ಗುರು ಮಧ್ವರಾಯರಿಗೆ ನಮನ

ನವಮಿ ಬಂದಿದೆ ಮಧ್ವ ನವಮಿ ಬಂದಿದೆ
ಭಾವ ಶುದ್ಧ ಭಕ್ತಿ ಮನದಿ ತುಂಬು ಎಂದಿದೆ
ಭವ ರೋಗವ ಕಳೆವ ಗುರುಗೆ ನಮಿಸು ಎಂದಿದೆ
ಭುವಿಗಿಳಿದ ವಾಯುದೇವನ ಸ್ಮರಿಸು ಎಂದಿದೆ

ಮಧ್ವರಾಯ ಅವತರಿಸಿದ ಶ್ರೇಷ್ಠ ದಿನವಿದು
ಸದ್ವೈಶ್ಣವ ಮತಕೆ ಕಾರಣವಾದ ದಿನವಿದು
ಆಧ್ಯಾತ್ಮಿಕ ಸೌಧ ಕಟ್ಟಿದ ಸರ್ವಜ್ಞರಾಯರು
ಬುಧಜನರ ಗುಮಾನಿಗಳ ಪರಿಹರಿಸಿದರು

ಉತ್ತಮ ಪಾಜಕದಿ ಮಧ್ಯಗೇಹರ ಮನೆಲಿ
ಪುತ್ರರಾಗಿ ಜನಿಸಿ ವಾಸುದೇವನಾಮದಿ
ಪ್ರಸ್ಥಾನತ್ರಯಗಳಿಗೆ ಭಾಷ್ಯ ರಚಿಸುತ
ಸ್ವಸ್ಥಾನದ ಮಹಿಮೆಗಳ ಇಲ್ಲಿ ತೋರುತ

ಆನಂದತೀರ್ಥರೆನಿಸಿ ಭಕ್ತಿಯ ಸುಧೆಯಲಿ
ಆನಂದಮಯ ಕೃಷ್ಣನ ಪ್ರತಿಷ್ಠಾಪಿಸಿ
ಅನಂತಾಸನದವನ ಉಡುಪಿಲಿ ನಿಲ್ಲಿಸಿ
ಅನಂತಾನಂತ ಭಕ್ತರ್ಗೆ ದಾರಿ ತೋರಿಸಿ

ವಾಯುದೇವರಿವರು ಹರಿಯ ತೊಡೆಯಲಿರುವರು
ಭಯವೆ ಇರದ ದಾಸಾನುದಾಸ ಆಂಜನೇಯರು
ಜಯಭೇರಿ ಹೊಡೆದ ಬಲಭೀಮದೇವರು
ದಯಾಮಯಿಯಾದ ಗುರು ಮಧ್ವರಾಯರು

ಅರಿಯುವ ಅವರಿತ್ತ ಶ್ರೇಷ್ಠ ಭಕ್ತಿ ಮಾರ್ಗವ
ಸರಿಸುವ ಮನದಿಂದ ಆಸೆ ‌ದುಷ್ಟಬುದ್ಧಿಯ
ಇರಿಸುವ ಮನದಲ್ಲಿ  ಸಿರಿಹಿರಿಯ ಚರಣವ
ಪರಿಪೂರ್ಣ ಮಧ್ವಗುರುಗೆ ಬಾಗಿ ನಮಿಸುವ

*ರೂಪಶ್ರೀ ಶಶಿಕಾಂತ್

Related Articles

ಪ್ರತಿಕ್ರಿಯೆ ನೀಡಿ

Latest Articles