ಸದೃಢ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗ

*ಜ್ಯೋತಿ.ಸಿ.ಕೋಟಗಿ


“ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ” ಎಂಬ ವಿವೇಕಾನಂದರ ವಾಣಿಯಂತೆ ಯೋಗವು ನಮ್ಮ ಜೀವನಕ್ಕೆ ಅತೀ ಅವಶ್ಯಕವಾಗಿದೆ. ಕ್ರಿ.ಪೂ. 3 ನೇ ಶತಮಾನದಲ್ಲಿದ್ದ ಪತಂಜಲಿ ಮಹರ್ಷಿಯವರ ಚಿಂತನೆಯ ಫಲವಾದ ಯೋಗವು ಕೇವಲ ಶಾಸ್ತçವಾಗದೇ ಆಚರಣೆ, ಅಭ್ಯಾಸವಾಗಿ ಇಲ್ಲಿಯ ತನಕ ಬೆಳೆದು ಬಂದಿದೆ.

ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ಜೂನ್ 21 ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸುವ ಕುರಿತು ಪ್ರಸ್ತಾಪಿಸಿದಾಗ ನೂರಾರು ದೇಶಗಳು ಒಪ್ಪಿಗೆ ಸೂಚಿಸಿದವು. ಕಾರಣ ಯೋಗಕ್ಕಿರುವ ಶಕ್ತಿ ಅಂತದ್ದು. ಯೋಗವು ಜಗತ್ತೇ ಮೆಚ್ಚಿದ ಭಾರತದ ಪುರಾತನ ವಿದ್ಯೆಯಾಗಿದೆ.

ಜೂನ್ 21 ರಂದು ಎರಡು ವಿಶೇಷ. ಒಂದು ಇದು ಯೋಗ ಮಹರ್ಷಿ ಪತಂಜಲಿಯವರ ಜನ್ಮ ದಿನ. ಮತ್ತೊಂದು ವರ್ಷದ ದೀರ್ಘ ಹಗಲು ಹೊಂದಿದ ದಿನ. ಇದನ್ನು ದಕ್ಷಿಣಾಯನಕ್ಕೆ ಪರಿವರ್ತನೆ ಎಂದು ಗುರುತಿಸಲಾಗಿದೆ.


ಹಾಗಾದರೆ ಯೋಗ ಎಂದರೇನು? ಯೋಗ ಎಂಬುದು ಸಂಸ್ಕೃತ ಪದದಿಂದ ಬಂದದ್ದು. ಮೂಲ ಹೆಸರು ಯುಜ್ ಅಂದರೆ ಪ್ರಯತ್ನ, ಒಕ್ಕೂಟ ಎಂದಾಗುತ್ತದೆ. ಪತಂಜಲಿ ಮಹರ್ಷಿಗಳ ಪ್ರಕಾರ “ಯೋಗಶ್ಚಿತ್ತ ವೃತ್ತಿ ನೀರೋಧ”. ಅಂದರೆ ಚಿತ್ತ ವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ. ಯೋಗ ಎನ್ನುವುದು ಒಂದು ದಿನದ ಕಾಯಕವಲ್ಲ. ಬುದ್ದಿ ದೇಹ ಮನಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗವಾಗಿದೆ. ಅಧ್ಯಾತ್ಮ ದೃಷ್ಟಿಯಲ್ಲಿ ಆತ್ಮದೊಂದಿಗೆ ಪರಮಾತ್ಮನನ್ನು ಸೇರಿಸುವುದು, ಲೀನವಾಗಿಸುವುದು ಎಂದಾಗುತ್ತದೆ.

“ಯೋಗೋ ಉಪಾಯ ಉದ್ದಷ್ಟ” ಮೋಕ್ಷಕ್ಕೆ ಉತ್ತಮವಾದ ಉಪಾಯ ಯೋಗ. ತನು ಮನಗಳಿಂದ ಮಾಡುವುದು ಯೋಗವಾಗಿದೆ. ಹಾಗಾದರೆ ನಮಗೆ ಯೋಗ ಯಾಕೆ ಬೇಕು ಎಂದು ಪ್ರಶ್ನಿಸಿದಾಗ,
ಸುಂದರ ಬದುಕಿಗೆ ಯೋಗ ಬೇಕಿದೆ. ಉತ್ತಮ ಆರೋಗ್ಯ, ಸದೃಢ ದೇಹಕ್ಕಾಗಿ ಯೋಗ ಬೇಕಿದೆ. ಕಳೆದ ವರ್ಷದಿಂದ ನಾವು ಕರೋನ ಎಂಬ ಮಹಾಮಾರಿಯ ಕಬಂಧ ಬಾಹುವಿಗೆ ಸಿಲುಕಿ ನಲುಗಿ ಹೋಗಿದ್ದೇವೆ, ನರಕ ಯಾತನೆ ಇನ್ನೂ ಕೊನೆಯಾಗುತ್ತಿಲ್ಲ.

ಈಗ ನಮ್ಮ ನೆನಪಿಗೆ ಬಂದದ್ದು ಒಂದೇ ಒಂದು ಪದ ಯೋಗ. ನಿಜ ಯೋಗ ಒಂದೇ ಎಲ್ಲ ಕಾಯಿಲೆಗಳಿಗೆ ಪರಿಹಾರ ಎಂಬುದು ಮನದಟ್ಟಾಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕೇಳಿ ಬರುತ್ತಿರುವ ಮೊದಲ ಪಾಠ ಯೋಗವಾಗಿದೆ. ಯೋಗದಿಂದ ಮನಸ್ಸು ಸಕಾರಾತ್ಮಕ ಚಿಂತನೆಯತ್ತ ಸಾಗುತ್ತದೆ. ಮನಸ್ಸು ಸಕಾರಾತ್ಮಕ ಚಿಂತನೆ ಮಾಡಿದಷ್ಟು ನಮ್ಮ ಶರೀರ ಬಲಗೊಳ್ಳುತ್ತದೆ. ಮನಸ್ಸಿನ ಏಕಾಗ್ರತೆಗೆ ಯೋಗ ಮುಖ್ಯ ಸಾಧನ.

ಯೋಗದಿಂದಾಗುವ ಪ್ರಯೋಜನಗಳನ್ನು ಪಟ್ಟಿ ಮಾಡ ಹೊರಟರೆ ಲೆಕ್ಕ ಸಿಗದು. ಯೋಗವು ಜೀವನವನ್ನು ಶಿಸ್ತುಬದ್ದಿನ ನಡಿಗೆಯತ್ತ ಕರೆದೊಯ್ಯುತ್ತದೆ. ನಸು ಮುಂಜಾವಿನಿ0ದ ರಾತ್ರಿ ಮಲಗುವವರೆಗೂ ಮನಸ್ಸು ಮತ್ತು ಶರೀರವನ್ನು ನವ ಚೈತನ್ಯದಿಂದ ಇಡುತ್ತದೆ. ಕೋಪ ತಾಪಗಳನ್ನು ದೂರಾಗಿಸಿ ಶಾಂತತೆಯನ್ನು ತಂದುಕೊಡುತ್ತದೆ.
ಹಲವಾರು ರೋಗ ರುಜಿನಗಳಿಗೆ ಹೆಚ್ಚಾಗಿ ಸೂಚಿಸುವ ಪರಿಹಾರ ಯೋಗ ಮತ್ತು ಯೋಗಾಸನಗಳು. ಸುಮಾರು 84 ಸಾವಿರ ಯೋಗಾಸನಗಳಿವೆ ಎಂದು ಮಹರ್ಷಿಗಳು ಹೇಳಿರುವರು. ಅಲ್ಲದೇ ಅಷ್ಟಾಂಗಗಳನ್ನು ತಿಳಿಸಿರುವರು. ಪ್ರಾಚೀನ ಕಾಲದಿಂದಲೂ ನೋಡಿಕೊಂಡು ಬಂದಾಗ ಯೋಗದಿಂದ ಸಾಧನೆ ಹೊಂದಿದವರ ಚಿತ್ರಣ ಕಾಣುತ್ತದೆ. ಯೋಗದಿಂದ ಮಹತ್ತರವಾದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿದವರಿಲ್ಲವೇ. ನೀರು, ಆಹಾರಾದಿಗಳನ್ನು ತೊರೆದು ಕೇವಲ ಗಾಳಿಯನ್ನು ಸೇವಿಸಿ ತಪಗೈದವರ ಕುರಿತು ಪುರಾಣ ಪುಣ್ಯ ಕಥೆಗಳು ತಿಳಿಸುತ್ತವೆ. ಯೋಗದಿಂದ ಬದುಕು ಸಾರ್ಥಕತೆ ಹೊಂದುವಲ್ಲಿ ಎರಡು ಮಾತಿಲ್ಲ.


“ರೋಗದಿಂದ ಯೋಗದೆಡೆಗೆ” ಎಂಬ ಮಾತಿನಂತೆ ಹಲವಾರು ರೋಗಗಳಿಗೆ ವೈದ್ಯರು ಸೂಚಿಸುವುದು ಯೋಗ, ಯೋಗಾಸನಗಳನ್ನು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಥೈರಾಯಿಡ್, ಮೈಗ್ರೇನ್‌ಗಳನ್ನು ಕೆಲವು ಯೋಗಾಸನಗಳು ನಿಯಂತ್ರಿಸಿ ಗುಣಮುಖರಾಗಲು ಸಹಾಯಕವಾಗಿವೆ. ಯೋಗವು ಉತ್ತಮ ಆಹಾರ ಪದ್ದತಿ ರೂಢಿಸಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ರಾಹೀನತೆ ದೂರಗೊಳಿಸಿ ಉತ್ತಮ ಮನಸ್ಥಿತಿಗೆ ದಾರಿ ದೀಪವಾಗಿದೆ. ದೇಹ ಶುದ್ದಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ವಾಸಕೋಶದ ಸಮಸ್ಯೆಗಳನ್ನು ದೂರವಾಗಿಸುತ್ತದೆ. ದೇಹದ ಸಮತೋಲನೆಯನ್ನು ಕಾಪಾಡಿ ಜೀವನದ ಗುಣಮಟ್ಟವನ್ನು ಎತ್ತಿ ಹಿಡಿಯುತ್ತದೆ.


ಮುಖದ ಮೇಲೆ ಸದಾ ನಗು, ಉತ್ತಮ ಕಾಂತಿಯನ್ನು ತರುತ್ತದೆ ಯೋಗ. ಸುಂದರವಾದ ಬದುಕಿಗೆ ಯೋಗವೇ ರಾಮ ಬಾಣ. ಸತ್ ಚಿಂತನೆಗಳು ಯೋಗದಿಂದ ಮಾತ್ರ ಹೊರ ಹೊಮ್ಮುತ್ತವೆ. ಆದಿಕಾಲದಿಂದ ಬೆಳೆದು ಬಂದ ಯೋಗ ನಮ್ಮ ದೇಶದ ಮೂಲ ಎನ್ನುವುದು ನಮ್ಮ ಹೆಮ್ಮೆ. ಶಿಸ್ತು ಬದ್ಧ, ಕ್ರಮಬದ್ಧ ಜೀವನಕ್ಕಾಗಿ ಯೋಗ ಅವಶ್ಯಕವಾಗಿದೆ. ಯೋಗವನ್ನು ಮೈಗೂಡಿಸಿಕೊಂಡು ನಮ್ಮ ಬದುಕನ್ನು ಹಸನಾಗಿಸೋಣ. ಕರೋನ ಮಾತ್ರವಲ್ಲ ಮುಂಬರುವ ಯಾವದೇ ಕಾಯಿಲೆಗಳು ನಮ್ಮನ್ನು ಎನೂ ಮಾಡಲು ಸಾಧ್ಯವಿಲ್ಲ. ನಮ್ಮ ಪೂರ್ವಜರ ವಿದ್ಯೆ ನಮಗಲ್ಲದೇ ಮತ್ತಾರಿಗೆ…?


ಶ್ರೀಮತಿ ಸಹ ಶಿಕ್ಷಕಿ
ಸ.ಮಾ.ಪ್ರಾ ಶಾಲೆ ತಲ್ಲೂರ. ಬೆಳಗಾವಿ ಜಿಲ್ಲೆ.
೯೯೮೦೮೦೧೯೯೩

Related Articles

ಪ್ರತಿಕ್ರಿಯೆ ನೀಡಿ

Latest Articles