ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ಕೀಳುವುದೇಕೆ ?

ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನಿಶ್ಚಿತಾರ್ಥ, ಮದುವೆ, ಪೂಜೆ, ವ್ರತ, ಶುಭ ಸಮಾರಂಭಗಳಲ್ಲಿ ತಾಂಬೂಲ ಇರಲೇಬೇಕು. ಹಿಂದೆ ಯುದ್ಧದ ಸಂದರ್ಭದಲ್ಲಿ ರಣ ವೀಳ್ಯ ನೀಡುವಲ್ಲಿ ವೀಳ್ಯದೆಲೆ ಬಳಕೆಯಾಗುತ್ತಿತ್ತು ಎಂದು ಉಲ್ಲೇಖವಿದೆ. ಊಟವಾದ ಬಳಿಕ ಎಲೆ-ಅಡಿಕೆ ತಿನ್ನಬೇಕೆಂಬ ಸಂಪ್ರದಾಯವಿದೆ. ಹೀಗಾಗೇ ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಡಿಯಲು ನೀರು ಕೊಟ್ಟು, ಊಟ ಬಡಿಸಿ ನಂತರ ತಾಂಬೂಲ ನೀಡುವ ಪದ್ಧತಿ ಇಂದಿಗೂ ಕೆಲವೊಂದು ಕಡೆ ಆಚರಣೆಯಲ್ಲಿದೆ. ನಮ್ಮ ಪೂರ್ವಜರು ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿರಲಿಲ್ಲ. ಬದಲಾಗಿ ತಾಂಬೂಲ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗುತ್ತಿತ್ತು. ಹೀಗೆ ಆಮಂತ್ರಿಸುವ ಪದ್ಧತಿ ಇಂದಿಗೂ ನಮ್ಮ ಸಂಪ್ರದಾಯದಲ್ಲಿ ಕಾಣಬಹುದು.

ವೀಳ್ಯದೆಲೆ ಅಡಿಕೆ ಜಗಿಯುವುದನ್ನೇ ಒಂದು ಪ್ರಮುಖ ಹವ್ಯಾಸವನ್ನಾಗಿಸಿಕೊಂಡವರು ಸಾಕಷ್ಟು ಜನರಿದ್ದಾರೆ. ಹೀಗೆ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವೀಳ್ಯದೆಲೆಯು ಬಳಕೆಯಾಗುತ್ತದೆ. ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ತರವಾದುದು.

ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ಕೀಳುವುದೇಕೆ ?
ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ, ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ, ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ, ವೀಳ್ಯದೆಲೆಯ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ, ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ವಾಸ, ವೀಳ್ಯದೆಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ, ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸವಿರುತ್ತದೆ. ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳಲಾಗುತ್ತದೆ. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ. ಆದುದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ. ಈ ಎಲ್ಲಾ ದೇವರುಗಳು ಇರುವುದರಿಂದಲೇ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟೊಂದು ಮಹತ್ವವಿದೆ.

ತಾಂಬೂಲ ನೀಡುವ ಬಗೆ ಹೇಗೆ ?

ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಲ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತುದಿ ಹಾಗೂ ಬಾಳೆಹಣ್ಣಿನ ತುದಿ ನಮ್ಮ ಕಡೆಯಲ್ಲಿರಬೇಕು.

ವೀಳ್ಯೆದೆಲೆಯನ್ನು ಎರಡು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು. ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು.

ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು.

೧. ವೀಳ್ಯದೆಲೆ ತಾಂಬೂಲ ಕೊಡುವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ, ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ.

೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ.

೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.

೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ. ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ, ಶುಭ ಕಾರ್ಯ ನಿಧಾನವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಕೆ ಕಡಿಮೆಯಾಗುತ್ತದೆ.

೬. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ.

೭. ತಾಂಬೂಲ ಕೊಡುವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.

ವಿವಿಧ ರೀತಿಯ ತಾಂಬೂಲಗಳು:

ತಾಂಬೂಲಗಳಲ್ಲಿ ಮೂರು ರೀತಿಯ ತಾಂಬೂಲಗಳಿವೆ.. ೧. ಫಲ ತಾಂಬೂಲ. ೨. ಪೂರ್ಣಫಲ ತಾಂಬೂಲ. ೩. ಸಾಮೂಹಿಕ ತಾಂಬೂಲ.

ಫಲ ತಾಂಬೂಲ : ತಾಂಬೂಲದಲ್ಲಿ ಹಣ್ಣನ್ನು ಇಟ್ಟು ಕೊಡುವುದೇ ಫಲತಾಂಬೂಲ. ಫಲ ತಾಂಬೂಲದಲ್ಲಿ ಎರಡು ವಿಧಗಳಿವೆ. ೧. ಫಲ ತಾಂಬೂಲ.. ೨. ಪಂಚಫಲ ತಾಂಬೂಲ

೧. ಫಲ ತಾಂಬೂಲ : ಎರಡು ವೀಳ್ಯದೆಲೆ ಎರಡು ಅಡಿಕೆ ಯಥಾಶಕ್ತಿ ದಕ್ಷಿಣೆ ಒಂದೇ ಜಾತಿಯ ಹಣ್ಣು(ಎರಡು) ೨. ಪಂಚಫಲ ತಾಂಬೂಲ : ಐದು ವೀಳ್ಯದೆಲೆ ಐದು ಅಡಿಕೆ ಯಥಾ ಶಕ್ತಿ ದಕ್ಷಿಣೆ ಐದು ಜಾತಿಯ ಹಣ್ಣುಗಳು.. (5-5 ಬೇಕಾದರೂ ಕೊಡಬಹುದು)

ಪೂರ್ಣಫಲ ತಾಂಬೂಲ .. ಎರಡು ವೀಳ್ಯದೆಲೆ ಎರಡು ಅಡಿಕೆ ಯಥಾಶಕ್ತಿ ದಕ್ಷಿಣೆ ಒಂದು ಪೂರ್ಣಫಲ.. ಸಾಮೂಹಿಕ ತಾಂಬೂಲ : ಎರಡು ವೀಳ್ಯದೆಲೆ ಎರಡು ಅಡಿಕೆ ಯಥಾಶಕ್ತಿ ದಕ್ಷಿಣೆ ತೆಂಗಿನಕಾಯಿ ಅಥವಾ ಹಣ್ಣು..!

ಸಂಗ್ರಹ: ಎಚ್ ಎಸ್ ರಂಗರಾಜನ್

Related Articles

ಪ್ರತಿಕ್ರಿಯೆ ನೀಡಿ

Latest Articles