ರಕ್ತ ಸಂಬಂಧವಿಲ್ಲದ ಬಂಧವಿದು

ನೀನಾರೋ ಎನೋ ನನಗಂತು ತಿಳಿಯದು
ಮಿಡಿಯುತಿದೆ ಇಂದೇಕೋ ನನ್ನ ಮನವಿದು
ತೊಳಲಾಡುತಿದೆ ಯಾಕೋ ಎನ್ನ ಹೃದಯವಿದು
ಕಣ್ಣೀರ ಧಾರೆ ಕಿಂಚಿತ್ತೂ ನಿಲ್ಲಲೊಲ್ಲದು||

ತಂದೆ ಅಲ್ಲ ಮಗನಲ್ಲ ಸಹೋದರನಂತೂ ಅಲ್ಲ
ಬಹುದೂರ ಇದ್ದರೂ ಮನದಲ್ಲೇ ಇರುವೆಯಲ್ಲ
ಕರುಳೇ ಕಿತ್ತುಬಂದ ಹಾಗೆ ಆಗುತಿದೆಯಲ್ಲ
ಮೂರು ದಿನವಾದರೂ ನೆನಪು ಸರಿಯುತಿಲ್ಲ||

ಜೊತೆಗಾರ ನೀನಲ್ಲ ಜೊತೆಯೂ ಇರುವುದಿಲ್ಲ
 ಬಳಿಯೇ ಸುಳಿದಾಡುವಂತೆ ಭಾಸವಾಗುತಿದೆಯಲ್ಲ
ಕಣ್ ಮುಚ್ಚಿದರೂ ಮುದ್ದು ನಗು ಕಾಣುತಿದೆಯಲ್ಲ
ಮುಗ್ದ ನಗು ಮರೆಯಾಯಿತೆಂದು ನಂಬಲಾಗುತ್ತಿಲ್ಲ||


ಎದೆಯಲ್ಲಿ ಇಷ್ಟೊಂದು ಕಳವಳ ಯಾವತ್ತೂ ಆಗಿಲ್ಲ
ನೀನು ಯಾರೋ ನನಗೆ ಉತ್ತರ ಸಿಗಲೇ ಇಲ್ಲ
ಸಾವುಗಳ ಸರಮಾಲೆ ಕಂಡರೂ ಇಂಥನೋವಾಗಿಲ್ಲ
ಹೇಳಿದಷ್ಟು ದುಃಖ ಉಮ್ಮಳಿಸಿ ಬರುತಿದೆಯಲ್ಲ||

ಕನ್ನಡ ನಾಡಿನ ಪ್ರತಿ ಮನೆಯ ಪ್ರೀತಿ ನೀನು
ಸುತನನ್ನೇ ಕಳೆದುಕೊಂಡಂತಾಗಿದೆ ಇಂದು
ಮನೆಮನೆಯಲ್ಲಿ ಸೂತಕದಛಾಯೆ ಆವರಿಸಿದೆ ಇಂದು
ದಯಮಾಡಿ ಹೇಳು ನೀ ಬರುವೆ ಎಂದು?|| 

ಕಂಪಿಸುತಿವೆ ಕೈಗಳು ಕವಿತೆಯನು ಬರೆಯಲು
ಪದಗಳೇ ಸಾಲುತ್ತಿಲ್ಲ ಯುವರತ್ನನ ವರ್ಣಿಸಲು
ಊಹಿಸಿಕೊಳ್ಳಲಾಗುತಿಲ್ಲ ಮಣ್ಣ ಸೇರಿದ ಮೇಲೂ
ವರ್ಷಗಳೇ ಬೇಕೆನೋ ನಾ ನಿನ್ನ ಮರೆಯಲು||

ಬೇಡವಾಯಿತೇ ತಾಯಿ ರಾಜ್ಯೋತ್ಸವದ ಸಂಭ್ರಮ
ಕನ್ನಡಿಗರ ಹೃದಯ ಒಡೆದು ಹೋದವಿಂದು
ಮರಳಿ ಕಳಿಸಮ್ಮ ನಮ್ಮ ಕನ್ನಡದ ಕಂದನ
ನಿಲ್ಲುತಿಲ್ಲ ಅಭಿಮಾನಿಗಳ ಅಳು ಆಕ್ರಂದನ||

ಕನ್ನಡಾಂಬೆಯ ಸಂಸ್ಕೃತಿಯೇ ಇಂಥಹದು 
ಮತ್ತೊಬ್ಬರ ನೋವಿಗೆ  ಮಿಡಿಯುವಂಥಹದು
ಕನ್ನಡಿಗರ ಅಭಿಮಾನವೇ ಮೆಚ್ಚುವಂಥಹದು
ನೋಡಿರಿ ರಕ್ತ ಸಂಬಂಧ ವಿಲ್ಲದ ಬಂಧವಿದು||

 *ರಚನೆ: ಶ್ರೀಮತಿ ಜ್ಯೋತಿ ಕೋಟಗಿ,

ಶಿಕ್ಷಕಿ, ಸ ಮಾ ಪ್ರಾ ಶಾಲೆ ತಲ್ಲೂರ.

Related Articles

ಪ್ರತಿಕ್ರಿಯೆ ನೀಡಿ

Latest Articles