಡಿ ಶ್ರೀರಾಮ ಪಟ್ಟಾಭಿಷೇಕವನ್ನು ಕಣ್ತುಂಬ ನೋಡಿ ಆನಂದಿಸಿದವನು ಹನುಮಂತ. ಸೀತಾಮಾತೆಯು ಇವನನ್ನು ಕರೆದು “ನೀನು ನನ್ನನ್ನು ನನ್ನ ಪತಿಯ ಹತ್ತಿರ ಸೇರಿಸಿದೆ. ಇದರ ಫಲವಾಗಿ ಶ್ರೀರಾಮನ ಕೀರ್ತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ನೀನು ಚಿರಂಜೀವಿ”ಎ0ದು ಆಶೀರ್ವಾದವನ್ನು ಮಾಡಿರುವಳು. ರಾಮಕಥೆಯೂ ರಾಮಾಯಣದ ಕೀರ್ತಿಯೂ ಉಳಿಯುವವರೆಗೂ ಈ ಭೂಮಿಯ ಮೇಲೆ ಇರತಕ್ಕದ್ದೆಂದು ಹನುಮಂತನಿಗೆ ದೊರಕಿದ ವರದಿಂದ ಅವರನು ಚಿರಂಜೀವಿಗಳಲ್ಲಿ ಒಬ್ಬನು. ಹನುಮಂತನನ್ನು ಭಕ್ತಿ ಶ್ರದ್ದೆಯಿಂದ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಆಂಜನೇಯನ ಭಕ್ತರದ್ದು.

ನವಿಲುತೀರ್ಥದ ಹನುಮಂತನ ವಿಶೇಷತೆ
ವ್ಯಾಸರಾಯರಿಂದ ಪ್ರತಿಷ್ಠಾಪನೆಗೊಂಡ ಈ ಆಂಜನೇಯನ ವಿಗ್ರಹ ವಿಶಿಷ್ಠವಾಗಿದೆ. ಈ ವಿಗ್ರಹದ ಮುಖವು ಪೂರ್ವ ದಿಕ್ಕಿನತ್ತ ಇದೆ. ಪಾದಗಳು ಪಶ್ಚಿಮದತ್ತ ವಾಲಿವೆ. ದಕ್ಷಿಣ ದಿಕ್ಕಿಗೆ ದೇಗುಲ. ಬಾಲಕ್ಕೆ ಗಂಟೆ ಮತ್ತು ಕಾಲುಗಳ ಮಧ್ಯದಲ್ಲಿ ಚಕ್ರ ಇವು ಈ ಹನುಮಂತನ ವಿಶೇಷತೆಗಳು. ಈ ರೀತಿಯ ವಿಗ್ರಹಗಳು ಅಪರೂಪ. ಚಕ್ರವು ತಿರುಪತಿ ತಿಮ್ಮಪ್ಪ ಮತ್ತು ವಿಷ್ಣುವಿನ ಸ್ವರೂಪದ್ದಾಗಿದೆ.ಬಾಲದ ಗಂಟೆಯು ಧೈರ್ಯದ ಮತ್ತು ಶಕ್ತಿ ಸ್ವರೂಪ ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇಂತಹ ಅಪರೂಪದ ವಿಗ್ರಹ ಪುರಾತನದ್ದು.

ಇತಿಹಾಸವನ್ನು ಅವಲೋಕಿಸಿದಾಗ 16 ನೆಯ ಶತಮಾನದಲ್ಲಿ ವಿಜಯನಗರ ಅರಸರ ರಾಜಗುರುಗಳಾದ ಶ್ರೀ ವ್ಯಾಸಸಾರ್ವಭೌಮರು ನಾಡಿನೆಲ್ಲೆಡೆ 732 ಹನುಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅವನ ಆರಾಧನೆಯನ್ನು ಜನಪ್ರೀಯಗೊಳಿಸಿದರು ಎಂಬುದನ್ನು ಓದುತ್ತೇವೆ.

ಅಣೆಕಟ್ಟು ಕಟ್ಟುವ ಮೊದಲು ನದಿ ಇರುವ ಈ ಬೆಟ್ಟದ ಹಿನ್ನೀರಿನಲ್ಲಿ ಅನೇಕ ಗ್ರಾಮಗಳು ಮುಳುಗಡೆ ಹೊಂದಿವೆ. ಅದರಲ್ಲಿ ಯಜ್ಞಕುಂಡ ಎಂದು ಕರೆಸಿಕೊಂಡ ಯಕ್ಕುಂಡಿ ಮತ್ತು ಗುರುಗಳ ಊರು ಗುರ್ಲಹೊಸೂರು ಮಹತ್ವದವು. ಈ ಸಂದರ್ಭ ವ್ಯಾಸರು ಈ ಪಾವನ ನೆಲದ ಸ್ಪರ್ಶ ಮಾಡಿರಬಹುದು. ಚಾಳುಕ್ಯರ ನಂತರದ ದಿನಗಳಲ್ಲಿ ವಿಜಯನಗರ ಅರಸರ ಪ್ರಭಾವ ಬೆಳಗಾವಿ ನಾಡಿನ ಮೇಲೆ ಆಗಿರುವುದನ್ನು ಇತಿಹಾಸದಿಂದ ತಿಳಿಯಬಹುದು. ವ್ಯಾಸರಾಯರು ವಿಜಯನಗರ ಆಳರಸರ ರಾಜಗುರುಗಳಾಗಿದ್ದವರು.
ಅಣೆಕಟ್ಟು ಕಟ್ಟುವಾಗ ನೆಲವನ್ನು ಅಗೆಯುವ ಸಂದರ್ಭ ಈ ವಿಗ್ರಹ ಇಲ್ಲಿ ದೊರಕಿರುವುದನ್ನು ಅರ್ಚಕ ಬಸವರಾಜ ನಿಡಸೋಸಿ ನೆನಪಿಸಿಕೊಳ್ಳುತ್ತಾರೆ. ಹಾಗಾದರೆ ಇಲ್ಲಿಯೇ ಏಕೆ ಗುಡಿ ಕಟ್ಟಿದರು ಎಂದು ಪ್ರಶ್ನಿಸಿದಾಗ ಈ ಸ್ಥಳದಲ್ಲಿ ಮೊದಲು ಬಂಡಾರಹಳ್ಳಿಯ ಒಬ್ಬ ವ್ಯಕ್ತಿ ಸಣ್ಣ ಆಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ ಇದೇ ಸ್ಥಳದಲ್ಲಿ ಆರಾಧಿಸುತ್ತಿದ್ದನಂತೆ. ಅದೇ ಸ್ಥಳ ಈ ಆಂಜನೇಯನನ್ನು ಪ್ರತಿಷ್ಠಾಪಿಸುವುದು ಸೂಕ್ತ ಎಂದು ಅಂದು ಕಾರ್ಯನಿರ್ವಹಿಸುತ್ತಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳ ತೀರ್ಮಾನ. ಇಂದಿಗೂ ಎರಡೂ ವಿಗ್ರಹಗಳು ಈ ದೇಗುಲದಲ್ಲಿ ಇರುವುದನ್ನು ದಾಖಲಿಸಿ ಉಳಿದು ಬಂದಿರುವುದಕ್ಕೆ ಸಾಕ್ಷಿ.


ಆಚರಣೆಗಳು
ಪ್ರತಿ ದಿನವೂ ಪೂಜೆಗೊಳ್ಳುವ ಇಲ್ಲಿನ ಆಂಜನೇಯನಿಗೆ ಪ್ರತಿ ಶನಿವಾರ ಭಕ್ತರ ಇಷ್ಟಾರ್ಥದ ಮೇರೆಗೆ ಅಭಿಷೇಕಗಳು ಜರಗುತ್ತವೆ. ಹನುಮಾನ ಜಯಂತಿ ಮತ್ತು ಕಾರ್ತಿಕ ಮಾಸದಲ್ಲಿ ಸಡಗರದ ಪೂಜಾ ವಿಧಿವಿಧಾನಗಳು ಜರಗುತ್ತ ಬಂದಿವೆ


ದೇವಾಲಯದ ಆವರಣ
ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು ಪ್ರದಕ್ಷಿಣ ಪಥವನ್ನು ಹೊಂದಿದೆ. ತೆರೆದ ಪ್ರಾಂಗಣ ಹೊರಾಂಗಣವನ್ನು ಸುತ್ತಲೂ ವೀಕ್ಷಿಸುವಂತೆ ಗಾಳಿ ಬೆಳಕಿನಿಂದ ಕೂಡಿದ್ದು ಮಧ್ಯದಲ್ಲಿ ದೇವಾಲಯ ಗರ್ಭಗುಡಿಯಿದೆ. ದೇವಾಲಯದ ಆವರಣದಲ್ಲಿ ತುಳಸಿ ಮತ್ತು ನಾಗದೇವ ಕಟ್ಟೆಗಳಿವೆ. ಬಿಲ್ವಪತ್ರೆ ಮರವನ್ನು ಹೊಂದಿದ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕೂಡ ಒಂದು ಬದಿಯಲ್ಲಿದೆ. ಹೀಗಾಗಿ ಇಲ್ಲಿ ಸವದತ್ತಿಯ ಎಲ್ಲಮ್ಮನ ದೇವಾಲಯಕ್ಕೆ ಹೊರಟು ಬರುವ ಮಹಾರಾಷ್ಟç, ಚಿಕ್ಕೋಡಿ, ಸಂಕೇಶ್ವರ, ಭಕ್ತರು ಇಲ್ಲಿನ ಆವರಣ ಮತ್ತು ಮರದ ನೆರಳಿನ ಕಟ್ಟೆಯ ಮೇಲೆ ಕುಳಿತು ಊಟ ಮಾಡಿಕೊಂಡು ವಿಶ್ರಮಿಸಿಕೊಂಡು ಹೋಗುವುದು ವಾಡಿಕೆ.

Related Articles

ಪ್ರತಿಕ್ರಿಯೆ ನೀಡಿ

Latest Articles