ಶಂಖ ಊದುವುದು ಆರೋಗ್ಯಕ್ಕೂ ಒಳ್ಳೆಯದು

ಶಂಖ ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು. ಶಂಖ ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಘೋಷಿಸುತ್ತಿದ್ದರು. ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.

ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚ ಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು. ಕೆಲವು ರಾಜರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವಾದ್ಯವೂ ಒಂದು. ಆದ್ದರಿ0ದಲೇ ಇದನ್ನು ಊದುವುದಲ್ಲದೆ, ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.

ಶಂಖಂ ಚಂದ್ರಾರ್ಕ ದೈವತ್ವಂ ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ ಏತತ್ ಶಂಖಂ ವ್ರವೂಜಯೇತ್ ‘ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.

ಶಂಖಗಳಲ್ಲಿ ನಾಲ್ಕು ವಿಧ: ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ. ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು ವಿಶೇಷ ಸಂಧರ್ಭಗಳಲ್ಲಿ ಈ ಎಲ್ಲ ಶಂಖಗಳಲ್ಲೂ ಪವಿತ್ರಗಂಗೆಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ.

ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು. ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ, ಭೀಮನದು ಪೌಂಢ್ರ, ಯುಧಿಷ್ಠಿರನದು ಅನಂತವಿಜಯ, ನಕುಲನದು ಸುಘೋಶ, ಸಹದೇವನದು ಮಣೀಪುಷ್ಪಕ …

ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ. ಶ್ರೀ ವಿಷ್ಣುವನ್ನು ಶಂಖ ಚಕ್ರ ಗದಾ ಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ.

ಕುಬೇರನ ಬಳಿಯಿದ್ದ ನವನಿಧಿಗಳಲ್ಲಿ ಅಕ್ಷಯವಾಗುತ್ತಿದ್ದ ನಿಧಿಯನ್ನು ಶಂಖನಿಧಿ ಎಂದೆನ್ನುತ್ತಾರೆ. ಕೆಲವು ಪ್ರಮುಖ ದೇವಾಯಲಗಳಲ್ಲಿ ಅವರದ್ದೇ ಪ್ರತ್ಯೇಕವಾದ ವಾದ್ಯ ವೃಂದವಿದ್ದು ಅವರಲ್ಲಿ ಶಂಖವಾದ್ಯಕ್ಕೆ ಪ್ರಮುಖ ಸ್ಥಾನವಿರುತ್ತದೆ. ಅಂತಹ ಶಂಖಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸುತ್ತಾರೆ. ಊದುವ ಭಾಗಕ್ಕೆ ಸಾಮಾನ್ಯವಾಗಿ ಬೆಳ್ಳಿಯ ತಗಡಿನ ನವಿಲುಗರಿಯ ರೂಪದ ಕೆತ್ತನೆ ಕೆಲಸವಿರುತ್ತದೆ. ಶಂಖವನ್ನು ಎರಡೂ ಕಡೆಯಿಂದ ಊದಬಹುದು. ಇದು ಬಹಳ ಪುರಾತನ ವಾದ್ಯವೇ ಆದರೂ ಕಲಿಯುವುದು ಬಹಳ ಕಷ್ಟ ಹಾಗೂ ಕಲಿಯಲು ಬಹಳ ಬಲವಿರಬೇಕೆಂಬ ಕಾರಣದಿಂದಲೋ ಏನೋ ಇದು ಜನಪ್ರಿಯವಾಗಿಲ್ಲ.

ಶಂಖ ಊದುವುದು ಆರೋಗ್ಯಕ್ಕೂ ಒಳ್ಳೆಯದು

ಶಂಖವನ್ನು ಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರ ವೇಗವುಳ್ಳದ್ದೂ ಹೆಚ್ಚು ಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ಸಿದ್ಧವಾಗಿದೆ. ಹೀಗೆ ಶಂಖದಿಂದ ಹೊರಬರುವ ಗಾಳಿಯ ಉಷ್ಣಾಂಶವು ನೂರಕ್ಕೆ ಎಂಟರಷ್ಟಿದ್ದರೆ ಅದರ ಪ್ರಭಾವದಿಂದ ಹೊರಗಿನ ಗಾಳಿಯು ಒಂದು ಸೆಕೆಂಡಿಗೆ 8708 ಅಡಿ ವೇಗದಿಂದ ಚಲಿಸುವುದೆಂದು ಪ್ರಯೋಗ ಫಲಿತಾಂಶಗಳು ತಿಳಿಸುತ್ತವೆ.

ತತ್ಪರಿಣಾಮವಾಗಿ ವಾತಾವರಣದಲ್ಲಿನ ರೋಗಜನಕ ಕೀಟಾಣಿಗಳು ನಾಶವಾಗುವುದಲ್ಲದೆ ವಾತಾವರಣದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು. ಇಂತಹ ವಾತಾವರಣದಲ್ಲಿನ ವಾಯುವನ್ನು ಉಸಿರಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಧನ್ವಂತರೀ ನಿಘಂಟಿನಲ್ಲೂ ಶಂಖದ ಗುಣವರ್ಣನೆ ಹೀಗಿದೆ: ” ಶಂಖ ನಾದು ಕಟು ವಾಕೇ ವಿಯೋಷ್ಣ ವ್ರಕೀರ್ತಿತ ಪರಿಣಾಮ ಜಯೇತ್ ಶೂಲಂ ಚಕ್ಷುಷಂ ರಕ್ತಪಿತ್ತಜಿತ’. ಶಂಖವು ರುಚಿಗೆ ಕಾರವೆನಿಸಿದರೂ ಜೀರ್ಣವಾದ ಮೇಲೆ ಮಧುರವಾಗಿರುವುದು. ಅದು ಸಮುದ್ರದಲ್ಲಿ ಹುಟ್ಟಿದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ವಿಷ್ಣುವೀರ್ಯವೆಂದು ಹೇಳುತ್ತಾರೆ.

ಶಂಖವನ್ನು ನೀರು ಜೇನುತುಪ್ಪ, ನಿಂಬೇರಸದಲ್ಲಿ ತೇಯ್ದು ತಿಂದರೆ ಆಮ್ಲಪಿತ್ತ, ತಲೆತಿರುಗುವಿಕೆ, ಮೊಡವೆ, ಕುರು ಮುಂತಾದ ದೋಷಗಳ ನಿವಾರಣೆಯಾಗುವುದೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಮಾತು ಸರಿಯಾಗಿ ಬಾರದ ಮಕ್ಕಳಿಗೆ ಚಿಕ್ಕ ಶಂಖದ ಮಾಲೆಯನ್ನು ತೊಡಿಸುತ್ತಾರೆ.

ಹೀಗೆ, ಶಂಖ ಪುರಾಣಗಳ ಕಾಲದಿಂದ ಇಂದಿನ ಕಾಲದವರೆವಿಗೂ ಪ್ರಸಿದ್ದವೂ ಉಪಯುಕ್ತವೂ ಪೂಜನೀಯವೂ ಆಗಿರುವ ಕೆಲವೇ ವಸ್ತುಗಳಲ್ಲಿ ಒಂದು.

ಶಂಖ ನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ ಶಂಖನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರ ವಾಗುತ್ತದೆ. ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ ಮುಂತಾದ ಗುಣಗಳು ಜಾಗೃತವಾಗುತ್ತದೆ. ಶಂಖವನ್ನು ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಗಳು ಬಲಿಷ್ಠಗೊಳ್ಳತ್ತದೆ. ಶ್ವಾಸ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಂಖಕ್ಕೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಶಂಖನಾದದ ಮೂಲಕವೇ ಪ್ರಾರಂಭಿಸಲಾಗುತ್ತದೆ. ಜಗತ್ತಿನ ಪರಿಪಾಲಕನಾದ ಮಹಾವಿಷ್ಣುವಿನ ಕೈಯಲ್ಲೂ ಶಂಖವನ್ನು ಕಾಣಬಹುದು. ಮಹಾಭಾರತ ಯುದ್ಧದಲ್ಲೂ ಯುದ್ಧ ಪ್ರಾರಂಭವಾಗುವಾಗ ಶಂಖನಾದ ಮೊಳಗುತ್ತಿತ್ತು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು

Related Articles

ಪ್ರತಿಕ್ರಿಯೆ ನೀಡಿ

Latest Articles