ಬಸವ ಜಯಂತಿ ಆಚರಣೆಗೆ ನಾಂದಿ ಹಾಡಿದ ಕರ್ನಾಟಕದ ಗಾಂಧಿ ಹರ್ಡೆಕರ್ ಮಂಜಪ್ಪ

*ವೈ.ಬಿ.ಕಡಕೋಳ

ನಾವೆಲ್ಲ ಬಸವಜಯಂತಿ ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ. ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ? ಹರ್ಡೆಕರ ಮಂಜಪ್ಪನವರು ದಾವಣಗೆರೆಯಲ್ಲಿದ್ದಾಗ ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು1911ರಲ್ಲಿ ಆರಂಭಿಸುತ್ತಾರೆ. ಹಾಗೆಯೇ ಶ್ರಾವಣ ಮಾಸೋಪನ್ಯಾಸಮಾಲಾ ಕಾರ್ಯಕ್ರಮ ಕೂಡ ಮಾಡುತ್ತಾರೆ. ನಂತರ 1913 ರಲ್ಲಿ ವೈಶಾಖ ಶುದ್ಧ ರೋಹಿಣಿ ನಕ್ಷತ್ರದಂದು ಸಂಕ್ಷಿಪ್ತವಾಗಿ ಬಸವ ಜಯಂತಿ ಜರುಗಿತು ಎಂಬುದನ್ನು ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಪುಣ್ಯ ಪುರುಷ ಬಸವಣ್ಣನವರ ಕುರಿತು ಅನೇಕ ಕೃತಿಗಳನ್ನು ಹೊರ ತಂದರು. ಅವರ ಸ್ಮರಣೆಯ ಒಂದು ಪುಟ್ಟ ಬರಹ.

ಕಳೆದ ವರ್ಷ ಆಲಮಟ್ಟಿಯಲ್ಲಿ ರಾಜ್ಯ ಮಟ್ಟದ ಶಿಕ್ಷಣ ಸಾಹಿತ್ಯ ಸಮ್ಮೇಳನ ಜರುಗಿತ್ತು. ಈ ಸಂದರ್ಭದಲ್ಲಿ ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ನಮಗೆ ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಬೆಳಗಿನ ವೇಳೆ ಅಲ್ಲಿ ಪ್ರಾರ್ಥನೆ ಕೇಳಿಬರತೊಡಗಿತು.ಇದು ಎಲ್ಲಿಯದು ಎಂದು ಪ್ರಶ್ನಿಸಿದಾಗ ಹರ್ಡೆಕರ್ ಮಂಜಪ್ಪನವರ ಸ್ಮಾರಕ ಭವನದಲ್ಲಿಯದು ಎಂದು ಶಾಲೆಯವರು ತಿಳಿಸಿದರು. ಸ್ನಾನ ಮುಗಿಸಿಕೊಂಡು ಹರ್ಡೆಕರ್ ಮಂಜಪ್ಪನವರ ಸಮಾಧಿ ಮಂದಿರದತ್ತ ಧಾವಿಸಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಒಂದೆಡೆ ಶಾಲೆಯ ಕಟ್ಟಡ ಇನ್ನೊಂದೆಡೆ ಸ್ಮಾರಕ ಭವನ ಇಡೀ ಬೆಟ್ಟದಲ್ಲಿ ಅರಣ್ಯ ಬೆಳೆಸುವ ಯೋಜನೆಯಿಂದ ನೆಡಲಾದ ಗಿಡಗಳು ವಿಶಾಲ ಪ್ರಾಂಗಣ ಒಂದೆಡೆ ಆಲಮಟ್ಟಿ ಅಣೆಕಟ್ಟು ಹಿನ್ನೀರಿನಿಂದ ಆವೃತವಾದ ಜಲ ಪ್ರದೇಶ. ಹೀಗೆ ರಮ್ಯವಾದ ಪ್ರಕೃತಿಯ ನಡುವೆ ಹರ್ಡೆಕರ್ ಮಂಜಪ್ಪನವರ ಸ್ಮಾರಕ ಮಂದಿರ ಅದರೊಳಗೆ ಇರುವ ಮಂಜಪ್ಪನವರ ನಿಂತಿರುವ ಅದ್ಬುತ ಶಿಲ್ಪ.

ಕರ್ನಾಟಕ ಗಾಂಧಿ
ಬನವಾಸಿಯಲ್ಲಿ ಫೆಬ್ರುವರಿ18 ರ 1886ನೆಯ ಇಸ್ವಿಯಲ್ಲಿ ಜನ್ಮ ತಳೆದ ಹರ್ಡೆಕರ್ ಮಂಜಪ್ಪ ಕರ್ನಾಟಕ ಗಾಂಧಿ ಎಂದೇ ಖ್ಯಾತರಾದ ಹಿನ್ನಲೆಯತ್ತ ಗಮನಿಸಿದಾಗ ಇವರ ತಂದೆ ಮಧುಕೇಶ್ವರಪ್ಪ ಬನವಾಸಿಯ ಮಧುಕೇಶ್ವರನ ಭಕ್ತರು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರನ್ನು ಸಲುಹಿದ್ದು ಅಣ್ಣ. ಮಂಜಪ್ಪನವರು ಕಲಿತದ್ದು ಕನ್ನಡ 7 ನೆಯ ತರಗತಿಯವರೆಗೆ.

ವೃತ್ತಿ ಆರಂಭ

1903 ರಲ್ಲಿ ಸಿರ್ಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೇ ಸಹಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಆಗ ಅವರು ಪಡೆಯುತ್ತಿದ್ದ ಸಂಬಳ ತಿಂಗಳಿಗೆ ಏಳು ರೂಪಾಯಿಗಳು. ಅವರಲ್ಲಿ ಬರವಣಿಗೆ ಆಗ ಸುಪ್ತವಾಗಿ ಅರಳುತ್ತಿತ್ತು. ಮಕ್ಕಳಿಗೆ ಕೌಶಲ್ಯಗಳನ್ನು ಬರೆದರು. ನರ್ಸರಿ ಹಾಡುಗಳು ಕ್ರಿಯೆಗಳ ಕುರಿತ ಹಾಡುಗಳನ್ನು ಬರೆದು ಮಕ್ಕಳಿಗೆ ಅವುಗಳನ್ನು ಕಲಿಸತೊಡಗಿದರು. 1905 ರಲ್ಲಿ ಪ್ರತ್ಯೇಕ ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಇದೇ ಸಂದರ್ಭ ಸ್ವದೇಶಿ ಚಳುವಳಿ ನಡೆದಿತ್ತು. ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಾಠಿ ಭಾಷೆಯ ಕೇಸರಿ ಪತ್ರಿಕೆಯ ಬರಹಗಳ ಪ್ರಭಾವ ಇವರ ಮೇಲಾಯಿತು.ಒಂದೇ ವರ್ಷದಲ್ಲಿ ಇವರು ಆ ಕಾಲದ ರಾಷ್ಟ್ರೀಯ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ೧೯೦೬ ರ ಸಪ್ಟಂಬರ್ ದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ಪ್ರಕಟಿಸತೊಡಗಿದರು. ಇದು ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯ ಮರಾಠಿ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುವ ಪತ್ರಿಕೆಯಾಗಿತ್ತು. ಪತ್ರಿಕೆಯ ಉಗ್ರ ಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ ಕಾರಣ ಪತ್ರಿಕೆ ನಿಲ್ಲಿಸಬೇಕಾಯಿತು. ೧೯೧೦ ರಲ್ಲಿ ಮಂಜಪ್ಪನವರು ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು.

ಪ್ರವಚನಗಳತ್ತ ಒಲವು
ಇದರೊಂದಿಗೆ ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳಿಂದ ಪ್ರಭಾವಿತರಾದ ಮಂಜಪ್ಪನವರು ದಾವಣಗೆರೆಯಲ್ಲಿ ಮೃತ್ಯುಂಜಯಸ್ವಾಮಿಗಳ ಮನ ಒಲಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಂಜಪ್ಪನವರು ನೈತಿಕ ಬ್ರಹ್ಮಚಾರಿಯಾಗಿಯೇ ಉಳಿದರು. ಹರಿಹರ ಸ್ಟೇಷನ್ನಿನಿಂದ ಮೂರು ಮೈಲುಗಳ ದೂರದಲ್ಲಿ ತುಂಗಭದ್ರೆ ದಂಡೆಗೆ ಶ್ರೀ ಬಾಳಪ್ಪನವರ ಭೂಮಿಯಲ್ಲಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸುತ್ತಾರೆ. ಅಲ್ಲಿ ಗಾಂಧೀಜಿಯವರ ತತ್ವದಂತೆ ರಾಟಿಯಲ್ಲಿ ನೂಲನ್ನು ತಗೆಯುತ್ತಾರೆ. ಹತ್ತಿರದ ಹಳ್ಳಿಗಳಿಗೆ ಸಂಚರಿಸಿ ಸತ್ಯಾಗ್ರಹ ತತ್ವದ ಪದಗಳನ್ನು ಹೇಳುವ ಮೂಲಕ ಖಾದಿ ಪ್ರಸಾರದ ಕುರಿತು ತಿಳಿವಳಿಕೆಯನ್ನು ಮೂಡಿಸುತ್ತಾರೆ.

ಈ ಸಂದರ್ಭ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಧಾರವಾಡ ಬೋರ್ಡಿಂಗಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಆಶ್ರಮಕ್ಕೆ ಆಗಮಿಸಿ ಪುರಾಣ ಪ್ರವಚನಗಳನ್ನು ನಡೆಸುವರು. ಇದೇ ಸಂದರ್ಭ ಹಾನಗಲ್ಲ ಕುಮಾರಸ್ವಾಮಿಗಳೂ ಆಶ್ರಮಕ್ಕೆ ಆಗಮಿಸಿ ಇವರ ದಿನಚರಿ ಸತ್ಯಾಗ್ರಹ ಪರಿಕಲ್ಪನೆ ಇತ್ಯಾದಿ ಕಂಡು ಆಶೀರ್ವದಿಸುವರು.
ಮುಂದೆ ಬೆಂಗಳೂರು, ಬಾಗಲಕೋಟೆ, ವಿಜಾಪುರ, ಬೀಳಗಿ, ಗಲಗಲಿಗಳಿಗೆ ಹೋಗಿ ಸತ್ಯಾಗ್ರಹ ತತ್ವವನ್ನು ಪ್ರಚಾರದಲ್ಲಿ ತೊಡಗುತ್ತಾರೆ. ನಂತರ ಗಾಂಧೀಜಿಯವರನ್ನು ಭೇಟಿಯಾಗಿ ಸಾಬರಮತಿ ಆಶ್ರಮದಲ್ಲಿ ಕೆಲಕಾಲ ಉಳಿದು ಗಾಂಧೀಜಿಯವರೊಡನೆ ಅನೇಕ ಸಂಗತಿಗಳನ್ನು ಚರ್ಚಿಸುವ ಜೊತೆಗೆ ಅಧ್ಯಾತ್ಮದತ್ತ ತಮ್ಮ ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಿದರು.

1925 ಮಾರ್ಚ 27 ರಂದು ಇವರ ತಾಯಿಯ ನಿಧನರಾದ ನಂತರ ಮತ್ತೆ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಮಳೆಗಾಲದಲ್ಲಿ ನೀರು ಬಂದಿರುತ್ತದೆ. ಈ ಸ್ಥಳ ಬದಲಿಸುವುದು ಸೂಕ್ತ ಎಂದುಕೊ0ಡು ಇಚಿಡಿ ತಾಲೂಕಿನ ಬಂಥನಾಳಕ್ಕೆ ಪ್ರವಚನಕ್ಕೆ ಹೋದಾಗ ಸ್ವಾಮೀಜಿಯವರಲ್ಲಿ ಈ ವಿಷಯ ಪ್ರಸ್ತಾಪಿಸುತ್ತಾರೆ. ಆಗ ಅವರು ಇವರಿಗೆ ಆಲಮಟ್ಟಿಯಲ್ಲಿ ಆಶ್ರಮವನ್ನು ಏರ್ಪಾಡು ಮಾಡುತ್ತಾರೆ. ಈ ಸಂದರ್ಭದಲ್ಲಿ ವಿಜಾಪುರ ಜಿಲ್ಲೆಯ 7 ತಾಲೂಕುಗಳ 55 ಹಳ್ಳಿಗಳಲ್ಲಿ ಐದು ತಿಂಗಳ ಕಾಲ ಬಂಥನಾಳ ಸ್ವಾಮಿಗಳ ಸಂಗಡ ಸಂಚರಿಸುತ್ತ ತಂಬಾಕು ಚಹಾ ಬಿಡುವುದು ಖಾದಿ ಧರಿಸುವಂತೆ ಮಾಡುವ ಹಲವು ವಿಧಾಯಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.


ಇವರು ಈ ಸಂದರ್ಭ ಯಾವುದೇ ಹಳ್ಳಿಗೆ ಹೋದರೂ ಕೂಡ ಹಲವು ಮಹತ್ವದ ಸಂಗತಿಗಳನ್ನು ಕಲೆ ಹಾಕುತ್ತಿರುತ್ತಾರೆ. ಆ ಊರಿನಲ್ಲಿ ಕಾರ್ಯ ಮಾಡುವ ಉತ್ಸಾಹಿಗಳು ಈ ಎಲ್ಲ ಸಂಗತಿಗಳನ್ನು ತಿಳಿದುಕೊಂಡು ಜನರನ್ನು ಒಂದೆಡೆ ಕೂಡಿಸಿ ಆ ಹಳ್ಳಿಯಲ್ಲಿ ತಮ್ಮ ಉಪನ್ಯಾಸ ಮಾಡುವುದು ಇವರ ದಿನಚರಿಯಾಗಿತ್ತು. ಹೀಗಾಗಿ ವ್ಯಸನ ಬಿಡಿಸುವ ಜೊತೆಗೆ ಬಸವಣ್ಣನವರ ತತ್ವಗಳನ್ನು ಜನರಲ್ಲಿ ವಚನ ನಿರ್ವಚನ ಮಾಡುವ ಮೂಲಕ ಗಾಂಧೀಜಿಯ ತತ್ವಗಳನ್ನು ಇವುಗಳೊಂದಿಗೆ ಜನರಲ್ಲಿ ಮೂಡಿಸುವುದು ಹೀಗೆ ತಮ್ಮ ಬದುಕನ್ನು ಕಳೆಯತೊಡಗಿದರು. ಈ ಸಂದರ್ಭ ಗುಲ್ಬರ್ಗಾ ನಾಡಿಗೂ ಕೂಡ ಪ್ರವಾಸ ಬೆಳೆಸುತ್ತಾರೆ. ಮತ್ತೆ ಬಿಜಾಪುರ ಜಿಲ್ಲೆಯತ್ತ ಆಗಮಿಸಿ ೧೯೨೦-೨೧ ರಲ್ಲಿ ನರಗುಂದ ಮಲಘಾನ, ತಾಳಿಕೋಟೆ, ಸಿಂದಗಿ, ಮುಶಿಬಿನಾಳ, ಮೊದಲಾದ ಸ್ಥಳಗಳಲ್ಲಿ ಬಸವಣ್ಣನವರ ವಚನ ಪ್ರವಚನ ನಡೆಸಿ ರಾಟಿ ಸಂಘಗಳನ್ನು ಸ್ಥಾಪಿಸುತ್ತಾರೆ.

ಜೀವನ ಪಾಠಕ್ಕೂ ಆದ್ಯತೆ
1926 ರಂದು ಆಲಮಟ್ಟಿಗೆ ಬಂದು ಬಂಥನಾಳ ಸ್ವಾಮಿಗಳ ಸಲಹೆಯ ಮೇರೆಗೆ ಅಲ್ಲಿರಲು ಯೋಚಿಸುತ್ತಾರೆ. ಅಲ್ಲಿ ವೀರಶೈವ ವಿದ್ಯಾಲಯ ಸ್ಥಾಪನೆಯ ನಿಲುವನ್ನು ಹಲವು ಹಿರಿಯ ಜೊತೆಯಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ನಂತರ ಮತ್ತೆ ಗಾಂಧೀಜಿಯವರಲ್ಲಿಗೆ ತೆರಳಿ ಈ ಕುರಿತು ವೀರಶೈವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು ಶಿಕ್ಷಣ ಪದ್ಧತಿ ಇತ್ಯಾದಿ ಚರ್ಚಿಸಿದಾಗ ಗಾಂಧೀಜಿಯವರು ರಾಷ್ಟಿçÃಯ ಶಿಕ್ಷಣ ಪದ್ಧತಿಯಂತೆ ಶಿಕ್ಷಣ ನೀಡುವಂತೆ ಸಲಹೆ ನೀಡಿದಾಗ ಆ ಸಲಹೆ ಸ್ವೀಕರಿಸಿ ಮತ್ತೆ ಆಲಮಟ್ಟಿಗೆ ಬರುವರು. 1927 ರಲ್ಲಿ ಈ ವಿದ್ಯಾಲಯ ಆರಂಭವಾಯಿತು. ಮೊದಲು ೧೦ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಕಲಿಯಲು ಆಗಮಿಸಿದರು.
ಇಲ್ಲಿಯ ಶಿಕ್ಷಣ ಪದ್ಧತಿ ಹೇಗಿತ್ತು ಎಂದರೆ ನೆಲದ ಮೇಲೆಯೇ ಕುಳಿತುಕೊಂಡು ಓದುವುದು ಪಾಠ ಪ್ರಾರಂಭದಲ್ಲಿ “ಓಂ ಸಹನಾವವತು” ಎಂಬ ಉಪನಿಷತ್ ಮಂತ್ರವನ್ನು ಹೇಳುವುದು. ಕನ್ನಡ ಇಂಗ್ಲೀಷ ಎರಡೂ ಭಾಷೆ ಅವಶ್ಯಕವಾಗಿದ್ದವು. ಹಿಂದಿ ಮರಾಠಿ ಹೆಚ್ಚಿನ ತರಗತಿಗೆ ಬಂದ ಮೇಲೆ ಕಲಿಯುವ ವ್ಯವಸ್ಥೆ ಇದ್ದಿತು. ಗಣಿತ ಭೂಗೋಲ ಇತಿಹಾಸ ಈ ವಿಷಯಗಳು ಇಲ್ಲಿ ಕಲಿಸಲ್ಪಡುತ್ತಿದ್ದವು. ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಇದು ವಸತಿ ಶಿಕ್ಷಣ ವ್ಯವಸ್ಥೆ ಆಗಿದ್ದರಿಂದ ವಿದ್ಯಾರ್ಥಿಗಳೇ ಊಟಕ್ಕೆ ನೀಡುವ, ಅತಿಥಿಗಳ ಸತ್ಕಾರ ಮಾಡುವ ತಮ್ಮ ತಮ್ಮ ಕೋಣೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸವನ್ನು ಸರತಿ ಪ್ರಕಾರ ಮಾಡಬೇಕಾಗಿತ್ತು. ಇಲ್ಲಿನ ಶಿಕ್ಷಣ ಮುಗಿದ ಮೇಲೆ ಮನೆಯಲ್ಲಿ ಮಾಡಬೇಕಾದ ಅನೇಕ ಕೆಲಸಗಳ ಪ್ರತ್ಯಕ್ಷ ಶಿಕ್ಷಣವೂ ಇಲ್ಲಿ ಕೊಡಲ್ಪಡುತ್ತಿತ್ತು. ಇವರಿಗಾಗಿ ಒಂದು ವಾಚನಾಲಯವನ್ನು ತೆರೆದು ದೇಶ ವಿದೇಶಗಳ ಈಗಿನ ಸ್ಥಿತಿಗತಿಗಳು ತಿಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಇಲ್ಲಿನ ವಿದ್ಯಾರ್ಥಿಗಳೇ “ವಿದ್ಯಾಲಯ ಪತ್ರಿಕಾ” ಮತ್ತು “ಬಾಲಸಂಗಯ್ಯ” ಎಂಬ ಕೈಬರವಣಿಗೆಯ ವಾರಪತ್ರಿಕೆಗಳನ್ನು ಬರೆಯುತ್ತಿದ್ದರು.


ಈ ವಿದ್ಯಾಲಯಕ್ಕೆ ಆಲಮಟ್ಟಿ ಪಾಟೀಲ ನೂರೊಂದಯ್ಯನವರು ಗುಡಗುಂಟಿ ರಾಚಯ್ಯನವರು ಸ್ಥಳವನ್ನು ದಾನವಾಗಿ ಕೊಟ್ಟಿದ್ದರಲ್ಲದೇ ವಿದ್ಯಾರ್ಥಿಗಳ ದೇಹಾರೋಗ್ಯ ವಿಚಾರವಾಗಿ ಬಾಗಲಕೋಟೆಯ ಡಾಕ್ಟರ್ ಬಸಪ್ಪನವರು ಆಗಾಗ್ಗೆ ವಿದ್ಯಾಲಯಕ್ಕೆ ಬಂದು ಯೋಗ್ಯ ಸೂಚನೆಗಳನ್ನು ನೀಡುತ್ತಿದ್ದರು.ವಿದ್ಯಾರ್ಥಿಗಳನ್ನು ಪ್ರತಿವರುಷ ಮಾಘ ಮಾಸದಲ್ಲಿ ಯಾವುದಾದರೊಂದು ಐತಿಹಾಸಿಕ ಪ್ರಸಿದ್ಧ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಸಂಗತಿಗಳನ್ನೆಲ್ಲ ಪ್ರತ್ಯಕ್ಷವಾಗಿ ತಿಳಿಸುವುದನ್ನು ರೂಢಿಸಲಾಗಿತ್ತು.ಹೀಗೆ ಸಾಗಿದ ವಿದ್ಯಾಲಯದಲ್ಲಿ ೯ ವರ್ಷಗಳಲ್ಲಿ ೨೦೦ ವಿದ್ಯಾರ್ಥಿಗಳು ಶಿಕ್ಷಣ ಹೊಂದಿದ್ದರು ಎಂಬುದನ್ನು ಮಂಜಪ್ಪನವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.೧೩-೧೧-೧೯೨೯ ರಲ್ಲಿ ಇಲ್ಲಿ ಮುದ್ರಣಾಲಯವನ್ನೂ ಕೂಡ ಸ್ಥಾಪಿಸಲಾಯಿತು.ಇಲ್ಲಿ ಮುದ್ರಣವಾದ ಮಹತ್ವದ ಪುಸ್ತಕಗಳೆಂದರೆ ೧) ಪುಲಕೇಶಿ ೨)ವಿವೇಕಾನಂದರು ೩)ಲಜಪತರಾಯ್ ೪)ಏಕಲವ್ಯ ೫) ಕಚದೇವ ೬)ದೇವಯಾನಿ ೭)ಸುಲಾದೇವಿ ೮)ಬಸವಣ್ಣ ೯)ಪ್ರಭುದೇವ ೧೦) ಅಕ್ಕಮಹಾದೇವಿ ೧೧)ಶರಣ ಬಸವೇಶ ೧೨)ವಿದ್ಯಾಲಯ ಭಜನಾವಳಿ ೧೩)ರಾಷ್ಟçಗೀತೆ. ಇವೆಲ್ಲವು ವಿದ್ಯಾರ್ಥಿಗಳಿಗೆ ಉಪಯೋಗಿಸಲು ಮುದ್ರಿಸಿದವುಗಳಾಗಿದ್ದವು.”ಉದ್ಯೋಗ” ಎಂಬ ಮಾಸಪತ್ರಿಕೆಯನ್ನು ಎರಡು ವರ್ಷಗಳ ಕಾಲ ಇಲ್ಲಿ ನಡೆಸಲಾಯಿತು. “ ಶರಣ ಸಂದೇಶ” ಎಂಬ ವಾರಪತ್ರಿಕೆಯನ್ನು ಕೂಡ ಹೊರಡಿಸುತ್ತಿದ್ದರು.
ಬಸವ ಜಯಂತಿಯು ಕರ್ನಾಟಕದಲ್ಲಿ ಒಂದು ಹೊಸ ಜಾಗೃತಿಯನ್ನು ಉಂಟು ಮಾಡತೊಡಗಿದ್ದನ್ನು ಮನಗಂಡು ಜಯಂತಿಯ ಕಾಲ ಕಾಲಕ್ಕೆ ಚಿಕ್ಕ ಚಿಕ್ಕ ಪುಸ್ತಕಗಳನ್ನು ಪ್ರಕಟಿಸುವ ಜೊತೆಗೆ ಉಚಿತವಾಗಿ ಹಂಚುವುದನ್ನು ರೂಢಿಸಿದರು.೧೯೩೩ ರಲ್ಲಿ ಆರಂಭವಾದ ಈ ಪ್ರಯತ್ನದ ಫಲವಾಗಿ ಬಸವ ಸಂದೇಶ ಎಂಬ ಬಸವಣ್ಣನವರ ವಚನಗಳಲ್ಲಿ ಆಯ್ದುಕೊಂಡ ೧೦೧ ವಚನಗಳ ಚಿಕ್ಕ ಪುಸ್ತಕವನ್ನು ಐವತ್ತು ಸಾವಿರ ಪ್ರತಿಗಳಲ್ಲಿ ಮುದ್ರಿಸಿ ಬಸವ ಜಯಂತಿ ಸಂದರ್ಭ ಹಂಚಿದ್ದನ್ನು ಸ್ಮರಣೀಯ ಎಂಬ ನೆನಪನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿರುವರು.
ಮುಂದೆ ಶ್ರಾವಣ ಮಾಸದಲ್ಲಿಯೂ ಕೂಡ ಇಂತಹ ಚಿಕ್ಕ ಚಿಕ್ಕ ಪುಸ್ತಕಗಳನ್ನು ಪ್ರಕಟಿಸುವ ಪರಂಪರೆಗೆ ನಾಂದಿ ಹಾಡಿದರು. 1934 ರಲ್ಲಿ ಬಸವ ಜಯಂತಿಯ ಕಾಲಕ್ಕೆ ಭಕ್ತಿಯ ಬೆಳಕು ಎಂಬ ಬಸವಣ್ಣನವರ ಕೆಲವು ವಚನಗಳಿಗೆ ಅರ್ಥವನ್ನು ಬರೆದ ಚಿಕ್ಕ ಪುಸ್ತಕವನ್ನು 20 ಸಾವಿರ ಪ್ರತಿಗಳಲ್ಲಿ ಪ್ರಕಟಿಸಿ ಹಂಚಲಾಯಿತು. ಇದರೊ0ದಿಗೆ ಚನ್ನಬಸವಣ್ಣನವರ ಉಪದೇಶ. ಸಿದ್ಧರಾಮ ಶಿವಯೋಗಿಗಳ ಉಪದೇಶ ಎಂಬ ಚಿಕ್ಕ ಪುಸ್ತಕಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಪ್ರಕಟವಾದವು. ವಿದ್ಯಾಲಯದಲ್ಲಿ ಮುದ್ರಣ ಯಂತ್ರವನ್ನು ಸ್ಥಾಪಿಸದೇ ಇದ್ದಿದ್ದರೆ ಇಷ್ಟೆಲ್ಲ ಪ್ರಚಾರ ಕಾರ್ಯವಾಗುವುದು ಶಕ್ಯವೇ ಇರಲಿಲ್ಲ ಎಂಬುದನ್ನು ಹರ್ಡೆಕರ ಮಂಜಪ್ಪ ತಮ್ಮ ಆತ್ಮ ಚರಿತ್ರೆಯಲ್ಲಿ ಸ್ಮರಿಸಿದ್ದಾರೆ.
ಈ ನಡುವೆ ಗಾಂಧೀಜಿಯವರೊಡನೆ ಓಡಾಟ ಸತ್ಯಾಗ್ರಹಗಳಲ್ಲಿ ಪಾಲ್ಗೊಳ್ಳುವುದು ನಡೆದೇ ಇತ್ತು ಕ್ರಮೇಣ ಇವರ ದೇಹಸ್ಥಿತಿ ರಕ್ತದ ಒತ್ತಡದಿಂದ ಜರ್ಜರಿತವಾಗತೊಡಗಿತು. ನಿಶ್ಯಕ್ತಿಯಿಂದಾಗಿ ಸ್ವಾತಂತ್ರö್ಯ ಹೋರಾಟದಲ್ಲಿ ತೊಡಗುವುದನ್ನು ನಿಲ್ಲಿಸಿ ಆಲಮಟ್ಟಿಯಲ್ಲಿಯೇ ಸುತ್ತಮುತ್ತಲಿನ ಜನರನ್ನು ಸೇರಿಸಿ ಸಂದೇಶ ನೀಡುವುದನ್ನು ಮುಂದುವರೆಸಿದರು.
1947 ಜನವರಿ 3 ರಂದು ಇಹಲೋಕವನ್ನು ತ್ಯಜಿಸಿದರು. ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಆಲಮಟ್ಟಿಯಲ್ಲಿ ಜರುಗಿತು. ಆ ಸ್ಥಳ ಹಿನ್ನೀರಿನಲ್ಲಿ ಮುಳುಗಡೆಯಾದಾಗ ಗದುಗಿನ ತೋಂಟದ ಶ್ರೀಗಳು ಹೊಸ ಸ್ಥಳಕ್ಕೆ ಅದನ್ನು ಸ್ಥಳಾಂತರಿಸುವ ಮೂಲಕ ಅದಕ್ಕೊಂದು ಕಾಯಕಲ್ಪ ನೀಡಿದ್ದು ಇಂದಿಗೂ ಆ ಸ್ಥಳ ಹರ್ಡೆಕರರ ಸವಿನೆನಪನ್ನು ಇಂದಿನ ಪೀಳಿಗೆಗೆ ತರುತ್ತಿರುವುದು ಮರೆಯಲಾಗದ ಅನುಭೂತಿ.

Related Articles

ಪ್ರತಿಕ್ರಿಯೆ ನೀಡಿ

Latest Articles