ಜೀವನ ಶೈಲಿಯಲ್ಲಿ ಬದಲಾವಣೆ ಆರೋಗ್ಯದಲ್ಲಿ ಸುಧಾರಣೆ

*ವೈ.ಬಿ.ಕಡಕೋಳ

ಜಾಗತಿಕ ಮಟ್ಟದಲ್ಲಿ ಇಂದು ಕೊರೋನಾ ತಾಂಡವವಾಡುತ್ತಿದೆ. ಅದಕ್ಕಾಗಿ ಅನೇಕ ರೀತಿಯ ಸಲಹೆಗಳನ್ನು ಬದುಕುವ ರೀತಿಯನ್ನು ವೈದ್ಯಕೀಯ ಜಗತ್ತು ನಮಗೆ ತಿಳಿಸುತ್ತಿದೆ. ಆದಾಗ್ಯೂ ಕೂಡ ನಾವು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಮಾಸ್ಕ್ ಸರಿಯಾಗಿ ಹಾಕಿಕೊಳ್ಳುವ ಬಗೆಯನ್ನು ನಾಡಿನ ಖ್ಯಾತ ಹೃದಯರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಇತ್ತೀಚೆಗಷ್ಟೇ ಯ್ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ಟ್ವಿಟರ್ ಮತ್ತು ಫೇಸ್ಬುಕ್ ಲಿಂಕ್ಗಳಲ್ಲಿ ಕಳಿಸಿದ್ದರು. ಅದನ್ನು ನೋಡಿದಾಗ ಮಾಸ್ಕ್ ಧರಿಸುವ ಮತ್ತು ಅದನ್ನು ಉಪಯೋಗಿಸುವ ಕುರಿತು ಸಮಗ್ರ ಮಾಹಿತಿ ದೊರೆಯಿತು. ಇಷ್ಟೆಲ್ಲ ಹೇಳಲು ಕಾರಣ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿಯಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಮಾಡಿಕೊಂಡು ಬದುಕುವುದು.

ಆರೋಗ್ಯವೆಂದರೆ…..
ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯುವರು, ವಿಶ್ವಸಂಸ್ಥೆಯ 1945 ರ ಹೇಳಿಕೆಯ ಪ್ರಕಾರ ಆರೋಗ್ಯವೆಂದರೆ ಸಂಪೂರ್ಣ ದೈಹಿಕ ಮತ್ತು ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ. ಕೇವಲ ರೋಗ- ಬಾಧೆಗಳ ಗೈರು ಹಾಜರಿಯಷ್ಟೇ ಅಲ್ಲ. ವೈದ್ಯ ವಿಜ್ಞಾನ ಮುಂದುವರಿದ0ತೆ 1850 ರಿಂದೀಚೆಗೆ ಜನ ಮಾನಸದಲ್ಲಿ ಆರೋಗ್ಯದಲ್ಲಿ ಸುಧಾರಣೆಯ ಕುರಿತು ತಿಳಿವಳಿಕೆಗಳ ಕಾರ್ಯ ಯೋಜನೆಗಳು ಪ್ರಾರಂಭವಾದವು. ಜನರಲ್ಲಿ ವೈದ್ಯಕೀಯ ವಿಚಾರಗಳ ತಿಳಿವಳಿಕೆ ಆಗಬೇಕೆನ್ನುವ ವಿಶ್ವಸಂಸ್ಥೆಯ(೧೯೪೮) ನಿರ್ಧಾರವೂ ಕೂಡ ಹೆಲ್ತ ಏಜುಕೇಶನ್ ಎಂಬ ಶೀರ್ಷಿಕೆಯಡಿ ಭಿತ್ತಿ ಪತ್ರಗಳು, ಚೀಟಿಗಳ ಮೂಲಕ ಕ್ಷಯರೋಗದಂತಹ ಭೀಕರ ರೋಗದ ಬಗ್ಗೆ ಪ್ರಕಟವಾಗಿ ಗೋಡೆಗಳ ಮೇಲೆ ಕಾಣಿಸಿಕೊಳ್ಳತೊಡಗಿದವು. ಮುಂದೆ ಶಾಲಾ ಶಿಕ್ಷಣದಲ್ಲಿಯೂ ಕೂಡ ಆರೋಗ್ಯ ಶಿಕ್ಷಣವಿರಲಿ ಎಂಬ ತೀರ್ಮಾನದಿಂದಾಗಿ ಜೀವಶಾಸ್ತç ಪಠ್ಯದಲ್ಲಿ ಪ್ರಾಥಮಿಕ ಹಂತದಿ0ದ ಆರೋಗ್ಯದ ತಿಳಿವಳಿಕೆ ನೀಡಲಾರಂಭಿಸಿತು.

ಇಷ್ಟೆಲ್ಲ ಪ್ರಕ್ರಿಯೆಗಳು ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರೂ ಕೂಡ ಇಂದು ಮಾಧ್ಯಮಗಳಲ್ಲಿ ಕೂಡ ಹಲೋ ಡಾಕ್ಟರ್, ರೇಡಿಯೋದಲ್ಲಿ ಕೂಡ ವೈದ್ಯರ ಸಲಹೆ, ಪತ್ರಿಕೆಗಳಲ್ಲಿ ಪ್ರಶ್ನಿಸಿ ಸಲಹೆ ಹೀಗೆ ನಡೆಯುತ್ತಿರುವುದನ್ನು ನೋಡಿದರೆ ನಮ್ಮ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವತ್ತ ಕ್ಷಣ ಮಾತ್ರ ಯೋಚಿಸುತ್ತಿಲ್ಲವಲ್ಲ ಎಂಬ ಆತಂಕ ಕಾಡುತ್ತದೆ.

ಕಾರಣವಿಷ್ಟೇ ಕೆಲವು ಸಣ್ಣ ಸಣ್ಣ ಸಂಗತಿಗಳಿಗೂ ಕೂಡ ವೈದ್ಯಕೀಯ ಸಲಹೆಗಾಗಿ ಪತ್ರ ಬರೆಯುವುದು. ನೇರ ಫೋನ್ ಇನ್ ಕಾರ್ಯಕ್ರಮಗಳಲ್ಲಿ ಫೋನ್ ಮಾಡಿ ಕೇಳುವುದನ್ನು ಕಂಡಾಗ ಇವರಿಗೆ ಸಾಮಾನ್ಯ ಜ್ಞಾನದ ಪರಿವೆಯೂ ಇಲ್ಲವಲ್ಲ ಎಂದು ಖೇದವಾಗುತ್ತದೆ.
ಪ್ರತಿ ನಿತ್ಯ ನಾವು ಸಾಮಾನ್ಯವಾಗಿ ರೂಢಿಸಿಕೊಳ್ಳಬೇಕಾದ ಸಂಗತಿಗಳನ್ನು ಅಳವಡಿಸಿಕೊಂಡರೆ ನಮ್ಮ ಆರೋಗ್ಯದಲ್ಲಿ ಸುಧಾರಣೆ ಖಂಡಿತ ಕಂಡು ಬರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
* ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯುವುದನ್ನು ರೂಢಿಸಿಕೊಂಡರೆ ಅಜೀರ್ಣ ನಮ್ಮನ್ನು ಕಾಡುವುದಿಲ್ಲ ಎಂಬುದನ್ನು ನಾವು ಮೊದಲು ಮನಗಾಣಬೇಕು.
* ಸಾಧ್ಯವಾದರೆ ಬೆಳಗಿನ ವಾಯುವಿಹಾರ, ಯೋಗವನ್ನು ರೂಢಿಸಲು ಪ್ರಯತ್ನಿಸಬೇಕು. ವಾಯು ವಿಹಾರದಿಂದ ಉಸಿರಾಟ ತೊಂದರೆ, ಕೈಕಾಲು ಸೆಳೆತ ಇತ್ಯಾದಿಗಳನ್ನು ದೂರವಿಡಬಹುದು.
ಇಂದಿನ ಜಗತ್ತು ಶ್ರಮರಹಿತ ರೀತಿ ಸಕಲ ಸವಲತ್ತುಗಳನ್ನು ಸಕಲ ಜೀವಿಗಳಿಗೆ ಒದಗಿಸಿದೆ. ಎಲ್ಲ ಸೌಲಭ್ಯಗಳನ್ನು ಪಡೆದ ಮನಸ್ಸುಗಳು ತನ್ನೊಡನೆ ದುಗುಡ-ದುಃಖ ದುಮ್ಮಾನಗಳೊಡನೆ ಬದುಕುತ್ತಿವೆ. ಬೇನೆ, ಬೇಸರಗಳು ಒಡನಾಡಿಗಳಂತೆ ಜೊತೆಗಿರುವ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತೇವೆ. ಸುಖದ ಸೋಪಾನದಲ್ಲಿ ವಿಹರಿಸುತ್ತಿದ್ದೇನೆಂದು ಪರಿಭಾವಿಸುವವರಲ್ಲೂ ಕೂಡ ಅವ್ಯಕ್ತ, ದುಃಖದ ಚಡಪಡಿಕೆ ಜೀವಂತವಿರುವ ಅನೇಕ ಜನರನ್ನು ಕಾಣುತ್ತೇವೆ. ಇಂಥ ಜನರು ಕೂಡ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆ ಪಡೆದರೆ ಖಂಡಿತವಾಗಿಯೂ ಅವರೆಲ್ಲ ತಮ್ಮ ದುಃಖ ದುಮ್ಮಾನ ದುಗುಡಗಳಿಂದ ಮುಕ್ತರಾಗಿ ಆರೋಗ್ಯದಲ್ಲಿ ಸುಧಾರಣೆ ಪಡೆಯಬಹುದು.

ಮನುಷ್ಯನಿಗೆ ಇಂದು ತನ್ನನ್ನು ಎಲ್ಲರೂ ಗುರುತಿಸಲಿ ಎಂಬ ಇಚ್ಚೆ.ಅಂಥ ಸಂದರ್ಭ ಮೌಲ್ಯಗಳನ್ನು ದೂರ ಸರಿಸಿ ಕೆಟ್ಟ ಪ್ರವೃತ್ತಿಗೆ ಇಳಿಯುವರು.ಅಂಥಹ ಜನರೂ ಕೂಡ ತಮ್ಮ ಕೆಟ್ಟ ಆಲೋಚನೆಯ ಮೂಲಕ ಏನನ್ನೋ ಮಾಡಲು ಹೋಗಿ ಮಾನಸಿಕವಾಗಿ ಜರ್ಝರಿತರಾಗುವ ಸಂದರ್ಭಗಳುಕೂಡ ಅವರ ಆರೋಗ್ಯ ಹದಗೆಡಿಸುತ್ತವೆ.ಕಾರಣ ಮನುಷ್ಯ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಮೌಲ್ಯವನ್ನು ಅರಿತು ಬದುಕಿದ್ದಾದರೆ ಅವರ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಕಾಣಬಹುದು.

ದಿನನಿತ್ಯ ಎದ್ದ ತಕ್ಷಣ ಒಳ್ಳೆಯ ಆಲೋಚನೆಯೊಂದಿಗೆ ಪ್ರತಿ ದಿನವನ್ನು ಪ್ರಾರಂಭಗೊಳಿಸುವವರ ಮನಸ್ಸಲ್ಲಿ ದುರಾಲೋಚನೆಗಳು ಬರದು. ಕಾರಣ ಬೆಳಗಿನ ಏಳುವ ಹೊತ್ತಿನಲ್ಲಿಯೇ ನಮ್ಮ ಆಲೋಚನೆಗಳು ಉತ್ತಮವಾಗಿರಲಿ ಆ ದಿನದ ಸಾರ್ಥಕತೆಯು ಕೂಡ ನಮ್ಮ ಆರೋಗ್ಯದಲ್ಲಿ ಒಳ್ಳೆಯ ಅವಕಾಶ ನೀಡುತ್ತದೆ.
ಇನ್ನು ಊಟದ ರೀತಿ ಕೂಡ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿದೆ. ನಮ್ಮ ಬಾಯಿಯ ಚಪಲವು ಕೂಡ ಅನಾರೋಗ್ಯಕ್ಕೆ ದಾರಿ ತೋರಿಸಬಹುದು. ಕಾರಣ ಹಿತ ಮಿತ ಆಹಾರ ಪದ್ದತಿ ರೂಢಿಸಿಕೊಂಡಲ್ಲಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಆಹಾರ ಪ್ರಕ್ರಿಯೆಯಲ್ಲಿ ಬಂದದ್ದಾದರೆ ಅನಾರೋಗ್ಯ ನಮ್ಮನ್ನು ಬಾಧಿಸದು.

ಪ್ರತಿ ದಿನ ಒಳ್ಳೆಯ ಪುಸ್ತಕ ಓದು ಜೀವನ ಶೈಲಿ ರೂಢಿಸಿಕೊಂಡವರಿಗೆ ದುರಾಲೋಚನೆ, ನಿರಾಶಾಭಾವ ಮೂಡುವುದಿಲ್ಲ. ಅಷ್ಟೇ ಏಕೆ ಅವರು ತಮ್ಮ ಒಳ್ಳೆಯ ಚಿಂತನೆಯಿ0ದ ಇತರರಿಗೂ ಮಾರ್ಗದರ್ಶಕರಾಗಬಲ್ಲರು. ಹುಟ್ಟು ಸಾವಿನ ನಡುವೆ ಬರುವ ಬದುಕನ್ನು ಕಳೆಯಲು ಬಹಳ ತಾಳ್ಮೆ, ಸಂಯಮ ಬೇಕು. ಮುಂಜಾನೆಯಿ0ದ ರಾತ್ರಿಯ ತನಕ ಬದುಕಿನ ಜಂಜಡದಲ್ಲಿ ಅನೇಕ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ. ಅಲ್ಲಿ ಸುಖ ದುಃಖಗಳ ಛಾಯೆ ಎಲ್ಲ ರೀತಿಯಲ್ಲಿಯೂ ಹರಿದು ಬರುತ್ತದೆ. ಹಾಗಂತ ಕಟ್ಟದರ ಕಡೆಗೆ ಮನಸ್ಸು ಕೇಂದ್ರೀಕೃತವಾಯಿತೋ ಮುಗಿಯಿತು. ಬದುಕು ದುಸ್ತರ. ಕಾರಣ ಬದುಕನ್ನು ಬಂಗಾರವಾಗಿಸುವ ಆಲೋಚನೆಗಳನ್ನು ನಾವು ಮಾಡಿದರೆ ಅದರಿಂದ ಆಗುವ ಪ್ರಯೋಜನಗಳು ಅಪಾರ. ಮನಸ್ಸನ್ನು ವರ್ತಮಾನದಲ್ಲಿ ನಿಲ್ಲಿಸಿಕೊಂಡರೆ ಭಾವನಾತ್ಮಕವಾಗಿ ಉತ್ತಮ ಆಲೋಚನೆ ರೂಢಿಸಿಕೊಂಡರೆ ನಮ್ಮ ಬದುಕಿನಲ್ಲಿ ಅನಾರೋಗ್ಯ ಬರದು. ನಮ್ಮ ಜೀವನ ಶೈಲಿ ಬದಲಿಸಿಕೊಳ್ಳುವ ಜೊತೆಗೆ ಸಮಾಜವನ್ನು ಕೂಡ ಅತ್ಯುನ್ನತವಾಗಿ ನಿರ್ಮಿಸಲು ರೋಗರಹಿತ ಒತ್ತಡ ರಹಿತ ಮನಸ್ಸು ಅವಶ್ಯಕ.
ಮೊದಲು ನಮ್ಮನ್ನು ನಾವು ರೂಪಿಸಿಕೊಳ್ಳಬೇಕು.ಯಾವುದೇ ಕೆಲಸ ನಮ್ಮಿಂದ ಆಗದು ಎಂದುಕೊಳ್ಳಬಾರದು. ನಾವು ದಿನನಿತ್ಯ ನಿರ್ವಹಿಸುವ ಕೆಲಸದ ಬಗ್ಗೆ ಕಾಳಜಿಯಿಂದ ತಾಳ್ಮೆಯಿಂದ ಮಾಡಿದರೆ ಕಛೇರಿಯ ಎಲ್ಲ ಸಹೋದ್ಯೋಗಿಗಳಿಗೂ ಕೂಡ ನಮ್ಮ ವರ್ತನೆ ಹಿತವೆನಿಸುತ್ತದೆ. ನಗುನಗುತ್ತ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಒಳ್ಳೆಯ ಮಾತನಾಡುವ ಮೂಲಕ ನಮ್ಮ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ನಗುನಗುತ್ತ ಒಳ್ಳೆಯ ಮಾತುಗಳನ್ನಾಡುತ್ತ ಕೆಲಸ ನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕು. ನಿಂದಿಸಿದವರನ್ನು ವಂದಿಸಿ ನೋಡಿ ಆಗ ನಿಂದಿಸಿದವರ ಮನ ಲಜ್ಜೆಯಿಂದ ಕುಗ್ಗುವುದು ಎಂಬ ಶರಣರ ವಾಣಿಯಂತೆ ಶಾಂತಿ ಸಹನೆಯ ಬದುಕನ್ನು ನಾವು ರೂಢಿಸಿಕೊಳ್ಳಬೇಕು.
ನಿರಂತರ ದುಡಿಮೆ ಇರಲಿ ದಣಿದ ಮನಸ್ಸಿಗೆ ಶರೀರದ ಮೂಲಕ ವಿಶ್ರಾಂತಿ ಕೊಡುವುದು ಕೂಡ ನಮ್ಮ ಜೀವನ ಶೈಲಿಯಲ್ಲಿ ರೂಢಿಸಿಕೊಳ್ಳುವುದು ಅಗತ್ಯ. ಎಂತಹ ಕ್ಲಿಷ್ಟ ಸಂದರ್ಭದಲ್ಲೂ ಒಂದು ಹಾಸ್ಯ ಚಟಾಕಿ ಹಾರಿಸಿ ಉಲ್ಲಾಸಮಯ ವಾತಾವರಣ ಸೃಷ್ಟಿ ಮಾಡಲು ಸಾಧ್ಯವೆಂಬ0ತೆ ದಣಿದ ಮನಸ್ಸಿಗೆ ಮನರಂಜನೆಯ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಕೂಡ ಬದುಕು ಉಲ್ಲಾಸದಿಂದಿರಲು ಸಾಧ್ಯ. ಕುಟುಂಬದ ಸದಸ್ಯರೊಡನೆ ಕೂಡ ನಗುನಗುತ್ತ ಮಾತನಾಡಿ ಅದು ಕೂಡ ನಮ್ಮ ಜೀವನ ಶೈಲಿಯಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಸಹಜ ಕ್ರಿಯೆ. ನಮ್ಮ ಹೆಗಲ ಮೇಲಿನ ಭಾರವನ್ನು ಮನೆಯವರೆಲ್ಲರೊಂದಿಗೆ ಹಂಚಿಕೊ0ಡು ಮಾಡಲು ಸಾಧ್ಯ.
ಅಹಂಕಾರ, ನಿರಾಸೆ ಅತಿಯಾದರೆ ಬಾಳು ಪ್ರಪಾತಕ್ಕೆ ಬೀಳುವುದು. ಭವಿಷ್ಯತ್ತಿನ ಬಗ್ಗೆ ಚಿಂತೆ ಹೆಚ್ಚಾದರೆ ಮನಸ್ಸು ಒತ್ತಡಕ್ಕೆ ಒಳಗಾಗುವುದು. ಮನಸ್ಸಿನ ತಾಳ್ಮೆ ಕೂಡ ಬಹು ಮುಖ್ಯ. ನಿಮ್ಮ ಪ್ರತಿಭೆಯನ್ನು ಸದೃಢವಾಗಿ ದುಡಿಸಿಕೊಳ್ಳುವ ಮೂಲಕ ಜೀವನ ಶೈಲಿ ಇರಲಿ. ಒಳ್ಳೆಯದರ ಕಡೆಗೆ ಮನಸ್ಸು ಎಳೆಯುವುದು ಅಪರೂಪ. ಎಚ್ಚರಿಕೆಯಿಂದ ಸನ್ನಡತೆಯ ಕಡೆಗೆ ಗಮನ ಹರಿಸುವ ಮೂಲಕ ನಮ್ಮ ಜೀವನ ಉತ್ತಮಗೊಳಿಸಬಹುದು. ವೈಯುಕ್ತಿಕ ಕೌಟುಂಬಿಕ, ಸಾಮಾಜಿಕವಾದ ಎಲ್ಲ ಆಯಾಮಗಳೊಂದಿಗೆ ನಮ್ಮ ವ್ಯಕ್ತಿತ್ವವನ್ನು ತೆರೆದುಕೊಳ್ಳುವ ಮೂಲಕ ಒಂದು ಮಹತ್ತರ ಕ್ರಿಯೆ ನಮ್ಮ ವ್ಯಕ್ತಿತ್ವವನ್ನು ರೂಢಿಸಬಲ್ಲದು. ಅದಕ್ಕಾಗಿ ಈ ಕೆಳಕಂಡ ಕೆಲಸ ಸಂಗತಿಗಳನ್ನು ನಾವು ನಮ್ಮ ದೈನಂದಿನ ಬದುಕಲ್ಲಿ ರೂಢಿಸಿಕೊಂಡರೆ ಅನುಕೂಲ.

ಸಾರ್ಥಕ ಮನುಷ್ಯನ ಲಕ್ಷಣಗಳು
ಆಸೆ, ಕೋಪ, ನಾಲಗೆ ಈ ಮೂರನ್ನು ಹತೋಟಿಯಲ್ಲಿಡಿ.
ವ್ಯಾಪಾರ, ಪ್ರಯಾಣ, ಮದುವೆ ಈ ಮೂರಕ್ಕೂ ಆತುರ ಪಡಬೇಡಿ
ಬುದ್ದಿಶಕ್ತಿ, ಸಾಮರ್ಥ್ಯ, ಸಂತೋಷ ಈ ಮೂರಕ್ಕೂ ಬೆಲೆ ಕೊಡಿ.
ಹಣ, ಸಮಯ, ಶಕ್ತಿ ಈ ಮೂರನ್ನು ವ್ಯರ್ಥ ಮಾಡಬೇಡಿ
ಧರ್ಮ, ನ್ಯಾಯ, ವಿನಯ ಈ ಮೂರಕ್ಕೂ ಗೌರವ ಕೊಡಿ.
ದೇಶ, ಗೌರವ, ರಾಷ್ಟçಧ್ವಜ ಈ ಮೂರಕ್ಕಾಗಿ ಹೋರಾಟ ಮಾಡಿ
ಅನ್ಯಾಯ, ಅಹಂಕಾರ, ದ್ರೋಹ ಈ ಮೂರನ್ನು ದ್ವೇಷಿಸಿ
ಹೀಗೆ ಇಂಥ ಅನೇಕ ಉತ್ತಮ ಸಂಗತಿಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ನಮ್ಮ ಬದುಕನ್ನು ರೂಪಿಸಿಕೊಂಡಲ್ಲಿ ಇವುಗಳ ಮೂಲಕ ಉಂಟಾಗಬಹುದಾದ ಶಾರೀರಿಕ- ಮಾನಸಿಕ ಅನಾರೋಗ್ಯವು ನಮ್ಮನ್ನು ಬಾಧಿಸದು ಎಂದರೆ ತಪ್ಪಾಗಲಿಕ್ಕಿಲ್ಲ.

ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್ಮುನವಳ್ಳಿ
ಮುನವಳ್ಳಿ-೫೯೧೧೧೭
ತಾಲೂಕು
: ಸವದತ್ತಿ ಜಿಲ್ಲೆಃ ಬೆಳಗಾವಿ

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles