ಯಶೋದೆಯ ಮಡಿಲಲ್ಲಿ ನಂದಕಿಶೋರನ ಲೀಲೆ

ಶ್ರಾವಣ ಬಹುಳ ಅಷ್ಟಮಿಯಂದು ಬರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿಯೇ ಅತ್ಯಂತ ವಿಶಿಷ್ಟವಾದ ಹಬ್ಬ. ಹಿರಿಯರಿಗೆ ಮಾತ್ರವಲ್ಲ. ಇದು ಪುಟಾಣಿ ಮಕ್ಕಳ ಹಬ್ಬ. ತೊಟ್ಟಿಲಲ್ಲಿ ಮಲಗಿರುವ ಮುದ್ದು ಕೃಷ್ಣನನ್ನು ತೂಗುವ ಸಂಭ್ರಮದ ಜತೆಗೆ ತಮ್ಮ ಮನೆಯಲ್ಲಿಯೇ ಅಂಬೆಗಾಲಿಡುವ ಪುಟ್ಟ ಮಗುವಿಗೆ ಕೃಷ್ಣವೇಷ ತೊಡಿಸಿ, ತಾವೇ ಯಶೋದೆಯಾಗಿ, ಮಕ್ಕಳಲ್ಲಿ ಕೃಷ್ಣನನ್ನು ನೋಡುವ ಸಂಭ್ರಮ ಅಮ್ಮಂದಿರಿಗೆ.

ಶ್ರೀಕೃಷ್ಣ ಹುಟ್ಟಿದ್ದು ದೇವಕೀ ಗರ್ಭದಲ್ಲಿ, ಬೆಳೆದದ್ದು ಯಶೋದೆಯ ಮಡಿಲಲ್ಲಿ. ಇಂದಿಗೂ ಕೃಷ್ಣನ ತಾಯಿಯಾಗಿ ಹೆಚ್ಚು ಗುರುತಿಸಲ್ಪಡುವವಳು ಯಶೋದೆ. ಶ್ರೀಕೃಷ್ಣನ ಬಾಲಲೀಲೆಗಳೆಲ್ಲವನ್ನೂ ಈ ಮಹಾತಾಯಿ ಯಶೋದೆ ಸೈರಿಸಿಕೊಂಡು ಬಂದವಳು! ಇಂಥ ಪೋಕರಿ ಪೋರನನ್ನು, ಜಗದೋದ್ದಾರನನ್ನು ಸಹಿಸಿಕೊಳ್ಳುವುದೆಂದರೆ ಅದೇನು ಸುಲಭದ ಮಾತಾಗಿತ್ತೇ. ಯಾಕೆಂದರೆ ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ.


 ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮಪುರುಷ ಶ್ರೀಕೃಷ್ಣ. ಶ್ರಾವಣ ಮಾಸದ ಶುಕ್ಲಪಕ್ಷದ ಅಷ್ಟಮಿಯಂದು ಮಥುರೆಯ ಧೂರ್ತ ದೊರೆ ಕಂಸನ ಸೆರೆಮನೆಯಲ್ಲಿ ದೇವಕಿ-ವಸುದೇವರ ಎಂಟನೇ ಮಗುವಾಗಿ ಜನಿಸಿದ ಕೃಷ್ಣ. ಚತುರ್ಬಾಹುಗಳನ್ನುಳ್ಳವನಾಗಿ, ಒಂದೊ0ದು ಕೈಯಲ್ಲೂ ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದು, ಕೊರಳಲ್ಲಿ ಕೌಸ್ತುಭ ಹಾರ ಧರಿಸಿ, ಹಳದಿ ವಸ್ತ್ರ ತೊಟ್ಟು, ವಜ್ರಾಭರಣಗಳಿಂದ ಅಲಂಕೃತವಾಗಿದ್ದ ಕಿರೀಟಧಾರಿಯಾಗಿ, ನೀಳ ಕೇಶರಾಶಿಯುಳ್ಳವನಾಗಿ, ಅಮೂಲ್ಯ ತೋಳಬಂದಿ, ಕಡಗ, ಕರ್ಣಕುಂಡಲಗಳೇ ಮೊದಲಾದ ಆಭರಣಗಳನ್ನು ಧರಿಸಿ, ಗಗನದಲ್ಲಿ ಝಗಮಗಿಸುವ ಕಾರ್ಮೋಡದಂತೆ ಫಳಫಳಿಸುತ್ತಾ ಭೂಮಿಗೆ ಬಂದ ಶ್ರೀಕೃಷ್ಣ.


ನವಜಾತ ಶಿಶುವಿನ ಈ ದಿವ್ಯ ರೂಪ ಕಂಡು ತಂದೆ ವಸುದೇವ ಆಶ್ಚರ್ಯಚಕಿತನಾದ. ತಾಯಿಗರ್ಭದಿಂದ ಆಗ ತಾನೆ ಹೊರಬಂದ ಮಗುವಿಗೆ ಇಷ್ಟೊಂದು ಸಿಂಗಾರವೇ? ವಸುದೇವ ದಂಗಾದ. ಶ್ರೀಕೃಷ್ಣನೇ ತಮ್ಮ ಮಗುವಾಗಿ ಜನಿಸಿದ್ದಾನೆಂಬುದು ನಿಧಾನವಾಗಿ ಆತನ ಅರಿವಿಗೆ ಬಂತು.

‘ನಾನೊಬ್ಬ ಐಹಿಕ ಪ್ರಕೃತಿಯಿಂದಲೂ, ಕಂಸನಿ0ದಲೂ ಬಂಧಿತನಾದ ಸಾಧಾರಣ ಮನುಷ್ಯ. ಅಂಥದ್ದರಲ್ಲಿ ಸಾಕ್ಷಾತ್ ಶ್ರೀಕೃಷ್ಣ ಅಥವಾ ವಿಷ್ಣುವೇ ತನ್ನ ಮೂಲ ರೂಪದಲ್ಲಿ ತನ್ನ ಮಡದಿ ದೇವಕಿಯ ಒಡಲಲ್ಲಿ ಜನಿಸುವುದೆಂದರೆ ಸಾಮಾನ್ಯವಾದ ಮಾತೆ!’ ಎಂದು ಆತ ಮುಗ್ಧನಂತೆ ಅಚ್ಚರಿಪಟ್ಟ.

ಆ ಮಗುವೇ ಮುಂದೆ ಶ್ರೀಕೃಷ್ಣನಾಗಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಧರ್ಮ ಸಂರಕ್ಷಣೆಗೆ ನಿಲ್ಲುತ್ತಾನೆ. ಕುರುಕ್ಷೇತ್ರ ರಣಾಂಗಣದಲ್ಲಿ ಅರ್ಜುನನನ್ನು ನೆಪವಾಗಿಟ್ಟುಕೊಂಡು ಇಡೀ ಜಗತ್ತಿಗೆ ಭಗವದ್ಗೀತೆಯನ್ನು ಬೋ ಧಿಸಿದ. ಬದುಕಿನ ನಿಜವಾದ ಮೂಲ, ಉದ್ದೇಶ, ಅರ್ಥವನ್ನು ವಿವರಿಸಿದ. ಎಲ್ಲರ ಮನದಲ್ಲಿ ಕವಿದಿದ್ದ ಅಂಧಕಾರವನ್ನು ಹೊಡೆದೋಡಿಸಿದ ಶ್ರೀಕೃಷ್ಣನ ಬಾಲಲೇಲೆಗಳನ್ನು ನೋಡುವುದೇ ಚಂದ.

Related Articles

ಪ್ರತಿಕ್ರಿಯೆ ನೀಡಿ

Latest Articles