ಕಾಡುವ ಬೇಸರವನ್ನು ಕಡೆಗಣಿಸುವುದು ಹೇಗೆ…?

ಬದುಕಿನಲ್ಲಿ ತೀರಾ ಆತ್ಮೀಯರಾದವರು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ, ಸಿಕ್ಕಿದ ಪ್ರೀತಿ ಕೈ ತಪ್ಪಿ ಹೋದಾಗ, ಇಟ್ಟುಕೊಂಡ ಕನಸುಗಳನ್ನು, ಬದುಕಿನ ನಿರೀಕ್ಷೆಯನ್ನು ಸಾಧಿಸಲಾಗದೇ ಹೋದಾಗ ತೀರಾ ನಿರಾಶರಾಗುವುದು, ಜಿಗುಪ್ಸೆಗೊಳಗಾಗುವುದು ಸಾಮಾನ್ಯ. ಅದೇ ನೋವಿನಿಂದ ಹೊರಬರಲಾಗದೆ ತತ್ತರಿಸುವ ಅದೆಷ್ಟೋ ಮಂದಿ ಸಹಜ ಜೀವನವನ್ನು ಕಳೆದುಕೊಳ್ಳುತ್ತಾರೆ. ಅಂದರೆ ಖಿನ್ನತೆಗೆ ಒಳಗಾಗುತ್ತಾರೆ. ಹಾಗಾಗದಿರಲು ದುಃಖವನ್ನು ಹೊರಹಾಕುವುದು ಬಹಳ ಅಗತ್ಯ.

ಅದರಲ್ಲೂ ಆತ್ಮೀಯರ ಸಾವಿನ ನೋವನ್ನು ಅಷ್ಟು ಬೇಗ ಅರಗಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಜೀವನದಲ್ಲಿ ಇಷ್ಟ ಪಟ್ಟವರ ಕಳೆದು ಹೋದಾಗ ನೆನಪು ಕಾಡುವುದು ಸಹಜ. ಇದು ಒಂದು ರೀತಿಯ ಭಾವನಾತ್ಮಕ ವೇದನೆ. ಅವಷ್ಟೇ ಅಲ್ಲದೆ ಅನಾರೋಗ್ಯ, ಉದ್ಯೋಗ ಕಳೆದುಕೊಳ್ಳುವುದು, ಆರ್ಥಿಕ ಸೋಲು, ಪ್ರೀತಿಗೆ ಪಾತ್ರವಾಗಿದ್ದ ಪ್ರಾಣಿಯ ಸಾವು, ಗೆಳೆತನವನ್ನು ಕಳೆದುಕೊಳ್ಳುವುದು ಇವೆಲ್ಲವೂ ಜೀವನದಲ್ಲಿ ಆಗಾಗ ಬೇಸರ ಉಂಟು ಮಾಡುತ್ತಿರುತ್ತದೆ. ಯಾಕೆಂದರೆ ಪ್ರೀತಿ ಅನ್ನೋದು ಕೇವಲ ಪದವಲ್ಲ, ಅದು ಭಾವನಾತ್ಮಕ ಬೆಸುಗೆ.

ಬೇಸರಕ್ಕೆ ಹಲವು ಕಾರಣಗಳಿರಬಹುದು. ಒಬ್ಬರ ನೋವಿಗಿಂತ ಇನೊಬ್ಬರದು ಭಿನ್ನ. ಕೆಲವರು ನೋವನ್ನು ಹೇಳಿಕೊಳ್ಳುತ್ತಾರೆ, ಇನ್ನು ಕೆಲವರು ಅನುಭವಿಸುತ್ತಿರುತ್ತಾರೆ. ಅದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ಯಾವ ಸಂದರ್ಭ ಯರ‍್ಯಾರನ್ನು ಯಾವುದು ಬೇಸರ ಮೂಡಿಸತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಂಬಿಕೆ, ಸಮಸ್ಯೆಯ ಬಗ್ಗೆ ನಿಮ್ಮ ಅನುಭವ, ಜೀವನ ಪದ್ಧತಿ ಬೇಸರವನ್ನು ನಿರ್ಧರಿಸುತ್ತದೆ. ದುಃಖಕ್ಕೊಳಗಾದವರಲ್ಲಿ ಕೆಲವರು ಒಂದು ವಾರದಲ್ಲಿ ನೋವಿನಿಂದ ಹೊರಬಂದರೆ ಇನ್ನು ಕೆಲವರು ತಿಂಗಳುಗಟ್ಟಲೆ ಆ ನೋವಿನಲ್ಲಿಯೇ ನರಳುತ್ತಿರುತ್ತಾರೆ. ಎಲ್ಲವೂ ಪ್ರಕೃತಿ ನಿಯಮ. ಇಂತಹ ನಿಯಮಗಳನ್ನುಅನಿವಾರ್ಯವಾಗಿ ಜೀವನದಲ್ಲಿ ಒಪ್ಪಿಕೊಳ್ಳಲೇಬೇಕು.

  • ನೋವನ್ನು ಮರೆಯವುದಕ್ಕಾಗಿ ಬೇಸರದ ಕಾರಣವನ್ನು ಕಡೆಗಣಿಸುತ್ತಾ ಬನ್ನಿ. ಶಾಶ್ವತವಾಗಿ ಆ ನೋವನ್ನು ಮರೆಯಲು ಪ್ರಯತ್ನಿಸುವಿರಾದರೆ, ಅನುಭವಿಸಿದ ನೋವನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಿ. ಖಂಡಿತಾ ನಿಮ್ಮ ನೋವಿನ ಭಾರ ಇಳಿದುಬಿಡುತ್ತದೆ.
  • ಒಮ್ಮೆ ಅತ್ತು ಬಿಡಿ. ಇದರಿಂದ ಮನಸ್ಸು ಹಗುರಾಗುತ್ತದೆ. ಬೇಸರವನ್ನು ಕಳೆಯುವುದಕ್ಕೆ ಇಷ್ಟೇ ಸಮಯ ಬೇಕೆಂದೇನೂ ಇಲ್ಲ. ಅವರವರ ಸಾಮರ್ಥ್ಯವನ್ನವಲಂಬಿಸಿರುತ್ತದೆ. ಕಣ್ಣೀರು ಹಾಕುವುದರ ಮೂಲಕ ಬೇಸರವನ್ನು ಹೊರಹಾಕಬಹುದು. ನೀವೇ ಗಮನಿಸಿರಬಹುದು ಅತ್ತು ಮನಸ್ಸು ಹಗುರ ಮಾಡಿಕೊಳ್ಳಿ'ಎಂದು ಹೇಳುತ್ತಾರೆ. ಅರ್ಥಾತ್ ಅಳುವುದರ ಮೂಲಕ ತಲೆಯ ಭಾರವೆಲ್ಲಾ ಇಳಿದು ಹಗುರಾಗುತ್ತದೆ. ದ.ರಾ. ಬೇಂದ್ರೆಯವರು ತನ್ನ ಮಗನನ್ನು ಕಳೆದುಕೊಂಡಾಗ, ದುಃಖದಲ್ಲಿದ್ದ ಪತ್ನಿಗೆ ಹೇಳುತ್ತಾರೆ. ‘ಅತ್ತು ಬಿಡು ಹೊನಲು ಬರಲಿ, ನಕ್ಕ್ಯಾಕ ಮರೆಸುತೀ ದುಃಖ’. ನಿಜಕ್ಕೂ ಹೌದು. ದುಃಖವನ್ನು ಹಿಡಿದಿಟ್ಟುಕೊಂಡಷ್ಟೂ ಮನಸ್ಸು ಭಾರವಾಗಿರುತ್ತದೆ.
  • ದುಃಖಕ್ಕೆ ಒಳಗಾದವರಿಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ. ಕೆಲವರು ತಾವು ನಂಬಿದ ದೈವವನ್ನೇ ಪ್ರಶ್ನೆ ಮಾಡುತ್ತಾರೆ, ಓ ದೇವರೇ ಹೀಗೇಕೆ ಮಾಡಿದೆ ಎಂದು. ಖಂಡಿತಾ ಅವನಲ್ಲ. ಅದಕ್ಕೆ ನಾವೇ ಕಾರಣಕರ್ತರು.
  • ಕಾರಣವಿಲ್ಲದೆ ಏನನ್ನಾದರೂ ಕಳೆದುಕೊಂಡಿರುವಿರಾದರೆ ಸಿಟ್ಟು ಬರುವುದು ಸಹಜ. ಕಳೆದುಕೊಂಡುದುದಕ್ಕೆ ಬೇರೆಯವರ ಮೇಲೆ ಸಿಟ್ಟು ವ್ಯಕ್ತಪಡಿಸದಿರಿ.
  • ಜೀವನದ ಬಗ್ಗೆ ಹತಾಶೆ ಮೂಡುವುದು ಸಹಜ. ಹಾಗಂತ ಇಡೀ ಪ್ರಪಂಚವೇನೂ ಬಿದ್ದು ಹೋಗುವುದಿಲ್ಲ. ನೋವು, ಅಪಮಾನ, ನಿಂದನೆಗಳಿಗೆ ಕೆಲವೊಮ್ಮೆ ನಾವೇ ಕಾರಣ ಆಗಿರುತ್ತೇವೆ. ನಮ್ಮ ವರ್ತನೆಗಳೇ ಕಾರಣ ಆಗಿರುತ್ತವೆ. ಎಲ್ಲಿಯವರೆಗೆ ನಮ್ಮ ತಪ್ಪು ಇರುವುದಿಲ್ಲವೋ ಅಲ್ಲಿಯವರೆಗೆ ನಿಶ್ಚಿಂತೆಯಿ0ದ ಬದುಕಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles