ಹೊಸಗುಂದ ಲಕ್ಷದೀಪೋತ್ಸವ ಸಂಪನ್ನ

ಸಾಗರ: ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಹೊಸಗುಂದ ಉತ್ಸವ ಪ್ರಯುಕ್ತ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲಕ್ಷದೀಪೋತ್ಸವ ಶೃಂಗೇರಿ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ನೆರವೇರಿತು.

ಹೊಸಗುಂದ  ದೇವಾಲಯದ ಆವರಣದಲ್ಲಿ ಸಾಲು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದ್ದ ದೀಪಗಳಿಗೆ ದೇವಾಲಯಕ್ಕೆ ಬಂದಿರುವ ಭಕ್ತರು ದೀಪ ಬೆಳಗಿಸಿ ಧನ್ಯರಾದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು, ಇಂದಿರಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಡೀ ದೇವಾಲಯದ ಆವರಣ, ಗರ್ಭಗುಡಿ, ಕಲ್ಯಾಣಿ, ವಿಶೇಷ ಮರಗಳ ಸುತ್ತಲೂ ದೀಪಗಳನ್ನು ಸುಂದರವಾಗಿ ಕಾಣುವಂತೆ ಜೋಡಿಸಿದ್ದರು.

ದೀಪೋತ್ಸವ ಚಾಲನೆ ನೀಡಿದ ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರಿಶಂಕರ್ ಮಾತನಾಡಿ, ಲೋಕಲ್ಯಾಣಾರ್ಥವಾಗಿ ಹೊಸಗುಂದಲ್ಲಿ ಲಕ್ಷ ದೀಪೋತ್ಸವ ನಡೆಸುತ್ತಿದ್ದು, ಹೊಸಗುಂದ ಉತ್ಸವದಲ್ಲಿ ಜಾನಪದ ಸ್ಪರ್ಧೆ, ಸಂಗೀತ, ನೃತ್ಯ, ಧಾರ್ಮಿಕ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದಿವೆ. ಅಕಾಲಿಕ ಮಳೆಯು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತೊಂದರೆ ಉಂಟುಮಾಡಿದೆ, ಇತ್ತೀಚೆಗಷ್ಟೇ ಜನರು ಕರೊನಾ ಸಂಕಷ್ಟದಿಂದ ಹೊರಬರುತ್ತಿದ್ದಾರೆ. ಜನರು ದೀಪೋತ್ಸವಗಳಲ್ಲಿ ಶ್ರದ್ಧೆ ಭಕ್ತಿಯಿಂದ ತೊಡಗಿಸಿಕೊಂಡು ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲೆಡೆ ನಡೆಸುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ಹೊಸಗುಂದ ಇನ್ನೂ ಸಮೃದ್ಧವಾಗಿ ಬೆಳಗಲಿ ಎಂದು ಆಶಿಸಿದರು.

ಹಿರಿಯ ಜಾನಪದ ಕಲಾವಿದ ಬಿ.ಟಾಕಪ್ಪ ಮಾತನಾಡಿ, ಸನಾತನ ಕಾಲದಿಂದಲೂ ಕಾರ್ತಿಕ ದೀಪೋತ್ಸವಗಳಿಗೆ ತನ್ನದೇ ಆದ ಮಹತ್ವವಿದೆ. ಎಲ್ಲ ಗ್ರಾಮಗಳಲ್ಲಿಯು ದೇವಾನುದೇವತೆಗಳ ದೇವಾಲಯಗಳಲ್ಲಿ ಹಣತೆ ದೀಪ ಹಚ್ಚಿ ಬೆಳಗಿಸುತ್ತಾರೆ ಮತ್ತು ಇಡೀ ಊರಿಗೆ ಊರೇ ಉತ್ಸವ ನಡೆಸುತ್ತಾರೆ ಎಂದು ಹೇಳಿದರು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದರು.

ವೈವಿಧ್ಯ ಕಾರ್ಯಕ್ರಮ

ಸಾಗರದ ತೇಜಸ್ವಿ ತಬಲಾ ತಂಡದಿಂದ ವಾದ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು ಹಾಗು ಲಕ್ಷದೀಪೋತ್ಸವದ ನಂತರ ಪ್ರದ್ಯುಮ್ನ ಮತ್ತು ತಂಡದವರಿಂದ ಶ್ರೀ ದುರ್ಗಾದೇವಿ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. 

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles