ಆಚಾರ್ಯತ್ರಯರೊಂದಿಗೆ ಅಭಯ ನೀಡುವ ಶ್ರೀ ಚನ್ನರಾಯ ಸ್ವಾಮಿ

ಸುಮಾರು 700 ವರ್ಷಗಳ ಐತಿಹ್ಯವುಳ್ಳ ಈ ದೇಗುಲ ಹಲವು ವೈಶಿಷ್ಟ್ಯಗಳನ್ನೊಳಗೊಂಡಿದೆ. ಈ ಕುರಿತು ಅಲ್ಲಿನ ಪ್ರಧಾನ ಅರ್ಚಕರು, ಧಾರ್ಮಿಕ ಚಿಂತಕರು ಆಗಿರುವ ಶ್ರೀ ಹೆಚ್.ಎಸ್.ರಂಗರಾಜನ್ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಹುಸ್ಕೂರು ಗ್ರಾಮದಲ್ಲಿ ಶ್ರೀ ಚನ್ನರಾಯ ಸ್ವಾಮಿ ರೂಪದಲ್ಲಿ ವರದನಾಯಕ ಶ್ರೀ ಮಹಾವಿಷ್ಣುನೆಲೆಯಾಗಿ ಭಕ್ತರಿಗೆ ಅಭಯ ನೀಡುತ್ತಿದ್ದಾನೆ. 13ನೇ ಶತಮಾನದಲ್ಲಿ ಆಚಾರ್ಯತ್ರಯರಲ್ಲಿ
ಒಬ್ಬರಾದ ಶ್ರೀ ಮಧ್ವಾಚಾರ್ಯರಿಂದ ಗುರುತಿಸಲ್ಪಟ್ಟ ಐತಿಹಾಸಿಕ ಮೂರ್ತಿ. ಬೃಂದಾವನದಲ್ಲಿ ಮಹಾವಿಷ್ಣುತನ್ನ ದಶಾವತಾರಗಳಿಂದ ಕೂಡಿದ್ದಾನೆ.

20 ವರ್ಷಗಳ ಹಿಂದೆ ಶ್ರೀ ಚನ್ನರಾಯ ಸ್ವಾಮಿ ಭಕ್ತರು, ಗ್ರಾಮಸ್ಥರು ಮತ್ತು ಅರ್ಚಕ ಕುಟುಂಬಸ್ಥರ ಸಹಕಾರದೊಂದಿಗೆ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ.
ಇಲ್ಲಿನ ವಿಶೇಷ ಅಂದರೆ ಶ್ರೀ ಮಹಾಗಣಪತಿಯ ಮೂರ್ತಿಯ ಜತೆಗೆ ಶ್ರೀಮಧ್ವಾಚಾರ್ಯರು, ಶ್ರೀ ಶಂಕರಾಚಾರ್ಯರು ಹಾಗೂ ಶ್ರೀರಾಮಾನುಜಾಚಾರ್ಯರ ಮೂರ್ತಿಗಳು ಇವೆ.
ಸುಮಾರು 700 ವರ್ಷಗಳ ಐತಿಹ್ಯವುಳ್ಳ ಈ ಪ್ರಸಿದ್ಧ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಶ್ರೀ ರಂಗರಾಜನ್ ದೇವಕಾರ್ಯದಲ್ಲಿ ನಿರತರಾಗಿದ್ದಾರೆ.
ಉತ್ತರಾಭಿಮುಖವಾಗಿ ಅಭಯ ಹಸ್ತಮುದ್ರೆಯೊಂದಿಗೆ ಕಂಗೊಳಿಸುತ್ತಿರುವ ಶ್ರೀದೇವರ ಅನುಗ್ರಹ ಪಡೆಯಲು ಹುಸ್ಕೂರು ಶ್ರೀ ಚನ್ನರಾಯ ಸ್ವಾಮಿ ದೇಗುಲಕ್ಕೆ ಒಮ್ಮೆಯಾದರೂ ಭೇಟಿ ನೀಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles