ಮಾನ್ವಿಯ ಮುನಿಪುಂಗವ ಶ್ರೀ ಜಗನ್ನಾಥದಾಸರು

ಸ್ಥಂಭಮಂದಿರವಾಸಿ ಮಾನವಿಯ ಮಾನನೀಯ ಶ್ರೀಜಗನ್ನಾಥದಾಸರು ಆರಾಧನಾ ಪ್ರಯುಕ್ತ ಅವರ ಕುರಿತಾದ ಬರಹ ಇಲ್ಲಿದೆ.

*ವಿದ್ಯಾಶ್ರೀ ಕಟ್ಟಿ
ಸಂತರ, ಮಹಂತರ, ಭಾಗವತರ, ಸಜ್ಜನರ, ಹರಿದಾಸರ ಒಲವು, ಚೆಲುವು, ಗೆಲುವು, ನಲಿವು, ಸೊಬಗು, ಮನುಷ್ಯ ಜನ್ಮದ ಸಾರ್ಥಕತೆ, ಎಲ್ಲವೂ ಭಗವಂತನ ಸಾಕ್ಷಾತ್ಕಾರದಲ್ಲಿಯೇ ಅವರು ಕಾಣುವುದು. ಇದಕ್ಕೆ ಅಗತ್ಯ ವಾಗಿ ಬೇಕಾದುದು ಭಕ್ತಿ ಮಾರ್ಗ. ಇದೇ ಹರಿದಾಸರ ದಾಸಸಿದ್ಧಾಂತ. 

ಹರಿದಾಸ ಸಾಹಿತ್ಯವು ಆಚಾರ್ಯ ಮಧ್ವರಿಂದ ಪ್ರೇರಣೆಗೊಂಡು, ಶ್ರೀ ನರಹರಿತೀರ್ಥರಿಂದ ಮುದಗೊಂಡು, ಶ್ರೀಪಾದರಾಜರಿಂದ ಸರಳ, ಸುಲಭ ಕನ್ನಡದಲ್ಲಿ ಹದಗೊಂಡು, ಗುರುವ್ಯಾಸರಿಂದ ಶೋಧಿಸಿ, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಾದಿಯಾಗಿ ಮುಂತಾದ ಅಪರೋಕ್ಷ ಹರಿದಾಸರುಗಳಿಂದ ಪುಂಖಾನುಪುಂಖವಾಗಿ, ಪದಪದ್ಯಗಳಿಂದ ತುಂಬಿ, ಭೋರ್ಗರೆವ ಜಲಪಾತದಂತೆ, ಧುಮ್ಮಿಕ್ಕಿ ಭರದಿಂದ ಬಂದು, ಜನಮನವಷ್ಟೇ ಅಲ್ಲ ಇಡೀ ಮನುಕುಲವೇ ಮಿಂದು ಪವಿತ್ರವಾಗುವ ಪಾವನಗಂಗೆಯಾಗಿ ದಾಸಸಾಹಿತ್ಯವು ಹರಿದು ಬಂತು.

 "ಅವನೇ ಸಖ ಅವನೇ ಸುಖ"

ವಿದ್ವನ್ಮಣಿಗಳ ಸೊತ್ತಾಗಿದ್ದ ಸಂಸ್ಕೃತವನ್ನು ಸರಳ ಕನ್ನಡಕ್ಕಿಳಿಸಿ ನಮ್ಮಂತಹ ಜನಸಾಮಾನ್ಯರಿಗೆ ಭಕ್ತಿಸಾಹಿತ್ಯವನ್ನು ತಲುಪಿಸಿದವರು ಹರಿದಾಸರು. 'ಅವನೇ ಸಖ, ಅವನೇ ಸುಖ' ಎಂಬುದನ್ನು ಅರಿತಿದ್ದ ಹರಿದಾಸರು ಸಾಧನೆಗೆ ಸಂಸಾರ ಅಡ್ಡಿಯಲ್ಲ ಎಂಬುದನ್ನೂ ನಮಗೆ ತೋರಿಸಿಕೊಟ್ಟರು. ದಾಸರು ನುಡಿದ ಅಣಿಮುತ್ತಿನ ಓಳಗಾಳುಗಳೆಲ್ಲ ಕೀರ್ತನೆಗಳಾದವು.
ನಡೆದಾಡಿದ ಮಾರ್ಗವು ಸನ್ಮಾರ್ಗಕ್ಕೆ ದಾರಿತೋರಿತು. 
ಅವರು ಕಡುಕಷ್ಟದಿ ಪರದಾಡಿದ ರೀತಿ ಪರಿಪಕ್ವವಾಗಿ ಭಗವಂತನ ನೈವೇದ್ಯಕ್ಕೆ ಪಕ್ವಾನ್ನವಾಯಿತು. 
ಜನಸಾಮಾನ್ಯರಿಗೆ ಹರಿದಾಸಸಾಹಿತ್ಯ ಮೃಷ್ಟಾನ್ನವಾಯಿತು. 
ಭಕ್ತಿಸಾಹಿತ್ಯ ಜನಸಾಮಾನ್ಯರಿಗೆ ತಲುಪಲು ಕೀರ್ತನಸಾಹಿತ್ಯ ಸಲಭ ಹಾಗೂ ಶ್ರೇಷ್ಠ ಸಾಧನವಾಯಿತು.

 "ರಂಗನೊಲಿದ ರಂಗೋಲಿ ಪ್ರಿಯ ದಾಸರು"

 ಭಾಗವತ ಧರ್ಮಕ್ಕೆ ನವಚೈತನ್ಯ ಕೊಟ್ಟ ಶ್ರೀ ಜಗನ್ನಾಥದಾಸರು ಶ್ರೀನಿವಾಸನ ಪರಮಾನುಗ್ರಹದಿಂದ ಹುಟ್ಟಿದವರು. ಬೆಟ್ಟದೊಡೆಯನ ಪರಮ ಭಕ್ತರಾದ ನರಸಿಂಹದಾಸರು ಹಾಗೂ ಲಕ್ಷ್ಮಮ್ಮ ಎಂಬ ಸಾತ್ವಿಕ ದಂಪತಿಗಳಿಗೆ  ಜನಿಸಿದರು.
ಮಾನವಿಯಿಂದ ಸುಮಾರು ಹದಿನಾಲ್ಕು ಕಿ.ಮಿ.ದೂರವಿರುವ ಬ್ಯಾಗವಾಟ ಗ್ರಾಮ ಶ್ರೀ ಜಗನ್ನಾಥದಾಸರು ಜನಿಸಿದ ಭವ್ಯಸ್ಥಳ. ಅಲ್ಲಿ ದಾಸರು ನಿತ್ಯ ಪೂಜಿಸುತ್ತಿದ್ದ ಹನುಮಂತದೇವರ ಮಹಿಮಾನ್ವಿತ ಸನ್ನಿಧಿಯಿದೆ.
(ಇವರ ಕಾಲ 1727-1809) .

"ಕಾಶಿಕ್ಷೇತ್ರಕೆ ಸಮವೆನಿಸಿದ ಮಾನವಿ ಕ್ಷೇತ್ರ"

ಶ್ರೀಜಗನ್ನಾಥದಾಸರು ಮಾನವಿ ಕ್ಷೇತ್ರ ಇವರಿಂದ ಕಾಶಿಕ್ಷೇತ್ರಕೆ ಸಮವೆನಿಸಿತು.
ಶ್ರೀಜಗನ್ನಾಥದಾಸರು ವದ್ದೆ ಮಡಿಯ ಮೇಲೆ ಕುಳಿತು "ಹರಿಕಥಾಮೃತಸಾರ" ರಚಿಸುತ್ತಿರಬೇಕಾದರೆ ಅಕ್ಷರಾಭಿಮಾನಿ ದೇವತೆಗಳು ನಮ್ಮ ಸರದಿ ಯಾವಾಗ ಬರುತ್ತದೆ ಎಂದು ಸರತಿ ಸಾಲಲ್ಲಿ ನಾಮುಂದು ನೀಮುಂದು ಎಂದು ಕಾಯುತ್ತಾ ನಿಲ್ಲುತ್ತಿದ್ದರಂತೆ.  ಹಾಗೆ ದೇವತೆಗಳು ಶ್ರೀಹರಿಯ ಸಾಕ್ಷಾತ್ ಸನ್ನಿಧಾನವಿಲ್ಲದೆ ಅವರು ಹೇಗೆ ನಿಲ್ಲಲು ಸಾಧ್ಯ? ಶ್ರೀಲಕ್ಷ್ಮೀನರಸಿಂಹದೇವರ ಅನುಗ್ರಹದ ಸಾಕ್ಷಿಯಾಗಿ  ದಾಸರು ಹರಿಕಥಾಮೃತಸಾರ ಬರೆದದ್ದು ಅಲ್ಲವೇ?  ಹಾಗೇ ಸಾಕ್ಷಾತ್  ದೇವತೆಗಳು ನಿಂತ ಜಾಗ  ಸ್ಥಂಭಮಂದಿರವಾಸಿ ಶ್ರೀಜಗನ್ನಾಥದಾಸರು ಇರುವ ಸ್ಥಳ ಸಾಮಾನ್ಯವಾದುದಲ್ಲ. ಶ್ರೀಜಗನ್ನಾಥದಾಸರು ಅಲ್ಲಿ ನೆಲೆನಿಂತು ನಮ್ಮನ್ನು  ಅನುಗ್ರಹಿಸುತ್ತಾ ಮಾನವಿಗೆ ಮನ್ನಣೆ ತಂದುಕೊಟ್ಟವರು. 

ಶ್ರೀ ಸುಮತೀಂದ್ರತೀರ್ಥರು, ಜಗನ್ನಾಥದಾಸರ ತಂದೆಯವರಾದ ಶ್ರೀನರಸಿಂಹದಾಸರ ಪಾಂಡಿತ್ಯ, ಭಕ್ತಿಗೆ ಮೆಚ್ಚಿ ಅತ್ಯಂತ ಸಂತೋಷಭರಿತರಾಗಿ ತಮ್ಮ ಬಳಿಯಿದ್ದ ಶ್ರೀ ನೃಸಿಂಹದೇವರ ವಿಗ್ರಹವನ್ನೂ, ಸಾಲಿಗ್ರಾಮವನ್ನೂ ಕೊಟ್ಟಿದ್ದಾರೆ. ಇಂದಿಗೂ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ನಾವು ಕಾಣಬಹುದು. ಲಕ್ಷ್ಮೀನರಸಿಂಹದೇವರ ವಿಶೇಷವಾದ ಸನ್ನಿಧಾನವಿಲ್ಲಿದೆ. ಮಾನ್ವಿ ಕ್ಷೇತ್ರದ
ಸುತ್ತಮುತ್ತಲೇ ಶ್ರೀವಿಜಯದಾಸರು,
ಶ್ರೀಗೋಪಾಲದಾಸರು, ಶ್ರೀಪುರಂದರದಾಸರು, ಶಾಮಸುಂದರದಾಸರು, ಅಸ್ಕಿಹಾಳ ಗೋವಿಂದದಾಸರು, ಗುರುಜಗನ್ನಾಥದಾಸರು, ಪ್ರಾಣೇಶದಾಸರು ಒಬ್ಬರಾ ಇಬ್ಬರಾ ಹರಿದಾಸರ ತಂಡೋಪತಂಡವೇ ನೆಲೆಸಿದ, ಬದುಕಿ ಬಾಳಿದ, ನಡೆದಾಡಿದ, ಭಗವಂತನ ಮಹಿಮೆಗಳನ್ನು ಜೀವನದ ಮೂಲಕ, ಕೃತಿಗಳ ಮೂಲಕ, ತೋರಿದ ಬಹು ಪುಣ್ಯವಾದ ತಪೋಭೂಮಿ ಈ ಮಾನವಿ. ಹಾಗಾಗಿಯೇ ಇದು ಎಲ್ಲ ಹರಿದಾಸರು ನಲಿದಾಡುವ ಹರಿದಾಸರ ತೊಟ್ಟಿಲು, ಹರಿದಾಸರ ತವರೂರೆಂದೇ ಸಿದ್ಧಪ್ರಸಿದ್ಧ. 

"ಮಹಾನ್ ಪಂಡಿತರು"

ಶ್ರೀನಿವಾಸ ನಾಮಾಂಕಿತರಾದ ಇವರು ಸುಮಾರು ಎಂಟನೇ ವಯಸ್ಸಿನಲ್ಲಿಯೇ ' ವರದೇಂದ್ರ ಪಂಚರತ್ನ' ಎಂಬ ಐದು ಶ್ಲೋಕ ರಚಿಸಿ ಅವರ ಮೆಚ್ಚಿನ ಶಿಷ್ಯರಾಗಿದ್ದರು. ಪುಣೆಯಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಪ್ರತಿವಾದಿಗಳನ್ನು ಜಯಿಸಿ ಆಚಾರ್ಯ ಎಂಬ ಬಿರುದು ಪಡೆದು ಅಂದಿನಿಂದ ಶ್ರೀನಿವಾಸಾಚಾರ್ಯರಾದರು.
ಕೆಲಸಮಯ ಮಾನವ ಸಹಜವಾದ ಗರ್ವ ಅವರಲ್ಲಿ ಮನೆ ಮಾಡಿತ್ತು. ಎಲ್ಲವೂ ಹರಿಚಿತ್ತ. ಸಂಸ್ಕೃತ ಪಂಡಿತರಾಗಿದ್ದ ಇವರಿಗೆ ಕನ್ನಡ ಪದಪದ್ಯಗಳು ಸರಿಕಾಣುತ್ತಿರಲಿಲ್ಲ. ದಾಸರು ತಾಳತಂಬೂರಿಯೊಂದಿಗೆ ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿ, ದೇವರನಾಮಗಳನ್ನು ಹೇಳುತ್ತಾ ಭಕ್ತಿಬಾವಪರವಶರಾಗಿ ಕುಣಿಯುತ್ತಾ ಕೇರಿಯೊಳಗೆ ಬರುವವರನ್ನು ಕಂಡರೆ ತಾತ್ಸಾರ ಮಾಡುತ್ತಿದ್ದರು. ಹೀಗಿರುವಾಗ ಒಂದು ದಿನ ಶ್ರೀ ವಿಜಯದಾಸರು,    ಶ್ರೀನಿವಾಸಾಚಾರ್ಯರಿಗೆ ಗೌರವಪೂರ್ವಕವಾಗಿ ಭೋಜನಕ್ಕೆ ಆಮಂತ್ರಣವಿತ್ತಿದ್ದರು. ಶ್ರೀವಿಜಯಾಸರ ಪರಮ ಶಿಷ್ಯರಾಗಿದ್ದ 'ಭಕ್ತಿಯಲಿ ಭಾಗಣ್ಣ'ರೆಂದೇ ಸಿದ್ಧಪ್ರಸಿದ್ಧರಾದ ಶ್ರೀಗೊಪಾಲದಾಸರು ಕರೆಯಲು ಬಂದಿದ್ದರು. ಆಗ ಶ್ರೀನಿವಾಸಾಚಾರ್ಯರು " ಕೂಸೀಮಗದಾಸನೋ, ಅವನ ಕೀರ್ತನೆಯೋ" ಎಂದು ಅವಹೇಳನ‌ಮಾಡಿದ್ದಲ್ಲದೇ ನನಗೆ ಸಮಯಕ್ಕೆ ಸರಿಯಾಗಿ ಭೋಜನ ಮಾಡದಿದ್ದರೆ ಉದರಶೂಲೆ ಬರುತ್ತದೆ, ಬರಲಾಗದು ಎಂದು ಇವರಿಗೆ ಹೇಳಿದಾಗ, ಶ್ರೀಗೋಪಾಲದಾಸರು 'ಸರಿ ಹಾಗೆಯೇ ಆಗಲಿ' ಎಂದಿದ್ದರು. ಶ್ರೀನಿವಾಸಾಚಾರ್ಯರ ಈ ನಡುವಳಿಕೆಯಿಂದ  ವಿಜಯದಾಸರು ಕಿಂಚಿತ್ತೂ ಬೇಸರ ಮಾಡಿಕೊಂಡಿರಲಿಲ್ಲ. ಆದರೆ ಗುರುಗಳ ಬಗ್ಗೆ ತಾತ್ಸಾರದಿಂದ ಆಡಿದ ಮಾತಿಗೆ ನೊಂದ ಶ್ರೀಗೋಪಾಲದಾಸರು ಉಪವಾಸಗೈದಿದ್ದರು. 

ವಿಜಯದಾಸರನ್ನು ನಿಂದಿಸಿದ ಫಲವೋ, ಹರಿಭಕುತರನ್ನು ಅವಮಾನಿಸಿದ ಫಲವೋ ಎಂಬಂತೆ ನಿಜವಾಗಿಯೂ ಪ್ರಾಣಹಿಂಡುವಂತಹ ಉದರಶೂಲೆ ಶ್ರೀನಿವಾಸಾಚಾರ್ಯರಿಗೆ ಬಂದೇ ಬಿಟ್ಟಿತು. ದಿನದಿಂದ ದಿನಕ್ಕೆ ಉದರಶೂಲೆ ಉಲ್ಬಣಿಸತೊಡಗಿ ಶ್ರೀನಿವಾಸಾಚಾರ್ಯರು ತುತ್ತು ಅನ್ನ ಸೇರದೇ ಕೃಶವಾಗತೊಡಗಿದರು. ಏನು ಮಾಡಿದರೂ ಕಡಿಮೆಯಾಗಲಿಲ್ಲ. ಯಾವ ಪ್ರಾರ್ಥನೆಯು ಫಲಿಸಲಿಲ್ಲ. ಅದಕ್ಕೇ ಹೇಳುವುದು ಒಳ್ಳೆಯ ಬ್ರಾಹ್ಮಣರನ್ನು, ಸಜ್ಜನರನ್ನು ನಿಂದಿಸಬಾರದು. ಯಾರನ್ನೂ ಅವಹೇಳನ ಮಾಡಬಾರದು, ಅಹಂಕಾರ ಮಾಡಬಾರದು ಎನ್ನುವ ಸಂದೇಶ ನಮಗೆಲ್ಲರಿಗೂ ಪಾಠವಾಗಲೆಂದೇ ಭಗವಂತನ ಈ ಲೀಲೆಯಲ್ಲವೇ?
ನೋವಿನಿಂದ ಬಳಲುತ್ತ ಕಂಗಾಲಾಗಿದ್ದ ಶ್ರೀನಿವಾಸಾಚಾರ್ಯರು, ರಾಯರಲ್ಲಿ ಪ್ರಾರ್ಥಿಸಿದಾಗ, ಮೊದಲೇ ಕರುಣಾಳುಗಳಾದ ರಾಯರು ಸ್ವಪ್ನದಲ್ಲಿ ಕಾಣಿಸಿಕೊಂಡು, ಶ್ರೀವಿಜಯದಾಸರ ಬಳಿ ಕ್ಷಮೆ ಕೇಳದ ಹೊರತು ವ್ಯಾಧಿ ವಾಸಿಯಾಗಲು ಸಾಧ್ಯವಿಲ್ಲ ಎಂಬಂತೆ ಸೂಚಿಸಿ ಮಂತ್ರಾಕ್ಷತೆಯನ್ನು ನೀಡಿದರು. ಸ್ವಪ್ನದಲ್ಲಿ ನೀಡಿದ ಮಂತ್ರಾಕ್ಷತೆ ನಿಜವಾಗಿಯೂ ತಮ್ಮ ಬಳಿ ಇದ್ದುದ ಕಂಡು, "ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ"  ಎನ್ನುವ ಭಾವದಲ್ಲಿ ಚೀಕಲಪರ್ವಿಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ಉದರಶೂಲೆಯ ನೋವಿನಿಂದ ಇವರ ಮನಸ್ಸಿನಲ್ಲಿರುವ ಅಹಂಕಾರವೆಲ್ಲವೂ ಕರಗಿತ್ತು.
ವಿಜಯದಾಸರನ್ನು ಕಂಡೊಡನೆಯೇ ಭಕ್ತಿಯಿಂದ ನಮಸ್ಕರಿಸಿದರು. ಸದಾ ಸಮಾಧಾನಚಿತ್ತರಾಗಿರುತ್ತಿದ್ದ ಶ್ರೀ ವಿಜಯದಾಸರು ಅತ್ಯಂತ ಅಂತಃಕರಣದಿಂದ ಶ್ರೀನಿವಾಸಾಚಾರ್ಯರ ಮೈದಡವಿ ಸಮಾಧಾನ ಮಾಡಿದರು.  ಇದು ನನ್ನಿಂದಲೂ ಆಗದ ಕೆಲಸ, ನೀನು ಕೂಡಲೇ ಭಾಗಣ್ಣನಿರುವ ಉತ್ತನೂರಿಗೆ ಹೋಗಿ, ಅಲ್ಲಿ ತಮ್ಮ ಶಿಷ್ಯ ಗೋಪಾಲದಾಸರನ್ನು ಕಾಣುವಂತೆ ಹೇಳಿಕಳಿಸಿದರು. 

ಅದೇ ಹೊತ್ತಿನಲ್ಲಿ ತಮ್ಮ ಪ್ರಿಯಶಿಷ್ಯ ಶ್ರೀಗೋಪಾಲದಾಸರಿಗೆ, ಈ ಶ್ರೀನಿವಾಸನಿಗೆ ಅಪಮೃತ್ಯು ಕಾದಿದೆ. ನಿನ್ನ ಆಯಸ್ಸಿನಲ್ಲಿ ನಲವತ್ತು ವರುಷ ಆಯುರ್ದಾನ ಮಾಡಿ, ಉಲ್ಬಣಿಸಿರುವ ಉದರ ರೋಗಪರಿಹಾರ ಮಾಡಬೇಕೆನ್ನುವ ಗುರುಗಳ ಸೂಚನೆ ಗೋಪಾಲದಾಸರಿಗಾಗಲೇ ತಿಳಿದಿತ್ತು.

 ತ್ರಿಕಾಲ ಜ್ಞಾನಿಗಳಾದ, ಗಣೇಶಾಂಶ ಸಂಭೂತರಾದ ಶ್ರೀಗೋಪಾಲದಾಸರು, ಶ್ರೀನಿವಾಸಾಚಾರ್ಯರ ಉದರಶೂಲೆ ಪರಿಹಾರವಾಗಲು  ಧನ್ವಂತರಿಯಲ್ಲಿ ಪ್ರಾರ್ಥಿಸುತ್ತಾರೆ. "ಎನ್ನ ಬಿನ್ನಪ ಕೇಳೋ ಧನ್ವಂತರಿ ದಯಮಾಡೋ ಸಣ್ಣವನು ಇವ ಕೇವಲ, ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು" ಎಂದು ಗೋಪಾಲದಾಸರು ಹೇಳುವ ಈ ಸಂದರ್ಭ ಕಣ್ಣೆದುರು ಬಂದಂತಾಗುತ್ತದೆ. ಶ್ರೀನಿವಾಸಾಚಾರ್ಯರ ಮೇಲೆ ಅದೆಷ್ಟು ಅಂತಃಕರಣದಿಂದ "ಸಣ್ಣವನು" ಅನ್ನುವ ಶಬ್ದ ಬಳಸಿದ್ದಾರೆ. ಇದು ಅವರಿಗಿಂತ ಚಿಕ್ಕವನು ಎಂದು ತೋರುವುದರ ಜೊತೆಗೆ ಪುಟ್ಟ ಸಹೋದರನ ಮೇಲಿರುವಂತಹ, ಅಂತಃಕರಣ,  ಮಮತೆಯನ್ನೂ ತೋರಿಸುತ್ತದಲ್ಲವೇ?  

ಆಗಿನ ಕಾಲಕ್ಕೇನು ವಾಟ್ಸಪ್, ಫೋನ್, ಮೆಸೆಜು ಏನಾದರೂ ಇತ್ತಾ?  ಒಂದೂರಿನಿಂದ ಇನ್ನೊಂದು ಕಡೆ ನಡೆದೇ ಹೋಗಬೇಕು. ಎಲ್ಲವೂ ಬೆರಳ ತುದಿಯಲ್ಲಿರುವ ಈಗಿನ‌ ಕಾಲದಲ್ಲಿ ಇರುವ ಎಲ್ಲ  ಸಂಬಂಧಗಳೂ ದೂರವಾಗುತ್ತಿವೆ. ಮಾಡಬೇಕಾದ ಕೆಲಸಗಳನ್ನು ಮರೆತು, ಮಾಡಬಾರದ್ದೆಲ್ಲವನ್ನು ಮಾಡುತ್ತಿರುತ್ತೇವೆ. 

ಗುರುಶಿಷ್ಯರ ಸಂಬಂಧ ಎಂತಹದ್ದು? ಗುರುಗಳು ತಮ್ಮ ಶಿಷ್ಯನಿಗೆ ನಿನ್ನ ಆಯಸ್ಸಿನಲ್ಲಿ ನಲವತ್ತು ವರುಷ ದಾನ ಮಾಡು ಎಂದು ಹೇಳುವುದು ಅಂದರೇನು?
 ಇವರು ಸಾಕ್ಷಾತ್ ಧನ್ವಂತರಿ ದೇವರನ್ನು ಪ್ರಾರ್ಥಿಸಿ ರೋಗ ಪರಿಹಾರ ಮಾಡುವುದೆಂದರೇನು? 

ಜೋಳದರೊಟ್ಟಿಯಲ್ಲಿ ನಲವತ್ತು ವರುಷ ಆಯಸ್ಸು ಹಾಕಿಕೊಡುವುದೆಂದರೇನು? 

ಇದೆಲ್ಲ ನೋಡಿದಾಗ ಇವರಾರು ಅವರಿಗಾಗಿ ಪ್ರಾರಬ್ಧದಿಂದ ಜನಿಸಿದವರಲ್ಲ. 
ನಮ್ಮಂತಹ ಅಸಹಾಯಕರ, ಪಾಮರರ, ಸಜ್ಜನರ, ಉದ್ಧಾರಕ್ಕಾಗಿ‌ ಜನಿಸಿದವರೆಂದು ಸ್ಪಷ್ಟವಾಗಿ ತಿಳಿಯುತ್ತದೆ. 

ನಾವು ಇರುವಷ್ಟೂ ದಿನ ಭೂಮಿಗೆ ಭಾರವಾಗಿಯೇ ಇರುತ್ತೇವೆ. ಇವರೆಲ್ಲ ನಮ್ಮಂತಹ ಪಾಮರರನ್ನು ಉದ್ಧರಿಸಲು, ಭಕ್ತರನ್ನು ರಕ್ಷಿಸಲು, ಭಗವತ್ಸಂಕಲ್ಪದಂತೆ ಭೂಮಿಗೆ ಬಂದ ದೇವತೆಗಳಲ್ಲದೇ ಮತ್ತೇನು?

ಒಂದು ಜನ್ಮದಲ್ಲಿ ಹಿರಣ್ಯಕಶಿಪುವಿನ ಪುತ್ರರಾಗಿ ಶ್ರೀಪ್ರಹ್ಲಾದರಾಜರ ಅನುಜರಾಗಿ ಶ್ರೀಸಹ್ಲಾದರಾಜರೇ, ಮುಂದೆ ದ್ವಾಪರಯುಗದಲ್ಲಿ ಶ್ರೀ ಶಲ್ಯರಾಜನಾಗಿ ಅವತಾರ ಮಾಡಿ ದುರ್ಯೋಧನನ ದುಷ್ಟಾನ್ನ ಭುಂಜಿಸಿದ ಫಲವಾಗಿ ಈಗಿನ ಜನುಮದಲ್ಲಿ ಅಹಂಕಾರ ಪ್ರಾಪ್ತಿಯಾಗಿತ್ತೇನೋ,
ಹಾಗೇಯೇ ಶಲ್ಯರಾಜರಾಗಿದ್ದಾಗ ಸಾಕ್ಷಾತ್ತಾಗಿ ಶ್ರೀಕೃಷ್ಣನ ದರುಶನ ಮಾಡಿದ ಪುಣ್ಯದಿಂದ ಶ್ರೀಜಗನ್ನಾಥದಾಸರಾಗಿ ಹರಿಕಥಾಮೃತವನ್ನು ಈ ಮನುಕುಲಕ್ಕೆ ಕೊಟ್ಟಿರುವರು. 
ಶ್ರೀನಿವಾಚಾಚಾರ್ಯರ ಸ್ವರೂಪ ಶ್ರೀ ವಿಜಯದಾಸರು, ಗೋಪಾಲದಾಸರು ತಿಳಿದವರೇ ಆಗಿದ್ದರಲ್ಲವೇ, ಶ್ರೀನಿವಾಸಾಚಾರ್ಯರು ಮುಂದೆ ಸಾಧನೆ ಮಾಡುವ ಸಲುವಾಗಿಯೇ ಆಯುರ್ದಾನ ಮಾಡಿಸಿದ , ಶ್ರೀ ಗೋಪಾಲದಾಸರು ಮಾಡಿದ ಪರಿ , ಹುಲುಮಾನವರಾದ ನಾವು ಹೇಗೆ ವರ್ಣಿಸಲು ಸಾಧ್ಯ? 

ಶ್ರೀನಿವಾಸಾಚಾರ್ಯರು ಶ್ರೀಜಗನ್ನಾಥದಾಸರಾದದ್ದು

ಮುಂದೆ ಶ್ರೀನಿವಾಸಾಚಾರ್ಯರು ಗೋಪಾಲದಾಸರ ಪರಮಾಪ್ತರಾದರು,
ದಾಸತ್ವ ಮೈತುಂಬಿತು. ಭಗವಂತನ ಕರುಣೆ, ಸ್ಮರಣೆ ಉಸಿರಾಯಿತು.
ಶ್ರೀಗೋಪಾಲದಾಸರ ಸೂಚನೆಯಂತೆ ಫಂಢರಾಪುರದ  ಪಾಂಡುರಂಗನನ್ನು ಕಾಣುವ ತವಕದಿಂದ  'ಎಂದು ಕಾಂಬೆನೊ ಪಾಂಡುರಂಗ ಮೂರುತಿಯಾ' ಎಂದು ಭಾವಪರವಶರಾಗಿ ಚಂದ್ರಭಾಗಾ ನದಿಯಲ್ಲಿ ಮಿಂದೇಳುವಾಗ , 'ಶ್ರೀಜಗನ್ನಾಥವಿಠಲ' ಎಂಬ ಅಂಕಿತವಿರುವ ಶಿಲಾಫಲಕ ದೊರೆಯಿತು. ಆ ಶಿಲಾಫಲಕವನ್ನು ತಲೆಯ ಮೇಲೆ ಹೊತ್ತು, ಆನಂದಭಾಷ್ಪ ಸುರಿಸುತ್ತಾ, 'ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ', 'ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ', ಸಂಗಸುಖಕ್ಕಾಗಿ ನಡೆಯುವುದೇ ಹರಿಯಾತ್ರೆ, ನುಡಿವುದೇ ನೈವೇದ್ಯ ಎಂದು ಹರಿಯ ಸಾನ್ನಿಧ್ಯವನ್ನು, ಭಗವಂತನಲುಮೆಯನ್ನು ಕೊಂಡಾಡುತ್ತಾರೆ.

 ಸಾಕ್ಷಾತ್ ಪಾಂಡುರಂಗ ರುಕ್ಮಿಣಿಯಿಂದ ಭೋಜನ ಸ್ವೀಕರಿಸಿದವರು. ಶ್ರೀನಿವಾಸನಿಂದ ಎರಡು ಬಾರಿ ಪ್ರಸಾದದ ಅಮೃತ ಸವಿದವರು. ಮುಂದೆ ಅನೇಕ ಸುಳಾದಿಗಳು, ಪದಪದ್ಯಗಳು, ಕೀರ್ತನೆಗಳು, ಉಗಾಭೋಗಗಳು, ದಶಾವತಾರಸ್ತೋತ್ರ, ರುಕ್ಮಿಣೀವಿಲಾಸ, ಶ್ರೀನಿವಾಸ ಸ್ತೋತ್ರ, ಮುಂತಾದ ಖಂಡಕಾವ್ಯಗಳು, ತತ್ವಸುವ್ವಾಲಿಗಳನ್ನು ರಚಿಸಿದರು.

ಶ್ರೀಮದ್ ಹರಿಕಥಾಮೃತಸಾರ

ಅಂದು ಅಮೃತವನ್ನು ಸ್ವೀಕರಿಸಲು ದೇವತೆಗಳು, ದಾನವರು ಇಬ್ಬರೂ ಕಾದಿದ್ದರು. ಆದರೆ ದಾನವರ ಕೈಗೆ ಅಮೃತ ಸಿಕ್ಕರೆ ಇನ್ನಷ್ಟು ಲೋಕಕ್ಕೆ ಕಂಟಕವಾಗುತ್ತದೆಯೇ ಹೊರತು  ಒಳ್ಳೆಯದಂತೂ ಆಗುವುದಿಲ್ಲ. ಹಾಗಾಗಿಯೇ ಪರಮಾತ್ಮ  ಮೋಹಿನಿ ವೇಷ ಧರಿಸಿದ್ದಾಯ್ತು. ದೇವತೆಗಳ ಸಾಲಲ್ಲಿ ಕದ್ದು ಕುಳಿತ ರಾಹುಕೇತುಗಳ ಕಥೆ ಎಲ್ಲರಿಗೂ ತಿಳಿದದ್ದೇ. ಆದರೆ ಈಗ ಇಲ್ಲಿ  ಬರೇ ದಾನವರೇ ತುಂಬಿಕೊಂಡಿದ್ದೇವೆ. ಸಜ್ಜರೆನಿಸಿಕೊಂಡವರು ಯಾವತ್ತೂ ಬಲವಂತದಿಂದ ಒಬ್ಬರ ಮನನೋಯಿಸಿ ಏನನ್ನೂ ಪಡೆಯುವುದಿಲ್ಲ. ಬಲವಂತದಿಂದ ಪಡೆದದ್ದು ದಕ್ಕುವುದಿಲ್ಲ. ಹಾಗಾಗಿ ನಮ್ಮ ಶ್ರೀಜಗನ್ನಾಥದಾಸರು ಸರ್ವರ ಉದ್ಧಾರಕ್ಕಾಗಿ ಹರಿಯ ಮಹಿಮೆ ಸಾರುವ, ಮದ್ವಸಿದ್ಧಾಂತವನ್ನು ತಿಳಿಸುವ, ಹರಿರ್ವೋತ್ತಮ, ವಾಯುಜೀವೋತ್ತಮ ತತ್ವವನ್ನು  ತುಂಬಿರುವ ಅಮೃತವನ್ನೇ  ನಮಗೆ ಕೊಟ್ಟಿದ್ದಾರೆ.  
ಈ ಹರಿಕಥಾಮೃತವನ್ನು ಭಕ್ತಿಯಿಂದ ಪ್ರತೀಕ್ಷಣ ಪಾನ  ಮಾಡಿರೆಂದು ಕೊಟ್ಟಿದ್ದಾರೆ. ಈ ಹರಿಕಥಾಮೃತಸಾರವನ್ನು ಪಾನ ಮಾಡುವ ದಾನವರೂ ಮಾನವರಾಗಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ.
 
ಭಗವಂತನ ದಿವ್ಯ ಸಾನ್ನಿಧ್ಯವನ್ನು, ಕಾವ್ಯತತ್ವಕ್ಕೆ ಇಳಿಸುವಂತಹ ಅದ್ಭುತ ಕಾವ್ಯಾಮೃತ ಕೃತಿ, ವೇದಶಾಸ್ತ್ರ, ಮೀಮಾಂಏಸಶಾಸ್ತ್ರ, ಧರ್ಮಶಾಸ್ತ್ರ, ಭಾಗವತಾದಿ ಪುರಾಣ, ಮಹಾಭಾರತ, ರಾಮಾಯಣ, ಮಧ್ವಮುನಿಗಳ ನಿರ್ಣಯಾದಿ ಗ್ರಂಥಗಳ ಸಾರವಾದ, ಒಂಭೈನೂರಕ್ಕೂ ಹೆಚ್ಚು ನುಡಿಗಳಿಂದ ಕೂಡಿದ, ಭಾಮಿನಿ ಷಟ್ಪದಿಯಲ್ಲಿ ಮೂವತ್ತೆರಡು ಸಂಧಿಗಳಿರುವ ಬಹುದೊಡ್ಡ , ದಾಸಸಾಹಿತ್ಯದ ಮೇರು ಕೃತಿ 'ಶ್ರೀಮದ್ ಹರಿಕಥಾಮೃತಸಾರ'. 

ನಾವು ಮಾಡಲೇಬೇಕಾದ್ದು
ಸಾಧ್ಯವಾದಷ್ಟು ವಾರಕ್ಕೊಮ್ಮೆಯಾದರೂ ಮಕ್ಕಳಿಗೆ ದಾಸರ ಸನ್ನಿಧಾನದಲ್ಲಿ ದಾಸರ ಹರಿಕಥಾಮೃತವನ್ನು, ನುಡಿಗಳನ್ನು, ಸಂಧಿಗಳನ್ನು, ಚಿಕ್ಕಚಿಕ್ಕ ಕೃತಿಗಳನ್ನು ಕಲಿಸುವ, ಕಲಿಯುವ ಪ್ರಯತ್ನ ಸ್ವಯಂಪ್ರೇರಿತರಾಗಿ ಸಂಕೋಚವಿಲ್ಲದೇ ಮಾಡಲು ಪ್ರಯತ್ನಿಸೋಣ.  ಇದಕ್ಕೆ ಯಾವ ಸಂಘ-ಸಂಸ್ಥೆಗಳ ಅವಶ್ಯಕತೆಯಿಲ್ಲ. ಯಾರಿಗೂ ಯಾವುದಕ್ಕೂ ಕೈಚಾಚಬೇಕಿಲ್ಲ. ಊರಲ್ಲಿರುವ ಹಿರಿಯರು, ತಿಳಿದವರು ತಿಳಿದಷ್ಟನ್ನು ತಿಳಿಸಿಕೊಡಿ. ಯಾಕೆಂದರೆ ಇವತ್ತು ಹರಿದಾಸರ ಸಾಹಿತ್ಯ ಈ ಕ್ಷಣಕ್ಕೂ ಅಬಾಲವೃದ್ಧರಾದಿಯಾಗಿ ಎಲ್ಲರ ನಾಲಿಗೆಯಲ್ಲಿ ಹರಿದಾಡುತ್ತಿದೆ ಎಂದರೆ ಇದಕ್ಕೆ ಮುಖ್ಯಕಾರಣ ಮನೆಯಲ್ಲಿರುವ ಹಿರಿಯ ಮಹಿಳಾ ಚೇತನಗಳೇ .  ಮಕ್ಕಳಿಗೆ ಹೇಳಿಕೊಡುವ , ಕಲಿಸಿಕೊಡುವ ನೆಪದಿಂದಲಾದರೂ ನಾವೂ ಕಲಿಯೋಣ. _ಅಣುಹರಿಕಥಾಮೃಸಾರ'ವೆಂದೇ ಪ್ರಸಿದ್ಧಿಯಾದ 'ಫಲವಿದು ಬಾಳ್ದುದಕೆ' ಹಾಡಿನಲ್ಲಿ ದಾಸರು ಹೇಳ್ತಾರೆ, " ಸಿರಿನಿಲಯನ ಗುಣಗಳ ತಿಳಿದು ಭಜಿಸುವುದೆ ಫಲವಿದು ಬಾಳ್ದುದಕೆ"  ತಿಳಿಯದೇ ಭಜಿಸುವ ಭಕ್ತಿಗೂ ಭಗವಂತ ಒಲಿಯುತ್ತಾನೆ. ತಿಳಿದು ಭಜಿಸಿದರೆ ಇನ್ನೂ ಅನುಗ್ರಹ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲರನು ಸಲಹುವನು ಅಂತ ಹೇಳುವ ದಾಸರ ಆರಾಧನೆಯಲ್ಲಿ ಪಾಲ್ಗೊಂಡು , ಅವರ ದರುಶನ ಮಾಡಿ, ಅವರ ಅನುಗ್ರಹಕ್ಕೆ ಪಾತ್ರರಾಗಿ ಕಿಂಚಿತ್ತಾದರೂ ಮಾಡಿದ ಪಾಪಗಳನ್ನು ಕಳೆದುಕೊಂಡು ಮುಂದಿನ ಜೀವನ ಸಾಧನ ಮಾರ್ಗದಲ್ಲಿಡುವಂತೆ ಪ್ರಾರ್ಥಿಸೋಣ. 

 ದಿನನಿತ್ಯದಲ್ಲಿ , ಶ್ರೀಹರಿಕಥಾಮೃತಸಾರವನ್ನು ಪಾರಾಯಣ ಮಾಡೋಣ, ಅದೆಷ್ಟೋ ಜನ ಕಂಠಪಾಠಮಾಡಿದವರಿದ್ದಾರೆ. ಮಾಡುತ್ತಿದ್ದಾರೆ. ದಾಸರ ಸನ್ನಿಧಿಯಲ್ಲಿ ಬ್ರಾಹ್ಮಣರ ಜೊತೆಜೊತೆಗೆ ಆರ್ಯವೈಶ್ಯರು ಬಹಳಷ್ಟು ಜನ ನಿತ್ಯ ಪುಸ್ತಕ ನೋಡದೇ ಮಸ್ತಕದಿಂದ ಪಾರಾಯಣ ಮಾಡುತ್ತಿದ್ದಾರೆ.  ಅಂಥವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತಾ, 
ಶ್ರೀ ಜಗನ್ನಾಥದಾಸರ ಕುರಿತಾದ ಲೇಖನ ಬರೆಯಲು ಪ್ರೇರಣೆ ನೀಡಿದ ನಿಮ್ಮೆಲ್ಲರಿಗೂ ವಂದಿಸುತ್ತನೆ.

ಗುರುಹಿರಿಯರಿಂದ ಕೇಳಿ, 
ತಿಳಿದುದನ್ನು ತಿಳಿಸುತ್ತಾ, 
ತಿಳಿಯದಿರುವುದನ್ನು ತಿಳಿದವರಿಂದ 
ಸರಿಯಾಗಿ ತಿಳಿಯುತ್ತಾ, 

ಹರಿದಾಸರ ಸಂಗವನ್ನು ಪಡೆದ ದಾಸದಾಸರ ದಾಸ್ಯವ ಕೊಡು , ಸಜ್ಜನರ ಮನೆ ಬಾಗಿಲ ಕಾಯುವ ಕುನ್ನಿಯಾದರೂ ಸರಿ, 
ನಿನ್ನವರೊಡನೆ ನಮ್ಮನ್ನರಿಸು ಎಂದು ಶ್ರೀ ಜಗನ್ನಾಥದಾಸರ ಅಂತರ್ಯಾಮಿಯಾದ ಭಗವಂತನಲ್ಲಿ ಪ್ರಾರ್ಥಿಸುತ್ತಾ, ಹೆತ್ತವರಿಗೆ ದಡ್ಡಮಕ್ಕಳ ಮೇಲೆ ವಿಶೇಷವಾದ ಪ್ರೀತಿ ಹೇಗಿರುತ್ತದೋ ಹಾಗೆಯೇ ನನ್ನ ಜಗನ್ನಾಥದಾಸರೂ ಕೂಡಾ ನನ್ನ ಮೇಲೆ ಬಹಳ ಕಾರುಣ್ಯ ತೋರಿದವರು. ಅವರು ಇರುವ ಅರಿವನ್ನು ಆಗಾಗ ನಮಗೆ ತೋರಿಸುತ್ತಲೇ ಇರುತ್ತಾರೆ. 



Related Articles

ಪ್ರತಿಕ್ರಿಯೆ ನೀಡಿ

Latest Articles