ದೇವರಲ್ಲಿಜ್ಞಾನವನ್ನು ಬೇಡಿರಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು

ತಿರುಮಲ: ದೇವರಲ್ಲಿ ನಾವು ಬೇಡುವುದಾದರೆ ದೊಡ್ಡ ದೊಡ್ಡ ಸಂಗತಿಗಳನ್ನು ಮಾತ್ರ ಬೇಡಬೇಕು ಎಂದು ಶ್ರೀಮನ್ ಮಧ್ವಾಚಾರ್ಯ ಮಹಾ ಪರಂಪರೆಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಗೌರವ ಸನ್ಮಾನ ಸ್ವೀಕರಿಸಿದ ನಂತರ ಅವರು ಆಶೀರ್ವಚನ ನೀಡಿದರು.
ದೇವರು ಸರ್ವಶಕ್ತ. ಆತನಿಗೆ ಸಹಸ್ರ ತಲೆಗಳು, ಸಹಸ್ರ ಕಣ್ಣುಗಳು ಇರುತ್ತವೆ ಎಂದು ವೇದೋಪನಿಷತ್ತುಗಳೇ ಸಾದೃಶ್ಯ ನೀಡಿವೆ. ಹಾಗಾಗಿ ಆತ ಜಗತ್ತಿನ ಎಲ್ಲರ ಆಗು ಹೋಗುಗಳನ್ನು ನಿರ್ಣಯಿಸುತ್ತಾನೆ. ಅಂಥವನ ಬಳಿಯಲ್ಲಿ ನಾವು ಚಿಕ್ಕಪುಟ್ಟ ಬೇಡಿಕೆಗಳನ್ನು ಇಟ್ಟರೆ ಅದು ನಮ್ಮ ವ್ಯಕ್ತಿತ್ವಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದರು.
ಬೇಡುವುದು ನಮ್ಮ ಹಕ್ಕು. ಹಾಗಾಗಿ ಲೋಕದ ಪಾಲಕನಾದ ತಿರುಪತಿ ತಿಮ್ಮಪ್ಪನಲ್ಲಿ ಜ್ಞಾನ ಮತ್ತು ಮೋಕ್ಷವನ್ನು ಕೇಳೋಣ. ಮಾನವ ಜನ್ಮ ದೊರಕಿರುವಾಗ ಇದಕ್ಕಿಂತ ದೊಡ್ಡ ಬೇಡಿಕೆ ಇನ್ನಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದರು.
ಆಚಾರ್ಯ ಮಧ್ವರ ಪರಂಪರೆಯ ಮೇರು ಪಂಕ್ತಿಯ ಯತಿಗಳಾದ ಶ್ರೀ ವ್ಯಾಸರಾಜರು ತಿರುಪತಿ ತಿಮ್ಮಪ್ಪನನ್ನು ಅನನ್ಯವಾಗಿ ಆರಾಧಿಸಿದರು. ಇಲ್ಲಿಯೇ ನೆಲೆ ನಿಂತು ಪೂಜಾ ಕೈಂಕರ್ಯ ಸಮರ್ಪಿಸಿದರು. ಮತ್ತೆ ಪೂಜಾ ಹಕ್ಕುಗಳನ್ನು ಇಲ್ಲಿನ ಅರ್ಚಕ ವೃಂದಕ್ಕೆ ಬಿಟ್ಟುಕೊಟ್ಟು ಆದರ್ಶ ಮೆರೆದರು. ಹಾಗಾಗಿ ಮಾಧ್ವ ಪೀಠಾಧಿಪತಿಗಳಿಗೆ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಗೌರವಾದರ ಇಂದಿಗೂ ಲಭ್ಯವಿದೆ ಎಂದರು.
ನಾವಾಗಿಯೇ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡು ತಿಮ್ಮಪ್ಪನ ದರ್ಶನಕ್ಕೆ ಬರುವುದು ಒಂದು ಭಾಗ. ಆದರೆ ಮಾಧ್ವ ಪೀಠಾಧಿಪತಿಗಳನ್ನು ತಿಮ್ಮಪ್ಪನೇ ಕರೆಸಿಕೊಳ್ಳುತ್ತಾನೆ. ಇದಕ್ಕಿಂತ ಬೇರೆ ಭಾಗ್ಯ ಇನ್ನೇನಿದೆ ಎಂದರು. ಮಹಾಭಾಗ್ಯ ನಮ್ಮ ಬಳಿಗೇ ಬಂದಾಗ ನಾವು ಮಹೋನ್ನತವಾದದ್ದನ್ನೇ ದೇವರಲ್ಲಿ ಪಡೆದುಕೊಂಡು ಮರಳಬೇಕು ಎಂದವರು ಆಶಿಸಿದರು.
ತಿಮ್ಮಪ್ಪ ಕಾಂಚನಬ್ರಹ್ಮ. ನಮ್ಮ ಉಡುಪಿ ಕೃಷ್ಣ ಅನ್ನಬ್ರಹ್ಮ. ತಿರುಪತಿಯ ಒಂದು ಅಂಶವೇ ನಮ್ಮ ಆರಾಧ್ಯದೈವ ಉಡುಪಿ ಕೃಷ್ಣನಲ್ಲೂ ಇದೆ. ಆತನ ಸನ್ನಿಧಿಯವರಾದ ನಮಗೆ ತಿಮ್ಮಪ್ಪನೇ ಕರೆಸಿಕೊಂಡಿರುವುದು ಮಾಧ್ವ ಪೀಠಗಳಿಗೆ ಹೆಮ್ಮೆ ಮತ್ತು ಮಹಾನುಗ್ರಹ ಎಂದು ಭಾವಿಸಿz್ದೆÃವೆ ಎಂದರು.
ವೆAಕಟೇಶ್ವರನಲ್ಲಿ ಏನು ಬೇಡಬೇಕು ಎಂಬುದಕ್ಕೆ ಸೋಂದಾ ಶ್ರೀ ವಾದಿರಾಜರು ಎಲ್ಲರಿಗೂ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಸಿರಿ ನಿವಾಸನಲ್ಲಿ ಜ್ಞಾನವನ್ನು ಬೇಡಿದರೆ ಅದರ ಹಿಂದೆ ಎಲ್ಲ (ಪಾರಮಾರ್ಥಿಕ ಮತ್ತು ಲೌಕಿಕ) ಸುಖ ಭೋಗಗಳೂ ಹಿಂಬಾಲಿಸಿ ಬರುತ್ತವೆ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ತಿರುಪತಿ, ತಿರುಮಲದ ಯಾತ್ರೆ ಸಾರ್ಥಕ್ಯ ಪಡೆಯುತ್ತದೆ ಎಂದು ಶ್ರೀಗಳು ಭಕ್ತಗಣಕ್ಕೆ ಸಲಹೆ ನೀಡಿದರು.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಟಿಟಿಡಿ ವತಿಯಿಂದ ಛತ್ರ, ಚಾಮರ ಮತ್ತು ಮಂಗಳವಾದ್ಯ ಸಮೇತ ಸ್ವಾಗತ ನೀಡಿ, ತಿಮ್ಮಪ್ಪನ ದರುಶನ ಮಾಡಿಸಿ, ಶೇಷ ವಸ್ತç ಸಮರ್ಪಿಸಿ ಗೌರವಿಸಲಾಯಿತು.
ಈ ಸಂದರ್ಭ ಶ್ರೀಮಠದ ಸುಗುಣಮಲಾ ಸಂಪಾದಕ ಮಹಿತೋಷ ಆಚಾರ್ಯ, ಪುತ್ತಿಗೆ ಮಠದ ಪ್ರಮುಖರಾದ ರತೀಶ ಆಚಾರ್ಯ, ನಾಗರಾಜಾಚಾರ್ಯ ಇತರರು ಹಾಜರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles