ಭಾರತ ಹುಣ್ಣಿಮೆ

ಹುಣ್ಣಿಮೆ ಬಂದಿದೆ ಭಾರತ  ಹುಣ್ಣಿಮೆ ಬಂದಿದೆ
ಬಣ್ಣಿಸಲಾಗದ ಸಂತಸ ಹೊತ್ತು ತಂದಿದೆ

ಮನೆದೇವರ ಪೂಜೆ ಜಾತ್ರೆ ಸಂತಸ ತುಂಬಿದೆ
ಮನೆ ಮನೆಯಲು ಪೂಜೆ ಹೂರಣ ಹಬ್ಬ ನಡೆದಿದೆ

ಸವದತ್ತಿಯತ್ತ ಭಕ್ತರ ದಿಬ್ಬಣ ಹೊರಟಿದೆ
ನವ ಉಲ್ಲಾಸದಿ ಉಧೋ ಉಧೋ ಎಂದಿದೆ
ಭಾವ ಶುದ್ಧ ಭಕ್ತಿಲಿ ಭಂಡಾರ ಎರಚುತ
ಯಾವ ನೋವು ಇರದ ಎಲ್ಲಮ್ಮನ ಸ್ಮರಿಸಿದೆ

ಮೈಲಾರಕೆ ಜನರ ದಿಂಡು ಸಾಗರದಂತೆ ಬಂದಿದೆ
ಮೈಲಾರಲಿಂಗನಿಗೆ ಏಳು ಕೋಟಿ ಎನುತಿದೆ
ಅಲೌಕಿಕ ಬಿಲ್ಲನೇರುವ ಪೂಜಾರಿಯ ಕಂಡಿದೆ
ಉಲಿಯುವ ಕಾರ್ಣೀಕ ಕೇಳಬೇಕೆಂದು ಕಾದಿದೆ

ಕುದೂರಿನ ರಥೋತ್ಸವಕ್ಕೆ ಬಂಡಿಗಳಲಿ ಜನ ಬರುತಿದೆ
ಕುದೂರಿನ ಲಕ್ಷ್ಮೀ ದೇವಿಯ ಕಂಡು ಸುಖಿಸಿದೆ
ಸದಾನಂದ ಅಥಣಿ ವೆಂಕಟೇಶ್ವರನಿಗೆ ಬಾಗಿದೆ
ಹೃದಾನಂದ ನೀಡುವ ರಥೋತ್ಸವವ ನೋಡಿದೆ

ನದಿಯ ಸ್ನಾನಕ್ಕಾಗಿ ಗುಂಪುಗಳು ನಡೆದಿವೆ
ಮುದದಿ ದಾನ ಮೊರದ ಬಾಗಿಣ ನೀಡುತ್ತಿದೆ
ಸದಮಳ ಭಕ್ತಿಗೆ ಒಲಿವ ದೇವಗೆ ನಮಿಸಿದೆ
ಸದಾನಂದ ಸಿರಿಹರಿಗೆ ಅರ್ಪಿತವೆನುತಿದೆ.

*ರೂಪಶ್ರೀ ಶಶಿಕಾಂತ್

Related Articles

ಪ್ರತಿಕ್ರಿಯೆ ನೀಡಿ

Latest Articles