ಯಾವ ದೇವರ ಗರ್ಭಗುಡಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ?

ದೇವಾಲಯ, ಮಂದಿರ, ಗುಡಿಗಳಿಗೆ ಭೇಟಿ ನೀಡಿದಾಗ ಪ್ರದಕ್ಷಿಣೆ ಹಾಕುತ್ತೇವೆ. ಈ ಪ್ರದಕ್ಷಿಣೆ ಹಾಕುವುದರ ಮಹತ್ವ ಹಾಗೂ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ದೇವರ ಪೂಜೆ, ಪ್ರಾರ್ಥನೆ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಅಂತೆಯೇ ದೇವರ ಗುಡಿಯ ಸುತ್ತ ಒಂದಿಷ್ಟು ಪ್ರದಕ್ಷಿಣೆ ಮಾಡಿದರೆ ತನ್ನಿಂದ ತಾನೇ ಮನಸ್ಸಿಗೆ ಒಂದು ಬಗೆಯ ನಿರಾಳತೆ ಉಂಟಾಗುವುದು.

ಹಾಗಾಗಿ ಭಕ್ತರು ತಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಳ್ಳಲು ಹಾಗೂ ಒಂದಿಷ್ಟು ಮನದಾಸೆಗಳನ್ನು ದೇವರ ಮುಂದಿಡಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಪ್ರದಕ್ಷಿಣೆಯ ಸೇವೆ ಸಲ್ಲಿಸಿ ಕಷ್ಟಗಳಿಂದ ಮುಕ್ತರಾಗುವರು.

ಪ್ರದಕ್ಷಿಣೆಯ ಮಹತ್ವ

ದೇವಾಲಯದ ಗರ್ಭಗೃಹವನ್ನು ಸುತ್ತುವುದು ಹಿಂದೂ ಧರ್ಮದಲ್ಲಿ ಒಂದು ಸಾಂಪ್ರದಾಯಿಕ ಆಚರಣೆ ಮತ್ತು ಪದ್ಧತಿಯೂ ಹೌದು. ಈ ಪ್ರಕ್ರಿಯೆಯನ್ನು ಪರಿಕ್ರಮ, ಪ್ರದಕ್ಷಿಣೆ ಅಥವಾ ಪ್ರದಕ್ಷಿಣಂ ಎಂದು ಕರೆಯುತ್ತಾರೆ. ಭಕ್ತರು ದೇವರ ಗುಡಿಯನ್ನು ಸುತ್ತುವುದರಿಂದ ತಮ್ಮ ಅಹಂಕಾರವನ್ನು ಹಾಗೂ ದುಷ್ಟ ಚಿಂತನೆಗಳನ್ನು ಬಿಟ್ಟು ‘ನಿನಗೆ ಶರಣಾಗುತ್ತೇವೆ, ನಿನ್ನ ಪಾದದ ಸೇವೆಯನ್ನು ಮಾಡಿಕೊಂಡು ಭಕ್ತರಾಗಿ ಇರುತ್ತೇವೆ. ಇದರ ಫಲವಾಗಿ ನಮ್ಮ ಕಷ್ಟಗಳನ್ನು ನಿವಾರಿಸು ದೇವ’ ಎನ್ನುವ ಅರ್ಥವನ್ನು ನೀಡುವುದು.

ಪ್ರದಕ್ಷಿಣೆ ಸುತ್ತುವುದು ಧಾರ್ಮಿಕ ವಿಧಿ. ಅದು ಕೆಲವು ಧಾರ್ಮಿಕ ರೀತಿ-ನೀತಿ ಹಾಗೂ ಸಂಖ್ಯೆಗಳ ಮಿತಿಯನ್ನು ಸಹ ಹೊಂದಿದೆ. ಗರ್ಭಗೃಹದ ಒಳಗೆ ವಿಶೇಷವಾದ ದೈವ ಶಕ್ತಿ ಇರುತ್ತದೆ. ಈ ಶಕ್ತಿಯ ಸುತ್ತಲು ಸಾಕಷ್ಟು ಧನಾತ್ಮಕ ಸಂಗತಿಗಳ ಹರಿವು ಇರುವುದು. ಆದ್ದರಿಂದ ದೇವರ ಮನೆಯ ಸುತ್ತ ಸುತ್ತುವ ಪ್ರದಕ್ಷಿಣೆಯ ಪರಿಯು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

“ಪ್ರಾ” ಎನ್ನುವ ಪದದ ಅರ್ಥ ವಿಶೇಷತೆಯಿಂದ ಕೂಡಿದೆ. ಪ್ರಾ ಎನ್ನುವ ಶಬ್ದವು ತುಂಬಾ ಎನ್ನುವ ಅರ್ಥವನ್ನು ನೀಡುತ್ತದೆ. ದಕ್ಷಿಣ ಎಂದರೆ ಗರ್ಭಗುಡಿಯ ಬಲಭಾಗದಿಂದ ತಿರುಗುವುದು ಎನ್ನುವ ಅರ್ಥವನ್ನು ನೀಡುವುದು. ಪ್ರದಕ್ಷಿಣೆ ಮಾಡುವುದರಿಂದ ಪ್ರಾಮಾಣಿಕ, ನಿಷ್ಪಕ್ಷಪಾತ, ಸ್ನೇಹ ಭಾವನೆ, ಶುಭ ಸೂಚಕ ಎಂದು ನಂಬಲಾಗಿದೆ. ಒಂದು ಕೇಂದ್ರ ಬಿಂದು ಇಲ್ಲದೇ ವೃತ್ತಾಕಾರವನ್ನು ಮಾಡಲು ಸಾಧ್ಯವಿಲ್ಲ. ಹಾಗೆಯೇ ಭಗವಂತ ನಮ್ಮ ಕೇಂದ್ರ ಬಿಂದು. ದೇವರೇ ನಮ್ಮ ಮೂಲ ಮತ್ತು ಸಾರ. ಆ ಪರಮಾತ್ಮನಿಗೆ ಪ್ರದಕ್ಷಿಣೆ ಮಾಡುವುದರ ಮೂಲಕ ಆತನೇ ನಮ್ಮ ಜೀವನಕ್ಕೆ ಆಧಾರ ಹಾಗೂ ಬೆಳಕು ಎಂದು ಅಂಗೀಕರಿಸುತ್ತೇವೆ.

ಆ ಮಹಾನ್ ಶಕ್ತಿಯ ಕೃಪೆಗೆ ಒಳಗಾಗಲು ಅವನ ಸುತ್ತ ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಕರೆಯುವರು. ಪ್ರದಕ್ಷಿಣೆ ಹಾಕುವಾಗ ಮನಸ್ಸನ್ನು ನಿರಾಳವಾಗಿ ಇಟ್ಟುಕೊಳ್ಳಬೇಕು ಎಂದು ಧಾರ್ಮಿಕ ನೀತಿಯು ತಿಳಿಸುತ್ತದೆ.

ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು

ವೃತ್ತದ ಸುತ್ತಳತೆಯಲ್ಲಿ ಇರುವ ಪ್ರತಿಯೊಂದು ಬಿಂದುವು ಕೇಂದ್ರದಿಂದ ಸಮಾನ ದೂರದಲ್ಲಿ ಇರುತ್ತದೆ. ಹಾಗೆಯೇ ಭಗವಂತ ಮತ್ತು ನಾವು. ನಾವು ಎಲ್ಲೇ ಇದ್ದರೂ ಅಥವಾ ಯಾರೇ ಆಗಿರಲಿ, ಭಗವಂತನಿಗೆ ಎಲ್ಲರೂ ಸಮಾನರು. ಆತನ ಅನುಗ್ರಹವು ಯಾರ ಪಕ್ಷಪಾತವಿಲ್ಲದೆಯೇ ಎಲ್ಲರಿಗೂ ಸಮಾನವಾಗಿ ದೊರೆಯುವುದು. ಹಾಗಾಗಿ ಯಾರೇ ಆದರೂ ದೇವರಿಗೆ ಪ್ರದಕ್ಷಿಣೆ ಹಾಕಿದರೆ ಕಷ್ಟಗಳು ದೂರವಾಗಿ, ಮನಸ್ಸಿಗೆ ನೆಮ್ಮದಿ ದೊರೆಯುವುದು ಎಂದು ಹೇಳಲಾಗುವುದು.

ವಿಭಿನ್ನ ಸಂಖ್ಯೆಯ ಪ್ರದಕ್ಷಿಣೆಗಳು ‌ ‌ ಧಾರ್ಮಿಕ ನಂಬಿಕೆಗಳ ಪ್ರಕಾರ ಪುರುಷ ದೇವರಿಗೆ 0,2,4,6,8 ಹೀಗೆ ಸಮ ಸಂಖ್ಯೆಯ ಪ್ರದಕ್ಷಿಣೆಯನ್ನು ಮಾಡಬೇಕು. ಸ್ತ್ರೀ ದೇವತೆಗಳಿಗೆ 1, 3, 5, 7 ಹೀಗೆ ಬೆಸ ಸಂಖ್ಯೆಯ ಪ್ರದಕ್ಷಿಣೆಯನ್ನು ಹಾಕಬೇಕು ಎಂದು ಹೇಳಲಾಗುವುದು.

ಶೂನ್ಯ ಸಂಖ್ಯೆಯು ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನು ಸರ್ವೋತ್ತಮ ಎನ್ನುವುದನ್ನು ಶೂನ್ಯವು ಪ್ರತಿನಿಧಿಸುವುದು.

ಸಂಖ್ಯೆ 1 ಮಾಯಾ ಶಕ್ತಿಯನ್ನು ಅಂದರೆ ಸ್ತ್ರೀಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಸಮ ಸಂಖ್ಯೆಯ ಪ್ರದಕ್ಷಿಣೆ ಪುರುಷ ದೇವರಿಗೆ ಮತ್ತು ಬೆಸ ಸಂಖ್ಯೆಯ ಪ್ರದಕ್ಷಿಣೆಯನ್ನು ಮಹಿಳಾ ದೇವತೆಗಳಿಗೆ ಮೀಸಲು ಎಂದು ತಿಳಿಸುತ್ತದೆ.

ದೇವರಿಗನುಗುಣವಾಗಿ ಪ್ರದಕ್ಷಿಣೆ

ಶೂನ್ಯ ಶಿವನನ್ನು ಪ್ರತಿನಿಧಿಸುತ್ತದೆ. ಇವನು ಸುಪ್ತ ಮತ್ತು ಸ್ಪಷ್ಟವಲ್ಲದ ನಿರ್ಗಮ ಶಕ್ತಿಯ ಸಂಕೇತ ಎಂದು ಹೇಳಲಾಗುವುದು. ಈ ಹಿನ್ನೆಲೆಯಲ್ಲಿ ಅರ್ಧ ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ. ಅಂದರೆ, ಶಿವನಿಗೆ ಗರ್ಭಗುಡಿಯ ಮುಂದಿನಿಂದ ಪ್ರಾರಂಭಿಸಿ, ದೇವರ ಹಿಂಬದಿಯವರೆಗೆ ಪ್ರದಕ್ಷಿಣೆ ಮಾಡಿ ಪುನಃ ಹಿಂತಿರುಗಿ ಬರಬೇಕು. ‌

ದುರ್ಗಾ ದೇವಿಯು 1 ರ ಸಂಖ್ಯೆಯನ್ನು ಪ್ರತಿನಿಧಿಸುತ್ತಾಳೆ. ಸುಗುಣ ಶಕ್ತಿಯನ್ನು ಬಿಂಬಿಸುವ ದೇವತೆ ದುರ್ಗಾದೇವಿ ಎಂದು ಹೇಳಲಾಗುವುದು. ಈ ಹಿನ್ನೆಲೆಯಲ್ಲಿ ಬೆಸ ಸಂಖ್ಯೆಯ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ. ಶ್ರೀರಾಮನಿಗೆ 4ರ ಸಂಖ್ಯೆ ಶ್ರೇಷ್ಠವಾದದ್ದು. ಇದು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮಗಳಾದ ನಾಲ್ಕು ಆಶ್ರಮಗಳನ್ನು ಮತ್ತು ಆದರ್ಶವಾದ ಅನುಯಾಯಿ ರಾಜ ಎನ್ನುವುದನ್ನು ಪ್ರತಿನಿಧಿಸುತ್ತದೆ. ಹಾಗಾಗಿ 4 ಸುತ್ತಿನ ಪ್ರದಕ್ಷಿಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಮಾರುತಿಯು ಪಂಚ ತತ್ವಗಳ ಮೇಲೆ ಪಾಂಡಿತ್ಯವನ್ನು ಹೊಂದಿರುವನು. ಹಾಗಾಗಿ ಈ ಹಿನ್ನೆಲೆಯಲ್ಲಿ 5 ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.

ದತ್ತಾತ್ರೇಯ ದೇವನು ದೇಹದಲ್ಲಿ ಇರುವ ಏಳು ಚಕ್ರಗಳನ್ನು ಶುದ್ಧೀಕರಿಸುವ ಮೂಲಕ ಜೀವನದ ಆಧ್ಯಾತ್ಮಿಕ ಪ್ರಗತಿಯನ್ನು ತರುವನು. ಈ ಹಿನ್ನೆಲೆಯಲ್ಲಿ 7 ಸುತ್ತಿನ ಪ್ರದಕ್ಷಿಣೆಯು ಮಹತ್ವವನ್ನು ಪಡೆದುಕೊಂಡಿದೆ.

ಶ್ರೀಗಣೇಶನು 8 ದಿಕ್ಕುಗಳ ಅಧಿಪತಿಯು. ಹಾಗಾಗಿ 8 ಸುತ್ತಿನ ಪ್ರದಕ್ಷಿಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಹೀಗೆ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ದೇವರನ್ನು ಸುತ್ತುವರಿಯಬಹುದು. ಅದರಿಂದ ಯಾವುದೇ ಅಪವಾದ ಅಥವಾ ಪಾಪಗಳು ಬರದು. ದೇವರ ಧ್ಯಾನದಿಂದ ಕೈಗೊಳ್ಳುವ ಪ್ರತಿಯೊಂದು ಸಂಗತಿಯೂ ಉತ್ತಮ ಫಲವನ್ನೇ ನೀಡುತ್ತದೆ.

(ಸಂಗ್ರಹ)

Related Articles

ಪ್ರತಿಕ್ರಿಯೆ ನೀಡಿ

Latest Articles