ಶ್ರೀ ವಿವೇಕಾನಂದ ಕಲಾ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಶ್ರೀಕೃಷ್ಣ ಜನ್ಮಾಷ್ಟಮಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅತಿ ರಂಜನೀಯವಾದ ಕೃಷ್ಣನ ಬಾಲಲೀಲೆಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತಾ ಬಂದಿರುವುದು ಭಾಗವತದ ಹಿರಿಮೆ. ಪ್ರತಿಯೊಬ್ಬ ತಂದೆತಾಯಿಗಳಿಗೆ ತಮ್ಮ ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಒಂದು ಸಂತಸ. ಇಂಥ ಅವರ ಕನಸನ್ನು ನನಸಾಗಿಸುವುದಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯೇ ಸೂಕ್ತ ಸಮಯ.

ಕೃಷ್ಣನ ಕಥೆಯನ್ನಾಧರಿತ ನೃತ್ಯ, ನಾಟಕ, ರಸಪ್ರಶ್ನೆ, ಚಿತ್ರಪ್ರದರ್ಶನ, ಮೊಸರು ಕುಡಿಕೆ ಒಡೆಯುವುದು ಮುಂತಾದ ಹತ್ತು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳನ್ನು ಪೋಷಕರನ್ನು ರಂಜಿಸಲು ಹಲವಾರು ಸಂಘಸ0ಸ್ಥೆಗಳು ಹಾಗೂ ಮಠಮಾನ್ಯಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.


ಶ್ರೀ ವಿವೇಕಾನಂದ ಕಲಾ ಕೇಂದ್ರದವರು ಈ ಬಾರಿ ಕೃಷ್ಣನ ಕುರಿತು ರಸಪ್ರಶ್ನೆ, ಕೃಷ್ಣ ಲೇಖನ ಹಾಗೂ ಕೃಷ್ಣನ ವೇ ಷ ಭೂಷಣ ಸ್ಪರ್ಧೆಗಳನ್ನು 8 ರಿಂದ 14 ವರ್ಷದ ಮಕ್ಕಳಿಗೆ ಆಯೋಜಿಸಿ, ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಅವರಲ್ಲಿ ನವಚೈತನ್ಯವನ್ನು ಮೂಡಿಸಿದ್ದು ವಿಶೇಷವಾಗಿತ್ತು.

ಸಾಂಸ್ಕೃತಿಕ ಪರಂಪರೆಗಳ ಮಹತ್ವದ ಹಿನ್ನೆಲೆಯೊಂದಿಗೆ ನೀಡುವ ಶಿಕ್ಷಣ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಮೂಡಿಸುತ್ತದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಒಟ್ಟಾಗಿ ಮಕ್ಕಳ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಅಗತ್ಯ ಇಂದು ಅನಿವಾರ್ಯವಾಗಿದೆ. ಇದು ಹಲವಾರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಅಭಿಮತವೂ ಆಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶ್ರೀ ವಿವೇಕಾನಂದ ಕಲಾ ಕೇಂದ್ರದವರ ಪರಿಶ್ರಮವನ್ನು ಶ್ಲಾಘಿಸಿ, ‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಲ್ಲಿ ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಸೋಮನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಶಂಕರ್‌ರವರು ಶ್ರೀ ವಿವೇಕಾನಂದ ಕಲಾಕೇಂದ್ರದ ಗೌ. ಕಾರ್ಯದರ್ಶಿ ಡಾ. ವಿ.ನಾಗರಾಜ್ ಅವರನ್ನು ವಿನಂತಿಸಿಕೊ0ಡರು. ನೆರದಿದ್ದ ಪೋಷಕರು ಒಟ್ಟಾಗಿ ಇದಕ್ಕೆ ಸಮ್ಮತಿಸಿದರು.


ಮಕ್ಕಳಿಗೆ ಶ್ರೀಕೃಷ್ಣನ ಕಥೆಯನ್ನು ಸಾದರಪಡಿಸುವ ನಿಟ್ಟಿನಲ್ಲಿ ಡಾ.ಶ್ವೇತಾ ಅವರು 45 ನಿಮಿಷಗಳ ‘ಕವಿ ಕಂಡ ಕೃಷ್ಣ’ ಏಕ ವ್ಯಕ್ತಿ ನೃತ್ಯ ನಾಟಕವನ್ನು ಸಾದರಪಡಿಸಿದರು.

ಮಾಸ್ಟರ್ ದೈವಿಕ್ ‘ಭಗವದ್ಗೀತೆ’ ನೃತ್ಯ ಪ್ರದರ್ಶನ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪರವಾಗಿ ಆಗಮಿಸಿದ್ದ ಮಂಜುಳ ಅವರು ಕಲಾಕೇಂದ್ರವರನ್ನು ಅಭಿನಂದಿಸಿದರು.


ಸುಗಮ ಸಂಗೀತ ಹಾಗೂ ಹಿನ್ನೆಲೆ ಗಾಯಕಿ ರಾಜ್ಯಪ್ರಶಸ್ತಿ ಪುರಸ್ಕೃತೆ ಎಂ.ಕೆ. ಜಯಶ್ರೀ ಅವರಿಂದ ಸಿದ್ಧಪಡಿಸಿದ ನೃತ್ಯರೂಪಕ `ಕವಿ ಕಂಡ ಕೃಷ್ಣ’ ದ ಏಕವ್ಯಕ್ತಿ ನೃತ್ಯಪ್ರದರ್ಶನವನ್ನು ಮನಸಾರೆ ಕೊಂಡಾಡಿದರು.


Related Articles

ಪ್ರತಿಕ್ರಿಯೆ ನೀಡಿ

Latest Articles