ಸೌಗಂಧಿಕಾ ಪುಷ್ಪ ಹಿಡಿದು ನಿಂತಿರುವ ನುಗ್ಗಿಕೇರಿ ಅಂಜನೇಯ ದೇವರು

*ವೈ.ಬಿ.ಕಡಕೋಳ

ಧಾರವಾಡವು ನಿತ್ಯ ಹರಿದ್ವರ್ಣ ಗಿಡಮರಗಳಿಂದ ಹದವಾಗಿ ಅವ್ಯಾಹತವಾದ ಹಿತಕರವಾದ ಪ್ರಶಾಂತ ವಾತಾವರಣ, ನಸುಗೆಂಪು ಗುಡ್ಡ ಪ್ರದೇಶಗಳ ಜೊತೆಗೆ ಇದೊಂದು ವಿದ್ಯಾಕೇಂದ್ರವಾಗಿಯೂ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಹೈಕೋರ್ಟ್ ಪೀಠ ಹೊಂದಿರುವ ಜೊತೆಗೆ ಕೋಟೆಯನ್ನು ಅನೇಕ ಉದ್ಯಾನವನಗಳನ್ನೂ ವೀರ ಸ್ಮಾರಕಗಳನ್ನು ಒಳಗೊಂಡಿದೆ.

ಇಲ್ಲಿ ಅನೇಕ ದೇವಾಲಯಗಳು ತಮ್ಮದೇ ಆದ ಇತಿಹಾಸದಿಂದ ಗಮನ ಸೆಳೆಯುತ್ತವೆ. ಅಂಥವುಗಳಲ್ಲಿ ದುರ್ಗಾದೇವಿ ದೇವಾಲಯ. ಲಕ್ಷ್ಮಿ ನರಸಿಂಹ ದೇವಾಲಯ, ಸೋಮೇಶ್ವರ ದೇವಾಲಯ, ಮುರುಘಾ ಮಠ ನುಗ್ಗೇಕೇರಿ ಹನುಮಪ್ಪ ಮೊದಲಾದವುಗಳು ತಮ್ಮದೇ ಆದ ಖ್ಯಾತಿ ಹೊಂದಿವೆ. ಅಂಥವುಗಳಲ್ಲಿ ಒಂಟಿ ಹನುಮಪ್ಪ ಎಂದು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಕರೆಸಿಕೊಳ್ಳುವ ನುಗ್ಗೀಕೇರಿ ಅಂಜನೇಯ ಇಲ್ಲಿನ ವಿಶೇಷತೆ ನಿಜಕ್ಕೂ ಅದ್ಭುತವಾದುದು.

ಶನಿವಾರ ಬಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರ ವರೆಗೂ ಎಲ್ಲ ವಿಧದ ಜನರು ಇಲ್ಲಿ ಸೇರುವರು. ಇದೊಂದು ವಿಶಿಷ್ಟ ತಾಣ ಧಾರವಾಡ-ಕಲಘಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದಿಂದ 7 ಕಿ.ಮೀ ಅಂತರದಲ್ಲಿದ್ದು. ಎಸ್.ಡಿ.ಎಂ. ಮಹಾವಿದ್ಯಾಲಯ ಹಾಗೂ ಪೋಲಿಸ್ ತರಭೇತಿ ಶಾಲೆಗಳಿಗೆ 2 ಕಿ.ಮೀ ಹತ್ತಿರವಿರುವ ಮೂಲಕ ಸುತ್ತ ಮುತ್ತಲಿನ ಜನರಿಗಂತೂ ಪ್ರತಿ ನಿತ್ಯ ವಾಯುವಿಹಾರ ಸಂಜೆಯ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ. ಈ ಹೆದ್ದಾರಿ ಮೂಲಕ ಹಾಯ್ದ ಹೋಗುವ ವಾಹನಗಳು ಇಲ್ಲಿನ ನಿಲುಗಡೆಯಲ್ಲಿ ನಿಂತು ಹೋಗುತ್ತವೆ. ಅಲ್ಲೊಂದು ಮಹಾದ್ವಾರ ಕಾಣ ಸಿಗುವುದು. ಈ ಮಹಾದ್ವಾರದ ಮೂಲಕ ಕೆರೆಯ ದಂಡೆಗು0ಟ ಮಹಾನಗರ ಪಾಲಿಕೆಯವರು ನಿರ್ಮಿಸಿದ ಪುಟ್ ಪಾತ್ ಮೂಲಕ ಹೆಜ್ಜೆ ಹಾಕುತ್ತ ಬಂದರೆ ಸಾಕು ದೇವಾಲಯದ ಹತ್ತಿರ ನೀವಿರುತ್ತೀರಿ. ಇನ್ನು ದೇವಾಲಯದವರೆಗೂ ಕೂಡ ರಸ್ತೆ ಮಾರ್ಗವಿದ್ದು ಸ್ವಂತ ವಾಹನದಲ್ಲಿ ಬಂದಿದ್ದರೆ ನೇರವಾಗಿ ದೇವಾಲಯ ತಲುಪಬಹುದಾಗಿದೆ.


ಇದೊಂದು ದೇಸಾಯಿ ಮನೆತನದವರ ಸುಪರ್ದಿ(ಮಾಲ್ಕಿ)ಯಲ್ಲಿ ಬರುವ ದೇವಸ್ಥಾನವಾಗಿದ್ದು. ವಿಶಾಲವಾದ ಪ್ರಾಂಗಣ, ವಸತಿ ವ್ಯವಸ್ಥೆಗೆ ಕೂಡ ಒಂದೆಡೆ ಕೊಠಡಿಗಳು.ಸ್ನಾನ ಮತ್ತು ಶೌಚ ಗೃಹಗಳ ಸಮುಚ್ಚಯ ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಹೊಂದಿದ್ದು. ದೇವಾಲಯದ ಮಹಾದ್ವಾರ ದಾಟಿ ಒಳಬಂದರೆ ಸಾಕು ದಪ್ಪ ಬಡ್ಡೆಯನ್ನು ಹೊಂದಿದ ಆಲದ ಮತ್ತು ಬೇವಿನ ಮರಗಳ ಸಂಗಮ ಕಾಣಬಹುದು. ಅಪರೂಪವೆನಿಸುವ ಈ ಸಸ್ಯ ಸಂಕುಲದ ಎದುರಿಗೆ ದೇವಾಲಯದ ಗರ್ಭಗೃಹ ಗೋಚರಿಸುವುದು.


ಎಲ್ಲ ಅಂಜನೇಯರು ಕೈಯಲ್ಲಿ ಗದೆ ಹಿಡಿದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಈತ ತನ್ನ ಎಡಗೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದು ನಿಂತಿರುವುದು ನಿಜಕ್ಕೂ ವಿಶೇಷ. ಸೌಗಂಧಿಕಾ ಪುಷ್ಪ ಸ್ವರ್ಗದಲ್ಲಿದೆ ಎಂಬುದು ಪ್ರತೀತಿಯಲ್ಲವೇ. ಇಂಥ ಅಪರೂಪದ ಪುಷ್ಪ ಅದೂ ಅಂಜನೇಯ ಹಿಡಿದು ನಿಂತಿದ್ದು.ಬಲಗಡೆ ಅಭಯ ಹಸ್ತವಿದ್ದು. ಕಿವಿಯಲ್ಲಿ ವಾಲಿ, ಶಿರದ ಮೇಲೆ ವಸ್ತçಧಾರಣೆ ಮಾಡಿದ್ದು, ಗರ್ಭಗೃಹದ ಭಿತ್ತಿಗೆ ಗೋಮುಖವನ್ನು ಹೋಲುವ ಅಪರೂಪದ ಸಾಲಿಗ್ರಾಮವನ್ನು ಹೊಂದಿದೆ. ಅಷ್ಟೇ ಅಲ್ಲ ಈ ಹನುಮಪ್ಪನಿಗೆ ತ್ರಿವಿಧ ಶಕ್ತಿಯಿದೆ. ಅಂದರೆ ಇವನ ಮುಖವು ಒಂದೆಡೆ ಇದ್ದಂತೆ ಕಂಡು ಬಂದರೆ ದೃಷ್ಟಿಕೋನವು ಎರಡು ಕಡೆ ಮುಖ ಮಾಡಿದಂತೆ ಕಂಡು ಬರುವುದು ಇನ್ನೂ ವಿಶೇಷ. ಇಂಥಹ ಪ್ರಾಣದೇವರುಗಳು ಅಪರೂಪ ಎನ್ನುವರು.

ಕರ್ನಾಟಕದಲ್ಲಿ 33 ಪ್ರಾಣದೇವರುಗಳು ಪ್ರಸಿದ್ದವಾಗಿವೆ. ಅವುಗಳಲ್ಲಿ ಇದೂ ಒಂದು. ಇವನನ್ನು ಒಂಟಿ ಹನುಮಪ್ಪ ಎಂದೂ ಕರೆಯುವರು.
ಈ ದೇವಾಲಯ ನಿರ್ಮಾಣಕ್ಕೂ ಮಹಾಭಾರತಕ್ಕೂ ನಂಟಿದೆ. ಪರೀಕ್ಷಿತನು ಹಾವು ಕಚ್ಚಿ ಸಾವನ್ನಪ್ಪುತ್ತಾನೆ ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಎಂಬ ಹಾವಿನ ಸಂತತಿಯನ್ನು ಅಡಗಿಸುವ ಪ್ರತಿಜ್ಞೆಯೊಂದಿಗೆ ಪರೀಕ್ಷಿತನ ಮಗ ರಾಜ ಜನಮೇಜಯ ಸಪನಾಶ ಕಾರ್ಯಕ್ಕೆ ತೊಡಗುತ್ತಾನೆ. ಇದು ನಿರಂತರ ಸಾಗುವುದನ್ನು ಕಂಡ ಪಂಡಿತರು ಸರ್ಪಗಳು ಮಾನವನಿಗೆ ಉಪಕಾರಿ ಅವುಗಳ ಸಂತತಿ ನಾಶವಾಗುವುದನ್ನು ತಡೆಯಬೇಕೆಂದು ಜನಮೇಜಯನನ್ನು ಕಂಡು ತನ್ನ ತಂದೆಯ ಸಾವಿಗೆ ಒಂದು ಸರ್ಪ ಕಾರಣವಾಗಿರಬಹುದು. ಹಾಗಂತ ಇಡೀ ಸರ್ಪ ಕುಲವನ್ನೇ ನಾಶ ಮಾಡುವುದು ಯಾವ ಧರ್ಮ. ಅವು ಮಾನವ ಸಂತತಿಗೆ ಉಪಕಾರಿಯೂ ಹೌದು. ಕಾರಣ ಕೂಡಲೇ ತನ್ನಿಂದ ನಡೆಯುತ್ತಿರುವ ಈ ಕುಕೃತ್ಯ ನಿಲ್ಲಿಸಿ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಪಡೆಯುವಂತೆ ಸೂಚಿಸುತ್ತಾರೆ. ಆಗ ಜನಮೇಜಯ ಏನು ಮಾಡುವುದು.? ಎಂದಾಗ ಭೂಮಿಯ ಮೇಲೆ 500 ಹನುಮಾನ ದೇವಾಲಯಗಳನ್ನು ನಿರ್ಮಿಸುವಂತೆ ತಿಳಿಸುವರು. ಹೀಗೆ ಜನಮೇಜಯ ನಿರ್ಮಿಸಿದ 500 ದೇವಾಲಯಗಳಲ್ಲಿ ಇದೂ ಒಂದು ಎಂದು ತಿಳಿಸುವರು.


ಈ ನಿರ್ಮಾಣಗೊಂಡ ದೇಗುಲದಲ್ಲಿ 50 ದಶಕದ ಹಿಂದೆ ಓರ್ವ ವ್ಯಕ್ತಿ ಇದನ್ನು ಎತ್ತಿ ಕೆರೆಯಲ್ಲಿ ಎಸೆದುಬಿಟ್ಟನಂತೆ ಮೊದಲೇ ಇದೊಂದು ಅರಣ್ಯ ಪ್ರದೇಶವಾಗಿದ್ದರಿಂದ ಆ ಮೂರ್ತಿ ಎಲ್ಲಿ ಹೋಯಿತೆಂದು ಯಾರಿಗೂ ತಿಳಿಯದಾಯಿತು. ಕಾಲಾನಂತರದಲ್ಲಿ ಇದು ದೇಸಾಯಿ ಮನೆತನಕ್ಕೆ ಸೇರಿದ ಸ್ಥಳವಾದ್ದರಿಂದ ದೇಸಾಯಿಯವರು ಇಲ್ಲಿ ಬಂದು ತಂಗುತ್ತಿದ್ದರು. ಒಮ್ಮೆ ವ್ಯಾಸರಾಯರು ಈ ಸ್ಥಳಕ್ಕೆ ಬಂದರು. ಆ ದಿನ ಅವರ ಕನಸಿನಲ್ಲಿ ಹನುಮಪ್ಪನ ವಿಗ್ರಹ ಕೆರೆಯಲ್ಲಿರುವಂತೆ ಮೂಡಿ ಬಂದಿತು. ಇದೇ ರೀತಿಯ ಕನಸು ದೇಸಾಯಿಯವರಿಗೂ ಬರಲು ಇದು ನಿಜವಿರಬಹುದೆಂದು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೂರ್ತಿ ದೊರೆಯಿತು. ಪುನಃ ಅದು ಇಲ್ಲಿಯೇ ಪ್ರತಿಷ್ಟಾಪಿಸಲ್ಪಟ್ಟು ದೇಸಾಯಿಯವರ ಮನೆತನದವರು ಸುತ್ತಲೂ ಜನರಿಗೆ ಅನುಕೂಲವಾಗಲು ಕೊಠಡಿಗಳು, ಪೂಜೆಗೆ ಅನುಕೂಲವಾಗಲು ಅನ್ನದಾಸೋಹ ಗೃಹ ಇತ್ಯಾದಿ ನಿರ್ಮಾಣ ಮಾಡುವುದರ ಜೊತೆಗೆ ಪ್ರತಿನಿತ್ಯ ಪೂಜೆ ಸಲ್ಲಿಸುವ ಏರ್ಪಾಡು ನಡೆಸಿಕೊಂಡು ಬರುತ್ತಿರುವ ಮೂಲಕ ಈಗ ಇದು ಧಾರವಾಡ ಜಿಲ್ಲೆಯಷ್ಟೇ ಅಲ್ಲ ನಾಡಿನ ಎಲ್ಲೆಡೆ ಭಕ್ತರ ಆರಾಧ್ಯ ದೈವವಾಗಿದೆ.


ಈ ದೇವಾಲಯವು ನುಗ್ಗಿಕೇರಿ ದೇಸಾಯಿಯವರ ಖಾಸಗಿ(ಮಾಲ್ಕಿ) ಜಮೀನಿನಲ್ಲಿದ್ದು. ದೇಸಾಯಿ ಮನೆತನದ ಸದಸ್ಯರು ಸರದಿ ಪರ್ಯಾಯ ವ್ಯವಸ್ಥೆಯಂತೆ ಪೂಜಾಧಿಕಾರ ಮತ್ತು ಆಡಳಿತಾಧಿಕಾರವನ್ನು ನಡೆಸಿಕೊಂಡು ಬರುತ್ತಿರುವರು.


ಧಾರವಾಡವು ಬೆಂಗಳೂರಿನಿ0ದ 425 ಕಿ.ಮೀ ಬೆಳಗಾವಿಯಿಂದ 85 ಕಿ.ಮೀ ಬಳ್ಳಾರಿಯಿಂದ 234 ಕಿ.ಮೀ, ವಿಜಯಪುರದಿಂದ204 ಕಿ.ಮೀ ಶಿವಮೊಗ್ಗದಿಂದ 231 ಕಿ.ಮೀ ಹುಬ್ಬಳ್ಳಿಯಿಂದ 21 ಕಿ.ಮೀ ಅಂತರದಲ್ಲಿರುದು.

Related Articles

ಪ್ರತಿಕ್ರಿಯೆ ನೀಡಿ

Latest Articles