ಶತಮಾನದ ಶಕಪುರುಷರು ಶ್ರೀ ಸತ್ಯಪ್ರಮೋದ ತೀರ್ಥರು

*ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಜೀವನದ ಸಕಲವಿಧ ತಮ ಕಳೆಯುವ ಗುರೂತ್ತಮರು, .ಯತಿಕುಲೋತ್ತಮರು, ಶ್ರೀ ಶ್ರೀ ಸತ್ಯಪ್ರಮೋದತೀರ್ಥರು. ಎಂಟು ದಶಕದ ಇತಿಹಾಸ ಹೊಂದಿದ ಯತಿರಾಜರು. ಹಂಸನಾಮಕನ ಪೀಠದಲ್ಲಿ ವಿರಾಜಿಸಿದ ರಾಜಹಂಸರು. ಅವರ ವ್ಯಕ್ತಿತ್ವ ವರ್ಣನೀಯ. ನಿತ್ಯ ಸ್ಮರಣೀಯ. ಯತಿಜೀವನದ ಸಂವಿಧಾನವನ್ನೇ ರಚಿಸಿದ ಶಿಲ್ಪಿಗಳು. ದೇಹವನ್ನು ಧರ್ಮದಲ್ಲಿ, ಇಂದ್ರಿಯಗಳನ್ನು ಸತ್ಕರ್ಮಗಳಲ್ಲಿ ತೊಡಗಿಸಿಕೊಂಡವರು. ತಮ್ಮ ಬದುಕಿನಿಂದಲೇ ಸಮಾಜಕ್ಕೆ ಬೋಧನೆ ನೀಡಿದವರು. ಮಹಾತಪಸ್ವಿಗಳು, ಬ್ರಹ್ಮವರ್ಚಸ್ವಿಗಳು ಶ್ರೀಸತ್ಯಪ್ರಮೋದತೀರ್ಥರು.

ಪರಮಸಾತ್ವಿಕರು, ಧರ್ಮನಿಷ್ಠರು, ಅಜಾತಶತ್ರುಗಳೂ ಮುಖ್ಯಪ್ರಾಣನ ಉಪಾಸಕರಾದ ಗುತ್ತಲ ಶ್ರೀರಂಗಾಚಾರ್ಯರು ಮತ್ತು ಕಮಲಾಬಾಯಿ ದಂಪತಿಗಳಲ್ಲಿ ಹಾವೇರಿಜಿಲ್ಲೆಯ ಕರಜಗಿ ಗ್ರಾಮದಲ್ಲಿ ಕಾಲಯುಕ್ತಿಸಂವತ್ಸರದ (ಕ್ರಿ.ಶ.1918) ಭಾದ್ರಪದ ಮಾಸದ ಕೃಷ್ಣ ಪಂಚಮಿಯಂದು ಬೆಳಗಿನ ಜಾವದಲ್ಲಿ ಭಾರತೀಯ ಆಧ್ಯಾತ್ಮಪ್ರಪಂಚದಲ್ಲಿ ಜ್ಞಾನತರಣಿಯ ಉದಯವಾಯಿತು. ಅವರೇ ಗುತ್ತಲ ಗುರುರಾಜಾಚಾರ್ಯರು. ನಿರಂತರ ಶಾಸ್ತ್ರಾಧ್ಯಯನದಲ್ಲಿಯೇ ನಿರತರಾದ ಗುರುರಾಜಾಚಾರ್ಯರು ಅಂದಿನ ಉತ್ತರಾದಿಮಠಾಧೀಶರಾದ ಶ್ರೀಸತ್ಯಪ್ರಜ್ಞತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾ ಅಧ್ಯಯನವನ್ನು ಮಾಡಿದರು. ಮೈಸೂರಿನ ಧಾರಾಪುರಂ ಕೃಷ್ಣಮೂರ್ತಿ ಆಚಾರ್ಯರಲ್ಲಿ ಸಮಗ್ರನ್ಯಾಯಶಾಸ್ತ್ರವನ್ನು ಅಧ್ಯಯನಮಾಡಿ 1937ರಲ್ಲಿ ಮದ್ರಾಸ ಸರಕಾರದಿಂದ “ತರ್ಕಶಿರೋಮಣಿ”ಪದವಿಯನ್ನು ಪಡೆದರು.

ಗುತ್ತಲ ಗುರುರಾಜಾಚಾರ್ಯರ ಪ್ರತಿಭೆ, ಸಿದ್ಧಾಂತನಿಷ್ಠೆ, ವೈರಾಗ್ಯ, ಸದಾಚಾರ, ಗುರುಭಕ್ತಿ ಔದಾರ್ಯ ಇವುಗಳನ್ನೆಲ್ಲ ಮನಗಂಡ ಅಂದಿನ ಉತ್ತರಾದಿಮಠಧೀಶರಾದ ಶ್ರೀಸತ್ಯಾಭಿಜ್ಞತೀರ್ಥರು ಗುರುರಾಜಾಚಾರ್ಯರನ್ನು ಕರೆದು ತಮ್ಮ ವೇದಾಂತಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಘೋಶಿಸಿ ಪ್ರಣವಮಂತ್ರ ಉಪದೇಶಿಸಿ ಸನ್ಯಾಸದೀಕ್ಷೆ ನೀಡಿದರು. ಗುತ್ತಲ ಗುರುರಾಜಾಚಾರ್ಯರು  ಶ್ರೀಸತ್ಯಪ್ರಮೋದತೀರ್ಥರಾದರು. ಚತುರ್ಯುಗಗಳಲ್ಲಿ ಚತುರ್ಮುಖನಿಂದ ಪೂಜೆಗೊಂಡ ಶ್ರೀಮನ್ಮಧ್ವಾಚಾರ್ಯಕರಾರ್ಚಿತ ಶ್ರೀಮನ್ಮೂಲರಾಮ-ಸೀತೆಯರ ಪೂಜಾಭಾಗ್ಯವನ್ನು ಪಡೆದರು. ಅವರ ಅನೇಕಸಾಧನೆಗಳಲ್ಲಿ ಅತಿ ದೊಡ್ಡಸಾಧನೆ 50 ವರುಷಗಳ ವರೆಗೂ ಒಂದು ದಿನವೂ ಬಿಡದೆ ಮೂಲಸೀತಾರಾಮರ, ನಾರಾಯಣದತ್ತವಾದ ವ್ಯಾಸಮುಷ್ಠಿಗಳ ಪೂಜೆಗೈದದ್ದು.

ಧರ್ಮದಿಗ್ವಿಜಯ

ದಕ್ಷಿಣಭಾರತದಲ್ಲಿ ರಾಜಗೋಪಾಲಪುರ, ತಿರುಕೋಯಿಲೂರು, ಆರಣಿ, ಶ್ರೀಮುಷ್ಣ, ಶ್ರೀರಂಗ ಹೀಗೆ ಅನೇಕ ಕಡೆಗಳಲ್ಲಿ ಧರ್ಮ ದಿಗ್ವಿಜಯಮಾಡಿದರು. ಉತ್ತರ ಭಾರತದಲ್ಲಿ ವಿದ್ವತ್ತಿನ ರಾಜಧಾನಿಯಾದ ಕಾಶಿಗೆ ಬಂದರು. ಅಲ್ಲಿ ಅನೇಕ ಘಟಾನುಘಟಿ ವಿದ್ವಾಂಸರೊಂದಿಗೆ ವಾಕ್ಯಾರ್ಥಮಾಡಿದರು. ನಿರಂತರವಾದ ಶ್ರೀಸತ್ಯಪ್ರಮೋದರ ವಾಕ್ಯಾರ್ಥ, ಚತುಶ್ಶಾಸ್ತ್ರಪಾಂಡಿತ್ಯ, ಸಿದ್ಧಾಂತದೀಕ್ಷೆಯನ್ನು ಕಂಡ ವಾರಾಣಾಸಿಯ ವಿದ್ವಾಂಸರೆಲ್ಲರೂ ಮುಕ್ತಕಂಠದಿಂದ ಶ್ರೀಗಳವರನ್ನು ಪ್ರಶಂಸಿಸಿದರು. ಹೀಗೆ ಅನೇಕ ವಿದ್ವದ್ಗೋಷ್ಠಿಗಳು ಅವರ ಪಾಂಡಿತ್ಯದ ಪ್ರಖರತೆಗೆ ಸಾಕ್ಷಿಯಾಗಿವೆ. ‘ಶ್ರೀರಾಮ’ ಎಂಬೆರಡು ಅಕ್ಷರಗಳಲ್ಲಿ ಸಮಗ್ರ ಬ್ರಹ್ಮಸೂತ್ರಗಳು, ಭಗವದ್ಗೀತೆ, ಉಪನಿಷತ್ತುಗಳು, ಸಮಗ್ರಪುರಾಣಗಳ ಅರ್ಥವನ್ನು ತುಂಬಿ ತೋರಿಸಿದರು. ನಿರಂತರ ಎಂಟು ದಿನಗಳ ವರೆಗೆ ನಡೆದ ಈ ರಾಮಶಬ್ದಾರ್ಥಕ್ಕೆ ಸಾಕ್ಷಿಯಾಯಿತು ಬೆಂಗಳೂರಿನ ಕೋಟೆ ಹೈಸ್ಕೂಲಿನ ಮೈದಾನದ ಶ್ರೀರಾಮೋತ್ಸವ. “ನ್ಯಾಯಸುಧಾಮಂಡನ“ ಯುಕ್ತಿಮಲ್ಲಿಕಾವಿವೃತಿ“ ವಿಜಯೀಂದ್ರವಿಜಯವೈಭವ“ ಭಗವತೋ ನಿರ್ದೋಷತ್ವ“ ಈಶಾನಸ್ತುತಿಖಂಡನ“ ಮೊದಲಾದ ಮೇರು ಗ್ರಂಥಗಳನ್ನು ರಚಿಸಿದರು.

ಜ್ಞಾನದೇಗುಲದ ನಿರ್ಮಾಣ

ಶಾಸ್ತ್ರ ನಿಂತ ನೀರಾಗಬಾರದು. ಗಂಗೆಯಂತೆ ನಿರಂತರ ಹರಿಯಬೇಕೆಂದು 1989ರಲ್ಲಿ ಬೆಂಗಳೂರಿನಲ್ಲಿ ಶ್ರೀಜಯತೀರ್ಥವಿದ್ಯಾಪೀಠವನ್ನು ಸ್ಥಾಪಿಸಿದರು. ವಿದ್ಯಾಚಕ್ರವರ್ತಿಗಳೆನಿಸಿದ ಪೂಜ್ಯ ಗುತ್ತಲ ರಂಗಾಚಾರ್ಯರನ್ನು ಕುಲಪತಿಗಳನ್ನಾಗಿ ನೇಮಿಸಿದರು. ಸನಾತನ ಗುರುಕುಲ ಪದ್ಧತಿಯನ್ನು ಉಳಿಸಲು ಪ್ರಾರಂಭಿಸಿದ ಆ ಜ್ಞಾನದೇಗುಲ ಇಂದು ವಿಶಾಲರೂಪತಾಳಿ ಎರಡನೂರು ವಿದ್ಯಾರ್ಥಿಗಳಿಗೂ ಮಿಗಿಲಾಗಿ ಉಚಿತ ಅನ್ನ ವಸ್ತ್ರ ವಿದ್ಯೆಯನ್ನು ಉಣಿಸುತ್ತಿದೆ. ಅಂದು ಅವರು ಸ್ಥಾಪಿಸಿದ ವಿದ್ಯಾಪೀಠವು ಸಾವಿರಾರು ಮಾಹಾ ಮಹಾ ವಿದ್ವಾಂಸರನ್ನು ನಿರ್ಮಿಸಿ ಸಮಾಜಕ್ಕೆ ನೀಡಿದೆ. ದೇಶದ ಅನೇಕಕಡೆಗಳಲ್ಲಿ ಆ ವಿದ್ವಾಂಸರು ಧರ್ಮಜಾಗ್ರತಿಕಾರ್ಯವನ್ನು ಮಾಡುತ್ತಿದ್ದಾರೆ. ಹೀಗೆ ಸನಾತನ ಧರ್ಮ-ಶಾಸ್ತ್ರಗಳ ಗಂಗೆಯನ್ನು ನಿರಂತರ ಹರಿಸುತ್ತಿರುವ ಭಗೀರಥರು ಶ್ರೀಸತ್ಯಪ್ರಮೋದತೀರ್ಥರು. ಮೂರುಸಾವಿರಕ್ಕೂ ಮಿಗಿಲಾದ ಪ್ರಾಚೀನ ತಾಡವಾಲ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳ ರಕ್ಷಣೆ ಹಾಗು ಪ್ರಕಾಶನೆಯು ಇವರ ಅಸಾಧಾರಣ ಕಾರ್ಯಗಳಲ್ಲಿ ಒಂದಾಗಿದೆ.

ಸಮಾಜಮುಖಿ ಸತ್ಯಪ್ರಮೋದತೀರ್ಥರು

ಶಾಸ್ತ್ರಧ್ಯಯನಕ್ಕಾಗಿ ಗುರುಕುಲ ನಿರ್ಮಾಣಮಾಡಿದರಷ್ಟೇ ಅಲ್ಲದೇ ಬಡ ವಿದ್ಯಾರ್ಥಿಗಳ ಲೌಕಿಕ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಬೇಕೆಂದು “ಜಯಸತ್ಯಪ್ರಮೋದನಿಧಿ“ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತಾರೆ. ಇದಕ್ಕಾಗಿ ಸ್ವಯಂ ಸೇವರಕರ ತಂಡವೇ ನಿರ್ಮಾಣವಾಗಿದೆ. ಬರ ಪ್ರದೇಶಗಳಲ್ಲಿ, ವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಅಗತ್ಯವಸ್ತುಗಳು, ದಿನಸಿ,ವಸ್ತ್ರ, ಹಾಸಿಗೆಗಳನ್ನು, ನಿರಂತರವಾಗಿ ಒದಿಗಿಸುತ್ತಾರೆ. ಯುವಕರಲ್ಲಿ ಧರ್ಮಜಾಗ್ರತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಕೊಳ್ಳುತ್ತಾರೆ. ಉಚಿತವಾಗಿ ವಧೂ-ವರ ಸಮಾವೇಶವನ್ನು ನಡೆಸುತ್ತಾರೆ. ವರ್ಷದಲ್ಲಿ ಎರಡು ಮೂರು ಬಾರಿ ದೇಶದ ಅಲ್ಲಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಿ ಉತ್ತಮವೈದ್ಯರಿಂದ ಸೂಕ್ತವಾದ ಉಚಿತವಾದ ಚಿಕಿತ್ಸೆಯನ್ನು ಒದಗಿಸುತ್ತಾರೆ. ಕರೋನಾದ ಕಷ್ಟದ ಸಂದರ್ಭದಲ್ಲಿ ಪ್ರತಿನಿತ್ಯವೂ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಮನೆ ಮನೆಗಳಿಗೆ ಹೋಗಿ ಔಷಧಿ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಹೀಗೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಭದ್ರಬುನಾದಿ ಹಾಕಿದವರು ಶ್ರೀಸತ್ಯಪ್ರಮೋದ ತೀರ್ಥರು.

ನಿರಂತರ ಅನ್ನದಾನ

ಶ್ರೀಗಳ ಹೃದಯ ಸದಾ ಬಡವರಿಗಾಗಿ ಮಿಡಿಯಿತು. ಚಾತುರ್ಮಾಸ್ಯಕ್ಕೆ ಕೂಡಲು ಯಾವ ಊರಿನಲ್ಲಿ ಬರಗಾಲವಿದೆ ಕಷ್ಟದ ಸಮಯವಿದೆ ಎಂದು ತಿಳಿದು ಅಂತಹ ಊರುಗಳಲ್ಲಿಯೇ ಚಾತುರ್ಮಾಸ್ಯಕ್ಕೆ ಕುಳಿತುಕೊಳ್ಳುತ್ತಿದ್ದರು. ಧರ್ಮ-ಪಂಥಗಳ ಭೇದವಿಲ್ಲದೇ ನಿರಂತರ ಅನ್ನದಾನ ನಡೆಯಬೇಕೆಂಬುದು ಅವರ ಇಂಗಿತ. ಶ್ರೀರಂಗಂ, ತಿರುಪತಿ, ತಿರುಕೋಯಿಲೂರು, ಕಂಚಿ, ಮುಂತಾದ ಅನೇಕ ಧಾರ್ಮಿಕಕ್ಷೇತ್ರಗಳಲ್ಲಿ ಶ್ರೀಮಠದಿಂದ ಸತ್ಯಪ್ರಮೋದರು ಪ್ರಾರಂಭಿಸಿದ ಅನ್ನದಾನ ಇಂದಿಗೂ ಸಹ ನಿರಂತರವಾಗಿ ನಡೆಯುತ್ತಿದೆ.

ಸತ್ಯಾತ್ಮರೆಂಬ ಮಾಣಿಕ್ಯ ನೀಡಿದರು

ಐವತ್ತು ವರುಷ ರಾಮಸೇವಕರಾಗಿ ಮೆರೆದ ಶ್ರೀಸತ್ಯಪ್ರಮೋದರು ತಮ್ಮ ಉತ್ತರಾಧಿಕಾರಿಗಳಾಗಿ ಅಭಿನವ ರಘೂತ್ತಮರೆನಿಸಿದ ಆರು ವೈರಿಗಳನ್ನು ಗೆದ್ದ ಮಹಾ ಪರಿಶುದ್ಧರು ಸರ್ವಗುಣಗಳನ್ನು ಅರಗಿಸಿ ಕುಡಿದ ಸರ್ವಜ್ಞಾಚಾರ್ಯರನ್ನು ಆರಿಸಿದರು. 1996ರಲ್ಲಿ ಜಗತ್ತಿಗೆ ಶ್ರೀಸತ್ಯಾತ್ಮರೆಂಬ ದೈವೀಪುರುಷರನ್ನೀತ್ತರು. ಕಲಿಯ ಅಂತ್ಯಗೊಳಿಸಿ ನವ ಯುಗವನ್ನು ಬರೆದ ಯುಗಪುರುಷರನ್ನು ಕೊಟ್ಟ  ಮಹಾಗುರುಗಳು ಶ್ರೀಸತ್ಯಪ್ರಮೋದತೀರ್ಥರು. ಹಿಮಾಲಯದಂತಿರುವ ಶ್ರೀಸತ್ಯಪ್ರಮೋದರ ಮಹಿಮೆ ಮತ್ತು ಸಮಾಜಸೇವೆಯನ್ನು ಎಂದಿಗೂ ಶಬ್ದಗಳಲ್ಲಿಗಳಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲ. ಅಂತಹ ಮಹಾಮಹಿಮರ ನೂರಾ ಐದನೇಯ ಜನ್ಮದಿನೋತ್ಸವ. ಅವರಿಗೊಂದು ನುಡಿ ನಮನ. ಗುರುಸ್ಮರಣ.

Related Articles

ಪ್ರತಿಕ್ರಿಯೆ ನೀಡಿ

Latest Articles