ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಮುಕುತಿ…

*ವೈ.ಬಿ.ಕಡಕೋಳ

ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮ:
     ಎಂದು ಪ್ರಾರ್ಥಿಸುವ ಪರಂಪರೆಯ ದೇಶ ನಮ್ಮದು. ವೇದ, ಉಪನಿಷತ್, ಕಾಲದಿಂದಲೂ "ಗುರು"ವಿಗೆ ತನ್ನದೇ ಆದ ವೈಶಿಷ್ಟ್ಯತೆಯಿದೆ.ನಾವು  "ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ"ಎಂದು ಸಾರಿ ಸಾರಿ ಹೇಳುತ್ತೇವೆ. 
ಪರುಷ ಲೋಹವ ಮುಟ್ಟಿ
ವರುಷವಿರಬಲ್ಲುದೇ ಪರಷವೆಂತಂತೆ ಶಿಷ್ಯಂಗೆ
ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ
     ನಮ್ಮ ದೇಶದಲ್ಲಿ ಗುರುವಿಗೆ ಎಂಥ ಸ್ಥಾನವಿತ್ತು ಎಂದು ಇಂಥ ಉಕ್ತಿಗಳಿಂದ ತಿಳಿದು ಬರುತ್ತದೆ. ಮೊದಲು ವಿದ್ಯಾಭ್ಯಾಸ ಗುರುಕುಲಗಳಲ್ಲಿ ನಡೆಯುತ್ತಿತ್ತು. ಶಿಷ್ಯರು ಗುರುವಿನ ಜೊತೆಯಲ್ಲಿಯೇ ಇದ್ದು ಅವರ ಸೇವೆ ಮಾಡುತ್ತಾ ಯಜ್ಞ-ಯಾಗಾದಿಗಳಲ್ಲಿ ತೊಡಗಿ ಅವರಿಗೆ ನೆರವಾಗಿ ಅವರಿಂದ ವಿದ್ಯೆ ಕಲಿಯುತ್ತಿದ್ದರು. ಆಗ ವಿದ್ಯೆ ಕೇವಲ ಅಕ್ಷರಾಭ್ಯಾಸವಾಗಿರದೇ ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನ ತಿಳಿಯುವ ಮಾರ್ಗವಾಗಿತ್ತು. ಮಹಾರಾಜರಿಂದ ಹಿಡಿದು ಸಾಮಾನ್ಯ ಭಕ್ತನವರೆಗೂ "ಗುರು"ವಿಗೆ ತೋರುವ ನಿಷ್ಠೆ ಅನನ್ಯವಾದುದು.
ಮೊಸರ ಕಡೆಯಲು ಬೆಣ್ಣೆ
ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ-ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ.
     ವಚನ ಯುಗದಲ್ಲಿನ ಎಲ್ಲ ವಚನಕಾರರು ಗುರು ಹಾಗೂ ಶಿಷ್ಯ ಸಂಬಂಧ ಕುರಿತು ತಮ್ಮದೇ ಆದ ನಿಲುವನ್ನು ಮಹತ್ವವನ್ನು ತಮ್ಮ ವಚನಗಳಲ್ಲಿ ಹೇಳಿರುವರು.      
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ
-ಬಸವಣ್ಣ
     ಹೀಗೆ ಬಸವಣ್ಣನವರು ಗುರುವೆಂಬ ಬೀಜದಿಂದಲೇ ಲಿಂಗ, ವಿಚಾರ, ಆಚಾರಗಳು ಉದ್ಬವವಾಗಿವೆಯೆಂದು ಸದ್ಗುರುವಿನ ವಚನದಿಂದ ನಮಗೆ ಕಟ್ಟಿರುವ ಕಳಂಕದಿಂದ ಹೊರಬರಲು ಸಾದ್ಯವೆಂಬುದನ್ನು ಹೇಳುತ್ತ"
ಎನ್ನಗುರು ಪರಮಗುರು ನೀವೇ,
ಎನ್ನ ಗತಿ ಮತಿ ನೀವೆ,
ಎನ್ನ ಅರಿವಿನ ಜ್ಯೋತಿ ನೀವೆ,
ಎನ್ನಂತರಂಗದ ಬಹಿರಂಗದ ಮಹವು ನೀವೇ ಕಂಡಯ್ಯ ಕೂಡಲಸಂಗಮದೇವಾ"
ಎಂದು ಗುರುವಿನಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಾರೆ. ಗುರುವಿನ ಕರುಣೆ ಕೃಪೆಗಳಿಂದ ಭಕ್ತರ ಜೀವನದಲ್ಲಿಯ ಕಷ್ಟಗಳ ಪರಿಹಾರ ಸಾದ್ಯ ಎಂದು ಗುರುಮಹಿಮೆಯ ತಿಳಿಸಿರುವರು.

ಶಿವಶರಣೆ ಅಕ್ಕಮಹಾದೇವಿಯು ಗುರುವನ್ನು ಅನೇಕ ವಿಧವಾಗಿ ಕೊಂಡಾಡಿರುವಳು.
ಅರಸಿ ಮೊರೆ ಪುಕ್ಕಡೆ ಕಾವ ಗುರುವೆ
ಜಯ ಜಯ ಗುರುವೆ
ಆರೂ ಅರಿಯದ ಬಯಲೊಳಗೆ
ಬಯಲಾಗಿ ನಿಂದ ನಿಲವ
ಹಿಡಿದೆನ್ನ ಕರದಲ್ಲಿ ತೋರಿದ ಗುರುವೆ
ಶ್ರೀ ಗುರುವಿನ ಸಾನ್ನಿಧ್ಯದಿಂದ ನಾನು ಬದುಕಿದೆನೆಯ್ಯಾ
ಚೆನ್ನಮಲ್ಲಿಕಾರ್ಜುನಾ
 ಎಂದು ಗುರುವಿಗೆ ಭಕ್ತಿಗೌರವಗಳನ್ನು ಅರ್ಪಿಸುತ್ತಾಳೆ.ಶಿವ ಸಂಹಿತದಲ್ಲಿ ಗುರುವನ್ನು ವಿಮೋಚನೆಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ.ವಿಷ್ಣುಸ್ಮøತಿ ಹಾಗೂ ಮನುಸ್ಮøತಿಗಳಲ್ಲಿಯೂ ಕೂಡ ಆಚಾರ್ಯರನ್ನು ತಂದೆ ಹಾಗೂ ತಾಯಿಯೊಂದಿಗೆ ಅತೀ ಗೌರವ ವ್ಯಕ್ತಿಗಳೆಂದು ಪರಿಗಣಿಸಲಾಗಿದೆ.

ನರಜನ್ಮವ ತೊಡೆದೆ ಹರಜನ್ಮವ ಮಾಡಿದ ಗುರುವೆ ನಮೋ:
ಭವಬಂಧವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ
ಭವಿಯೆಂಬುದ ತಡೆದು ಭಕ್ತಿಯೆಂದಿನಿಸಿದ ಗುರುವೆ. ನಮೋ//
ಚೆನ್ನಮಲ್ಲಿಕಾರ್ಜುನನ ತಂದೆನ್ನ
ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ
ಎಂದು ಅಕ್ಕಮಹಾದೇವಿಯು ತನ್ನಆಧ್ಯಾತ್ಮಿಕ  ಜೀವನದಲ್ಲಿ ಗುರುವಿನ ಪ್ರಭಾವ ಆಗಿರುವುದೆಂದು ಗುರುವನ್ನು ಕೊಂಡಾಡಿರುವಳು.

 ಅಯ್ಯಾ ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಪ್ರಾಣದ ಧರ್ಮವ ನಿಲಿಸಿ
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡು ಗುಹೇಶ್ವರ.

ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವತಯಾರಿ ಎಂಬುದನ್ನು ಹೇಳುವ ಜೊತೆಗೆ ಸಾವಿರಾರು ಸೂರ್ಯ ಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಹೊಡೆದು ಹಾಕಲಾಗುತ್ತದೆ ಎಂಬ ಗುರುನಾನಕ್ ರ ನುಡಿಯನ್ನು ನೆನಪಿಸುತ್ತ ಕರ್ಮಯೋಗಿ ಸಿದ್ದರಾಮೇಶ್ವರರು ಗುರು ಕುರಿತ ವಚನದಲ್ಲಿ               
             
ಗುರುವೆ ಇಹಪರ ಗುರುವೆ,ಗುರುವೆ ಕರುಣಾಕರನೆ,
ಗುರುವೆ,ಶುದ್ದಾತ್ನನೆ ನಿರ್ಮಳಾಂಗ,
ಗುರುವೆ,ನಿನ್ನಂತೆ ಎನ್ನವನು ಮಾಡಿಹ
ಗುರುವೆ,ನೀನು ಕಪಿಲಸಿದ್ದಮಲ್ಲಿನಾಥ.
ಎಂದು ಗುರುವಿಗೆ ನಮನ ಸಲ್ಲಿಸಿರುವರು. ಗುರುವಿನ ಕೃಪೆಯಿಂದ ಸಾಧಾರಣ ತನುವನ್ನು ಮರೆದು,ಗುರುವಿನ ಶಿವಜ್ಞಾನವೆಂಬ ಬೆಳಕು ಪಡೆದು ಅಸಂಖ್ಯಾತ ಶರಣರೆಲ್ಲರ ಸಹವಾಸ ಉಪದೇಶಗಳಿಂದ ಅನುಭಾವಗೋಷ್ಠಿಗಳಿಂದ ಸಿದ್ದರಾಮರು ಗುರುನಮನವನ್ನು ತಮ್ಮ ವಚನದಲ್ಲಿ ಬಿಂಬಿಸಿರುವರು.
                                    
ಜ್ಞಾನ, ಕ್ರಿಯೆ, ವೈರಾಗ್ಯಗಳ ಆದರ್ಶಮಯ ಸಮನ್ವಯವನ್ನು ಶ್ರೀಗುರುವಿನಲ್ಲಿ ಕಾಣಬಹುದು
ಆಚಾರ ಗುರು, ಸಮಯ ಗುರು, ಜ್ಞಾನಗುರು,
ಆಚಾರಗುರು ಬ್ರಹ್ಮನ ಕಲ್ಪವ ತೊಡೆಯಬೇಕು
ಸಮಯಗುರು ವಿಷ್ಣುವಿನ ಸ್ಥಿತಿಯ ಹರಿಯಬೇಕು.
ಜ್ಞಾನಗುರು ಉತ್ಪತಿ ್ತ ಸ್ಥಿತಿ ಲಯ ಮೂರನು ಕಳೆಯಬೇಕು.
ತ್ರಿವಿಧಗುರು ಏಕವಾದಲ್ಲಿ ಸದ್ಗುರು ಸದ್ಗುರು ಮಹಾಗುರುವೆಂಬೆ ನಿ:ಕಳಂಕ ಮಲ್ಲಿಕಾರ್ಜುನಾ...

     ತರ್ಕಾತೀತ ಜ್ಞಾನ(ವಿದ್ಯೆ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂ ಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ. ವೈದಿಕ ಜ್ಯೋತಿಷ ಶಾಸ್ತ್ರದಲ್ಲಿ ಗುರು ಅಥವಾ ಒಬ್ಬ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ ಬೃಹಸ್ಪತಿವಾರ ಅಥವಾ ಗುರುವಾರ(ವಾರ ಎಂದರೆ ಸಪ್ತಾಹದ ಒಂದು ದಿನ)ಎಂದು ನಿಗದಿಗೊಳಿಸಿರುವರು.ಗುರು ಲಿಂಗ ಜಂಗಮ ಎಂಬ ಕಲ್ಪನೆಯಿಂದಲೇ ವಚನ ಸಾಹಿತ್ಯವು ಗುರುವಿನ ಮಹತ್ವ ಹಾಗೂ ಆ ಗುರುವನ್ನು ಅನುಸರಿಸುವ ಶಿಷ್ಯನ ಕರ್ತವ್ಯಗಳು ಎಲ್ಲ ವಿಷಯಗಳ ಕುರಿತು ಚರ್ಚೆ ನಡೆದಿದೆ ಅಂಥ ಕೆಲವು ವಚನಗಳನ್ನು ಇಲ್ಲಿ ಕಾಣಬಹುದು.
ಅಮುಗಿದೇವಯ್ಯನು ಗುರು ಹೇಗಿರಬೇಕೆನ್ನುವುದನ್ನು "ಗುರುವಾದಲ್ಲಿ ಶಿಷ್ಯ ಅಂಗದಲ್ಲಿ ಶಿಲೆಯಲ್ಲಿ ಉರಿಯಡಗಿದಂತಿರಬೇಕು ಎಂದು ಶಿಷ್ಯನ ಅಂತರಂಗವೇ ಗುರುವಿನ ಸ್ಥಾನ ಎಂದಿರುವನು"ಘಟದೊಳಗೆ ತೋರುವ ಸೂರ್ಯನಂತೆ" ಸರ್ವರಲ್ಲಿರುವ ಶಿವಚೈತನ್ಯವನ್ನು ಗುರುವಿಂದಲ್ಲದಾಗದು ಕಾಣಾ ಕಲಿದೇವರದೇವಾ ಎಂದು ಹೇಳುವ ಈ ವಚನವು ಗುರುವಿನ ಮೂಲಕವೇ ಆತನ ಚೈತನ್ಯವನ್ನು ಕಾಣಲು ಸಾಧ್ಯ.
ಗುರುವಿಂಗೂ ಶಿಷ್ಯಂಗೂ ಆವುದ ದೂರ.?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ
ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ
...ಮುನ್ನಲಾದ ಪದತತ್ವಮಂ ತಿಳಿದು ನೋಡಲು
ನೀನೆ ಸ್ವಯಂಜ್ಯೋತಿ ಪ್ರಕಾಶವೆಂದರಿಯಲು
ನಿನಗೆ ನೀನೆ ಗುರುವಲ್ಲದೆ
ನಿನ್ನಿಂದಧಿಕ ಗುರುವುಂಟೇ.?
ಇದು ಕಾರಣ.
ಗುಹೇಶ್ವರ ಲಿಂಗವು ತಾನೆಂಬುದನು
ನಿನ್ನಿಂದ ನೀನೇ ಅರಿಯಬೇಕು ನೋಡಾ...


    ಇನ್ನು ನಿಜಗುಣ ಶಿವಯೋಗಿಗಳು ಶ್ರೀ ಗುರುವಿನ ವಚನ ಉಪದೇಶದಿಂದ ಮುಕ್ತಿ ಸಾದ್ಯವೆಂಬುದನ್ನು ಬಹು ಮಾರ್ಮಿಕವಾಗಿ ಹೇಳಿರುವರು
ಶ್ರೀ ಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ
ದುರಿತ ಕರ್ಮವನೊಲ್ಲದಿರು,ಪುಣ್ಯವನೆ ಮಾಡು
ಹರನಡಿವಿಡಿ,ಶಾಂತರೊಡನಾಡು
ಕರುಣವಿರಲಿ ಜೀವದೊಳು, ನೀತಿವದನನಾಗು
ಮುಂತಾದ ನೈತಿಕ ನಡೆನುಡಿಗಳನ್ನು ಕುರಿತು ತಿಳಿಸಿರುವರು. 
            		
     ಗುರು ಶಿಷ್ಯಸಂಬಂಧಗಳು ಮೊದಲಿನಂತಿಲ್ಲ. ಇದನ್ನು ನೆನೆದಾಗ ಹಿಂದೆಯೇ ಗುರು-ಶಿಷ್ಯ ಸಂಬಂಧ ಬಹುಶ: ಇಂದಿನದನ್ನು ನಮ್ಮ ಅಲ್ಲಮಪ್ರಭುದೇವರು ಅಂದು ಕಂಡುಕೊಂಡಿದ್ದರೇನೋ ಎಂಬಂತೆ ಗುರುಶಿಷ್ಯ ಸಂಬಂಧವನ್ನು ಉಲ್ಲೇಖಿಸುಂತೆ ಬರೆದ ವಚನ
ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ
ಆಗಲಿ ಮಹಾ ಪ್ರಸಾದವೆಂದನಯ್ಯಾ
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಯ್ದು ಬುದ್ದಿಯ ಕಲಿಸಿದರೆ ಆಗಲಿ ಮಹಾ ಪ್ರಸಾದವೆಂದನಯ್ಯಾ
ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ದಿಯ ಕಲಿಸಿದರೆ ಆಗಲಿ ಮಹಾ ಪ್ರಸಾದವೆಂದನಯ್ಯಾ
ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯಾ...ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.

     ಈ ವಚನವು ಕಾಲಾಂತರದಲ್ಲಿ ಗುರುಶಿಷ್ಯ ಸಂಬಂಧವು ಹೇಗೆ ಬದಲಾಗುತ್ತ ಹೋಗುತ್ತದೆ ಎಂಬುದನ್ನು ತುಂಬಾ ಮಾರ್ಮಿಕವಾಗಿ ಹೇಳಿರುವರು. ಕಲಿಯುಗದಲ್ಲಿ ನಿಜಕ್ಕೂ ಇವರಿಬ್ಬರ ಸಂಬಂಧದಲ್ಲಿ ಸಡಿಲತೆ ಉಂಟಾಗಿರವುದು “ಕೇವಲ ಉದ್ಯೋಗಕ್ಕಾಗಿಯೇ ಶಿಕ್ಷಣ ಕಲಿಯಬೇಕು” ಎಂಬ ವಾತಾವರಣ, ಮೌಲ್ಯಗಳ ಕೊರತೆಯೂ ಇದಕ್ಕೆ ಕಾರಣ. 
     'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ"ಎಂಬ ಪುರಂದರದಾಸರ ವಾಣಿಯಂತೆ ಗುರುವಿನ ಮಾರ್ಗದರ್ಶನದಂತೆ ಮುನ್ನಡೆದರೆ ಜ್ಞಾನದ ಹಾದಿಯಲ್ಲಿ ಸಾಗುವುದು ಕಷ್ಟವೇನಲ್ಲ. 

                
        
 
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ.ಶಿಂದೋಗಿ ಕ್ರಾಸ್,
ಮುನವಳ್ಳಿ-591117
ತಾಲೂಕ:ಸವದತ್ತಿ  ಜಿಲ್ಲೆ;ಬೆಳಗಾವಿ

Related Articles

ಪ್ರತಿಕ್ರಿಯೆ ನೀಡಿ

Latest Articles