ಶ್ರೀ ಚೈತನ್ಯ ಮಹಾಪ್ರಭುಗಳ 536ನೇಯ ಜಯಂತಿ ಇಂದು

ಬೆಂಗಳೂರು: ಕರ್ನಾಟಕದಲ್ಲಿ ದಾಸಪರಂಪರೆಯು ಕೃಷ್ಣಭಕ್ತಿಯನ್ನು ಪಸರಿಸುತ್ತಿದ್ದ ಕಾಲದಲ್ಲಿ ಅತ್ತ ಬಂಗಾಳದಲ್ಲಿ ಚೈತನ್ಯ ಮಹಾಪ್ರಭುಗಳು ಜನಮಾನಸದಲ್ಲಿ ಕೃಷ್ಣಭಕ್ತಿಯ ಬೀಜವನ್ನು ಬಿತ್ತುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಜನಸಾಮಾನ್ಯರ ಬದುಕಿನಲ್ಲಿ ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದರು. ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯದಿಂದ ಭಾರತೀಯ ಸಮಾಜ ನಲುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಚೈತನ್ಯರು, ಜನಸಾಮಾನ್ಯರ ಬದುಕಿನಲ್ಲಿ ಕೃಷ್ಣಭಕ್ತಿಯನ್ನು ಸಂಕೀರ್ತನೆಯ ಮೂಲಕ ವಿತರಿಸಿದರು. ಸಂಕೀರ್ತನಾ ಕಾರ್ಯಕ್ರಮದ ಮೂಲಕ ಬಡವ-ಬಲ್ಲಿದರು, ಶೋಷಿತ ವರ್ಗದವರು, ಅನ್ಯಧರ್ಮಿಯರು ಎಂಬ ಯಾವುದೇ ಭೇದವಿಲ್ಲದೇ, ಪ್ರತಿಯೊಬ್ಬರೂ ಹೃದಯವೆಂಬ ಕನ್ನಡಿಗೆ ಮೆತ್ತಿಕೊಂಡಿರುವ ಐಹಿಕ ಸಂಗವೆಂಬ ಧೂಳನ್ನು ನಿವಾರಿಸಿಕೊಳ್ಳಬಹುದು ಎಂದು ಸಾರಿದ ಮೊಟ್ಟಮೊದಲ ಸಾಧಕರೆಂದರೆ ಚೈತನ್ಯ ಮಹಾಪ್ರಭುಗಳು.  ಅಲ್ಲದೇ, ಸಮಾಜದಲ್ಲಿ ಜಾತಿ ಪದ್ದತಿಯಿಂದ ಕಂಗಾಲಾಗಿದ್ದ ಜನರಿಗೆ ಪರಮಾತ್ಮನಲ್ಲಿ ಭಕ್ತಿನಿಷ್ಠೆಗೆ ಪ್ರಾಧ್ಯಾನ್ಯತೆ ಕೊಡುವ ಮೂಲಕ ಶಾಂತಿ ಸ್ಥಾಪಿಸಿದರು.

ಇಸ್ಕಾನ್ ಮಂದಿರದಲ್ಲಿ:

ಮಾರ್ಚ್ 18, 2022 ರಂದು ಸಂಜೆ 6 ಗಂಟೆಗೆ, ಶ್ರೀ ಶ್ರೀ ನಿತಾಯ್-ಗೌರಾಂಗರ (ಶ್ರೀ ನಿತ್ಯಾನಂದ ಪ್ರಭು ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳು) ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಗೌರ ಪೂರ್ಣಿಮೆ ಹಬ್ಬದ ಆಚರಣೆಯು ಆರಂಭವಾಗಲಿದೆ. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ನಡೆಯಲಿದೆ. ಪಲ್ಲಕ್ಕಿ ಉತ್ಸವದ ನಂತರ ನಡೆಯುವ ಭವ್ಯವಾದ ಮಹಾಭಿಷೇಕದಲ್ಲಿ, ಅರ್ಚಾ ವಿಗ್ರಹಗಳಿಗೆ ಪಂಚಾಮೃತ, ಪಂಚಗವ್ಯ, ಫಲಗಳ ರಸಗಳು ಮತ್ತು 108  ನದಿಗಳ ಪವಿತ್ರ ಜಲದಿಂದ ಅಭಿಷೇಕ ನೆರವೇರಲಿದೆ. ತದನಂತರ ನಿತಾಯ್ ಗೌರಾಂಗರಿಗೆ ಭವ್ಯವಾದ ಆರತಿಯನ್ನು ನೆರವೇರಿಸಲಾಗುವದು. ಈ ಸಂದರ್ಭದಲ್ಲಿ, ಪದ್ಮಶ್ರೀ ಪುರಸ್ಕೃತರೂ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರೂ ಆದ ಶ್ರೀ ಮಧುಪಂಡಿತ ದಾಸ ಅವರು, ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದ ಮೂಲಕ ತಿಳಿಸಿಕೊಡಲಿದ್ದಾರೆ. ವೈಭವದ ಶಯನ ಆರತಿ ಮತ್ತು ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಗೌರ ಪೂರ್ಣಿಮೆ ಕಾರ್ಯಕ್ರಮವು ಸಮಾಪ್ತಗೊಳ್ಳಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles