ಸ್ವರ್ಣಗೌರಿ ವ್ರತ: ತಿಳಿದಿರಲಿ ಈ ಸಂಗತಿಗಳು

ಶ್ರಾವಣಮಾಸದ ವೈಭವದ ಲಕ್ಷ್ಮೀಪೂಜೆಯ ನಂತರ ಬರುವ ಭಾದ್ರಪದ ಮಾಸದ ಗೌರೀ ಹಬ್ಬ ವಿಶೇಷತೆಗಳಲ್ಲಿ ಒಂದು.

ಯಾರು ಈ ಸ್ವರ್ಣ ಗೌರಿ?
ಸುವರ್ಣ ಬಣ್ಣದ ಗೌರಿ ಶಿವನ ಅರ್ಧಾಂಗಿ. ಆಕೆ ಜಗದ್ವಂದ್ಯಳು. ದಕ್ಷ ಮಹಾರಾಜನ ಮಗಳಾಗಿ ಹುಟ್ಟಿ ಶಿವನ ಮಡದಿಯಾದ ದಾಕ್ಷಾಯಿಣಿ, ತವರಿನಲ್ಲಿ ತಂದೆ ಮಾಡುವ ಯಾಗಕ್ಕೆ ಬಂದು ಅಪಮಾನಿತಳಾಗುತ್ತಾಳೆ. ಯಜ್ಞಕುಂಡದಲ್ಲೇ ಪ್ರಾಣತ್ಯಾಗ ಮಾಡಿದ ಆಕೆ ಹುಟ್ಟಿದ್ದು ಮಹಾ ಶಿವಭಕ್ತನಾದ ಹಿಮವಂತ ಮತ್ತು ಆತನ ಪುಣ್ಯ ವಲ್ಲಭೆ ಮೇನಾದೇವಿಯರಿಗೆ ಮಗಳಾಗಿ! ಗಿರಿಜೆ ಶಿವಲಿಂಗ ದರ್ಶನ ಮಾಡಿಯೇ ಕಣ್ತೆರೆದವಳು. ಮುಂದಿನ ಅವಳ ಕತೆ ರೋಚಕವಾಗಿದೆ.
 
ಗೌರಿ-ಶಂಕರ ವಿವಾಹ
ಶಿವಭಕ್ತೆಯಾಗಿಯೇ ಬೆಳೆದ ಗೌರಿ. ನಾರದರ ಸಲಹೆಯಂತೆ ಹೇಮಕೂಟದಲ್ಲಿ ತಪೋಯೋಗದಲ್ಲಿರುವ ಶಿವನ ಬಳಿ, ತನ್ನ ಸಖಿಯರಾದ ಜಯ-ವಿಜಯರ ಜೊತೆ ಬಂದು ಶಿವನ ಅರ್ಚನೆಗೆ ತೊಡಗುತ್ತಾಳೆ. ತಾರಕಸುರನ ವಧೆಗಾಗಿ ಕುಮಾರ ಸಂಭವವಾಗಬೇಕು. ಶಿವ ಗಿರಿಜೆಗೆ ಒಲಿಯಬೇಕು. ಗೌರಿಯ ತಪೋನಿಷ್ಠೆ ಅಚಲವಾದುದು. ವಟುವೇಷ ಧರಿಸಿ ಅವಳ ಪರೀಕ್ಷೆಗೆ ಬಂದ ಶಿವನದೇ ಪರೀಕ್ಷೆಯಾಯಿತು. ಗಿರಿಜೆಗಾಗಿ ಕಾಮನನ್ನು ಬದುಕಿಸಿದ. ಮೂರು ಲೋಕ ಮೆಚ್ಚುವಂತೆ, ಲೋಕಕಲ್ಯಾಣವಾಗುವಂತೆ ಗೌರೀ ಶಂಕರರ ವಿವಾಹವಾಯಿತು. ಶಿವನು ಸ್ವಯಂಭೂ, ಶಕ್ತಿ ಹಲವು ರೂಪ, ಜನ್ಮ ತಾಳಿ ಪರಶಿವನನ್ನೇ ಸೇರುವುದು ಅರ್ಥಪೂರ್ಣ.   
                        ‌                                                        
ಎಲ್ಲಾ ಮಹಿಳೆಯರಿಗೂ ಆದರ್ಶ ಈ ಗೌರಿ
ಆನೆಮೊಗದ ತನ್ನ ಮಗ ಲೋಕವಂದಿತನಾಗಬೇಕೆಂದು ವರ ಪಡೆದವಳು ಗೌರಿ. ವಿರೂಪಾಕ್ಷನನ್ನು ತನ್ನ ಮನದಿಚ್ಛೆಯಂತೆ ಕಠಿಣ ತಪಸ್ಸಿನಿಂದ ಪತಿಯಾಗಿ ಪಡೆದು, ತಾರಕಾಸುರನನ್ನು ಸಂಹರಿಸುವ ಸ್ಕಂದನನ್ನು ಪುತ್ರನಾಗಿ ಬೆಳೆಸಿ, ತನ್ನ ಮೈ ಮಣ್ಣಿನಿಂದಲೇ ಮುದ್ದಿನ ಮಗನನ್ನು ಸೃಷ್ಟಿಸಿ, ಅವನು ಪತಿಯಿಂದ ಹತನಾದಾಗ ಮತ್ತೆ ಪ್ರಾಣಶಕ್ತಿ ನೀಡಿ, ಮಗನು ಬದುಕುವಂತೆ ಮಾಡಿಸಿ, ವಿರೂಪನಾದ ಮಗನು ಮಹಾಮಹಿಮನಾಗುವಂತೆ ಮಾಡಿದ ಗೌರಿ, ಸುವರ್ಣದ ಗೌರಿ, ಸ್ವರ್ಣಗೌರಿ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯಳು. ಪುರುಷರಿಗೂ ಮಾನ್ಯಳು. ಅವಳ ಭಕ್ತರನ್ನು ಶಿವನೇ ಕಾಯುತ್ತಾನೆ.
 
ಗೌರೀ ವ್ರತ ಯಾಕೆ?
ಶಿವನ ಅರ್ಧಾಂಗಿ ಪಾರ್ವತಿ ಹರತಾಳಿಕಾ ಉಪವಾಸ ಮಾಡುತ್ತಾ 'ಅಪರ್ಣಾ' ಎಂದು ಕರೆಸಿಕೊಂಡು ಯಶಸ್ವಿಯಾಗಿ ಶಿವನನ್ನು ಪಡೆದಳು ಎನ್ನುವ ಕಥೆಯಿದೆ. ಅಂಥ ಹಠಸಾಧನೆಯ ಗೌರಿಯನ್ನು ಪೂಜಿಸಿದರೆ ತಾವೂ ಬದುಕಿನ ನೆಮ್ಮದಿಯನ್ನು ಪಡೆಯಬಹುದು ಎಂಬ ಬಯಕೆಯಿಂದ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ.
 
ಷೋಡಶೋಪಚಾರ
ಷೋಡಶೋಪಚಾರಗಳು ಅಂದರೆ ಹದಿನಾರು ಬಗೆಯ ಉಪಚಾರಗಳು. ಅಭೀಷೇಕ, ಸ್ನಾನ, ಗಂಧ, ಅರಿಶಿನ ಕುಂಕುಮ, ವಸ್ತ್ರ, ಒಡವೆ, ಮಾಂಗಲ್ಯ, ಕಜ್ಜಲ, ಕಂಕಣ ಹೀಗೆ ಮಂಟಪದಲ್ಲಿ ಆಸೀನಳಾದ ಗೌರಿಗೆ ಉಪಚಾರಗಳು ನಡೆದು ಕೊನೆಗೆ ಸಿಹಿಯೊಂದಿಗೆ ಆಕೆಯನ್ನು ಸಂತೃಪ್ತಿಗೊಳಿಸುವುದು.
 
ಗೌರಿ ಅಲಂಕಾರ
ಈ ಎಲ್ಲಾ ಉಪಚಾರಗಳಲ್ಲೇ ಅತ್ಯಂತ ಖುಷಿ ಕೊಡುವ ಉಪಚಾರವೆಂದರೆ ಗೌರಿಯ ಅಲಂಕಾರ. ಅಲಂಕಾರ, ಸ್ತ್ರೀಯರಿಗೆ ಪರಮಾಪ್ತ, ಸೇವಂತಿಕಾ, ಬಕುಳ, ಚಂಪಕ, ಪುನ್ನಾಗ, ಜಾಜಿ, ಕರವೀರ, ಮಲ್ಲಿಕಾ ಎನ್ನುವ ಹೂಗಳೊಂದಿಗೆ ಬಣ್ಣ ಬಣ್ಣದ ಹಲವು ಹೂವುಗಳು ಈ ಗೌರಿಹಬ್ಬಕ್ಕೇ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆತು ಗೌರಿಯ ಮುಡಿಯೇರುವುದನ್ನು ನೋಡುವಾಗ ಈಗ ಪೂಜೆ ಪರಿಪೂರ್ಣವಾಯಿತು ಎಂದೆನ್ನಿಸುವುದು ಸತ್ಯ. ‌  ‌    ‌    ‌    ‌    ‌       ‌    ‌                      ‌      ‌        ‌     
 ‌ಬಾಗಿನ ಕೊಡುವುದು    
 ಬಾಗಿನ ಎಂದರೆ ದಾನ, ಹಾರೈಕೆ, ಕೊಡುಕೊಳ್ಳುವಿಕೆಯ ಬಾಗಿನವೂ ಗೌರಿಹಬ್ಬದ ವೈಶಿಷ್ಟ್ಯವೇ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತಾ ನೀಡುವ ಬಾಗಿನ ದಾನವೂ ಹೌದು, ಹಾರೈಕೆಯೂ ಹೌದು.
 
ಹಿಂದಿನ ದಿನವೇ ವ್ರತ ಆರಂಭ
ಯಾವುದೇ ವ್ರತವಾಗಲಿ ಹಬ್ಬವಾಗಲಿ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವ್ರತದ ಹಿಂದಿನ ದಿನ ರಾತ್ರಿಯೇ ನಾಳೆ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿ ಉಪವಾಸ ಅಥವಾ ಫಲಾಹಾರ ಇಲ್ಲವೇ ಅಲ್ಪಾಹಾರ ಮಾಡಿ ವ್ರತದ ಪ್ರಧಾನ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ಗೌರಿಹಬ್ಬ ಅಥವಾ ಸ್ವರ್ಣಗೌರಿ ವ್ರತವೂ ಈ ನಿಯಮಕ್ಕೆ ಹೊರತಾಗಿಲ್ಲ.   
      ‌   ‌    ‌   ‌   ‌    ‌   ‌   ‌   
ನಸುಕಿನಲ್ಲೇ ವ್ರತಕ್ಕೆ ತಯಾರಿ
ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ವಿಭೂತಿ ಕುಂಕುಮ ಮುಂತಾದವುಗಳನ್ನಿಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು. ನದಿಯು ಸಮೀಪದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ತಣ್ಣಿರಿನಿಂದ ಸ್ನಾನ ಮಾಡಬಹುದು. ಆರೋಗ್ಯವನ್ನು ಗಮನಿಸಿ ಸ್ನಾನಕ್ಕೆ ಬೆಚ್ಚಗಿನ ನೀರನ್ನೂ ಬಳಸಬಹುದು.
 
ಗೌರಿಪೂಜೆಗೂ ಮುನ್ನ...
ಪರಿಶುದ್ಧವಾದ ಪೂಜೆಯ ಸ್ಥಾನದಲ್ಲಿ ಫಲ-ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಬಾಳೆ ಎಲೆಯ ಮೇಲೆ ಅಕ್ಕಿಯ ರಾಶಿಯನ್ನು ಹರಡಿ ಅದರ ಮೇಲೆ ಲಭ್ಯವಿರುವ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಕನಿಷ್ಠ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆ ಮುಂತಾದವುಗಳನ್ನಿಟ್ಟು ಅಲಂಕರಿಸಬೇಕು.   
 ‌     ‌    ‌       ‌   ‌   ‌    ‌                                                                      
 ಗೌರಿ ಪೂಜೆ ಹೇಗೆ ?
ಪೂಜೆಯನ್ನು ಎರಡು ಬಗೆಯಲ್ಲಿ ಮಾಡಬಹುದು. ಅನುಕೂಲವಿದ್ದರೆ ಮಂತ್ರಗಳನ್ನು ಉಚ್ಚರಿಸುತ್ತಾ ಪೂಜಿಸಬಹುದು. ಶ್ರೀ ಗೌರ್ಯೈ ನಮಃ ಎಂದೋ, ಹೇಳುತ್ತಾ ಆವಾಹನೆ, ಆಸನ, ಪಾದ್ಯ, ಅರ್ಘ್ಯ, ಅಭಿಷೇಕ, ಗಂಧ, ಪುಷ್ಪ, ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಎಂಬ ಸ್ತೋತ್ರವನ್ನು ಆವರ್ತಿಸಬಹುದು. ಅದಲ್ಲದಿದರೆ ಭಕ್ತಿಯಿಂದ, ಗೌರಿಯನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ಪೂಜಿಸಬಹುದು.  
   ‌      ‌  ‌   ‌    ‌     ‌     ‌                                                                                  
ವ್ರತಾಚರಣೆ ಹೇಗೆ ?
ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ವ್ರತ ಆಚರಿಸಬೇಕು. ಅಂದು ಸೂರ್ಯೋದಯ ಸಮಯದಲ್ಲಿ ತದಿಗೆ ತಿಥಿ ಇರಬೇಕು. ಗಣೇಶನ ಪೂಜೆಗೆ ನಿಯತವಾಗಿರುವ ಚತುರ್ಥಿ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯಯೊಡನೆ ಚತುರ್ಥಿಯೋಗವು ಕೂಡಿಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿ ದೇವಿಯನ್ನು ಹೃದಯದಲ್ಲಿ ಧ್ಯಾನಮಾಡಿ ಆನಂತರ ಹೊರಗೆ ಪೂಜಿಸಬೇಕು.      ‌    ‌
                                                                           
ಗೌರಿ ಪ್ರತಿಮೆ
ಗೌರಿದೇವಿಯ ಸುವರ್ಣಪ್ರತಿಮೆ ಅಥವಾ ಕಲಶ ಅಥವಾ ಹರಿದ್ರಾ (ಅರಿಶಿನದ) ಅಥವಾ ಶುದ್ಧ ನದಿಯಿಂದ, ಸರೋವರದಿಂದ ಸಂಗ್ರಹಿಸಿದ ಮರಳು ಹಾಗೂ ಮಣ್ಣು ಮುಂತಾದವುಗಳಲ್ಲಿ ದೇವಿಯನ್ನು ಅವಾಹಿಸಿ ಪೂಜಿಸಬಹುದಾಗಿದೆ.      ‌
     ‌     ‌    ‌    ‌                 ‌                                   
ಘಂಟಾನಾದ ಸಹಿತ ಪೂಜೆ
ಘಂಟಾನಾದ ಸಹಿತ ಪೂಜೆಯ ಪ್ರಾರಂಭ, ಆಚಮನ, ಸಂಕಲ್ಪ, ಕಳಶಪೂಜೆ, ಮಹಾಗಣಪತಿ ಪೂಜೆ, ಸ್ವರ್ಣಗೌರಿ ದೇವತಾ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಧ್ಯಾನಿಸಬೇಕು. ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಬೇಕು. ಹೊಸ ದಾರವನ್ನು ಪೂಜೆ ಮತ್ತು ಧಾರಣೆಗಾಗಿ ಇರಿಸಿಕೊಳ್ಳಬೇಕು. ಪಾದ್ಯ, ಅರ್ಘ್ಯ, ಅಚಮನ, ಮಧುಪರ್ಕ, ಪಂಚಾಮೃತಸ್ನಾನ, ಶುದ್ದೋದಕಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ ಕುಂಕುಮ ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪ ಇವುಗಳನ್ನು ಜಗನ್ಮಾತೆಗೆ ಸಮರ್ಪಿಸಬೇಕು.

ಷೋ ಡಶ ನಾಮ, ಹದಿನಾರು ನಾಮಗಳಿಂದ ಪೂಜೆ 
ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ 16 ಗ್ರಂಥಿಗಳಿಗೂ ಕ್ರಮವಾಗಿ ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌಮಾರಿ, ಭದ್ರಾ, ವಿಷ್ಣುಸೋದರಿ, ಮಂಗಳದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರ ಪತ್ನಿ, ದಾಕ್ಷಾಯಣಿ, ಕೃಷ್ಣವೇಣಿ, ಭವಾನಿ, ಲೋಲೇಕ್ಷಣಾ, ಮೇನಕಾತ್ಮಜಾ ಎಂಬ ಹದಿನಾರು ನಾಮಗಳಿಂದ ಪೂಜೆಯನ್ನು ಸಲ್ಲಿಸಬೇಕು. ಅಷ್ಟೋತ್ತರ ಶತದಿವ್ಯನಾಮಗಳಿಂದ ಪೂಜೆಯನ್ನು ಸಲ್ಲಿಸಿ ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು.
 
ನೈವೇದ್ಯ ಹೇಗಿರಬೇಕು ?
ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷದ್ರವ್ಯ ಹರಿದ್ರಾನ್ನ, ಮುದ್ಗಾನ್ನ. ಇಷ್ಟಾರ್ಥವನ್ನು ಸಲ್ಲಿಸಬೇಕೆಂದು ದೇವಿಯನ್ನು ಪ್ರಾರ್ಥಿಸಿ ಆಕೆಯ ಅನುಮತಿಯಿಂದ ಮೇಲೆ ಹೇಳಿದ ಪೂಜಿತವಾದ ಹದಿನಾರು ಗಂಟುಗಳುಳ್ಳ ದಾರವನ್ನು ಧರಿಸಬೇಕು. ವ್ರತಸಂಪೂರ್ತಿಗಾಗಿ ಶ್ರೇಷ್ಠದ್ವಿಜರಿಗೂ, ಸುವಾಸಿನಿಯರಿಗೂ ಪಕ್ವಾನ್ನವೇ ಮುಂತಾದ ಉಪಾಯನಗಳನ್ನು ದಾನ ಮಾಡಬೇಕು. ದೇವಿಗೆ ಛತ್ರ ಚಾಮರ, ನೃತ್ಯ, ವಾದ್ಯ, ಆಂದೋಳಿಕಾ ಮತ್ತು ಇತರ ಉಪಚಾರಗಳನ್ನು ಸಮರ್ಪಿಸಿ ಆಕೆಯ ಪ್ರೀತಿ ಪ್ರಸನ್ನತೆಗೆ ಪ್ರಾರ್ಥಿಸಬೇಕು.

ಗೌರಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ

 ಶ್ರಾವಣದಲ್ಲಂತೂ ಹಬ್ಬಗಳದ್ದೇ ಕಾರುಬಾರು. ಅಷ್ಟಿದ್ದೂ ಭಾದ್ರಪದದ ಗೌರಿಹಬ್ಬ ಮಾತ್ರ ಒಂದು ಮುಷ್ಠಿ ಹೆಚ್ಚು ಆಪ್ತ. ಏಕೆಂದರೆ ಗೌರಿಯ ಸಂಸಾರದಲ್ಲಿ ನಮ್ಮ ಸಂಸಾರದ ನೆರಳೂ ಕಾಣುತ್ತದೆ ಎಂದೋ, ಗೌರಿಯಂತೇ ಕುಟುಂಬದ ಜವಾಬ್ದಾರಿ ತನ್ನ ಹೆಗಲ ಮೇಲಿರುತ್ತದೆ ಎಂದೋ, ಒಟ್ಟಿನಲ್ಲಿ ಗೌರಿಯಂಥದ್ದೇ ಬದುಕು ನಮ್ಮದೂ ಎನ್ನುವ ಕಾರಣಕ್ಕೆ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಹೆಚ್ಚು ಪ್ರೀತಿ. 

 ಆಭರಣ : ದೇವರಿಗೆ ಧರಿಸಲಿಕ್ಕೆ ಆಭರಣ ಕೊಡುವುದು. ಇಲ್ಲಿ ಆಭರಣವೆಂದರೆ ಅರಿಸಿನ, ಕುಂಕುಮ, ಗಂಧ, ಅಕ್ಷತೆ, ದೇವರ ಆಭರಣಗಳು ಎಲ್ಲವೂ ಸೇರುತ್ತವೆ.

ಪುಷ್ಪಮಾಲಿಕೆ : ಬಂದ ಅತಿಥಿ ಗೆ ಹೂವಿನ ಹಾರ ಅಥವಾ ಹೂವು ಹಾಕಿ ಪೂಜಿಸುವುದು.

 ಧೂಪ : ಸುಗಂಧ ಪರಿಮಳಯುಕ್ತ ವಾತಾವರಣ ನಿರ್ಮಾಣ ಮಾಡುವುದು.

 ದೀಪ : ಪರಸ್ಪರ ವೀಕ್ಷಣೆಗಾಗಿ (ದೇವರು - ಭಕ್ತ) ಅನುಕೂಲ ಮಾಡಿಕೊಡುವುದು.
ಇಲ್ಲಿ ಅಷ್ಟೋತ್ತರ , ಅರ್ಚನೆ ಅಷ್ಟಾವಧಾನ ಸೇವೆ, ಮಾಡಿ ದೇವರು ಮಾಡಿದ ಸಾಹಸಗಳನ್ನು ಹಾಡಿ ಹೊಗಳುವುದು.

 ಮಧುಪರ್ಕ: (ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ) ಯನ್ನು ಅರ್ಪಿಸುವುದು.

 ನೈವೇದ್ಯ: ನಿಮ್ಮ ಶಕ್ತಿಗೆ ತಕ್ಕಂತೆ ದೇವರಿಗೆ ಊಟ ಮಾಡಿಸುವುದು (ನೀವು ಕಷ್ಟಪಟ್ಟು ದುಡಿದ ಹಣದಿಂದ ಮಾಡಿದ ನೈವೇದ್ಯವಾಗಿರಬೇಕು)

ದೇವರಿಗೆ ತುಪ್ಪದನ್ನ, ಮೊಸರನ್ನ, ಚಿತ್ರಾನ್ನ, ಶಾಲ್ತಾಹ್ನ, ಬೆಲ್ಲದನ್ನ, ಸಿಹಿಪೊಂಗಲ್, ಹುಳಿ ಅವಲಕ್ಕಿ, ಪುಳಿಯೊಗರೆ, ಸಜ್ಜಿಗೆ ಇತ್ಯಾದಿ ನೈವೇದ್ಯ ಮಾಡಬಹುದು. ತಾಂಬೂಲ ಇಡುವುದು ಅತ್ಯಂತ ಮುಖ್ಯವಾಗಿರುತ್ತದೆ, ದೇವರ ನೈವೇದ್ಯ ದ ನಂತರ ತಾಂಬೂಲ ಹಾಕಿಕೊಂಡು, ಅಡಿಗೆಯಲ್ಲಿನ ಗುಣಾವಗುಣಗಳನ್ನು ತೊಲಗಿಸುವರು.

ನೈವೇದ್ಯ ಮಾಡಿದ ತಕ್ಷಣ ಮಂಗಳಾರತಿ ಮಾಡಬಾರದು
ನೈವೇದ್ಯ ಮಾಡಿ ಸಾವಿತ್ರೀ ದೇವಿ ಸ್ತೋತ್ರ, ಅಥವಾ ಅನ್ನಪೂರ್ಣೇಶ್ವರಿ ಸ್ತೋತ್ರ ಅಥವಾ ದೇವರ ಸ್ತೋತ್ರ ಪಠಿಸಿ, ನಂತರ ಮಂಗಳಾರತಿ ಮಾಡಬೇಕು. ತುಪ್ಪದ ಬತ್ತಿಗಳಿಂದ ಆರತಿ ಬೆಳಗಬೇಕು. ನಂತರ ನಮಸ್ಕಾರ ಮಾಡಬೇಕು.

ವಿಸರ್ಜನೆ : ದೇವರನ್ನು ಆ ಸ್ಥಳದಿಂದ ವಿಸರ್ಜಿಸುವುದು, ಕಳುಹಿಸಿಕೊಡುವುದು. ಇಲ್ಲಿ ಪೂರ್ಣಫಲ ಸಮೇತ ತಾಂಬೂಲ ಕೊಟ್ಟರೆ ಅಥವಾ ಫಲದಾನ ಮಾಡಿ , ಮತ್ತೆ ಬರುವಂತೆ ಆಮಂತ್ರಣದ ಪ್ರಾರ್ಥನೆ ಕೊಟ್ಟು ವಿಸರ್ಜಿಸುವುದು.

ಸಂಗ್ರಹ: ಎಚ್.ಎಸ್.ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಎಲೆಕ್ಟಾçನಿಕ್ ಸಿಟಿ ಸಮೀಪ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles