ಸಂಬಂಧದಲ್ಲಿ ಮಾನವೀಯತೆ ಮರೆಯಾಗದಿರಲಿ

* ಅರ್ಜುನ ಕಂಬೋಗಿ

ನಮ್ಮ ಬದುಕಿನಲ್ಲಿ ಕುಟುಂಬ, ನೆಂಟರು-ಬಂಧುಗಳು, ಆತ್ಮೀಯರು, ಗೆಳೆಯರು ಎಲ್ಲರೂ ಕಷ್ಟವೋ ಸುಖವೋ ಒಂದಲ್ಲ ಒಂದು ಸಂದರ್ಭದಲ್ಲಿ ಕೈಜೋಡಿಸುತ್ತಾರೆ ಎನ್ನುವ ನಿರೀಕ್ಷೆ, ಭರವಸೆ ಹೊಂದಿರುತ್ತಾರೆ. ಆದರೆ ನಿತ್ಯ ಅಕ್ಕರೆ ತೋರುತ್ತಿದ್ದವರು ಕಷ್ಟ ಬಂದಾಗ ಏಕಾಏಕಿ ಮರೆತು ಬಿಟ್ಟಂತೆ ನಟಿಸಿದರೆ ಮನಸ್ಸಿಗಾಗುವ ನೋವು ಅಷ್ಟಿಷ್ಟಲ್ಲ.

ಕಷ್ಟ ಸುಖ ಕೇಳುವರು ಕೇಳದಿದ್ದಾಗ ಈ ರೀತಿ ಅನುಭವಗಳು ಎಲ್ಲರ ಮುಂದೆ ಹೊರ ಬರುತ್ತವೆ. ಉದಾಹರಣೆಯಾಗಿ ನನ್ನದೇ ಒಂದು ಸ್ವಾನುಭವವನ್ನು ಹಂಚಿಕೊಳ್ಳುವುದಾದರೆ,

ನಾನು ಕಾಲಿಗೆ ನಮಸ್ಕರಿಸಲು ತಲೆಬಾಗುತ್ತೇನೆ ಅನ್ನುವಷ್ಟರಲ್ಲಿ ಪಾದ ಮುಟ್ಟಿದಾಗ ಅಕ್ಕನಿಗೆ ಗೊತ್ತಾಯಿತು. ಸರಕ್ಕನೆ ತನ್ನ ಪಾದಗಳನ್ನು ಮೇಲೆ ಎಳೆದುಕೊಂಡಳು, ನಮಸ್ಕರಿಸಲು ಒತ್ತಾಯ ಮಾಡದೆ ಅವಳಿಗೆ ಅಕ್ಕಾ ಬರುವೆ ಡ್ಯುಟಿಗೆ ಹೊತ್ತಾಗುತ್ತದೆ ಎಂದು ಹೇಳಿ ಬರುವಾಗ ನನ್ನ ಕಣ್ಣುಗಳು ತೇವಗೊಂಡಿದ್ದವು. ಈ ಕರ್ತವ್ಯ ಒಮ್ಮೊಮ್ಮೆ ಬೇಡವೆನಿಸುವಷ್ಟು ಭಾರವಾದರೂ ಈಗ ಹಾಗೆ ಯೋಚಿಸುವುದು ಸರಿಯಲ್ಲ ಅಂದು ನನ್ನ ಕೇಂದ್ರ ಸ್ಥಾನಕ್ಕೆ ಕಾರಿನಲ್ಲಿ ಹೊರಟಾಗ ಯಾವುದೋ ಹಳೆ ನೆನಪಿನ ಸುರುಳಿ ಬಿಚ್ಚುತ್ತಾ ಹೋಯಿತು.

ಅಕ್ಕನ ಮನೆತನ ಅದು ಊರಿಗೆ ಶ್ರೀಮಂತ ಮನೆತನ. ಆದರೆ ಮಾವಂದಿರುಗಳ ತಪ್ಪು ನಿರ್ಧಾರದಿಂದ ಆಸ್ತಿ ಕಳೆದುಕೊಂಡು ಸಾಮಾನ್ಯರಂತೆ ಜೀವನ ಸಾಗಿಸುತ್ತಿರುವಾಗ 1994-2000ದ ಹೊತ್ತಿನಲ್ಲಿ ಅಣ್ಣನ ಜೊತೆ ಮೇಲಿಂದ ಮೇಲೆ ಅಕ್ಕನ ಮನೆಗೆ ಹೋದಾಗ ಅವಳಿಗೆ ಎಲ್ಲಿಲ್ಲದ ಖುಷಿಯೋ, ಖುಷಿ. ತುಂಬಾ ಪ್ರೀತಿಯಿಂದ ಹೋಳಿಗೆ ಊಟಕ್ಕೆ ಸಿದ್ಧ ಮಾಡಿಯೇ ಬಿಡುತ್ತಿದ್ದಳು ನಾವೆಷ್ಟೆ ದಿನವಿರಲಿ ಪ್ರತಿದಿನ ಒಂದೊ0ದು ತರಹ ವಿಭಿನ್ನ ರುಚಿಯಾದ ಅಡುಗೆ ಮಾಡಿ ನೀಡುತ್ತಿದ್ದಳು. ಮೂರು ಹೆಣ್ಣು ಮಕ್ಕಳು ಒಬ್ಬ ಮಗ ಇರುವ ಕುಟುಂಬದಲ್ಲಿ ನಾವು ಹೋದಾಗ ಹರಟೆ ಹೊಡಿದದ್ದೇ ಹೊಡಿದದ್ದು. ಒಡಹುಟ್ಟಿದ ಅಣ್ಣ ಹಾಗೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಸೇರಿ ಐದಾರು ಅಣ್ಣ ತಂಮ್ಮ0ದಿರು ಕೂಡಿಕೊಂಡು ಮಾವಂದಿರನ್ನು ಮತ್ತು ಅಕ್ಕನ ಮಕ್ಕಳನ್ನು ಕಾಡಿಸಿದ್ದೆ ಕಾಡಿಸಿದ್ದು. ನನ್ನ ಅಕ್ಕ ನಮ್ಮನ್ನು ಮಾತ್ರ ಎಂದು ಬಿಟ್ಟು ಕೊಟ್ಟವಳಲ್ಲ. ನಮ್ಮ ಮೂವರು ಸಹೋದರರಲ್ಲಿ ಒಬ್ಬರಿಗಾದರು ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ಮದುವೆ ಮಾಡಬೇಕೆಂಬ ಆಶೆ. ಆದರೆ ಎಂದೂ ಕೇಳಲಿಲ್ಲ ಯಾಕೆ ಅನ್ನುವುದು ಇನ್ನು ನಮಗೆ ಗೊತ್ತಾಗಿಲ್ಲ.
ಮೊನ್ನೆ ಧೀಡಿರ್ ಅಂತ 10 ದಿನಗಳ ಹಿಂದೆ ಅಕ್ಕನಿಗೆ ಕಫಾ ಆಗಿದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ತಕ್ಷಣ ನಾನೇ ಎಲ್ಲರನ್ನು ಸಂಪರ್ಕಿಸಿ ಸರಕಾರಿ ಆಸ್ಪತ್ರೆಗೆ ಸೇರಿಸಿದೆ. ಆರ್‌ಟಿಪಿಸಿ ಚೆಕ್ ಮಾಡಿಸಿದಾಗ ನೆಗೆಟಿವು ಬಂದದ್ದು ಸಮಾಧಾನ ತಂದಿತು. ಎರಡು ಮೂರು ಬಾರಿ ಪೋನ ಮಾಡಿದಾಗ ಅಕ್ಕ ನನಗೆ ಧ್ಯರ್ಯ ಹೇಳುತ್ತಿದ್ದಳು ಆದರೆ ಮೊನ್ನೆ ಮಾತ್ರ ಅತ್ತು ಬಿಟ್ಟಳು.

ಕೋವಿಡ್ ಸೆಕ್ಟರ್ ಕೆಲಸ ಮುಗಿಸಿಕೊಂಡು ಅಕ್ಕನಲ್ಲಿ ಹೋದೆ, ಅಕ್ಕ ಚೆನ್ನಾಗಿಯೇ ಮಾತನಾಡಿದಳು. ಎಲ್ಲ ರೀತಿಯಿಂದ ಸರಿ ಇದ್ದಾಳೆ ಅಂತ ನನಗೆ ಅನಿಸಿತು. ‘ನನ್ನ ತಮ್ಮ ದೂರ ನಿಂತು ನನ್ನ ನೋಡಿ ಹೋದ ಎನ್ನುವ ಭಾವ ಅವಳಲ್ಲಿ ಬರಬಾರದು ಎಂದು ಅವಳನ್ನು ಸಹಜವಾಗಿ ಮುಟ್ಟಿ ಜ್ವರ ಇಲ್ಲವಲ್ಲಾ ಅಕ್ಕಾ ಅಂತ ಅಂದೆ, ನಾನೆ ಸೀರೆ ಸರಿ ಮಾಡಿ ಹೊಚ್ಚಿದೆ, ಗಲ್ಲಕ್ಕೆ ಕೈ ಇಟ್ಟು ಮೈ ಬಿಸಿ ಇಲ್ಲ ಅಕ್ಕಾ, ಎಂದು ಹೇಳಿದೆ, ಹಾಗೆ ಪಾದವನ್ನು ಎರಡು ಬಾರಿ ಮುಟ್ಟಿದೆ. ನಾನು ಕೊನೆಯ ಬಾರಿ ಪಾದ ಮುಟ್ಟಿದಾಗ ಅವಳು ತನ್ನ ಪಾದಗಳನ್ನು ಮೇಲೆ ಎಳೆದುಕೊಂಡಳು’ ನಾನು ಬರುತ್ತೇನೆ ಅಕ್ಕ ಎಂದು ಹೇಳಿ ಬರುವಾಗ ನನ್ನ ಕಣ್ಣುಗಳು ಒದ್ದೆ ಆಗಿದ್ದವು.

ಅಲ್ಲಿರುವವರು ಅವಳನ್ನು ನಾನು ಮುಟ್ಟಿದ್ದೆ ಪವಾಡ ಅನ್ನುವ ಹಾಗೆ ನೋಡುತ್ತಿದ್ದರು ನಾನು ವೈಚಾರಿಕ ಹಿನ್ನೆಲೆ ಮತ್ತು ಭಾವನಾತ್ಮಕವಾಗಿ ವಿಚಾರ ಮಾಡುವ ಸ್ವಭಾವವುಳ್ಳವನು, ಅಗತ್ಯಗಿಂತ ಕಡಿಮೆ ಮುಂಜಾಗ್ರತೆ ತೆಗೆದುಕೊಳ್ಳುವುದಿಲ್ಲ. ಹಾಗೆನೆ ತೀರ ಡಂಬಾಚಾರ ಮುಂಜಾಗ್ರತೆಯನ್ನು ತೆಗೆದುಕೊಳುವುದಿಲ್ಲ. ಕೆಲವರು ಕರೋನಾಗೆ ರೆಕ್ಕೆ ಬಂದಿವೆ ಅನ್ನೊ ತರ ವರ್ತಿಸುತ್ತಾರೆ ಅದು ಸರಿ ಅಲ್ಲ. ಯಾವಾಗಲೂ ನಮ್ಮ ಆರೋಗ್ಯದ ಬಗ್ಗೆ ಎಚ್ಚರ ಕಾಳಜಿ ನಾವೇ ವಹಿಸಬೇಕು. ಹಾಗಂತ ಮಾನವೀಯತೆಯನ್ನು ಮೇಲಿಂದ ಕೆಳಕ್ಕೆ ತಳ್ಳಬಾರದು. ಆಸ್ಪತ್ರೆಗೆ ಹೋದ ಮೇಲೆ ನಾನು ಅಲ್ಲಿ ನನ್ನ ಕೈಗಳಿಂದ ವಿನಾಕಾರಣ ಏನನ್ನು ಮಟ್ಟಲಿಲ್ಲ, ಅಕ್ಕನ ಮುಟ್ಟಿದ ನಂತರ ಎರಡು ಬಾರಿ ಕೈಗೆ ಸ್ಯಾನಿಟೈಸರ್ ಮಾಡಿಸಿಕೊಂಡೆ ಮುಂದುವರೆದು ಬಿಸಿನೀರಿನಿಂದ ಕೈ ತೊಳೆದುಕೊಂಡೆ.

ನಾನು ಏನು ಹೇಳಲು ಈ ಘಟನೆ ಬರೆದೆ ಅಂದರೆ ನಮ್ಮ ಹೆತ್ತವರನ್ನು, ನಮ್ಮನ್ನು ಹೆಚ್ಚು ಪ್ರೀತಿಸುತ್ತಿರುವರು ಕೇವಲ ಆಸ್ಪತ್ರೆ ಸೇರಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೋವಿಡ್ ಪಾಸಿಟಿವ್ ಇರುವ ತರಹ ನೋಡಬೇಡಿ. ಹಾಗಂತ ಯಾವುದೇ ಕಾರಣಕ್ಕೂ ನಿರ್ಲಕ್ಷö್ಯ ಬೇಡ. ಕೋವಿಡ್ ಹರಡದಂತೆ ನಮಗೆ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್, ಸಾನಿಟೈಸರ್, ಸಾಮಾಜಿಕ ಅಂತರವನ್ನು ಕೂಡಾ ಕಾಪಾಡಿಕೊಳ್ಳಬೇಕು.

ಕಾಯಿಲೆ ಬಂದಾಗ ನಮ್ಮವರ ಬಗ್ಗೆ ನಾವು ತೆಗೆದುಕೊಳ್ಳುವ ಕಾಳಜಿ ಆಗ ಅವರ ಮನಸ್ಸಿನಲ್ಲಾಗುವ ಸಕಾರಾತ್ಮಕ ಭಾವನೆ, ನನ್ನವರು ನನಗಿದ್ದಾರೆ ಎಂಬ ಭದ್ರತೆಯ ಭಾವ ರೋಗಿ ಅನ್ನಿಸಿಕೊಂಡವರಲ್ಲಿ ಮತ್ತಷ್ಟು ಆಶಾವಾದವನ್ನು ತುಂಬುತ್ತದೆ. ಕೋವಿಡ್ ಪಾಸಿಟಿವ್ ಅಂತಲ್ಲ ಯಾವುದೇ ರೀತಿಯ ಅನಾರೋಗ್ಯ ಉಂಟಾದಾಗ ಅವರ ಆರೈಕೆ ಮತ್ತು ಅವರಿಗೆ ಧೈರ್ಯ ಹೇಳುವ ಮನಸ್ಥಿತಿ ಎಲ್ಲರಲ್ಲೂ ಬರಲಿ ಅನ್ನೋದೇ ನನ್ನ ಆಶಯ.

(ಪಾರ್ಥವಿಕಂ ಅರ್ಜುನ ಕಂಬೋಗಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸವದತ್ತಿ ಬೆಳಗಾವಿ ಜಿಲ್ಲೆ)

Related Articles

ಪ್ರತಿಕ್ರಿಯೆ ನೀಡಿ

Latest Articles