ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲು…

ಜಯಶ್ರೀ.ಜೆ.ಅಬ್ಬಿಗೇರಿ (ಇಂಗ್ಲೀಷ್ ಉಪನ್ಯಾಸಕರು)

‘ತಿರುಕನ ಕನಸು’ ಕವಿತೆ ಕೇಳದವರು ತುಂಬ ಕಡಿಮೆ. ನನಸಾಗದ ಕನಸಿನ ಕುರಿತು ಮಾತನಾಡುವಾಗೊಮ್ಮೆ ನಿನ್ನದು ತಿರುಕನ ಕನಸಾಯಿತೆಂದು ಉದ್ಗರಿಸುವುದುಂಟು. ಆ ಕವಿತೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವಂತಿದೆ ಅನ್ನುವವರೂ ಉಂಟು. ಆ ಕವಿತೆಯಲ್ಲಿ ಏನಾಗುತ್ತದೆ ಅಂತ ನೋಡೋಣ ಬನ್ನಿ. ಮುಪ್ಪಿನ ಷಡಕ್ಷರಿ ಕವಿಯ ’ತಿರುಕನ ಕನಸು’ ಕವಿತೆಯಲ್ಲಿ ಭಿಕ್ಷÄಕನೊಬ್ಬನು ಮುರುಕು ಛತ್ರದಲ್ಲಿ ಮಲಗಿರುವಾಗ ಕನಸೊಂದನ್ನು ಕಾಣುತ್ತಾನೆ. ಕನಸಿನಲ್ಲಿ ಆಕಸ್ಮಿಕವಾಗಿ ಅರಸನಾಗುತ್ತಾನೆ. ಸಕಲ ಭೋಗ ಭಾಗ್ಯಗಳೊಂದಿಗೆ ರಾಜ್ಯವನ್ನಾಳುತ್ತಾನೆ. ಒಮ್ಮೆ ಸೇವಕರು ಅವಿಧೇಯರಾಗಿ ನಡೆದುಕೊಂಡರೆ0ದು ಕಾಲಿನಿಂದ ಜಾಡಿಸಿ ಒದೆಯುತ್ತಾನೆ. ಆಗ ಅವನ ಕಾಲ ಬಳಿ ಇದ್ದ ಮಡಿಕೆ ಉರುಳಿ ಒಡೆದು ಹೋಗುತ್ತದೆ.

ತಿರುಪೆ ಎತ್ತಿ ತಂದಿದ್ದ ಹಿಟ್ಟೂ ಸಹ ಚೆಲ್ಲಿ ಹೋಗುತ್ತದೆ. ಕೊನೆಯಲ್ಲಿ ಅರಮನೆಗೆ ವೈರಿಗಳು ಮುತ್ತಿದಂತಾಗಿ ಎಚ್ಚರವಾಗುತ್ತದೆ. ತಾನು ಅದುವರೆಗೂ ಕಂಡದ್ದು ಕನಸು ಎಂದು ಅವನಿಗೆ ಅರ್ಥವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆ0ದರೆ ತಿರುಕನ ಕನಸು ಅಲ್ಲಿದ್ದ ವೈಭೋಗಗಳೆಲ್ಲವೂ ಸುಳ್ಳೇ ಆಗಿದ್ದರೂ ಕನಸಿನ ಪರಿಣಾಮವಾಗಿ ಮಡಿಕೆ ಒಡೆದದ್ದು, ಹಿಟ್ಟು ಚೆಲ್ಲಿ ಹೋಗಿದ್ದು ಸುಳ್ಳಲ್ಲ. ಕಂಡದ್ದು ಕನಸಾದರೂ ಅದರ ಪರಿಣಾಮ ಅನುಭವಿಸಬೇಕಾಯಿತು. ಆತನ ಪಾಲಿಗೆ ಅಮೂಲ್ಯವಾಗಿದ್ದ ಮಡಿಕೆ ಒಡೆದು ಹೋಯಿತು. ಅವತ್ತಿನ ಆಹಾರವಾದ ಹಿಟ್ಟೂ ನಷ್ಟವಾಯಿತು.
ನಮ್ಮ ಬದುಕಿನಲ್ಲೂ ಹೀಗೆ ಕನಸಿನಂತೆ ಘಟಿಸುವ ಸಂದರ್ಭಗಳು ಸನ್ನಿವೇಶಗಳು ಜೀವವನ್ನು ಜಗತ್ತಿಗೆ ಅಂಟಿಸಿ ಬಿಡುತ್ತವೆ. ಸುಖ ದುಃಖಗಳು ಕನಸಿನಂತೆ ಬರುತ್ತಿರುತ್ತವೆ. ಮಗ್ಗಲು ಮುಳ್ಳಿನ ಹಾಸಿಗೆಯಂತೆ ಚುಚ್ಚುತ್ತಲೇ ಇರುತ್ತವೆ. ಭಾವ ಬುದ್ಧಿಗಳು ಸಮನ್ವಯ ಸ್ಥಿತಿಯಲ್ಲಿದ್ದಾಗ ಮಾತ್ರ ಸಾರ್ಥಕ ಜೀವನದ ಕನಸುಗಳನ್ನು ನನಸಾಗಿಸಲು ಸಾಧ್ಯ. ವಿವೇಕದ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಭಾವಾತಿರೇಕಕ್ಕೆ ಕಿವಿಗೊಟ್ಟರೆ ಮನಸ್ಸು ಹುಚ್ಚೆದ್ದ ಮಂಗನ0ತಾಗಿಬಿಡುತ್ತದೆ.

ಇಂದ್ರಿಯಗಳು ಭೋಗಲಾಲಸೆಯಲ್ಲಿ ಮುಳುಗುತ್ತವೆ ಇದರಿಂದಾಗಿ ಆತ್ಮದ ಶಕ್ತಿ ಕುಂದುತ್ತದೆ. ಇ0ದ್ರಿಯಗಳನ್ನು ನಿಯಂತ್ರಿಸಲಾಗದೆ ಅವುಗಳ ಗುಲಾಮನಾಗಿ ಬಿರುಗಾಳಿಗೆ ಸಿಕ್ಕ ಹಡಗಿನಂತೆ ಪರದಾಡಬೇಕಾಗುತ್ತದೆ. ಜೀವನದಲ್ಲಿನ ನೋವಾಗಲಿ ನಲಿವಾಗಲಿ ಶಾಶ್ವತವಲ್ಲ. ಏಕೆಂದರೆ ಜೀವನವೇ ನಶ್ವರ. ಹಿಂದೆ ಹುಟ್ಟು ಇಂದು ಬದುಕು ಮುಂದೆ ಸಾವು. ಜೀವನ ನೆರಳು ಬೆಳಕಿನ ಆಟವೆಂದರೂ ಇಂದ್ರೀಯಗಳು ನೀಡಿದ ಅನುಭವಕ್ಕೆ ಅಂತರ0ಗ ಸ್ಪಂದಿಸಿದ್ದು ಸೂರ್ಯ ಪ್ರಕಾಶದಷ್ಟೇ ಸತ್ಯ ನಾವು ಎದುರಿಸುವ ಒಳಿತು ಕೆಡುಕುಗಳ ಅನುಭವವು ಆಂತರ್ಯದ ಮೇಲೆ ಪ್ರಭಾವ ಬೀರುವುದೂ ಸತ್ಯ
ಮನುಷ್ಯ ದೇವನಿತ್ತ ಅಮೂಲ್ಯ ಬುದ್ಧಿಯನ್ನು ಶ್ರಮರಹಿತ ಸುಖ ಜೀವನಕ್ಕಾಗಿ ಸಂಶೋಧನೆಗಳನ್ನು ಮಾಡಲು ಉಪಯೋಗಿಸಿದ. ಅದರ ಪರಿಣಾಮವಾಗಿಯೇ ಇಂದು ಜೀವನ ಕ್ರಮದಲ್ಲಿ ಆವಿಷ್ಕಾರಗಳಿಂದ ವ್ಯತ್ಯಾಸ ಕಂಡು ಬರುತ್ತಿದೆ. ಆವಿಷ್ಕಾರಗಳು ಬೇಡವೆಂದಲ್ಲ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಕ್ರಮ ತಿಳಿದು ಪಾಲಿಸಬೇಕು. ಪ್ರಕೃತಿಯ ಯೋಚನೆಯನ್ನು ಬಿಟ್ಟು ಆವಿಷ್ಕಾರಗಳನ್ನೇ ಹೊದ್ದುಕೊಳ್ಳುತ್ತಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಬದುಕಿನ ಮೂಲ ಆಶಯವಾದ ಶಾಂತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ.

ಒತ್ತಡದ ಜೀವನದಲ್ಲಿ ಸಿಲುಕಿಹಾಕಿಕೊಂಡಿದ್ದೇವೆ. ಒತ್ತಡಮುಕ್ತ ಯೋಚನೆಗಳಿಂದ ಆರೋಗ್ಯಕರ ಜೀವನಶೈಲಿ ಪ್ರಕೃತಿಯೊಂದಿಗೆ ಮುದವಾಗಿ ಬೆರೆಯುತ್ತ ಬದುಕಿನ ಹರಿವಿನ ವೇಗಕ್ಕೆ ಒಗ್ಗಿಕೊಂಡರೆ ಬದುಕು ತಿರುಕ ಕಂಡ ಕನಸಿನಂತಾಗುವುದಿಲ್ಲ. ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲಾದದ್ದು ಎಂದೆನಿಸದೇ ಇರದು

Related Articles

ಪ್ರತಿಕ್ರಿಯೆ ನೀಡಿ

Latest Articles