ಗಂಗೆ ಧರೆಗೆ ಅವತರಿಸಿದ ದಿನ

ಇಂದು ವೈಶಾಖ ಶುದ್ಧ ಸಪ್ತಮಿ, ಭಾಗೀರಥಿ ಜಯಂತಿ, ಅಂದರೆ ಗಂಗೋತ್ಪತ್ತಿ ದಿನ. ಭಾಗೀರಥಿ ಗಂಗಾನದಿಯ ಉಗಮ ನಾಮ. ಕಮಠ ಹಿಮಪರ್ವತದ ಬುಡದಲ್ಲಿ ಸುಮಾರು 2364 ಮೀಟರ್ ಎತ್ತರದಲ್ಲಿ ಗೋಮುಖ ಎಂಬಲ್ಲಿ ಹುಟ್ಟಿ ಅಲ್ಲಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ತೆಹ್ರಿಘರ್‍ವಾಲ್ ಜಿಲ್ಲೆಯ ಗಂಗೋತ್ರಿ ಧಾಮದಲ್ಲಿ ಈ ನದಿ ಗೋಚರವಾಗುತ್ತದೆಂಬುದು ಭೌಗೋಲಜ್ಞರ ಅಭಿಪ್ರಾಯ.

ಗಂಗೋತ್ರಿಯಲ್ಲಿ ಗಂಗೆ, ಯಮುನೆ, ಸರಸ್ವತಿ, ಲಕ್ಷ್ಮಿ, ಪಾರ್ವತಿ ಮತ್ತು ಅನ್ನಪೂರ್ಣೆಯರ ಸ್ವರ್ಣಪ್ರತಿಮೆಗಳಿರುವ ಮಂದಿರವೂ, ಭಗೀರಥ ಗಂಗೆಯ ಸಮ್ಮುಖದಲ್ಲಿ ಕೈಜೋಡಿಸಿ ನಿಂತಿರುವ ಪ್ರತಿಮೆಯೂ ಇವೆ. ಈ ಧಾಮದ ಸುತ್ತಲೂ ದೇವದಾರುವಿನ ಅರಣ್ಯವಿದೆ. ಅಲ್ಲಿಂದ ಕೆಳಗೆ ಹರಿದ ಭಾಗೀರಥಿಗೆ ಕೇದಾರಗಂಗಾ ನದಿ ಬಂದು ಸೇರುತ್ತದೆ. ಮುಂದೆ ಅರ್ಧ ಕಿಮೀ ಕೆಳಗೆ ಬಂದರೆ ಭಾಗೀರಥಿ ನದಿ ಅಲ್ಲಿರುವ ಒಂದು ಶಿವಲಿಂಗದ ಮೇಲೆ ಧುಮುಕುತ್ತದೆ. ಇಲ್ಲಿಗೆ ಅನತಿ ದೂರದಲ್ಲಿ ಹರಶಿಲ ಎಂಬ ಸ್ಥಳವಿದ್ದು ಇಲ್ಲಿಂದ ಕೈಲಾಸ ಹಾಗೂ ಮಾನಸ ಸರೋವರಗಳಿಗೆ ಹೋಗುವ ದಾರಿಯಿದೆ. ಇದರ ಸಮೀಪದಲ್ಲಿಯೇ ಶ್ಯಾಮಪ್ರಯಾಗ ಎಂಬಲ್ಲಿ ಭಾಗೀರಥಿಗೆ ಶ್ಯಾಮಗಂಗಾ ನದಿ ಬಂದು ಸೇರುತ್ತದೆ.

ಭಾಗೀರಥಿ ನದಿಯ ದಡದಲ್ಲಿ ಅನೇಕ ಪ್ರಾಚೀನ ಮಂದಿರಗಳಿರುವ ಉತ್ತರಕಾಶಿ ಎಂಬ ನಗರವಿದೆ. ಇಲ್ಲಿಯ ವಿಶ್ವನಾಥ, ಏಕಾದಶರುದ್ರ ಮತ್ತು ಶಕ್ತಿ ಮಂದಿರಗಳು ಪ್ರಮುಖವಾದವು. ಉತ್ತರ ಕಾಶಿಯಿಂದ ಕೆಳಗೆ ಬಂದರೆ ಧಾರಾಸು ಎಂಬ ಸ್ಥಳವಿದೆ. ಇಲ್ಲಿಂದ ಯಮುನೋತ್ರೀ ಧಾಮಕ್ಕೆ ಮಾರ್ಗವಿದೆ. ಧಾರಾಸಿಯಿಂದ ಮುಂದೆ 45 ಕಿಮೀ ದೂರದಲ್ಲಿರುವ ಭಿಲಂಗನಾ ನದಿ ಸೇರುತ್ತದೆ. ಸಂಗಮದ ಬಳಿಯೇ ಉತ್ತರ ಕಾಶಿ ಜಿಲ್ಲೆಯ ಪ್ರಸಿದ್ಧವಾದ ಟಹರಿ ನಗರವಿದೆ. ಇದು ಮೊದಲು ಮಹಾರಾಜ ಸುದರ್ಶನ ಶಾಹನ ರಾಜಧಾನಿಯಾಗಿತ್ತು. ಇಲ್ಲಿ ಬದರೀನಾಥ ಹಾಗೂ ಕೇದಾರನಾಥ ಮಂದಿರಗಳಿವೆ.

ಇಲ್ಲಿಂದ ಮೂಲ ಕೇದಾರಕ್ಕೆ ಹೋಗಲು ರಸ್ತೆ ಇದೆ. ಟಹರಿಯಿಂದ ಕೆಳಗೆ ಹರಿದ ಭಾಗೀರಥಿಗೆ ದೇವಪ್ರಯಾಗದ ಬಳಿ ಅಲಕನಂದಾ ನದಿ ಸೇರುತ್ತದೆ. ಇಲ್ಲಿ ರಘುನಾಥ ಮಂದಿರ ಮತ್ತು ಕೆಲವು ಬ್ರಾಹ್ಮೀಲಿಪಿಯ ಪುರಾತನ ಶಾಸನಗಳಿವೆ. ಈ ಸಂಗಮಸ್ಥಳ ಅತ್ಯಂತ ರಮಣೀಯ ಹಾಗೂ ಪವಿತ್ರ ಸ್ಥಳವೆಂದು ವೈರಸ್. ಇಲ್ಲಿದ್ದ ಮುಂದೆ ಹರಿದ ಭಾಗೀರಥಿಯ ದೊಡ್ಡ ಪ್ರವಾಹವೇ ಲೋಕ ಪ್ರಸಿದ್ಧ ಗಂಗಾನದಿ.

ಪೌರಾಣಿಕ ಹಿನ್ನಲೆ

ಪೂರ್ವದಲ್ಲಿ ಅಯೋಧ್ಯಾ ನಗರಿಯಲ್ಲಿ ಸಗರನೆಂಬ ಚಕ್ರವರ್ತಿ ಇದ್ದ. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು. ಸಗರ ತನ್ನ ಪತ್ನಿಯರೊಂದಿಗೆ ತಪಸ್ಸು ಮಾಡಿದ. ಭೃಗುಮುನಿಗಳು ತೃಪ್ತರಾಗಿ ವರ ನೀಡಿದರು.

ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ ಎಂದರು. ‌ ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಯ ಮಗ ಅಸಮಂಜ ವಿಕ್ಷಿಪ್ತ ಸ್ವಭಾವದವನು, ದುಃಖ ಪ್ರೇಮಿ, ಬೇರೆಯವರ ತೊಂದರೆಗಳಿಗೆ ಸಂತೋಷಪಡುವವನು. ಅಸಮಂಜನಿಗೆ ಅಂಶುಮಂತನೆಂಬ ಮಗ ಜನಿಸಿದ. ಅವನು ವೀರ, ವಿನಯಿ ಮತ್ತು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಸುಮತಿ ಸೋರೆಕಾಯಿಯಂಥ ಪಿಂಡವನ್ನು ಹಡೆದಳು. ಆ ಪಿಂಡ ಒಡೆದು ಅರವತ್ತು ಸಾವಿರ ಶಿಶುಗಳು ಬಂದವು.

ಸಗರ ಒಂದು ಮಹಾಯಜ್ಞವನ್ನು ಮಾಡಬೇಕೆಂದು ನಿಶ್ಚಯಿಸಿ ಗುರುಗಳೊಂದಿಗೆ ಯೋಜನೆ ಮಾಡಿದ. ಯಜ್ಞ ಪ್ರಾರಂಭವಾಯಿತು. ಯಜ್ಞದ ಕುದುರೆಯನ್ನು ಅಂಶುಮಂತ ರಕ್ಷಿಸಿಕೊಂಡು ನಡೆದ. ಆಗ ಇಂದ್ರ ಮಾಯೆಯಿಂದ ರಾಕ್ಷಸ ಶರೀರವನ್ನು ಧರಿಸಿ ಯಜ್ಞದ ಕುದುರೆಯನ್ನು ಅಪಹರಿಸಿಕೊಂಡು ಹೋದ. ಋತ್ವಿಜರು, ರಾಜಾ ಯಜ್ಞಾಶ್ವವನ್ನು ಯಾರೋ ಅಪಹರಿಸಿದ್ದಾರೆ. ಅದನ್ನು ಬೇಗನೇ ತರಿಸು. ಯಜ್ಞದ ಕುದುರೆ ದೊರಕದಿದ್ದರೆ ಯಜ್ಞಭಂಗವಾಗಿ ನಮ್ಮೆಲ್ಲರಿಗೂ ಕೇಡಾಗುತ್ತದೆ ಎಂದು ಒತ್ತಾಯಿಸಿದರು.

ಸಗರ ಚಕ್ರವರ್ತಿ ತನ್ನ ಅರವತ್ತು ಸಾವಿರ ಮಕ್ಕಳಿಗೆ ಹೇಳಿದ, ಪುತ್ರರೇ, ಇಂಥ ಪವಿತ್ರವಾದ ಯಜ್ಞಕ್ಕೆ ಅಡ್ಡವಾಗಿ ರಾಕ್ಷಸರು ಹೇಗೆ ಬಂದರೋ ತಿಳಿಯದು. ನೀವು ಹೋಗಿ ಆ ಯಜ್ಞಾಶ್ವವನ್ನು ಹುಡುಕಿ ತನ್ನಿ. ಆ ಕಾರ್ಯಕ್ಕೆ ಏನು ಬೇಕೋ ಅದನ್ನು ಮಾಡಿ. ಬೇಕಾದರೆ ನೆಲವನ್ನು ಸೀಳಿ, ಸಮುದ್ರವನ್ನು ಬರಿದು ಮಾಡಿ ಎಂದ. ತಂದೆಯ ಆಜ್ಞೆಯಂತೆ ಈ ಮಕ್ಕಳು ಭೂಮಿಯ ಇಂಚು, ಇಂಚನ್ನು ಶೋಧಿಸತೊಡಗಿದರು. ಹರಿತವಾದ ಆಯುಧಗಳಿಂದ, ಶೂಲಗಳಿಂದ ನೆಲವನ್ನು ಭೇದಿಸತೊಡಗಿದರು. ದೇವತೆಗಳು ಭೀತರಾಗಿ ಬ್ರಹ್ಮನ ಬಳಿಗೆ ತೆರಳಿ, ‘ಸಗರ ಪುತ್ರರು ಒಂದೇ ಸಮನೆ ಭೂಮಿಯನ್ನು ಅಗೆಯುತ್ತಿದ್ದಾರೆ. ಇದರಿಂದ ಭೂಮಿಗೆ ಮುಂದೆಂದೂ ತುಂಬಿಕೊಳ್ಳಲಾಗದ ನಷ್ಟವಾಗುತ್ತದೆ. ಇದನ್ನು ತಡೆಯಬೇಕು ಎಂದರು.

ಆಗ ಬ್ರಹ್ಮ ಹೇಳಿದ ಮಾತು ಇದು: ಪೃಥಿವ್ಯಾಶ್ಚಾಪಿ ನಿರ್ಭೇಧೋ ದೃಷ್ಟ ಏವ ಸನಾತನಃ | ಸಗರಸ್ಯ ಚ ಪುತ್ರಾಣಾಂ ವಿನಾಶೋsದೀರ್ಘಜೀವಿನಾಮ್ || (ವಾಲ್ಮೀಕಿ ರಾಮಾಯಣ, ಸರ್ಗ 40, ಶ್ಲೋಕ 4) ಹೀಗೆ ಭೂಮಿಯ ಛೇದನ ಕಾರ್ಯ ಪ್ರತಿ ಕಲ್ಪದಲ್ಲೂ ಸನಾತನವಾಗಿ ನಡೆಯುತ್ತಲೇ ಇದೆ. ಇದರಿಂದ ಅಲ್ಪಾಯುಗಳಾದ ಸಗರ ಪುತ್ರರ ವಿನಾಶವೂ ಆಗುತ್ತದೆ. ಅಹಂಕಾರಿಗಳಾದ ಸಗರ ಪುತ್ರರು ಕುದುರೆಯನ್ನು ಹುಡುಕುವುದಕ್ಕಾಗಿ ಭೂಮಿಯನ್ನು ಸೀಳಿ, ಸೀಳಿ ಧ್ವಂಸಮಾಡಿದರು. ಕೊನೆಗೆ ಕಪಿಲಾವತಾರದಲ್ಲಿದ್ದ ಸನಾತನವಾದ ವಾಸುದೇವನನ್ನು ಕಂಡರು. ಅವನ ಪಕ್ಕದಲ್ಲೇ ಯಜ್ಞಾಶ್ವ ಮೇಯುತ್ತಿತ್ತು. ಅವನೇ ಕುದುರೆಯ ಕಳ್ಳನಿರಬೇಕೆಂದು ಅವನ ಮೇಲೆ ಆಕ್ರಮಣ ಮಾಡಲು ಹೋದಾಗ ಆ ಋಷಿಗೆ ಉಗ್ರಕೋಪ ಬಂದು ಒಮ್ಮೆ ಹೂಂಕಾರ ಮಾಡಿದ. ಆಗ ಬಂದ ಜ್ಞಾಲೆಯಲ್ಲಿ ಸಗರನ ಅರವತ್ತು ಸಾವಿರ ಮಕ್ಕಳು ಸುಟ್ಟು ಬೂದಿಯಾಗಿ ಹೋದರು.

ಭೂಮಿಯನ್ನು ಬಗೆದು ಬಗೆದು ಬರಿದು ಮಾಡುವಾಗ ಮುಂದೆಂದೂ ತುಂಬಿಕೊಳ್ಳಲಾಗದ ಅನಾಹುತವನ್ನು ಮಾಡುತ್ತಿದ್ದೇವೆ ಎಂಬುದು ಗಮನಕ್ಕೇ ಬರುವುದಿಲ್ಲವಲ್ಲ. ಆ ಬ್ರಹ್ಮನ ಮಾತೂ ಕಿವಿಯ ಮೇಲೆ ಬೀಳುವುದಿಲ್ಲ. ಹೀಗೆ ಭೂಮಿ ಛೇದನ ಮಾಡುವವರು ಅಲ್ಪಾಯುಷಿಗಳಾಗಿ ವಿನಾಶ ಹೊಂದುತ್ತಾರೆ ಎಂದು ಬ್ರಹ್ಮ ಅಂದು ಹೇಳಿದ ಮಾತು ಇಂದೂ ಅಂಥವರ ಗಮನಕ್ಕೆ ಬರುವುದು ಒಳ್ಳೆಯದು. ಹಾಗೆ ಮಾಡಿದವರು ಜೀವನದಲ್ಲಿ, ಯಶಸ್ಸಿನ ಪಯಣದಲ್ಲಿ, ಅಧಿಕಾರದ ಸಿಂಹಾಸನದಲ್ಲಿ ಬಹಳ ಕಾಲ ಬದುಕದೇ ವಿನಾಶಕ್ಕೆ ನುಗ್ಗುತ್ತಿರುವುದನ್ನು ಕಂಡಾಗ ಪುರಾಣದ ಕಥೆಗಳು ಬರೀ ಕಥೆಗಳಾಗಿರದೇ ಸಾಂಕೇತಿಕವಾದ ಶಾಶ್ವತ ಸತ್ಯಗಳಾಗಿವೆ ಎನ್ನಿಸುತ್ತದೆ.

ತಪಸ್ಸಿನಿಂದ ಬಲದಿಂದ ಗಂಗೆಯನ್ನು ಧರೆಗಿಳಿಸಿದ ಭಗೀರಥ

ಇಕ್ಷ್ವಾಕು ವಂಶದ ದೊರೆಯಾದ ಭಗೀರಥ ದಿಲೀಪನ ಮಗ. ಮಹಾಸಾಹಸಿ. ತನ್ನ ತಾತ ಸಗರ ಚಕ್ರವರ್ತಿಯ ಅರುವತ್ತು ಸಹಸ್ರ ಮಕ್ಕಳು ಮುನಿಶಾಪದಿಂದ ಸುಟ್ಟು ಬೂದಿಯಾಗಿದ್ದು ಸದ್ಗತಿ ಕಾಣದೇ ಇರುವ ಸಂದರ್ಭದಲ್ಲಿ ಅವರ ಉದ್ಧಾರಕ್ಕಾಗಿ ದೇವಗಂಗೆಯನ್ನು ಕುರಿತು ಉಗ್ರವಾಗಿ ತಪಸ್ಸುಮಾಡಿದ. ‌ ದೇವಗಂಗೆಯು ಒಪ್ಪಿ ಭೂಮಿಗೆ ಧುಮ್ಮಿಕ್ಕುವಾಗ ಅದರ ರಭಸಕ್ಕೆ ಭೂಮಂಡಲವೇ ಕೊಚ್ಚಿಹೋಯಿತು. ಅದನ್ನು ತಡೆಯಲು ಶಿವನನ್ನು ಒಪ್ಪಿಸಿದ. ಅದರಂತೆ ಧುಮ್ಮಿಕ್ಕುವ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ಧರಿಸಿದ. ಆದರೆ ಗಂಗೆ ಶಿವನ ಜಡೆಯಲ್ಲೇ ಅಡಗಿ ಹೋದಾಗ ಮತ್ತೆ ಭಗೀರಥ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಅವನ ಜಟೆಯಿಂದ ಬಿಡಿಸಿಕೊಂಡು ಬಂದ. ‌

‌ ‌ಭಗೀರಥನ ತಪಸ್ಸಿನ ಫಲವಾಗಿ ಗಂಗೆಯೇನೋ ಭೂಮಿಗೆ ಹೊರಟಳು. ಅವಳ ಪ್ರವಾಹವನ್ನು ತಡೆಯಲೂ ಮಹಾದೇವನೂ ಸಹ ಸಹಾಯ ಮಾಡಿ ತನ್ನ ಜಟೆಯಲ್ಲಿ ಅವಳನ್ನು ಬಂಧಿಸಿ ಏಳು ಭಾಗಗಳಾಗಿ ಮಾಡಿ ಹರಿಬಿಟ್ಟನು. ನಂತರ ಭಗೀರಥನನ್ನು ಹಿಂಬಾಲಿಸುತ್ತಿದ್ದ ದೇವಗಂಗೆಗೆ ದಾರಿ ಮಧ್ಯೆ ಜಹ್ನು ಮುನಿಗಳ ಆಶ್ರಮ ಸಿಗುತ್ತದೆ. ಅದನ್ನು ಲೆಕ್ಕಿಸದ ಗಂಗೆಯು ರಭಸದಿಂದ ಆಶ್ರಮದೊಳಗೇ ಹರಿದಳು.

ತಪೋನಿರತರಾಗಿದ್ದ ಜಹ್ನು ಮುನಿಗಳು ಗಂಗೆಯ ಅಹಂಕಾರ ಇಳಿಸಲು ಅವಳನ್ನು ತಮ್ಮ ಕಮಂಡಲದಲ್ಲಿ ಸೇರಿಸಿ ಎಲ್ಲವನ್ನೂ ಆಪೋಶನ ತೆಗೆದುಕೊಂಡರು. ತನ್ನನ್ನು ಹಿಂಬಾಲಿಸುತ್ತಿದ್ದ ಗಂಗೆಯು ಕಾಣದೇ ಹೋದಾಗ ಭಗೀರಥನು ಸಮೀಪದಲ್ಲಿದ್ದ ಜಹ್ನು ಮುನಿಗಳ ಆಶ್ರಮಕ್ಕೆ ಆಗಮಿಸಿ ವಿಚಾರಿಸುತ್ತಾನೆ. ಆಗ ಜಹ್ನು ಮುನಿಗಳು ಗಂಗೆಯು ಜಂಭದಿಂದ ನನ್ನ ಆಶ್ರಮಕ್ಕೆ ನುಗ್ಗಿದ್ದಕ್ಕೆ ತಕ್ಕ ಶಿಕ್ಷೆ ನೀಡಲು ಅವಳನ್ನು ಆಪೋಶನ ತೆಗೆದುಕೊಂಡೆ ಎಂದು ಹೇಳುತ್ತಾರೆ.

ಆಗ ಭಗೀರಥನು ತಾನು ಗಂಗೆಯನ್ನು ಭೂಮಿಗೆ ತಂದ ಕಾರಣ, ಪಟ್ಟ ಕಷ್ಟಗಳನ್ನು ವಿವರವಾಗಿ ತಿಳಿಸಿ ಗಂಗೆಯನ್ನು ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ಅವನು ಹೇಳಿದ ವಿಚಾರವನ್ನು ತಿಳಿದು ಜಹ್ನು ಮುನಿಗಳು ಅವಳನ್ನು ಕಳುಹಿಸಲು ಒಪ್ಪಿ ತಮ್ಮ ಕಿವಿಯಿಂದ ಗಂಗೆಯನ್ನು ಹರಿಬಿಡುತ್ತಾರೆ. ಹಾಗೆ ಹರಿದ ಗಂಗೆಯನ್ನು ಭಗೀರಥನು ಭೂಮಿಯ ಮೂಲಕವಾಗಿ ತನ್ನ ಪೂರ್ವಿಕರ ಮರಣ ಸ್ಥಳವಾದ ಪಾತಾಳಕ್ಕೆ ಕರೆದೊಯ್ದು ಅವರ ಅಸ್ಥಿಯ ಮೇಲೆ ಗಂಗೆಯನ್ನು ಹರಿಯುವಂತೆ ಕೇಳಿಕೊಳ್ಳುತ್ತಾನೆ. ಆಗ ಆಕೆ ಪಾತಾಳಲೋಕದಲ್ಲಿ ಹರಿದು 60 ಸಾವಿರ ಸಗರ ಪುತ್ರರಿಗೆ ಮೋಕ್ಷ ದೊರಕುವಂತೆ ಮಾಡುತ್ತಾಳೆ.

ಅಂದಿನಿಂದ ದೇವಗಂಗೆಗೆ ತ್ರಿಪಥಗಾಮಿನಿ ಎಂಬ ಹೆಸರು ಬಂತು. ಅಲ್ಲದೇ ಜಹ್ನು ಮುನಿಗಳ ಕಿವಿಯಿಂದ ಹರಿದುಬಂದ ಕಾರಣ ಜಾಹ್ನವಿಯೆಂಬ ಹೆಸರು ಸಹ ಗಂಗೆಯದ್ದಾಯಿತು. ಇನ್ನು ಭಗೀರಥನು ತನ್ನ ಸತತ ಕಠಿಣ ಪ್ರಯತ್ನದಿಂದ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತನ್ನ ವಂಶಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದನು. ಅಂದಿನಿಂದ ಕಠಿಣ ಪ್ರಯತ್ನಗಳಿಗೆ ಭಗೀರಥ ಪ್ರಯತ್ನವೆಂದೇ ಹೇಳಲಾಗುತ್ತದೆ. ‌ ‌

ದೇವಗಂಗೆ ಭೂಮಿಗೆ ಬಂದಳು. ಸಗರ ಪುತ್ರರಿಗೆ ಸದ್ಗತಿ ದೊರಕಿತು. ಹೀಗೆ ನಿರಂತರ ಪ್ರಯತ್ನದಿಂದ ಭಗೀರಥ ತನ್ನ ಪಿತೃಗಳನ್ನು ಉದ್ಧರಿಸಿ ಧನ್ಯನಾದ. ಈ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ. ಭಗೀರಥನಿಗೆ ಹಂಸಿಯೆಂಬ ಮಗಳಿದ್ದಳೆಂದೊ ಅವಳನ್ನು ಕೌತ್ಸುಮುನಿ ಮದುವೆಯಾಗಿದ್ದನೆಂದೂ ಧರ್ಮಸ್ವರೂಪ ಮತ್ತು ಅನುಷ್ಠಾನದ ವಿಷಯವಾಗಿ ಭಗೀರಥ ಬ್ರಹ್ಮನೊಂದಿಗೆ ಸಂವಾದ ಮಾಡಿದನೆಂದೂ ಮಹಾಭಾರತದಿಂದ ತಿಳಿದುಬರುತ್ತದೆ.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ. ಹುಸ್ಕೂರು(ಎಲೆಕ್ಟಾçನಿಕ್ ಸಿಟಿ ಸಮೀಪ) ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles