ವೈಕುಂಠ ಏಕಾದಶಿಯ ಮಹತ್ವ

ಧನುರ್ಮಾಸದಲ್ಲಿ ಬರುವ ಅಂದರೆ ಸಾಮಾನ್ಯವಾಗಿ ಮಾರ್ಗಶಿರ/ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು “ವೈಕುಂಠ ಏಕಾದಶಿ” ಆಚರಿಸಲಾಗುತ್ತದೆ. ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ.

ಏಕಾದಶಿಗೆ ಸಂಬಂಧಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ: ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ. ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಿಯೇ ಯಮುನಾ ನದಿ ಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ. ಆ ಸಮಯ ಇನ್ನೂ ರಾಕ್ಷಸರ ಸಂಚಾರ ಕಾಲವಾಗಿತ್ತು. ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು. ಆ ತಪ್ಪಿಗೆ ಶಿಕ್ಷೆಯಾಗಿ ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.

ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವುದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ. ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ.

ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ. ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯಿಂದ ಆಲಿಸುತ್ತಿದ್ದರು.

ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು. ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾ ತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.

ಮುಕ್ಕೋಟಿ ದ್ವಾದಶಿ ಅಂದರೇನು? ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ. ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.

ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ? ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡುವುದು ಶ್ರೇಷ್ಠ. ಅವುಗಳು – ತಿರುಮಲ, ಶ್ರೀಮೂಷ್ಣಂ, ತೋತಾದ್ರಿ, ಶ್ರೀರಂಗ, ಇತ್ಯಾದಿ. ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನಗಳಲ್ಲಿ ಕೂಡ ಮಾಡಬಹುದು.

ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ. ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು. ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ 24 ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.

ಸಂಗ್ರಹ : ನರಹರಿ ಸುಮಧ್ವ ಸುಮಧ್ವಸೇವ

Related Articles

ಪ್ರತಿಕ್ರಿಯೆ ನೀಡಿ

Latest Articles