ಶ್ರೀತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನೋತ್ಸವ

-ತುಮಕೂರಿನಲ್ಲಿ 3 ದಿನ ಗಾನಾರಾಧನೆ

-ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಆಯೋಜನೆ

-ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವ

 ತುಮಕೂರು: ನಗರದಲ್ಲಿ ಕಳೆದ 21 ವರ್ಷಗಳಿಂದ ಕರ್ನಾಟಕ ಶಾಸೀಯ ಸಂಗೀತಕ್ಕೆ ಅನನ್ಯ ಕೊಡುಗೆ ನೀಡುತ್ತಿರುವ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಕರ್ನಾಟಕದ ಪ್ರಖ್ಯಾತ ಸಂಗೀತ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಜನವರಿ 12, 13 ಮತ್ತು 14 ರಂದು ಶ್ರೀ ತ್ಯಾಗರಾಜರ ಮತ್ತು ಶ್ರೀ ಪುರಂದರದಾಸರ ಆರಾಧನೋತ್ಸವ ಆಯೋಜಿಸಲಾಗಿದೆ.

ನಗರದ ವಿವೇಕಾನಂದ ರಸ್ತೆಯ ಮಾ.ಕಂ. ಕಲ್ಯಾಣ ಮಂದಿರದಲ್ಲಿ 3 ದಿನಗಳ ಕಾಲ ಗೋಷ್ಠಿಗಾಯನ, ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ- ವ್ಯಾಖ್ಯಾನ, ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ, ವಿದ್ವಾಂಸರಿಂದ ಸಂಗೀತ ಕಛೇರಿಗಳು ಆಯೋಜನೆಗೊಂಡಿವೆ.

ಜ. 12ರ ಸಂಜೆ 5.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳು ದೇವರನಾಮ ಹಾಡುವ ಮೂಲಕ ಸಂಗೀತ ಆರಾಧನೋತ್ಸವಕ್ಕೆ ಚಾಲನೆ ನೀಡಲಿರುವುದು ಬಹು ವಿಶೇಷ. ಸಂಜೆ 6ಕ್ಕೆ ಹಿರಿಯ ವಿದ್ಯಾರ್ಥಿಗಳಾದ ಮೀನಾ ಕಾಂತ, ಪ್ರಭಾ ವೇಣುಗೋಪಾಲ, ಸಂಧ್ಯಾ ದಿವೇಕರ್, ಕುಸುಮಾ ಕರುಣಾಕರ ಮತ್ತು ಶಾಂತಲಾ ಅವರಿಂದ ಶಾಸ್ತ್ರೀಯ ಸಂಗೀತ ಗಾಯನವಿದೆ.

ಸಂಜೆ 6.30ಕ್ಕೆ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಸದ್ಗುರು ಶ್ರೀ ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಆಯೋಜನೆಗೊಂಡಿದೆ. ಹಿರಿಯ ಗಾಯಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರು ಏಕ ಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿದ್ದಾರೆ. ಲೇಖಕ ಶಿವಮೊಗ್ಗ ರಘುರಾಮ ಪಂಚರತ್ನ ಕೃತಿಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.

ಮಹಿಳಾ ಸಂಘದಿಂದ ಗಾಯನ:

ಜ. 13ರಂದು ಸಂಜೆ 5.30ಕ್ಕೆ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ದಾಸರ ಕೃತಿಗಳ ಗೋಷ್ಠಿಗಾಯನವಿದೆ. ಸಂಜೆ 6ಕ್ಕೆ ಶ್ರೀ ಅನುಗ್ರಹ ಸಂಗೀತ ಮಹಿಳಾ ಸಂಘದ ಕಲಾವಿದರಾದ ಶೈಲಾ ಕುಮಾರಿ, ಟಿ.ಎಲ್. ಪದ್ಮಜಾ, ಸಪ್ನಾ, ಪದ್ಮಜಾ ಅರುಣ್ ಮತ್ತು ಮಮತಾ  ದೇವರನಾಮ ಗಾಯನ ಪ್ರಸ್ತುತಪಡಿಸಲಿದ್ದಾರೆ. ಸಂಜೆ 6.30ಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದ್ದು, ತನ್ಯಾ, ಕೋಮಲ, ಪ್ರೇರಣಾ, ಸಮನ್ವಿತಾ ಮತ್ತು ತನಿಷ್ಕಾ ಅವರು ತಮ್ಮ ಪ್ರೌಢಿಮೆ ಪ್ರದರ್ಶಿಸಲಿದ್ದಾರೆ. ನಂತರ ಬೆಂಗಳೂರಿನ ವಿದ್ವಾನ್ ಸುಬ್ಬುಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.

ಜ.14ರ ಶನಿವಾರಬೆಳಗ್ಗೆ 8.30ಕ್ಕೆ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಗಾಯನವಿದೆ. 10ಕ್ಕೆ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನವಿದ್ದು, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕರು ಭಾಗವಹಿಸಲಿದ್ದಾರೆ.

ಶಿಬಿರ ಸಮಾರೋಪ:

ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ತುಮಕೂರಿನಲ್ಲಿ 15 ದಿನಗಳಕಾಲ ಮಾತೆಯರಿಗೆ ಹಮ್ಮಿಕೊಂಡಿದ್ದ ‘ದೇವರನಾಮ ಉಚಿತ ಕಲಿಕಾ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಶನಿವಾರ ಬೆಳಗ್ಗೆ 11ಕ್ಕೆ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ಮಾತೆಯರು ದಾಸರ 12 ಕೃತಿಗಳನ್ನು  ಏಕಕಂಠದಲ್ಲಿ ಹಾಡಿ ರಂಜಿಸಲಿದ್ದಾರೆ. ಶ್ರೀ ಉತ್ತರಾದಿ ಮಠದ ವಿದ್ವಾಂಸ ಆನಂದತೀರ್ಥ ಗುಮಾಸ್ತೆ ಅವರು ದಾಸರ ಕೃತಿಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.

ವಿವರಗಳಿಗೆ 88612 13567 ಸಂಪರ್ಕಿಸಬಹುದು ಎಂದು ವಿದ್ವಾನ್ ಶ್ರೀಕಂಠಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯಾಲಯದ ಸಾಧನೆ:

ಕಳೆದ 21 ವಸಂತಗಳಿಂದ ಕರ್ನಾಟಕ ಶಾಸೀಯ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಾ, ಬೆಂಗಳೂರು ಮತ್ತು ತುಮಕೂರಿನಲ್ಲಿ ಶಾಖೆಗಳನ್ನು ಹೊಂದಿರುವ ‘ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ‘ ಈವರೆಗೆ  ಸಾವಿರಾರು ವಿದ್ಯಾರ್ಥಿಗಳಿಗೆ ಕಲಾಭಿರುಚಿ ಮೂಡಿಸಿದ ಕೀರ್ತಿಗೆ ಭಾಜನವಾಗಿದೆ. ನೂರಾರು ಮಾತೆಯರಿಗೆ ಪ್ರತಿವರ್ಷ 15 ದಿನಗಳ ಕಾಲ ಬೆಂಗಳೂರು ಮತ್ತು ತುಮಕೂರಿನಲ್ಲಿ ‘ಉಚಿತ ದೇವರನಾಮ ಶಿಬಿರ’ದ ಮೂಲಕ ಗಾಯನ ಸಂಸ್ಕೃತಿ ಪರಿಚಯಿಸಿದೆ. ಶ್ರೀ ತ್ಯಾಗರಾಜರ ಮತ್ತು ಪುರಂದರ ದಾಸರ ಆರಾಧನೆ ಸಂದರ್ಭ ವಿವಿಧ ರಂಗದ ಗಣ್ಯರು,  ಕಲಾ ಪೋಷಕರು ಮತ್ತು ವಿದ್ವಾಂಸರನ್ನು ಗೌರವಿಸಿದ ಕೀರ್ತಿಗೆ ಪಾತ್ರವಾಗಿದೆ. ನಾಡಿನ ಹಿರಿಯ ವಿದ್ವಾಂಸ ಜೆ.ಎಸ್. ಶ್ರೀಕಂಠ ಭಟ್ ವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಸುಕೃತವೇ ಸರಿ.

Related Articles

ಪ್ರತಿಕ್ರಿಯೆ ನೀಡಿ

Latest Articles