ಬೆಂಗಳೂರಿನ ಜಯನಗರ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶ್ರೀರಾಯರ ಪ್ರಸಾದ ರೂಪದಲ್ಲಿ ಧಾನ್ಯ ವಿತರಣೆ

ಜೀವ- ಜೀವನದ ಮೌಲ್ಯ ತೋರಿಸಿದ ಶ್ರೀ ಗುರುರಾಯರು

ಕೊರೋನಾ ಎಂಬ ರೋಗ ಮಹಾಮಾರಿಯು ದೇಶದೆಲ್ಲೆಡೆ ಆವರಿಸಿದಾಗ ದೇಶದ ಭಕ್ತ ಜನರೆಲ್ಲರೂ ಭಯಭೀತರಾಗಿ ಸುಮಾರು ಎಂಟು ತಿಂಗಳ ಕಾಲ ಕಷ್ಟದ ಜೀವನ ನಡೆಸುತ್ತಿದ್ದರು. ಅದರಲ್ಲಿಯೂ ಪ್ರಾರಂಭದಲ್ಲಿ ಎರಡು ತಿಂಗಳ ಕಾಲ ಬಹಳ ಕಷ್ಟದಲ್ಲಿ ಜೀವವನ್ನು ಇಟ್ಟುಕೊಂಡು ಜೀವನವನ್ನು ಸಾಗಿಸುತ್ತಿದ್ದರು.

ಹೀಗಿರುವಾಗ ಲೋಕದ ಕಲ್ಯಾಣಕ್ಕಾಗಿ ಭಕ್ತಜನರ ಆರೋಗ್ಯ ಹಾಗೂ ಜೀವನವನ್ನು ಸಾಗಿಸುವುದಕ್ಕಾಗಿ ಶ್ರೀ ಗುರುರಾಯರು ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಲ್ಲಿ ನಿಂತುಕೊಂಡು ಲೋಕ ಕಲ್ಯಾಣವನ್ನುಮಾಡಿಸಿದರು.

ಎಲ್ಲೆಲ್ಲಿ ನಮ್ಮ ಸಂಘ-ಸಂಸ್ಥೆಗಳು ಹಾಗೂ ನಮ್ಮ ಮಠಮಾನ್ಯಗಳಲ್ಲಿಯು ವಿಶೇಷವಾಗಿ ಮೃತ್ಯುಂಜಯ ಹೋಮ, ಶ್ರೀರಾಘವೇಂದ್ರ ಅಷ್ಟಾಕ್ಷರ ಹೋಮ ಹಾಗೂ ವಿಶೇಷ ಪಾರಾಯಣ, ಜಪಾದಿಗಳನ್ನು ಮಾಡಿಸಿ ಭಕ್ತಜನರಿಗೆ ಜಾತಿಭೇದ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಭಕ್ತರಿಗೂ “ರಾಯರ ಪ್ರಸಾದ”ರೂಪವಾಗಿ ಆಹಾರಧಾನ್ಯ ಕಿಟ್ ವಿತರಣೆ ಆಗುವ ಹಾಗೆ ಶ್ರೀ ರಾಯರು ಶ್ರೀಪಾದಂಗಳವರಲ್ಲಿ ನಿಂತುಕೊಂಡು ಭಕ್ತ ಜನರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸಿ ಜೀವನಕ್ಕಾಗಿ ಆಹಾರ ಧಾನ್ಯವನ್ನು ಪ್ರಸಾದರೂಪವಾಗಿ ಅನುಗ್ರಹಿಸಿದರು.

ಇಂತಹ ಮಹತ್ಕಾರ್ಯದಲ್ಲಿ ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿಯೂ ಭಕ್ತರ ಸಹಕಾರದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಸುಮಾರು 4000ಕ್ಕೂ ಹೆಚ್ಚಿನ ಭಕ್ತ ಜನರಿಗೆ ಆಹಾರ ಧಾನ್ಯದ ಕಿಟ್ ನ್ನು ವಿತರಿಸಿದರು.

ಅಷ್ಟೇ ಅಲ್ಲದೆ ಶ್ರೀಮಠದ ಸಿಬ್ಬಂದಿಗಳಿಗೂ ರಾಯರ ಪ್ರಸಾದರೂಪವಾಗಿ ಆಹಾರಧಾನ್ಯ ಕಿಟ್ ನ್ನು ವಿತರಿಸಲಾಯಿತು. ಶ್ರೀಮಠದ ಸಿಬ್ಬಂದಿಗಳಿಂದ ಶ್ರೀ ಮಠದಲ್ಲಿಯು ಆ ಕೊರೋನ ಮಹಾಮಾರಿ ಶೀಘ್ರ ನಿವಾರಣೆಯಾಗಲಿ ಎಂದು ಆ ಸಂದರ್ಭದಲ್ಲಿಯೂ ಪ್ರತಿನಿತ್ಯ ಶ್ರೀರಾಯರಿಗೆ ಅಭಿಷೇಕಗಳನ್ನು ಮಾಡಿ ದೀಪಗಳನ್ನು ಪ್ರಜ್ವಲಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು.

ತದನಂತರ ಕ್ರಮೇಣ ಮಹಾಮಾರಿಯು ಸುಧಾರಿಸುತ್ತಾ ಬಂದಾಗ ದೇವಸ್ಥಾನಗಳ ಬಾಗಿಲು ತೆಗೆದ ನಂತರ ಶ್ರೀಮಠಕ್ಕೆ ಬರುವಂತಹ ಭಕ್ತರಿಗೆ-ಮುಖ ಕವಚ ಮಾಸ್ಕ್, ಅಚ್ಚುಕಟ್ಟಾದ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಎಲೆಕ್ಟ್ರಾನಿಕ್ ಡಿವೇಜರ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸ್ಕ್ವಯರ್ ಬಾಕ್ಸ್ ಗಳನ್ನು ಹಾಕಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಸಹ ಶ್ರೀಮಠದ ವ್ಯವಸ್ಥಾಪಕರು ಮಾಡಿದ್ದರು.

ಈ ವ್ಯವಸ್ಥೆಯನ್ನು ನೋಡಿದ ಭಕ್ತ ಜನರು ಶ್ರೀಮಠವು ಬೆಂಗಳೂರಿಗೆ ರೋಲ್ ಮಾಡೆಲ್ . ಎಲ್ಲಾ ದೇವಸ್ಥಾನಗಳು ಇಂತಹ ವ್ಯವಸ್ಥೆಯನ್ನು ಮಾಡಿದರೆ ಭಕ್ತರಿಗೂ ಆತಂಕವಿಲ್ಲ ಎಂದು ಸಂತೋಷವನ್ನು ವ್ಯಕ್ತಪಡಿಸಿದರು. ಇಂದಿಗೂ ಶ್ರೀಮಠದಲ್ಲಿ ಆರೋಗ್ಯ ಇಲಾಖೆಯ ಸೂಚನೆಯಂತೆ ಹಾಗೂ ಪರಮಪೂಜ್ಯ ಶ್ರೀಪಾದರ ಆದೇಶದಂತೆ ಭಕ್ತರ ಆರೋಗ್ಯವೇ ನಮ್ಮ ಧ್ಯೇಯ ಎಂಬಂತೆ, ಭಕ್ತರ ಸಹಕಾರ ಹಾಗೂ ಶ್ರೀಮಠದ ಸಿಬ್ಬಂದಿಗಳ ಸಹಕಾರದೊಂದಿಗೆ ಇಂದಿಗೂ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮುಂದುವರಿಸಿ ಕೊಂಡು ಹೋಗುತ್ತಿದ್ದೇವೆ ಎಂದು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ತಿಳಿಸಿದರು.

ವರದಿ: ಕಿಶೋರಾಚಾರ್ಯರು

Related Articles

ಪ್ರತಿಕ್ರಿಯೆ ನೀಡಿ

Latest Articles