ಶ್ರೀ ವಾದಿರಾಜ ಸ್ವಾಮಿಗಳಿಗೆ ನಮನ

ಸೋದೆಪುರವಾಸರೆ ವಾದಿರಾಜರೆ
ಮುದದಿ ನಿಮಗೆ ನಮಿಸುವೆ ಯತಿಶ್ರೇಷ್ಠರೆ
ಸದ್ಭಕ್ತಿಯ ಆಗರರೆ ಭಾವೀ ಸಮೀರರೆ
ಸದಾ ಹಯಗ್ರೀವನಲ್ಲಿ ಮನವಿತ್ತವರೆ

ರಚಿಸಿದಿರಿ ಸದ್ಗ್ರಂಥಗಳ ವಿದ್ವತ್ತಿನಲಿ
ಸುಚರಿತ ಕನ್ನಡ ಪದಗಳ ಭಕ್ತಿಯಿಂದಲಿ
ತುಚ್ಛ ಬುದ್ಧಿ ಬಿಡಿಸಿದಿರಿ ಕರುಣೆಯಿಂದಲಿ
ಸ್ವಚ್ಛ ಮನವ ಮಾಡಿರಿ ಶಕ್ತಿಯಿಂದಲಿ

ಶೋಭಾನೆ ರಚಿಸಿ ವರಗೆ ಪ್ರಾಣ ಕೊಟ್ಟಿರಿ
ಶುಭಕಾರ್ಯಕೆ ಉರುಟಣೆಯ ಪದ ಹಾಡಿದಿರಿ
ಅಭಯದಾಯಕನ ಗುಣ ಗಾನ ಮಾಡಿದಿರಿ
ಶುಭಮಂಗಳ ರುಕ್ಮಿಣೀಶವಿಜಯ ಬರೆದಿರಿ 

ಭೂತರಾಜನನ್ನು ಸೇವಕನಾಗಿಸುತ
ಸತತ ಕೃಷ್ಣ ಪೂಜೆಯಲ್ಲಿ ನಿರತರಾಗುತ
ಸತ್ವಭರಿತ ಹಯಗ್ರೀವ ನೈವೇದ್ಯಕ್ಕಿಡುತ
ನಿತ್ಯ ಹೆಗಲಮೇಲೆ ಹರಿಯ ಸ್ಪರ್ಶ ಪಡೆಯುತ

ಉಡುಪಿ ಪರ್ಯಾಯ ಎರಡು ವರ್ಷ ಮಾಡುತ
ಉಡುಪಿ ಕೃಷ್ಣನ ಪೂಜಾ ವಿಧಿ ಸಿದ್ಧ ಪಡಿಸುತ
ಮಾಡಿದಿರಿ ಮಹದುಪಕಾರ ವಿಶೇಷರಾಗುತ
ಬಿಡದೆ ಹಯಗ್ರೀವನ ಕಂಡು ಸುಖಿಸುತ

ದುರ್ವಾದಗಳನು ವಾದದಿಂದ ಸೋಲಿಸಿ
ಸರ್ವೋತ್ತಮನ ಗುಂಡಕ್ರಿಯೆಲಿ ಸ್ತುತಿಸಿ
ನಿರ್ವಿಕಾರ ಕೇಶವನ ಪ್ರತಿಷ್ಠಾಪಿಸಿ
ಸರ್ವೇಷನ ಧ್ಯಾನದಲ್ಲಿ ಮನವ ನಿಲಿಸಿ

ಕಾಪಾಡಿ ನಮ್ಮನಿಂದು ಯತಿವರ್ಯರೆ
ತಾಪತ್ರಯ ಕಳೆಯಿರಿ ಜ್ಞಾನಪೂರ್ಣರೆ
ಅಪರೋಕ್ಷ ಪಡೆದ ವ್ಯಾಸರಾಯ  ಶಿಷ್ಯರೆ
ಆಪ್ತ  ಸಿರಿಹರಿಗೆ ಅತ್ಯಂತ ಪ್ರಿಯರೆ

*ರೂಪಶ್ರೀ ಶಶಿಕಾಂತ್

Related Articles

ಪ್ರತಿಕ್ರಿಯೆ ನೀಡಿ

Latest Articles