1636 ವಚನಗಳನ್ನೊಳಗೊಂಡ ಸಂಗ್ರಹ ಕೃತಿಯ ಸಂಕ್ಷಿಪ್ತ ನೋಟ

*ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ

ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯ ವಚನ ಸಾಹಿತ್ಯ. ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅದಕ್ಕೆ ವಿಫುಲ ಭಿನ್ನ ಪಾಠಗಳು ಹುಟ್ಟಿಕೊಂಡವು.

ಆಮೇಲೆ ಸಂಕಲನ-ಸ0ಪಾದನ ಕಾರ‍್ಯದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊಂದಲ ಕಾರಣವಾಗಿ ಕವಿ ಸಾಹಿತ್ಯಕ್ಕಿಂತ ವಚನ ಸಾಹಿತ್ಯದ ಸಂಪಾದನ ಕಾರ‍್ಯ ತುಂಬ ಜಟಿಲ ಸ್ವರೂಪದ್ದಾಗಿದೆ. ಈ ಜಟಿಲತೆಯನ್ನು ಬಿಡಿಸಿ ಸರಳ ಸುಂದರವಾಗಿ, ಶಾಸ್ತ್ರೀಯ ನೆಲೆಯಲ್ಲಿ ಶುದ್ದ ಪಾಠಾಂತರಗಳಿ0ದ ಸಂಪಾದಿಸಿದ ಕೃತಿ “ಸಂಕೀರ್ಣ ವಚನ ಸಂಪುಟ-10′. ಇದನ್ನು ಸಂಪಾದಿಸಿದವರು ಡಾ. ವೀರಣ್ಣ ರಾಜೂರ ಅವರು.

ಬಸವೋತ್ತರ ಯುಗದ ಮೊದಲ ಸಂಪುಟವಾದ ಇದರಲ್ಲಿ 11 ಜನ ವಚನಕಾರರ 1636 ವಚನಗಳನ್ನೊಳಗೊಂಡಿದೆ. ಇದು 2001ರಲ್ಲಿ ದ್ವಿತೀಯ ಪರಿಷ್ಕೃತ ಆವೃತ್ತಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನಿ0ದ ಬೆಳಕುಕಂಡಿದೆ. 744 ಪುಟಗಳ ವಿಸ್ತಾರದಲ್ಲಿ ಅರಳಿದೆ.

ಡಾ. ವೀರಣ್ಣ ರಾಜೂರ ಅವರು ಪ್ರಸ್ತಾವನೆಯಲ್ಲಿ ಬಸವೋತ್ತರ ಯುಗದ ವಚನಸಾಹಿತ್ಯ ಕುರಿತಂತೆ ಚರ್ಚಿಸಿ; 35 ಜನ ವಚನಕಾರರ ಹೆಸರು ಹಾಗೂ ಅವರ ಅಂಕಿತಗಳ ಪಟ್ಟಿ ನೀಡಿದ್ದಾರೆ. ಅವರ ಬದುಕು-ಸಾಹಿತ್ಯ ಕುರಿತು ನಿರೂಪಿಸಿದ್ದಾರೆ. ಈ ಯುಗದ ಕೆಲವು ವಿಶಿಷ್ಟ ಲಕ್ಷಣಗಳನ್ನು ಶೋಧಿಸಿ ಕಟ್ಟಿಕೊಟ್ಟಿರುವದು ಹೀಗಿದೆ:
• ಹೆಚ್ಚಾಗಿ ವಿರಕ್ತ ಪರಂಪರೆಗೆ ಸೇರಿದ ಅನುಭಾವಿಗಳಿಂದ ಈ ಸಾಹಿತ್ಯ ಸೃಷ್ಟಿಯಾಗಿದೆ.
• ಹನ್ನೆರಡನೆಯ ಶತಮಾನದ ಶರಣರಂತೆ ಪರಿಸರ ಪ್ರೇರಿತ ತೀವ್ರಾನುಭವದ ಅಭಿವ್ಯಕ್ತಿಗಳಾಗಿ ಈ ವಚನಗಳು ಮೂಡಿಬರದೆ, ಕುಳಿತು ವಿಚಾರಿಸಿ ಬರೆದ ರಚನೆಗಳಾಗಿ ತೋರುತ್ತವೆ.
• ಆ ಯುಗದಲ್ಲಿಯಂತೆ ಬಹು ಸಂಖ್ಯೆಯ ಶರಣರು ಏಕಕಾಲಕ್ಕೆ ಒಂದೆಡೆ ಸಂಘಟಿತರಾಗಿ, ಒಂದೇ ವೇದಿಕೆಯ ಮೇಲೆ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಸ್ಪಂದಿಸಿ ಪ್ರತಿಕ್ರಿಯಾರೂಪದಲ್ಲಿ ಆತ್ಮಸಾಕ್ಷಿಯಾಗಿ ನುಡಿದ ನುಡಿಯಾಗಿರದೆ, ಬೇರೆ ಬೇರೆ ಕಾಲ-ಸ್ಥಳ-ಪರಿಸರಗಳಲ್ಲಿ ನಿಂತು ಅಧ್ಯಯನ, ಮನನ, ಚಿಂತನೆಗಳ ಮೂಲಕ ಶಾಸ್ತ್ರ ಸಾಕ್ಷಿಯಾಗಿ ರಚಿಸಿದ ಬರಹಗಳಾಗಿವೆ.
• ಇವುಗಳಲ್ಲಿ ಸಾಮಾಜಿಕ ಕಾಳಜಿ-ಕಳಕಳಿಗಿಂತ ತತ್ತ್ವಶಾಸ್ತ್ರ ಜಿಜ್ಞಾಸೆ ಅಧಿಕವಾಗಿ ಕಂಡುಬರುತ್ತದೆ.
• ಬಸವಾದಿಗಳಲ್ಲಿ ಕಂಡುಬರುವ ಸಾಧಕನ ಆಂತರಿಕ ತೊಳಲಾಟ, ಆತ್ಮ ನಿರೀಕ್ಷಣೆ ಇವುಗಳಲ್ಲಿ ಕಡಿಮೆ. ಇದ್ದರೂ ಅದು ಸಹಜ ನೋವಿನಿಂದ ಮೂಡಿಬಂದ0ತೆ ತೋರುವುದಿಲ್ಲ.
• ಹನ್ನೆರಡನೆಯ ಶತಮಾನದ ಭಕ್ತಿ- ಜ್ಞಾನ, ಕ್ರಿಯೆಗಳೆಂಬ ಮೌಲ್ಯಗಳಲ್ಲಿ ಈ ಕಾಲಕ್ಕೆ ಮೊದಲಿನ ಎರಡಕ್ಕೆ ಹೆಚ್ಚು ಒತ್ತು ಬಿದ್ದು ಕ್ರಿಯೆಗೆ ಬದಲಾಗಿ ವೈರಾಗ್ಯಕ್ಕೆ ಮಹತ್ವ ಲಭಿಸಿತು.
• ತತ್ತ್ವನಿರೂಪಣೆ, ಪಾರಿಭಾಷಿಕತೆಗಳನ್ನು ಚೆನ್ನಬಸವಾದಿಗಳ ಮುಂದುವರಿಕೆ ತೋರಿದರೂ ಕೆಲವು ಹೊಸ ಪಾರಿಭಾಷಿಕ ಪದಗಳ ಸೃಷ್ಟಿಯೂ ಈ ಕಾಲದಲ್ಲಿ ನಡೆಯಿತು. ತತ್ತ್ವ ಜಡತೆ, ಹೇರಳವಾದ ಪಾರಿಭಾಷಿಕ ಪದಗಳ ಬಳಕೆಯಿಂದ ಹೆಚ್ಚಿನ ವಚನಗಳು ಶಾಸ್ತ್ರ ಲಕ್ಷಣಕ್ಕೆ ಹೊರಳಿದವು. ವಚನ ಎಂಬುದು ಒಂದು ‘ಶಾಸ್ತ್ರ’ ಎಂಬ ಅಭಿಪ್ರಾಯಕ್ಕೆ ಅಧಿಕ ಪುಷ್ಠಿ ಲಭಿಸಿತು.
• ನೈತಿಕ, ತಾತ್ವಿಕ ವಿಷಯ ಪ್ರತಿಪಾದನೆಯೇ ಮುಖ್ಯ ಉದ್ದೇಶವಾದುದರಿಂದ ಮುಕ್ತಕಗಳಿಗಿಂತ, ವಿವರಣಾತ್ಮಕ ಗದ್ಯ ಲಕ್ಷಣಗಳನ್ನೊಳಗೊಂಡ ರಚನೆಗಳೇ ಹೆಚ್ಚಾಗಿ ಕಂಡು ಬರುತ್ತವೆ. ಹೀಗಾಗಿ ಶಿಲ್ಪ ಬಂಧುರತೆ, ರಚನಾ ಸುಲಭಗತೆಗಳು ಇಲ್ಲವಾಗಿ, ಶಿಥಿಲತೆ ಕೃತಕತೆಗಳು ಎದ್ದು ತೋರುತ್ತವೆ.
• ಅನುಭವ ತೀವ್ರತೆ, ಭಾವ-ಭಾಷೆಗಳ ಸಹಜ ಬೆಸುಗೆ, ಲಯಾತ್ಮಕತೆ, ನೂತನ ಅಲಂಕಾರ, ಪ್ರತಿಮೆ, ಸಂಕೇತ, ಉಕ್ತಿ ವೈಚಿತ್ರö್ಯ, ಕಲ್ಪನಾ ರಮ್ಯತೆಗಳು ಕಂಡುಬರದ ಕಾರಣ ಈ ಯುಗದ ವಚನಗಳಲ್ಲಿ ಕಾವ್ಯಗುಣ ಗೌಣ. ಆದರೂ ಕೆಲವರಲ್ಲಿ ಕ್ವಚಿತ್ತಾಗಿ 12 ನೆಯ ಶತಮಾನದ ಶರಣರನ್ನು ಸಮೀಪಿಸಿರುವ ಭಾವೋತ್ಕಟತೆ, ಅಭಿವ್ಯಕ್ತಿ ಸಹಜತೆಗಳು ಕಾಣುತ್ತವೆ. (ತೋಂಟದ ಸಿದ್ಧಲಿಂಗ, ಷಣ್ಮುಖ ಶಿವಯೋಗಿ, ಹೇಮಗಲ್ಲ ಹಂಪ, ದೇಶಿಕೇಂದ್ರ ಸಂಗನಬಸವ).
• ಭಾಷೆಯ ಬಳಕೆಯಲ್ಲಿ ಮಿತವ್ಯಯಕ್ಕಿಂತ ಧಾರಾಳತೆ, ಧ್ವನಿಪೂರ್ಣತೆಗಿಂತ ವಾಚ್ಯತೆ ಹೆಚ್ಚು. ಶಿಷ್ಠತೆಗಿಂತ ಆಯಾ ಪರಿಸರದ ಪ್ರಾದೇಶಿಕ ದೇಶೀ ಭಾಷೆಯನ್ನು ತೀರಸಹಜವಾಗಿ ಬಳಸಿಕೊಂಡುದು ಇವರಲ್ಲಿ ತೆರೆದುಕಾಣುವ ವೈಶಿಷ್ಟö್ಯವೆನಿಸಿದೆ.
• ಸಿದ್ಧತಾತ್ವಿಕ ಚೌಕಟ್ಟಿನ ಜೊತೆಗೆ ಹಲವು ಹತ್ತು ನೂತನ ಸ್ಥಲಯೋಜನೆ ರೂಪಿಸಿಕೊಂಡು, ಸ್ವತಃ ಕರ್ತವೇ ಆ ಸ್ಥಲಗಳಿಗನುಗುಣವಾಗಿ ವಚನ ರಚಿಸಿದ್ದಾರೆ. ಕೆಲವರು ತಮ್ಮ ವಚನಗಳಿಗೆ ತಾವೇ ಟೀಕೆ ಬರೆದರೆ, ಮತ್ತೆ ಕೆಲವರು ಬೇರೆಯವರ ವಚನಗಳನ್ನು ಸ್ಥಲಾನುಗುಣವಾಗಿ ಸಂಕಲಿಸಿ, ಅಲ್ಲಿ ತನ್ನ ವಚನಗಳನ್ನು ಅಳವಡಿಸಿದುದು ಈ ಯುಗದ ಎದ್ದುಕಾಣುವ ಅಂಶವಾಗಿದೆ.
• ಬೆಡಗಿನ ತಂತ್ರವನ್ನು ಹೆಚ್ಚಾಗಿ ಅಳವಡಿಸಿಕೊಂಡುದು. ಹೇರಳವಾಗಿ ಸಂಸ್ಕೃತ ಪ್ರಮಾಣಗಳನ್ನು ವಚನಗಳಲ್ಲಿ ಸೇರಿಸಿಕೊಂಡುದು ಈ ಯುಗದ ವಚನಗಳಲ್ಲಿ ಕಣ್ಣುಕುಕ್ಕುವ ಅಂಶವಾಗಿದೆ.
• ವಚನಗಳ ಜೊತೆ ಸ್ವರವಚನ, ತ್ರಿಪದಿ, ಕಂದ, ಶತಕ, ತಾರಾವಳಿ, ಷಟ್ಪದಿ ಇತ್ಯಾದಿ ಲಘ ಸಾಹಿತ್ಯ ಪ್ರಕಾರಗಳ ರಚನೆಮಾಡಿದ್ದು ಈ ಯುಗದ ವಚನಕಾರರ ಮತ್ತೊಂದಿ ವಿಶೇಷ.
• ಒಟ್ಟಿನಲ್ಲಿ ಪಾರಂಪರಿಕ ಪ್ರಕಾರವೊಂದರಲ್ಲಿ ಧರ್ಮತತ್ವಗಳನ್ನು ಅಳವಡಿಸುವ, ಅವುಗಳನ್ನು ಪ್ರಚುರಪಡಿಸುವ, ಆ ಮೂಲಕ ವಚನ ಪ್ರಕಾರವನ್ನು ಮುಂದುವರಿಸಿಕೊ0ಡು ಸಾಗುವ ಕರ‍್ಯವನ್ನು ಈ ಯುಗದ ವಚನಕಾರರು ನಿಷ್ಠೆಯಿಂದ ನೆರವೇರಿಸಿದ್ದಾರೆ.


ಹೀಗೆ ಡಾ. ರಾಜೂರ ಅವರು ಈ ಯುಗದ ವಚನಕಾರರ ವಚನಗಳ ವೈಶಿಷ್ಟö್ಯವನ್ನು, ಅದರ ಲಕ್ಷಣಗಳನ್ನು ತೆರೆದು ತೋರಿರುವುದು ಅರ್ಥಪೂರ್ಣ ವಿಚಾರ. ಈ ಕಷ್ಟದ ಕಾರ್ಯ ಮಾಡುವಲ್ಲಿ ಶ್ರಮ, ಸಂಯಮ, ಪಾಂಡಿತ್ಯ ಬೇಕಾಗುತ್ತದೆ. . ಈ ಎಲ್ಲ ಅಂಶಗಳು ಸಂಪಾದಕರಲ್ಲಿ ಇರುವುದರಿಂದ ಈ ಕಾರ್ಯಕ್ಕೆ ಅರ್ಥಬಂದು ಅಂದ ಹೆಚ್ಚಿ ನಾಡಿನ ತುಂಬ ವಚನದ ಪರಿಮಳ ಶ್ರೀ ಸಾಮಾನ್ಯನಿಗೂ ತಿಳಿದು ವೈಚಾರಿಕ ಅಂಶಗಳು ತಕ್ಕಮಟ್ಟಿಗಾದರು ಸಮಾಜದಲ್ಲಿ ನೆಲೆನಿಂತಿರುವುದನ್ನು ವರ್ತಮಾನದಲ್ಲಿ ಕಾಣುತ್ತೇವೆ.

ಡಾ. ವೀರಣ್ಣ ರಾಜೂರ ಅವರು ಬಹು ಪರಿಶ್ರಮದಿಂದ ಈ ಸಂಪಾದನ ಕಾರ್ಯ ಮಾಡಿರುವದು ಅರ್ಥಪೂರ್ಣವೆನಿಸಿದೆ. ಯುವ ಬರಹಗಾರರಿಗೆ ದಾರಿದೀಪವಾಗಿ ಈ ಕೃತಿ ಮಾರ್ಗದರ್ಶನ ಮಾಡಿದೆ ಎಂದರೆ ತಪ್ಪಾಗಲಾರದು.

(ಲೇಖಕರು, ಉಪನ್ಯಾಸಕರು, ಬಾದಾಮಿ)

Related Articles

ಪ್ರತಿಕ್ರಿಯೆ ನೀಡಿ

Latest Articles