ಉತ್ತಮ ಬದುಕಿಗೆ ಬಣ್ಣತುಂಬುವ ಶಕ್ತಿ ಗುರುವಿನಲ್ಲಿದೆ : ಶ್ರೀ ಪ್ರಭುನೀಲಕಂಠ ಸ್ವಾಮೀಜಿ

ಸವದತ್ತಿ: ಬದುಕಿಗೆ ಬಣ್ಣ ತುಂಬುವ ಶಕ್ತಿಯನ್ನು ಗುರು ಹೊಂದಿದ್ದು ಗುರುವಿನ ಕೃಪೆಗೆ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಬೈಲಹೊಂಗಲದ ಮೂರುಸಾವಿರಮಠದ ಶ್ರೀ.ಮ.ನಿ.ಪ್ರ.ಸ್ವ.ಪ್ರಭು ನೀಲಕಂಠ ಸ್ವಾಮಿಗಳು ನುಡಿದರು.

ಅವರು ಸವದತ್ತಿ ತಾಲೂಕಿನ ಮುನವಳ್ಳಿಯ ಅನ್ನದಾನೇಶ್ವರ ಕಾಲೇಜಿನಲ್ಲಿ ಸೋಮಶೇಖರಮಠ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದಿಂದ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

“ಅಲೆಗ್ಜಾಂಡರ್ ಜಗತ್ತನ್ನು ಗೆದ್ದು ತನ್ನ ತಾಯ್ನಾಡಿಗೆ ಬಂದಾಗ ಮೆರವಣಿಗೆ ಸಾಗಿರುವುದು. ಮೆರವಣಿಗೆ ಸಂದರ್ಭದಲ್ಲಿ ವಯಸ್ಸಾದ ಕಡು ಬಡತನದ ವ್ಯಕ್ತಿಯೊಬ್ಬ ಜನಸಂದಣಿಯಲ್ಲಿ ನಿಂತಿರುವನು. ಅಲೆಗ್ಜಾಂಡರ ತನ್ನ ರಥದಲ್ಲಿ ದೂರದಿಂದಲೇ ಅವನನ್ನು ನೋಡುತ್ತಾನೆ ತಕ್ಷಣ ರಥವನ್ನು ನಿಲ್ಲಿಸಿ ಜನರ ಮಧ್ಯದಲ್ಲಿ ನಿಂತಿದ್ದ ಆ ವ್ಯಕ್ತಿಯ ಕಾಲಿಗೆ ಬಂದು ನಮಸ್ಕರಿಸುತ್ತಾನೆ. ಸೈನಿಕರಿಗೆ ಆಶ್ಚರ್ಯ ಯಾರಿವರು? ಎಂದು ಪ್ರಶ್ನಿಸಿಕೊಂಡಾಗ ನನ್ನ ಗುರು ಅರಿಸ್ಟಾಟಲ್ ಎಂದು ಹೆಮ್ಮೆಯಿಂದ ಹೇಳುವ ಜೊತೆಗೆ ಸ್ವರ್ಗದಿಂದ ನನ್ನನ್ನು ಇಲ್ಲಿಗೆ ತಂದವನು ನನ್ನ ತಂದೆ ಆಗಿದ್ದರೆ, ಇಲ್ಲಿಂದ ಸ್ವರ್ಗಕ್ಕೆ ಒಯ್ದವರು ನನ್ನ ಗುರುಗಳು”

‘ಗುರು ಎಂಬ ಶಬ್ದಕ್ಕೆ ಎಷ್ಟು ಮಹತ್ವವಿದೆ ಎಂದರೆ ಅಲೆಗ್ಜಾಂಡರನ ಉದಾಹರಣೆಯಷ್ಟೇ ಅಲ್ಲ. ಸಾರೆ ಚಲ್ಯಾದೆ ಮುಕುತಿ, ಗುರು ತೋರಿಸಲ್ಲದೆ ಕಾಣಿಸದಣ್ಣ, ಎಂಬ ಅಲ್ಲಮ ಪ್ರಭುವಿನ ವಚನವನ್ನು ಉದಾಹರಿಸಿ ಪ್ರತಿಯೊಬ್ಬ ಮನುಷ್ಯನ ಉತ್ತಮ ಬದುಕಿಗೆ ಬಣ್ಣ ತುಂಬುವ ಶಕ್ತಿಯನ್ನು ಗುರು ಹೊಂದಿದ್ದು ಗುರುವಿನ ಕೃಪೆಗೆ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಂದು ಮುನವಳ್ಳಿ ಪೂಜ್ಯರು ಶ್ರೇಷ್ಠ ಗುರು ಪ್ರಶಸ್ತಿ ಗೌರವವನ್ನು ಮುನವಳ್ಳಿಯ ಆಯ್ದ ಶಿಕ್ಷಕರಿಗೆ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಲ್ಲಿ ಸೇರಿರುವ ವಿದ್ಯಾರ್ಥಿಗಳು ಈ ಗುರುಗಳ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಉತ್ತಮ ಶಿಕ್ಷಣವನ್ನು ಈ ಸಂಸ್ಥೆಯಿಂದ ಪಡೆದು ಜೀವನವನ್ನು ರೂಪಿಸಿಕೊಳ್ಳಿರಿ”ಎಂದು ಸಲಹೆ ನೀಡಿದರು.

“ಕಲಿಸಿದ ಗುರುವನ್ನು ಸ್ಮರಿಸುವ ಜೊತೆಗೆ ನಮ್ಮ ಯೋಗ ವಿದ್ಯಾ ಕೇಂದ್ರದಿಂದ ಇಂದು ನಾವು ಶ್ರೇಷ್ಠ ಗುರು ಕಾರ್ಯಕ್ರಮವನ್ನು ನಮ್ಮ ಪ್ರಾಚಾರ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ಮುನವಳ್ಳಿಯಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಉತ್ತಮ ಗುರುಗಳನ್ನು ಆಯ್ಕೆ ಮಾಡಿ ಇಂದು ಪುರಸ್ಕಾರ ಮಾಡುತ್ತಿದ್ದು, ಈ ಹಿಂದಿನ ವರ್ಷಗಳಲ್ಲಿ ಮಠದಲ್ಲಿ ಮುನವಳ್ಳಿ ಸೇವೆ ಸಲ್ಲಿಸುತ್ತಿರುವ ಗುರುಗಳನ್ನು ಬರಮಾಡಿಕೊಂಡು ಗೌರವಿಸುವ ಸಂಪ್ರದಾಯವಿತ್ತು. ಈ ವರ್ಷ ಒಂದು ವಿಭಿನ್ನ ಕಾರ್ಯಕ್ರಮ ಮಾಡೋಣ ಎಂದುಕೊಂಡು ಶ್ರೇಷ್ಠ ಗುರು ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ರೈತ, ಕಾರ್ಮಿಕ, ಶಿಕ್ಷಕ, ಸೈನಿಕ ಇವರು ನಮ್ಮ ದೇಶದ ಆಸ್ತಿ. ಗುರುವಿಗೆ ಇಂದು ದೊಡ್ಡ ಸ್ಥಾನವಿದೆ. ಗುರು ಬ್ರಹ್ಮ, ಗುರುರ್ವಿಷ್ಣು, ಗುರುದೇವೋ ಮಹೇಶ್ವರ ಎಂದು. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಗುರುವಿನ ಸ್ಥಾನ ನೀಡಿದ್ದು ವೇದ ಉಪನಿಷತ್ತಿನ ಕಾಲದಿಂದಲೂ ನಮ್ಮ ದೇಶದಲ್ಲಿ ಗುರುವಿಗೆ ಮಹತ್ವವಿದೆ. ಒಬ್ಬ ವ್ಯಕ್ತಿ ಉತ್ತಮ ನಾಗರಿಕನಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ” ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಶ್ರೇಷ್ಠ ಗುರು ಪ್ರಶಸ್ತಿ ಗೌರವವನ್ನು ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಈರಯ್ಯ ಮಠಪತಿ, ಎಂ.ಎಲ್.ಇ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಗುರುಮಾತೆ ಸುರೇಖಾ ಸಿಂಪಿಗೇರ, ಶ್ರೀ ಕುಮಾರೇಶ್ವರ ಪ್ರೌಢಶಾಲೆ ಮುನವಳ್ಳಿಯ ಮಹಾದೇವ ಚಚಡಿ, ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಯಲ್ಲಪ್ಪ ತಂಗೋಜಿ, ಸರಕಾರಿ ಪ್ರೌಢಶಾಲೆ ಮುನವಳ್ಳಿಯ ದುಂಡಪ್ಪ ಬಡಿಗೇರ, ಎಸ್.ಪಿ.ಜೆ.ಜಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣ ಲಂಬೂನವರ, ಮುನವಳ್ಳಿ ಶ್ರೀ ಚನ್ನಬಸವ ಸ್ವಾಮೀಜಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮಡಿವಾಳಪ್ಪ ಗಾಳಿ, ಎಸ್.ಆರ್.ಎಫ್ ಆಂಗ್ಲ ಮಾಧ್ಯಮ ಶಾಲೆಯ ಗುರುಮಾತೆ ಶೋಭಾ ಹೈಬತ್ತಿ ಅವರಿಗೆ ಶ್ರೇಷ್ಠ ಗುರು ಪ್ರಶಸ್ತಿಯನ್ನು ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಭೂಷಿತ ಚಿಕ್ಕುಂಬಿಯ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ ಶಿಕ್ಷಕ ಸುಧೀರ ವಾಘೇರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಯಲ್ಲಪ್ಪ ತಂಗೋಜಿ “ಮುನವಳ್ಳಿ ಸೋಮಶೇಖರ ಮಠದ ಪೂಜ್ಯರನ್ನು ಕಿಟದಾಳ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೋಡಿದ ನೆನಪು ಹಾಗೂ ಅವರ ಪ್ರಭಾವ ತಮ್ಮ ಮೇಲೆ ಆಗಿರುವ ಘಟನೆಯನ್ನು ನೆನೆದು ಈ ಸಂದರ್ಭದಲ್ಲಿ ಇಂದಿಗೂ ಪೂಜ್ಯರ ಕೃಪೆ ತನ್ನ ಮೇಲಿದೆ” ಎಂದು ನುಡಿದರು.

ಸುಧೀರ ವಾಘೇರಿ ಮಾತನಾಡಿ “ ಬಾಲ್ಯದಲ್ಲಿ ತಮಗೆ ಇಂಗ್ಲೀಷ ಕಲಿಸಿದ ಉಪನ್ಯಾಸಕ ಸುಭಾಷ ಕಾಮಣ್ಣವರ ಅವರನ್ನು ನೆನೆಯುತ್ತ ಭಾವುಕರಾದರು.ತಮ್ಮ ಈ ಮಟ್ಟದ ಪ್ರಗತಿಗೆ ತಮಗೆ ಪ್ರೋತ್ಸಾಹ ನೀಡಿದ ಗುರುಗಳನ್ನು ಸ್ಮರಿಸುತ್ತ ಸೋಮಶೇಖರ ಮಠದ ಪೂಜ್ಯರ ಈ ಕಾರ್ಯ ಸ್ಮರಣೀಯ”ಎಂದು ಹೇಳಿದರು.

ಅನ್ನಪೂರ್ಣ ಲಂಬೂನವರ ಮಾತನಾಡಿ “ ಸೋಮಶೇಖರ ಮಠದ ಎಲ್ಲ ಅಕ್ಕನ ಬಳಗದ ಕಾರ್ಯಗಳನ್ನು ನೆನೆಯುತ್ತ ಶ್ರೀ ಮಠದ ಪೂಜ್ಯರು ತಮ್ಮ ಸೇವೆಯನ್ನು ಶ್ರೇಷ್ಠ ಗುರು ಗೌರವಕ್ಕೆ ಗುರುತಿಸಿ ಗುರುರಕ್ಷೆ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಉಪನ್ಯಾಸಕರಾದ ಈರಯ್ಯ ಮಠಪತಿ ಮಾತನಾಡಿ “ತಾವು ಈ ಸಂಸ್ಥೆಗೆ ಸೇರುವ ಮುಂಚೆ ವಿವಿದೆಡೆ 12 ವರ್ಷಗಳ ಸೇವೆ ಮಾಡಿದ್ದೆನು ಇಲ್ಲಿ ಸೇರಿದ ನಂತರ ಪೂಜ್ಯರ ಆಶೀರ್ವಾದದ ಮೂಲಕ ವಿವಿಧ ವಿಷಯಗಳಲ್ಲಿ ಬೋಧನೆಗೆ ತೊಡಗಿಸಿಕೊಂಡೆನು. ಎಲೆ ಮರೆಯ ಕಾಯಿಯಂತಿದ್ದ ನನಗೆ ಪೂಜ್ಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅವರ ಕೃಪಾರ್ಶಿವಾಸದಿಂದ ಗುಣಾತ್ಮಕವಾಗಿರುವ ವಿದ್ಯೆಯನ್ನು ಪಡೆದಿರುವೆನು.ಇಂದು ಅವರ ಆಶೀರ್ವಾದದ ಮೂಲಕ ಇಂದು ಶ್ರೇಷ್ಠಗುರು ಪ್ರಶಸ್ತಿಗೆ ಪಾತ್ರನಾಗಿರುವೆನು.ಮುಂದೆಯೂ ಕೂಡ ಮಕ್ಕಳ ಶಿಕ್ಷಣಕ್ಕೆ ಗುಣಾತ್ಮಕ ಸೇವೆಯನ್ನು ಮುಂದುವರೆಯುವೆನು” ಎಂದರು. ಕಾಲೇಜಿನ ವಿದ್ಯಾರ್ಥಿನಿ ತೆಗ್ಗಿನಮನಿ ಇದೇ ಸಂದರ್ಭದಲ್ಲಿ ಶಿಕ್ಷಣ ದಿನಾಚರಣೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ಈರಣ್ಣ ಸಂಕಣ್ಣವರ, ಸಂಜು ಕಾಮಣ್ಣವರ, ಮಲ್ಲಿಕಾರ್ಜುನ ಜಮಖಂಡಿ, ಗಂಗಾಧರ ಗೋರಾಬಾಳ, ಪ್ರಾಚಾರ್ಯರಾದ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಉಪನ್ಯಾಸಕರಾದ ಜಿ.ಜಿ.ಲಮಾಣಿ, ಸುಭಾಷ ಕಾಮಣ್ಣವರ, ದಾನು ಗದಗಿನ ಎಂ.ಸಿ.ಬಾಂಡೇಕರ, ಬಿ.ಬಿ.ಕೊಪ್ಪದ, ವಿದ್ಯಾ ಅರಕೇರಿ, ಪ್ರೇಮಾ ಪೂಜೇರ, ಶಿಕ್ಷಕರಾದ ಬಿ.ಬಿ.ಹುಲಿಗೊಪ್ಪ, ವೈ.ಬಿ.ಕಡಕೋಳ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಚಾರ್ಯರಾದ ಎಂ.ಎಚ್.ಪಾಟೀಲ ಸ್ವಾಗತಿಸಿದರು. ಗಾಯತ್ರಿ ಹಿರೇಮಠ ನಿರೂಪಿಸಿದರು. ಉಪನ್ಯಾಸಕರಾದ ಎಂ.ಗಿರೀಶ ವಂದಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles