ಭಕ್ತಿಗೊಲಿವ ಭಗವಂತ…

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ.

ಒಂದು: ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ.ಎರಡು: ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಇದು ಬಿಟ್ಟು ಮೂರನೆಯ ಕಾರಣವೇ ಇಲ್ಲ.

ಪ್ರಸಂಗ: ಕೃಷ್ಣ ಪರಮಾತ್ಮನು ದುರ್ಯೋಧನನ ಮನೆಗೆ ಸಂಧಾನಕ್ಕೆ ಹೋದಾಗ ದುರ್ಯೋಧನನು ಪಂಚಭಕ್ಷ್ಯ ಪರಮಾನ್ನವನ್ನು ಅಡುಗೆ ಮಾಡಿಸಿರುತ್ತಾನೆ‌. ಅತಿಥಿಯಾಗಿ ಬಂದಂತಹ ಭಗವಂತನೊಂದಿಗೆ ಭಕ್ತಿಯಿಂದ ನಡೆದುಕೊಳ್ಳದೆ, ತನ್ನ ವೈಭವ, ಐಶ್ವರ್ಯವನ್ನು ತೋರಿಸಿಕೊಳ್ಳಲು ಅಹಂಕಾರದಿಂದ ಶ್ರೀ ಕೃಷ್ಣನನ್ನು ದುರ್ಯೋಧನನು ಊಟಕ್ಕೆ ಆಹ್ವಾನಿಸುತ್ತಾನೆ.

ಆಗ ಪರಮಾತ್ಮನು ” ನ ಚ ಸಂಪ್ರೀಯಸೆ ರಾಜನ್ ನಚೈವ ಆಪತ್ಗತಾ: ವಯಂ” (ನೀನು ಪ್ರೀತಿಯಿಂದ ಕರೆಯುತ್ತಿಲ್ಲ, ನಾನು ಗತಿಯಿಲ್ಲದೆ ಬಂದಿಲ್ಲ) ಎಂದು ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಹಾಗಾದರೆ ಶ್ರೀ ಕೃಷ್ಣನು ಯಾರ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ ಎಂದರೆ ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸಿದ ನಂತರ ಶ್ರೀ ಕೃಷ್ಣನು ದಾಸಿಯ ಮಗನೆಂದು ದುರ್ಯೋಧನನು ಹೀಯಾಳಿಸುತ್ತಿದ್ದಂತಹ ಪರಮ ಜ್ಞಾನಿಯಾದ ವಿದುರನ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ.

ಈ ಕಥೆಯ ಸಾರಾಂಶವೆಂದರೆ ಭಗವಂತನಿಗೆ ನಮ್ಮ ಪಂಚಭಕ್ಷ್ಯ ಪರಮಾನ್ನದ ಅವಶ್ಯಕತೆ ಇಲ್ಲ. ನಾವು ನಮ್ಮ ಡಾಂಭಿಕತೆ, ಅಹಂಕಾರವನ್ನು ಬಿಟ್ಟು, ಭಕ್ತಿಯಿಂದ ಪೂಜಿಸಿದರೆ ಭಗವಂತನು ನಮ್ಮನ್ನು ಬಿಗಿದಪ್ಪಿಕೊಂಡು ಜ್ಞಾನಾಮೃತವನ್ನು ಉಣಿಸುತ್ತಾನೆ. 

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇಗುಲ, ಹುಸ್ಕೂರು (ಎಲೆಕ್ಟಾçನಿಕ್‌ಸಿಟಿ ಸಮೀಪ) ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles